Advertisement

ಕಲಿಕೆಯಲ್ಲಿ  ಆಸಕ್ತಿ, ಗುರುಗಳ ಮೇಲೆ ಭಕ್ತಿಯಿಂದ ಸಾಧನೆ

12:37 PM Apr 13, 2018 | |

ಮಂಗಳೂರು: ಖ್ಯಾತ ಮೃದಂಗ ವಾದಕರಾಗಿ, ಗುರುವಾಗಿ ಗುರುತಿಸಿಕೊಂಡಿರುವ ವಿಟ್ಲ ಕೊಡಪದವು ಸಮೀಪದ ಶಂಕರ್‌ ಭಟ್‌ ಕುಕ್ಕಿಲ ಅವರು ನೂರಾರು ವಿದ್ಯಾರ್ಥಿಗಳಿಗೆ ಮೃದಂಗ ಕಲಿಸಿ ಸೈ ಎನಿಸಿಕೊಂಡವರು. ಪ್ರಾರಂಭದಲ್ಲಿ ಮಂಗಳೂರು ಕಲಾನಿಕೇತನ್‌ನ ಕೆ.ಎನ್‌. ಸುಂದರಾಚಾರ್ಯ ಅವರಿಂದ ಮೃದಂಗ ಕಲಿತ ಅವರು ಬಳಿಕ ಮೈಸೂರಿನಲ್ಲಿ ಕೆ. ಹರಿಶ್ಚಂದ್ರನ್‌ ಅವರಿಂದ ಅಭ್ಯಾಸ ಮಾಡಿದ್ದಾರೆ.

Advertisement

ಕರ್ನಾಟಕ ಸಹಿತ ಹೊರರಾಜ್ಯಗಳಲ್ಲೂ ಪ್ರದರ್ಶನ ನೀಡಿದ್ದು, ಇವರ ಸಾಧನೆಯನ್ನು ಗುರುತಿಸಿ ಕಲಾ ರತ್ನಾಕರ, ಗುರು ಬೃಹಸ್ಪತಿ ಬಿರುದು ಸಹಿತ ಹತ್ತು ಹಲವು ಸಮ್ಮಾನಗಳನ್ನು ನೀಡಲಾಗಿದೆ. ಶಂಕರ್‌ ಭಟ್‌ ಅವರು ಕಳೆದ 50 ವರ್ಷಗಳಿಂದ ಪುತ್ತೂರು ಉಮಾಮಹೇಶ್ವರಿ ಸಂಗೀತ ಕಲಾ ಶಾಲೆಯಲ್ಲಿ ಮೃದಂಗ ಕಲಿಸುತ್ತಿದ್ದಾರೆ.

ಆರಂಭದಲ್ಲಿ ತಮಗೆ ಮೃದಂಗ ಕ್ಷೇತ್ರದ ಕುರಿತು ಒಲವು ಮೂಡಲು ಕಾರಣ?
ಬಾಲ್ಯದಲ್ಲಿ ಯಾವುದೇ ವಸ್ತು ಸಿಕ್ಕಿದರೂ ಅದಕ್ಕೆ ಕೈಯಲ್ಲಿ ಬಡಿಯುವ ಅಭ್ಯಾಸ ಇತ್ತು ಎಂದು ತಾಯಿ ಹೇಳುತ್ತಿದ್ದರು. ಜತೆಗೆ ಸಂಗೀತ ಕೇಳುವ ಅಭ್ಯಾಸವೂ ಬೆಳೆದಿತ್ತು. ಹೀಗಾಗಿ ತಂದೆಯವರು ಮೃದಂಗ ತರಗತಿಗೆ ಕಳುಹಿಸಿದರು. ಬಳಿಕ ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಮೈಸೂರಿಗೆ ತೆರಳಿದ್ದರಿಂದ ಅಲ್ಲಿ 7 ವರ್ಷಗಳ ಕಾಲ ಸಂಗೀತ ಕಲಿಯಬೇಕಾಯಿತು.

ಸಂಗೀತ ಪರಿಕರಗಳ ವಾದನದ ಕುರಿತು ಜನರ ಒಲವು ಹೇಗಿದೆ?
ಸಂಗೀತ, ಭರತನಾಟ್ಯದಂತೆ ಪ್ರಸ್ತುತ ಸಂಗೀತ ಪರಿಕರಗಳ ಕುರಿತು ಜನರು ಆಸಕ್ತಿ ಹೆಚ್ಚಾಗುತ್ತಿದೆ. ಮೈಸೂರು, ಬೆಂಗಳೂರು, ಚೆನ್ನೈ ಮೊದಲಾದ ಪ್ರದೇಶಗಳ ಕಲಾವಿದರನ್ನು ಕರೆಸಿ ಅವಕಾಶ ನೀಡುತ್ತಿದ್ದಾರೆ. ಒಲವು ಹೆಚ್ಚಾಗಿರುವುದೇ ಇದ್ದಕ್ಕೆ ಕಾರಣ.

ಹಾಡುಗಾರಿಕೆ ಹಾಗೂ ಪರಿಕರಗಳ ವಾದನ ಹೇಗೆ ಪೂರಕವಾಗುತ್ತದೆ?
ಹಾಡಿನ ಶೋಭೆ ಹೆಚ್ಚಾಗಬೇಕಾದರೆ ಅದಕ್ಕೆ ಲಯವಾದ್ಯ ಅಗತ್ಯವಾಗಿದೆ. ಯಾವುದೇ ವಿಧದ ಸಂಗೀತಕ್ಕೂ ಒಂದು ನಿರ್ದಿಷ್ಟವಾದ ಲಯ ಎಂಬುದಿರುತ್ತದೆ. ಅದನ್ನು ಪೂರ್ಣಗೊಳಿಸುವ ಕಾರ್ಯವನ್ನು ಇಂತಹ ಪರಿಕರಗಳು ಮಾಡುತ್ತವೆ. ಪರಿಕರಗಳು ಇಲ್ಲದೇ ಹಾಡಿದಾಗ ಅದು ಜನರನ್ನು ಆಕರ್ಷಿಸುವುದಕ್ಕೂ ಕಷ್ಟವಾಗುತ್ತದೆ.

Advertisement

ಪ್ರಸ್ತುತ ಸಂಗೀತ ಪರಿಕರಗಳ ವಾದನಕ್ಕೆ ಮಕ್ಕಳಲ್ಲಿ ಆಸಕ್ತಿ ಹೇಗಿದೆ.?
ಮಕ್ಕಳು ಈಗ ಹೆಚ್ಚಿನ ಆಸಕ್ತಿಯಿಂದ ಸಂಗೀತ ಪರಿಕರಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. 50 ವರ್ಷದ ಹಿಂದೆ ತಾನು ಮೃದಂಗ ತರಗತಿ ಆರಂಭಿಸುವ ಸಂದರ್ಭದಲ್ಲಿ ಒಂದೆರಡು ಮಕ್ಕಳು ಮಾತ್ರ ಇದ್ದರು. ಆದರೆ ಈಗ ಹೆಚ್ಚಾಗಿದ್ದಾರೆ. ಮೃದಂಗ ಕಲಿಯಬೇಕಾದರೆ ಅವರಿಗೆ ಸಂಗೀತದ ಜ್ಞಾನ ಅತಿ ಅಗತ್ಯ.

ಪಾಶ್ಚಾತ್ಯ ಸಂಗೀತದಿಂದ ಶಾಸ್ತ್ರೀಯ ಸಂಗೀತಕ್ಕೆ ತೊಂದರೆ ಇದೆಯೇ?
ಇಲ್ಲ. ಎಷ್ಟೋ ಕಡೆಗಳಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ- ನಮ್ಮ ಶಾಸ್ತ್ರೀಯ ಸಂಗೀತದ ಜುಗಲ್‌ಬಂದಿ ನಡೆಯುತ್ತದೆ. ಆದರೆ ಹೆಚ್ಚು ಶಬ್ಧ ಇರುವ ಸಂಗೀತದಿಂದ ಕೊಂಚ ತೊಂದರೆಯಾಗುವ ಸಾಧ್ಯತೆಯೂ ಇರಬಹುದು.

ಸಂಗೀತ ಕ್ಷೇತ್ರಕ್ಕೆ ಬರುವ ಯುವ ಕಲಾವಿದರಿಗೆ ನಿಮ್ಮ ಕಿವಿಮಾತೇನು.?
ಸಂಗೀತದಲ್ಲಿ ಸರಿಯಾದ ಕಲಿಕೆಯ ಬಳಿಕವೇ ಪ್ರದರ್ಶನಕ್ಕೆ ಬರಬೇಕು. ಶ್ರದ್ಧೆ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಈ ವಿಚಾರಗಳನ್ನು ತಿಳಿದುಕೊಂಡು ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕು. ಗುರುಗಳ ಕುರಿತು ಭಕ್ತಿಯೂ
ಮುಖ್ಯವಾಗುತ್ತದೆ.

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next