Advertisement

ಹುಟ್ಟೂರಿನ ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೆ ಅಡ್ಡಿ

06:23 PM May 20, 2021 | Team Udayavani |

ಹೊಳೆ ಆಲೂರ: ಮೃತ ಕೊರೊನಾ ಸೋಂಕಿತನ ಶವಸಂಸ್ಕಾರಕ್ಕೆ ಸ್ವತಃ ಗ್ರಾಮಸ್ಥರೇ ಅಡ್ಡಿಪಡಿಸಿದ ಘಟನೆ ಬುಧವಾರ ತಾಲೂಕಿನ ಅಮರಗೋಳದಲ್ಲಿ ನಡೆದಿದೆ.

Advertisement

ಮೂಲತಃ ಅಮರಗೋಳ ಗ್ರಾಮದ 72 ವರ್ಷದ ವೃದ್ಧನೊಬ್ಬ ನೌಕರಿ ನಿಮಿತ್ತ 10-15 ವರ್ಷಗಳಿಂದ ಬಾಗಲಕೋಟೆಯಲ್ಲಿ ವಾಸವಿದ್ದು, ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಮೃತ ಕುಟುಂಬಸ್ಥರು ಸ್ವಗ್ರಾಮ ಅಮರಗೋಳಕ್ಕೆ ಶವ ಸಂಸ್ಕಾರ ಮಾಡಲು ಬಂದಾಗ ಗ್ರಾಮಸ್ಥರು ವಿರೋಧಿಸಿದ ಹಿನ್ನೆಲೆಯಲ್ಲಿ ಜೆಸಿಬಿ ಮೂಲಕ ತಮ್ಮ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಉದ್ಯೋಗ ನಿಮಿತ್ತ ಬಾಗಲಕೋಟೆಯಲ್ಲಿ ವಾಸವಿದ್ದರೂ ವ್ಯಕ್ತಿ ಹುಟ್ಟೂರಿನ ಪ್ರೀತಿ ಬಿಟ್ಟಿರಲಿಲ್ಲ. ಗ್ರಾಮ ದೇವತೆ ಜಾತ್ರೆ, ಉತ್ಸವ, ಕುಟುಂಬ ಕಾರ್ಯಕ್ರಮಕ್ಕಾಗಿ ಸ್ವಗ್ರಾಮಕ್ಕೆ ಬಂದು ಹೋಗುತ್ತಿದ್ದರು. ಕಳೆದೊಂದು ವಾರದ ಹಿಂದೆ ಕೊರೊನಾ ಪೀಡಿತರಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಬುಧವಾರ ಬೆಳಗ್ಗೆ ಮೃತಪಟ್ಟಿದ್ದರು. ಆಗ ಕುಟುಂಬಸ್ಥರು ಆಂಬ್ಯುಲೆನ್ಸ್‌ ಮೂಲಕ ಮಧ್ಯಾಹ್ನ ಸ್ವಗ್ರಾಮ ಅಮರಗೋಳಕ್ಕೆ ಶವ ತಂದು ಸಂಸ್ಕಾರ ಮಾಡಲು ನಿರ್ಧರಿಸಿದ್ದಾರೆ. ಆಗ ವಿಷಯ ತಿಳಿದ ಗ್ರಾಮಸ್ಥರು ಒಪ್ಪಿಗೆ ನೀಡದ್ದರಿಂದ ಹೊಳೆಆಲೂರಿನ ನೀರಾವರಿ ಕಾಲುವೆ ಹತ್ತಿರದ ತಮ್ಮ ಹೊಲದಲ್ಲಿ ಶವ ಸಂಸ್ಕಾರ ಮಾಡಲು ನಿರ್ಧರಿಸಿದ್ದಾರೆ. ಆಗ ಮಳೆ ಬಂದು ಆಂಬ್ಯುಲೆನ್ಸ್‌ ಹೋಗದ ಪರಿಸ್ಥಿತಿ ಉಂಟಾಗಿದೆ. ಅನಿವಾರ್ಯವಾಗಿ ಜೆಸಿಬಿ ಮೂಲಕ ಅರ್ಧ ಕಿ.ಮೀ ಶವ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next