Advertisement

ಪಲ್ಲಟದ ಪಾತ್ರಗಿತ್ತಿ ಅಕ್ಷತಾ; ಪ್ರಶಸ್ತಿ ಬಂತು, ಕಣ್ಣಲ್ಲಿ ನೀರೂ ಬಂತು

03:45 AM Apr 19, 2017 | Harsha Rao |

ಅಕ್ಷತಾ ಪಾಂಡವಪುರ! ಸಿನಿರಂಗಕ್ಕೆ ಇದು ತೀರಾ ಹೊಸ ಹೆಸರು ಅಂತ ನಿಮ್ಗೆ ಅನ್ನಿಸಬಹುದು. ಆದರೆ, ಅಕ್ಷತಾ ಸಿನಿಮಾ ಕ್ಷೇತ್ರಕ್ಕೆ ಮಾತ್ರ ಹೊಸಬರು, ನಟನೆಗಲ್ಲ! ಇವರ ಪ್ರತಿಭೆ ಚಿಗುರಿದ್ದೇ ರಂಗಭೂಮಿಯಲ್ಲಿ. 2016-17ನೇ ಸಾಲಿನ “ಪಲ್ಲಟ’ ಚಿತ್ರದ ಅಭಿನಯಕ್ಕೆ ಇವರಿಗೆ “ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿ ಲಭಿಸಿದೆ. ಇದಕ್ಕೂ ಮೊದಲು “ಇಷ್ಟಕಾಮ್ಯ’ ಮತ್ತು “ಬ್ಯೂಟಿಫ‌ುಲ್‌ ಮನಸ್ಸುಗಳು’ ಚಿತ್ರದಲ್ಲಿ ಇವರು ನಟಿಸಿದ್ದರು. ಪಾಂಡವಪುರವೆಂಬ ಪುಟ್ಟ ಹಳ್ಳಿಯ ಈ ದಿಟ್ಟ ಹುಡುಗಿಯ ಜೀವನಕತೆಯೇ ರೋಚಕ…

Advertisement

ಹಳ್ಳಿ ಜನ “ನೀ ನಾಟ್ಕಾ ಮಾಡೀಯಾ’? ಎಂದು ಆಶ್ಚರ್ಯ, ಅಸಹನೆ ಬೆರೆತ ಧ್ವನಿಯಲ್ಲಿ ಕೇಳುತ್ತಾರೆ. ಮದುವೆಗಳಲ್ಲಿ, ಇತರ ಸಮಾರಂಭಗಳಲ್ಲಿ ನೃತ್ಯ ಮಾಡ್ತಾರಲ್ಲ, ನಾನು ಅದೇ ರೀತಿ ನೃತ್ಯ ಮಾಡುವವಳು ಎಂದು ನಮ್ಮ ಹಳ್ಳಿಯ ಎಷ್ಟೋ ಜನ ಅಂದೊRಂಡಿದ್ದಾರೆ. ನಾನು ದೆಹಲಿಗೆ ಅಂಥದ್ದೇ ಕೆಲಸಕ್ಕೆ ಹೋಗಿದ್ದೆ ಅಂತ ಭಾವಿಸಿದ್ದಾರೆ. ಪಾಪ ಮುಗ್ಧರು. ಅವರಿಗೆ ಸಭೆ- ಸಮಾರಂಭಗಳಲ್ಲಿ ನನ್ನನ್ನೇಕೆ ವೇದಿಕೆ ಮೇಲೆ ಕೂರಿಸುತ್ತಾರೆ. ನನ್ನ ಕೈಯಿಂದ ಕಾರ್ಯಕ್ರಮ ಉದ್ಘಾಟನೆ ಏಕೆ ಮಾಡಿಸುತ್ತಾರೆ ಎಂದೇ ತಿಳಿದಿಲ್ಲ! 

ಪ್ರಶಸ್ತಿ ಬಂದಿದ್ದಕ್ಕೆ ತುಂಬಾ ಸಂತೋಷವಾಗಿದೆ. ಆದರೆ ಚಿತ್ರ ಬಿಡುಗಡೆಯಾಗಿ, ಚಿತ್ರ ನೋಡಿದ ಜನರಿಗೆ ನನ್ನ ಪಾತ್ರ ಕಾಡಬೇಕು. ಅದು ನಿಜಕ್ಕೂ ದೊಡ್ಡ ಪ್ರಶಸ್ತಿ. ಎಷ್ಟೇ ನಾಟಕಗಳಲ್ಲಿ ಅಭಿನಯಿಸಿರಬಹುದು. ಆದರೆ, ಜನರು ಟಿವಿ ಪರದೆ ಮೇಲೆ ಕಾಣಿಸಿಕೊಂಡರೆ ಮಾತ್ರ ಕಲಾವಿದೆ ಎಂದು ಗುರುತಿಸುತ್ತಾರೆ. ಆದ್ದರಿಂದ ಒಬ್ಬ ಕಲಾವಿದೆಯಾದ ನನಗೆ ರಂಗಭೂಮಿ ಮತ್ತು ಸಿನಿಮಾ ಎರಡೂ ಮುಖ್ಯವಾಗುತ್ತದೆ.

ನಾನು ಪಿಯುಸಿಯಲ್ಲಿದ್ದಾಗಲೇ ನನ್ನ ಅಪ್ಪ ತೀರಿಕೊಂಡರು. ಏ.24ರಂದು ಪ್ರಶಸ್ತಿ ಪ್ರದಾನ ಮಾಡುತ್ತಾರೆ. ಏ.24 ನನ್ನ ಅಪ್ಪ ನಿಧನರಾದ ದಿನ. ಏನೆಲ್ಲಾ ನೆನಪುಗಳು ಒತ್ತರಿಸಿ ಬರುತ್ತವೆ. ಹೀಗೆಲ್ಲಾ ಹೇಳಿದರೆ ನಿಮಗೆ ಕ್ಲೀಷೆ ಎನಿಸಬಹುದು. ಅಪ್ಪ ಇಂದು ನನ್ನ ಜೊತೆಗೆ ಇಲ್ಲ. ಆದರೆ, ನಾನು ಮಾಡುವ ಎಲ್ಲ ಕೆಲಸದಲ್ಲೂ ಅವರು ಇದ್ದಾರೆ. ನನ್ನ ಎಲ್ಲಾ ಕೆಲಸಗಳನ್ನೂ ಅವರು ನೋಡುತ್ತಿದ್ದಾರೆ. ಪ್ರಶಸ್ತಿ ಸ್ವೀಕರಿಸುವುದನ್ನೂ ಅವರು ನೋಡುತ್ತಾರೆ.

“ಪಲ್ಲಟ’ದ ನನ್ನ ಪಾತ್ರ
“ಪಲ್ಲಟ’ದಲ್ಲಿ ನನ್ನದು ವಿದ್ಯಾವಂತ ದಲಿತ ಹುಡುಗಿಯ ಪಾತ್ರ. ಊರಿನಲ್ಲೆಲ್ಲಾ ಹೆಚ್ಚು ಓದಿರುವ ಹುಡುಗಿ. ತನ್ನ ಅಪ್ಪ ಮೇಲ್ಜಾತಿಯ ಶ್ರೀಮಂತರ ಎದುರು ಕೈಕಟ್ಟಿ, ತಲೆ ತಗ್ಗಿಸುವುದನ್ನು ನೋಡಿ ಒಳಗೊಳಗೇ ಹಲಬುವ, ಅವರ ದೈನ್ಯ ಸ್ಥಿತಿಯನ್ನು ಕೊನೆಗಾಣಿಸಲೇ ಬೇಕು ಎಂದು ಪಣ ತೊಟ್ಟ ಹುಡುಗಿಯ ಪಾತ್ರ. 

Advertisement

– ಅಪ್ಪನ ಜೊತೆ ಪೌರಾಣಿಕ ಪಾತ್ರ
ಬಾಲ್ಯವನ್ನು ನಾನು ಕಳೆದಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹಾರೊಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ. ನಾನು ರೈತನ ಮಗಳು. ಹಲವಾರು ವರ್ಷ ನಮ್ಮ ಹಳ್ಳಿಯಲ್ಲೇ ಇದ್ದೆವು. ನಾನು 7ನೇ ತರಗತಿಯಲ್ಲಿದ್ದಾಗ ನಮ್ಮ ಕುಟುಂಬ ಪಾಂಡವಪುರಕ್ಕೆ ಬಂದು ನೆಲೆಸಿತು. ಹಳ್ಳಿಗಳಲ್ಲಿ ಹಬ್ಬ, ಜಾತ್ರೆಗಳ ಸಂದರ್ಭದಲ್ಲಿ ಹಳ್ಳಿಯವರೇ ತಂಡ ರಚಿಸಿಕೊಂಡು ಪೌರಾಣಿಕ ನಾಟಕ ಆಡುತ್ತಾರೆ. ನಮ್ಮಪ್ಪ ಕೂಡ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ನಾನಾಗ ಚಿಕ್ಕವಳು. ಹೆಣ್ಮಕ್ಕಳು ತೀರಾ ಚಿಕ್ಕವರಿದ್ದಾಗ ನಾಟಕಗಳಲ್ಲಿ ಪಾರ್ಟು ಹಾಕಲು ನಮ್ಮ ಜಿಲ್ಲೆಯ ಹಳ್ಳಿಗಳಲ್ಲಿ ಅಂಥ ತಕರಾರೇನೂ ಇಲ್ಲ. ಅಪ್ಪನ ಜೊತೆ ನಾನು ನಟಿಸುತ್ತಿದ್ದೆ. 3-4 ತಿಂಗಳು ಕಾಲ ರಿಹರ್ಸಲ್‌ ಮಾಡುತ್ತಿದ್ದೆವು. ಆಗಿನಿಂದಲೇ ನನಗೆ ಅಭಿನಯದ ಮೇಲೆ ಆಸಕ್ತಿ ಬೆಳೆಯಿತು. 

– ರಂಗಾಯಣ ಟು ಎನ್‌ಎಸ್‌ಡಿ
ಪದವಿ ವ್ಯಾಸಂಗಕ್ಕೆ ಮೈಸೂರಿನ ಜೆಎಸ್‌ಎಸ್‌ ಕಾಲೇಜಿಗೆ ಸೇರಿಕೊಂಡೆ. ದಸರಾ ಸಮಯದಲ್ಲಿ ರಂಗಾಯಣದಲ್ಲಿ ನಡೆಯುವ “ಕಾಜೇಜು ರಂಗೋತ್ಸವ’ದ ರಂಗ ಸ್ಪರ್ಧೆ ನನ್ನಲ್ಲಿ ನಟನಾ ಕಲೆಯ ಮೇಲೆ ಪ್ರೀತಿ ಹುಟ್ಟಿಸುವಂತೆ ಮಾಡಿತು. ರಂಗಾಯಣದ ಸಂಪರ್ಕ ದೊರಕಿತು. ಬಹುಶಃ ನನ್ನ ಜೀವನದ ಗುರಿ ಅಲ್ಲಿಂದಲೇ ರೂಪುಗೊಂಡಿತು. ರಂಗಾಯಣದಲ್ಲಿ ಸಕ್ರಿಯವಾಗಿ ತೊಡಗಿದ್ದೆ. ಅಲ್ಲಿಯ ನನ್ನ ಕೆಲ ಹಿತೈಶಿಗಳು ನೀನಾಸಂಗೆ ಅರ್ಜಿ ಹಾಕಲು ಹೇಳಿದರು. ಅರ್ಜಿ ಹಾಕಿದೆ. ಅಲ್ಲಿನ ತರಬೇತಿಗೆ ಆಯ್ಕೆಯಾದೆ. ಬಳಿಕ ದೆಹಲಿಯ ನಾಷನಲ್‌ ಸ್ಕೂಲ್‌ ಆಫ್ ಡ್ರಾಮಾಗೂ ಹೋದೆ. ನನಗೆ ಅಭಿರುಚಿ, ಆಸಕ್ತಿ ಇತ್ತು. ಹಾಗೆಯೇ ನನ್ನ ಎದುರು ದಾರಿಯೂ  ತೆರೆದುಕೊಳ್ಳುತ್ತಾ ಹೋಯಿತು.

– ಪಿಯುಸಿ ಆಯ್ತು, ಇನ್ನು ಮದ್ವೆ ಆಗು!
ಮಂಡ್ಯದ ಹುಡುಗಿಯಾಗಿ ನಟನಾ ವೃತ್ತಿಗೆ ಇಳಿಯುವುದು ಅಷ್ಟು ಸುಲಭವಿರಲಿಲ್ಲ. ನಾನು ಪಿಯುಸಿಯಲ್ಲಿದ್ದಾಗಲೇ ಅಪ್ಪ ತೀರಿಕೊಂಡರು. ನಮ್ಮ ಕುಟುಂಬದವರೆಲ್ಲ ನೀನು ಓದಿದ್ದು ಸಾಕು. ನಿಂಗೆ ಮದ್ವೆ ಮಾಡ್ತೀವಿ ಎಂದು ಒತ್ತಾಯಿಸುತ್ತಿದ್ದರು. ನಾನು ಹಠ ಹಿಡಿದು ಡಿಗ್ರಿ ಓದಲು ಮೈಸೂರಿಗೆ ಹೋದೆ. ಆಮೇಲೆ ಯಾರ ಕೈಗೂ ಸಿಗಲಿಲ್ಲ. ಯಾರು ಕಾಲೆಳೆದರೂ ನನ್ನ ಗುರಿ ಬದಲಾಗಲಿಲ್ಲ. ಬಹುಶಃ ಅಪ್ಪ ಬದುಕಿದ್ದಿದ್ದರೆ ನಾನು ಕ್ರೀಡಾಪಟು ಆಗಿರುತ್ತಿದ್ದೆ. ಅಪ್ಪನಿಗೆ ಕ್ರೀಡೆ ಬಗ್ಗೆ ವಿಶೇಷ ಒಲವಿತ್ತು.

– ಹಳ್ಳಿ ಪ್ರತಿಭೆಗಳ ಶೋಧಕ್ಕೆ ಟ್ರಸ್ಟ್‌ ಸ್ಥಾಪಿಸಿರುವೆ
ನಾನು ಹಳ್ಳಿ ಹುಡುಗಿ. ಹಳ್ಳಿಗಳಲ್ಲಿ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಆದರೆ ಅವರಿಗೆ ನಟನೆಯೆಂದರೆ ಅದೇಕೋ ಅಸಡ್ಡೆ. ಗ್ರಾಮೀಣ ಪ್ರತಿಭೆಗಳನ್ನು ಬೆಳಕಿಗೆ ತರುವುದು ನನ್ನ ಗುರಿ. ಊರಿನಲ್ಲಿ ನನ್ನದೇ ಒಂದು ಟ್ರಸ್ಟ್‌ ಸ್ಥಾಪಿಸಿದ್ದೇನೆ. “ಬಿ-ಚಾನೆಲ್‌’ ಅಂತ ಅದರ ಹೆಸರು. ಗ್ರಾಮದ ರೈತ ಸಮುದಾಯ, ಇತರ ವರ್ಗಗಳ ಜನರಿಗೆ ನಾಟಕ ಅಭ್ಯಾಸ ಮಾಡಿಸಿ, ದೇಶಾದ್ಯಂತ ಪ್ರದರ್ಶನ ಕೊಡಿಸುವುದು ಇದರ ಉದ್ದೇಶ. ಇದು ಕೇವಲ ನನ್ನ ಊರಿನ ಜನರಿಗೆ ಮಾತ್ರ ಸೀಮಿತವಲ್ಲ. ದೇಶದ ಹಲವಾರು ಭಾಗಗಳ ಗ್ರಾಮಸ್ಥರನ್ನು ಇದರಲ್ಲಿ ತೊಡಗಿಸಲಾಗುತ್ತದೆ. ಒಂದು ನಾಟಕವನ್ನು ಪ್ರದರ್ಶಿಸಬೇಕಾದರೆ, 6 ತಿಂಗಳ ಕಾಲಾವಕಾಶವಾದರೂ ಬೇಕು.

– ಗ್ರಾಮಸ್ಥರ ಮನವೊಲಿಸುವುದೇ ದೊಡ್ಡ ಸವಾಲು
ಗ್ರಾಮಸ್ಥರ ಮೇಲೆ ನಟನೆಯನ್ನು ಹೇರಲಾಗದು. ರಂಗಭೂಮಿ ಆಸಕ್ತಿ ಅವರಲ್ಲೇ ಮೂಡುವಂತೆ ಮಾಡಬೇಕು. ನಾನು ನನ್ನ ತಂಡ ಮೊದಲಿಗೆ ಮಾಡುವುದೂ ಇದೇ ಕೆಲಸವನ್ನು. ನಾನು ಅಥವಾ ಇತರರು ರಂಗಭೂಮಿಯಲ್ಲಿನ ಕಲಿಕೆಗಳನ್ನು ಅವರೆದುರು ತೆರೆದಿಡುತ್ತೇವೆ. ಬೀದಿ ನಾಟಕವಾಡುತ್ತೇವೆ. ಕಾರ್ಯಾಗಾರ ನಡೆಸುತ್ತೇವೆ. ನನ್ನ ಜಾಗದಲ್ಲಿ ಅವರ ಮಗ/ ಮಗಳನ್ನು ಅವರು ಕಲ್ಪಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಅವರಿಗೂ ರಂಗಭೂಮಿ ಮೇಲೆ ಒಲವು ಮೂಡುತ್ತದೆ.

– ಸಿನಿಮಾ ನಟನೆಯಿಂದ ಬರುವ ದುಡ್ಡು ನಾಟಕಕ್ಕೆ ವಿನಿಯೋಗ
ನಾನು ಬೇರೆ ರಂಗ ತಂಡಗಳಲ್ಲೂ ಅಭಿನಯಿಸುತ್ತೇನೆ. ನನಗೆ ಅದು ಅನಿವಾರ್ಯ ಕೂಡ. ಅಲ್ಲಿ ಸಿಗುವ ಸಂಭಾವನೆಯನ್ನು ನಾನು ತಂಡ ಕಟ್ಟಿ ಆಡಿಸುವ ನಾಟಕಗಳಿಗೆ ವಿನಿಯೋಗಿಸುತ್ತೇನೆ. ಎಂಟ್ರಿ ಪಾಸ್‌ಗಳನ್ನು ಮಾರಿ ಪ್ರದರ್ಶನಕ್ಕೆ ಹಣ ಸಂಪಾದಿಸುತ್ತೇನೆ. ನನ್ನ ತಂಡದಲ್ಲಿ ಅಭಿನಯಿಸುವ ಎಲ್ಲಾ ನಟರಿಗೂ ನನ್ನ ಕೈಯಲ್ಲಿ ಎಷ್ಟಾಗುತ್ತದೋ ಅಷ್ಟು ಗೌರವ ಸಂಭಾವನೆಯನ್ನು ನೀಡುತ್ತೇನೆ. ನಾನೂ ಕಲಾವಿದೆಯಾಗಿರುವುದರಿಂದ ಕಲಾವಿದರ ಆರ್ಥಿಕ ಸಂಕಷ್ಟಗಳ ಅರಿವು ನನಗಿದೆ.

– “ಒಬ್ಬಳು’ ನಾಟಕದಲ್ಲಿ ಬ್ಯುಸಿ
ಪ್ರಸ್ತುತ “ಒಬ್ಬಳು’ ಎಂಬ ನಾಟಕ ಪ್ರದರ್ಶನ ನಡೆಯುತ್ತಿದೆ. “ಎ ವುಮನ್‌ ಅಲೋನ್‌’ ಕೃತಿಯ ಅನುವಾದ ಇದು. ಪ್ರಸನ್ನ ಡಿ. ಸಾಗರ್‌ ನಿರ್ದೇಶಿಸಿದ್ದಾರೆ. ಇದು ಏಕವ್ಯಕ್ತಿ ನಾಟಕ. ದೆಹಲಿ, ಧಾರವಾಡ, ಮೈಸೂರಿನಲ್ಲಿ ಇದರ ಪ್ರದರ್ಶನವಾಗಿದೆ. ಇನ್ನೂ ಟೂರ್‌ಗಳು ಬಾಕಿ ಇವೆ.

– ಹಲವರು ಗಾಡ್‌ಫಾದರ್‌
ಇಂಥವರೇ ನನಗೆ ಮಾರ್ಗದರ್ಶಕರು ಎಂದು ಹೇಳಲಾಗುವುದಿಲ್ಲ. ರಂಗಾಯಣದ ಎಲ್ಲಾ ಕಲಾವಿದರ ಪ್ರಭಾವ ನನ್ನ ಮೇಲಿದೆ. ನಿರ್ದೇಶಕ ಚಿದಂಬರ ಜಂಬೆ ತಮ್ಮ ರಂಗಭೂಮಿ ಜೀವನದ ಕುರಿತು ಹೇಳುತ್ತಿದ್ದರು. ಅವರ ಅನುಭವಗಳು ನನಗೆ ಸಾಕಷ್ಟು ಉತ್ತೇಜನ ನೀಡಿವೆ.

– ರಂಗಭೂಮಿಯೇ ಹೆಚ್ಚು ಖುಷಿ
ಕ್ಯಾಮೆರಾ ಮುಂದೆ ಅಭಿನಯಿಸುವುದಕ್ಕಿಂತ ರಂಗಭೂಮಿ ಮೇಲೆ ನಟಿಸುವುದು ಹೆಚ್ಚು ಖುಷಿ ನೀಡುತ್ತದೆ. ನಾಟಕಕ್ಕೆ ನಾವು ತಿಂಗಳು ಪೂರ್ತಿ ತಾಲೀಮು ಮಾಡಿರುತ್ತೇವೆ. ಸಹ ಕಲಾವಿದರೆಲ್ಲ ಜೊತೆಗೆ ಊಟ, ತಿಂಡಿ ಮಾಡಿರುತ್ತೇವೆ. ಅದಕ್ಕಿಂತಲೂ ಹೆಚ್ಚಾಗಿ ಪಾತ್ರವನ್ನು ಆಳವಾಗಿ ಗ್ರಹಿಸಿರುತ್ತೇವೆ. ಹೀಗಾಗಿ ರಂಗಭೂಮಿ ಮೇಲೆ ಅಭಿನಯಿಸುವಾಗ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಅಲ್ಲದೇ ಅದು ನಮ್ಮ ಕಂಫ‌ರ್ಟ್‌ ಝೋನ್‌ ಆಗಿರುತ್ತದೆ.

– ತಾಯಿಯ ಆನಂದಬಾಷ್ಪ
ನನ್ನ ತಾಯಿಗೆ ಯಾರೋ ನಿಮ್ಮ ಮಗಳಿಗೆ ಪ್ರಶಸ್ತಿ ಬಂದಿದೆ ಎಂದು ಹೇಳಿದರಂತೆ. ಅವರು ನನಗೆ ಕರೆ ಮಾಡಿದರು. ಅವರಿಗೆ ಹೆಚ್ಚು ಮಾತನಾಡಲಾಗಲಿಲ್ಲ. ನನಗೂ ಆಗಲಿಲ್ಲ. ಇಬ್ಬರಿಗೂ ದುಃಖ ಒತ್ತರಿಸಿ ಬರುತ್ತಿತ್ತು. ದೀರ್ಘ‌ ಮೌನ, ಕಣ್ಣೀರು…

– ನಾ ಮೆಚ್ಚಿದ ನಾಗತಿಹಳ್ಳಿ ಸರ್‌…
ಚಿತ್ರರಂಗದಲ್ಲಿ ನಾಗತಿಹಳ್ಳಿ ಚಂದ್ರಶೇಖರ್‌ ಸರ್‌ರಷ್ಟು ಒಳ್ಳೆಯವರನ್ನು ನೋಡಿಲ್ಲ. “ಇಷ್ಟಕಾಮ್ಯ’ದ ಚಿತ್ರೀಕರಣ ವೇಳೆ ನಾಗತಿಹಳ್ಳಿ ಚಂದ್ರಶೇಕರ್‌ ಅವರ ಜೊತೆ ಒಡನಾಡುವ ಅವಕಾಶ ಸಿಕ್ಕಿತು. ಒಬ್ಬ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿ ಹೇಗೆ ಇರಬೇಕು ಎಂದು ತಿಳಿದಿದ್ದೇ ಅವರನ್ನು ನೋಡಿ. ಅಂಥ ವ್ಯಕ್ತಿಯನ್ನು ನಾನು ನೋಡಿಯೇ ಇರಲಿಲ್ಲ. ಎಂಥಾ ಕಷ್ಟದ ಸಂದರ್ಭದಲ್ಲೂ ಅವರು ತಾಳ್ಮೆ ಕಳೆದುಕೊಳ್ಳುವುದಿಲ್ಲ. ಯಾರೊಬ್ಬರನ್ನೂ ಏರುಧ್ವನಿಯಲ್ಲಿ ಮಾತನಾಡಿಸುವುದಿಲ್ಲ.

– ಪುಸ್ತಕ ಓದುತ್ತೇನೆ
ಬಿಡುವಿನ ಸಮಯದಲ್ಲಿ ಪುಸ್ತಕ ಓದುತ್ತೇನೆ. ನೇಮಿಚಂದ್ರ ಮತ್ತು ವಸುಧೇಂದ್ರ ನನ್ನ ನೆಚ್ಚಿನ ಲೇಖಕರು. ಕುವೆಂಪುರವರ ಸಣ್ಣ ಕಥೆಗಳಾದ “ಕಾಲದ ಮಗು’, “ಪದ್ಮಾವತಿ ಮನೆ ಮೇಸ್ಟ್ರೆ’ ನನ್ನನ್ನು ಸದಾ ಕಾಡುವ ಕಥೆಗಳು. ಬಿ.ವಿ. ಭಾರತಿಯವರ “ಸಾಸಿವೆ ತಂದವಳು’ ಪುಸ್ತಕ ಓದಿ ಬಹಳ ಮೆಚ್ಚಿಕೊಂಡಿದ್ದೆ. ಧಾರವಾಡದಲ್ಲಿ ಅವರನ್ನು ಭೇಟಿಯಾಗುವ ಅವಕಾಶ ಲಭಿಸಿತು. ಬಹಳ ಸಂತೋಷಪಟ್ಟೆ. ಜೀವನದಲ್ಲಿ ಏನಾದರೂ ಸಾಧಿಸಲು ಅಂಥವರೇ ನನಗೆ ಪ್ರೇರಣೆ.

– ಚೇತನ ಜೆ.ಕೆ.

Advertisement

Udayavani is now on Telegram. Click here to join our channel and stay updated with the latest news.

Next