Advertisement

ಕೊಲ್ಲಾಪುರ, ಸಾಂಗ್ಲಿ: ನೀರಿನ ಮಟ್ಟ ಇಳಿಮುಖ; 4 ಲಕ್ಷಕ್ಕೂ ಹೆಚ್ಚು ಜನರ ರಕ್ಷಣೆ

10:19 AM Aug 13, 2019 | Nagendra Trasi |

ಮುಂಬಯಿ, ಆ. 11: ಮಹಾರಾಷ್ಟ್ರದಲ್ಲಿ ಪ್ರವಾಹದಿಂದ ತೀವ್ರವಾಗಿ ತತ್ತರಿಸಿರುವ ಕೊಲ್ಲಾಪುರ ಮತ್ತು ಸಾಂಗ್ಲಿಯಲ್ಲಿ ನೀರಿನ ಮಟ್ಟವು ಕ್ರಮೇಣ ಕಡಿಮೆಯಾಗುತ್ತಿದ್ದು, ವಿವಿಧ ರಕ್ಷಣಾ ತಂಡಗಳಿಂದ ನೆರೆ ಸಂತ್ರಸ್ತರ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ. ಇದರ ಜತೆ ಹೆಚ್ಚುವರಿ ಐದು ಮೃತದೇಹಗಳನ್ನು ಪತ್ತೆ ಮಾಡುವುದರೊಂದಿಗೆ ಸಾಂಗ್ಲಿ ದೋಣಿ ದುರಂತದಲ್ಲಿ ಮೃತರ ಸಂಖ್ಯೆ 17ಕ್ಕೆ ಏರಿದೆ. ರಾಜ್ಯಾದ್ಯಂತ ಪ್ರವಾಹ ಪೀಡಿತ ಭಾಗಗಳಿಂದ ಈವರೆಗೆ 4 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

30ಕ್ಕೂ ಅಧಿಕ ಸಾವು
ಪಶ್ಚಿಮ ಮಹಾರಾಷ್ಟ್ರದ ಪ್ರವಾಹ ಪರಿಸ್ಥಿತಿಯನ್ನು ನಿವಾರಿಸುವ ಸಲುವಾಗಿ ಕರ್ನಾಟಕದ ಕೃಷ್ಣ ನದಿಯ ಆಲಮಟ್ಟಿ ಅಣೆಕಟ್ಟಿನಿಂದ 5 ಲಕ್ಷ ಕ್ಯುಸೆಕ್‌ಗಿಂತಲೂ ಹೆಚ್ಚು ನೀರನ್ನು ಹೊರಹಾಕಲಾಗುತ್ತಿದೆ. ಸಾಂಗ್ಲಿಯ ಬ್ರಹ್ಮನಾಲ್‌ ಗ್ರಾಮದ ಬಳಿ ಗುರುವಾರ ನಡೆದ ದೋಣಿ ಅಪಘಾತದಲ್ಲಿ ಮುಳುಗಿದ 17 ಮಂದಿ ಸೇರಿದಂತೆ ಕಳೆದ ಒಂದು ವಾರದಲ್ಲಿ ಪಶ್ಚಿಮ ಮಹಾರಾಷ್ಟ್ರದ ಐದು ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 30ಕ್ಕೂ ಹೆಚ್ಚು ಜನರು
ಸಾವನ್ನಪ್ಪಿದ್ದಾರೆ. ಕೊಲ್ಲಾಪುರ ಮತ್ತು ಸಾಂಗ್ಲಿಯ ಕೆಲವು ಪ್ರದೇಶಗಳಲ್ಲಿ ನೀರು ಕಡಿಮೆಯಾಗಲು ಪ್ರಾರಂಭಿಸಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುರುವಾರ ರಕ್ಷಣಾ ಕಾರ್ಯಾಚರಣೆಯ ವೇಳೆ ದೋಣಿ ಅಪಘಾತಕ್ಕೀಡಾದಾಗ ಒಂಬತ್ತು ಜನರು ಮುಳುಗಿ ಮೃತಪಟ್ಟಿದ್ದರು ಮತ್ತು ಇತರರು ಕಾಣೆಯಾಗಿದ್ದರು. ಈ ಪೈಕಿ ಶನಿವಾರದ ವೇಳೆಗೆ ಮೂರು ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು ರವಿವಾರ ಮತ್ತೆ ಐದು ಮೃತದೇಹಗಳನ್ನು ಪತ್ತೆ ಮಾಡುವುದರೊಂದಿಗೆ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ತಲುಪಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ಒಂದು ವಾರದಲ್ಲಿ ರಾಜ್ಯದ ಕೊಲ್ಲಾಪುರ, ಸಾಂಗ್ಲಿ, ಸತಾರಾ, ಥಾಣೆ, ಪುಣೆ, ನಾಸಿಕ್‌, ಪಾಲರ್‌, ರತ್ನಗಿರಿ, ರಾಯಗಢ ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲಿ ಭಾರೀ
ಮಳೆಯಾಗಿದೆ.

ಹೆಚ್ಚು ಹಾನಿಗೊಳಗಾದ ಕೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಿಂದ ಈವರೆಗೆ ಸುಮಾರು 3.78 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಅಲ್ಲಿ ಶನಿವಾರದಿಂದ ನೀರು ನಿಧಾನವಾಗಿ ಕಡಿಮೆಯಾಗಲು ಪ್ರಾರಂಭಿಸಿದೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ಈವರೆಗೆ ಒಟ್ಟು 4,24,333 ಜನರನ್ನು ಸ್ಥಳಾಂತರಿಸಲಾಗಿದೆ. ಈ ಪೈಕಿ 2.33 ಲಕ್ಷ ಜನರನ್ನು ಕೇವಲ ಕೊಲ್ಲಾಪುರದಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯ 69 ತಾಲೂಕುಗಳಲ್ಲಿನ ಒಟ್ಟು 761 ಗ್ರಾಮಗಳು ಪ್ರವಾಹದಿಂದ ಪೀಡಿತವಾಗಿವೆ ಎಂದವರು ಹೇಳಿದ್ದಾರೆ. ಕೊಲ್ಲಾಪುರದ ಕೆಲವು ಪ್ರದೇಶಗಳಲ್ಲಿ ಹೆಲಿಕಾಪ್ಟರ್‌ಗಳಿಂದ ಆಹಾರ ಪ್ಯಾಕೆಟ್‌ಗಳನ್ನು ಕೈಬಿಡಲಾಗುತ್ತಿದ್ದು, ಅಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಇನ್ನೂ ನೀರಿನಿಂದ ಮುಳುಗಿವೆ ಎಂದು ಅಧಿಕಾರಿ ಹೇಳಿದ್ದಾರೆ.

Advertisement

ರಕ್ಷಣಾ ತಂಡಗಳ ನಿಯೋಜನೆ
ಪ್ರವಾಹ ಪೀಡಿತ 10 ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ ಎಫ್‌) ತನ್ನ 29 ತಂಡಗಳನ್ನು, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್‌) 3, ಕೋಸ್ಟ್‌ಗಾರ್ಡ್‌ 16, ನೌಕಾಪಡೆ 41 ಮತ್ತು ಆರ್ಮಿ 21 ತಂಡಗಳನ್ನು ನಿಯೋಜಿಸಿದೆ. 211ದೋಣಿಗಳ ಸಹಾಯದಿಂದ ಅವರು ಜನರನ್ನು ರಕ್ಷಿಸುತ್ತಿದ್ದಾರೆ. ಈ ಜಿಲ್ಲೆ ಗಳಲ್ಲಿ ಪ್ರವಾಹದಿಂದ ಸ್ಥಳಾಂತರಗೊಂಡವರಿಗೆ ಸುಮಾರು 369 ತಾತ್ಕಾಲಿಕ ಆಶ್ರಯ ಶಿಬಿರಗಳನ್ನು ಸ್ಥಾಪಿಸಲಾಗಿದೆ ಎಂದರು.

ವೈದ್ಯಕೀಯ ನೆರವು
ಸಾಂಗ್ಲಿ ಮತ್ತು ಕೊಲ್ಲಾಪುರಕ್ಕೆ ವೈದ್ಯಕೀಯ ನೆರವು ನೀಡಲು ಥಾಣೆ ಮೂಲದ 100 ಖಾಸಗಿ ವೈದ್ಯರ ತಂಡವು ರವಾನೆಯಾಗಿದೆ. ಔಷಧಿಗಳಲ್ಲದೆ, ಪ್ರವಾಹ ಪೀಡಿತ ಜನರಿಗೆ ಬಟ್ಟೆ ಮತ್ತು ಕಂಬಳಿಗಳಂತಹ ಅಗತ್ಯ ವಸ್ತುಗಳನ್ನು ಕೂಡ ಅವರು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ.

ಏತನ್ಮಧ್ಯೆ, ಕೊಲ್ಲಾಪುರ ಮತ್ತು ಸಾಂಗ್ಲಿಯ ಪ್ರವಾಹದಿಂದ ಹಾನಿಗೊಳಗಾದ ವಿದ್ಯುತ್‌ ಮೀಟರ್‌ಗಳನ್ನು ಉಚಿತವಾಗಿ ಬದಲಾಯಿಸಲಾಗುವುದು ಎಂದು ಮಹಾರಾಷ್ಟ್ರ
ರಾಜ್ಯ ವಿದ್ಯುತ್‌ ವಿತರಣಾ ಕಂಪೆನಿಯ (ಎಂಎಸ್‌ ಇಡಿಸಿಎಲ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿದ್ಯುತ್‌ ಮೀಟರ್‌ಗೆ ನೀರು ಪ್ರವೇಶಿಸಿದ್ದರೆ ತಮ್ಮ ಮನೆಗಳಲ್ಲಿ ಯಾವುದೇ ಸಾಧನಗಳ ಸ್ವಿಚ್‌ ಆನ್‌ ಮಾಡದಂತೆ ನಾವು ಜನರನ್ನು ಕೇಳಿದ್ದೇವೆ. ವಿದ್ಯುತ್‌ ಸರಬರಾಜನ್ನು ಪುನಃಸ್ಥಾಪಿಸುವ ಮೊದಲು ಎಂಎಸ್‌ಇಡಿಸಿಎಲ್‌ ಸಿಬಂದಿ ಪ್ರತಿ ಪೀಡಿತ ಮನೆಗಳನ್ನು ಪರಿಶೀಲಿಸಲಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ. ಕೊಲ್ಲಾಪುರದಲ್ಲಿ ಬಹುತೇಕ ಎಲ್ಲಾ ಅಣೆಕಟ್ಟುಗಳ ಜಲಾನಯನ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ 100 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಖ್ಯಮಂತ್ರಿ ಅವರು ರವಿವಾರ ಮುಂಬಯಿಯ ಮಂತ್ರಾಲಯದಲ್ಲಿರುವ ನಿಯಂತ್ರಣ ಕೊಠಡಿಯ ಮೂಲಕ ರಾಜ್ಯದ ಪ್ರವಾಹ ಪರಿಸ್ಥಿತಿಯ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.

ಅಮಿತ್‌ ಶಾ ಅವರಿಂದ ವೈಮಾನಿಕ ಸಮೀಕ್ಷೆ
ಮುಂಬಯಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರವಿವಾರ ಮಹಾರಾಷ್ಟ್ರದ ಸತಾr, ಸಾಂಗ್ಲಿ
ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯ ಪರಿಶೀಲನೆ ನಡೆಸಿದ ಅನಂತರ ಕೇಂದ್ರ ಸಚಿವರು ನೆರೆಯ ಕರ್ನಾಟಕದತ್ತ ತೆರಳಿ ಅಲ್ಲಿನ ಪರಿಸ್ಥಿತಿ ವಿಕ್ಷಿಸಿದರು. ಮಹಾರಾಷ್ಟ್ರದ ಪ್ರಸ್ತುತ ಪ್ರವಾಹ ಪರಿಸ್ಥಿತಿ
ಮತ್ತು ಪಶ್ಚಿಮ ಮಹಾರಾಷ್ಟ್ರದ ದಕ್ಷಿಣ ಪ್ರದೇಶಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಬೆಳಗ್ಗೆ ಶಾ ಅವರಿಗೆ ವಿವರಿಸಿದರು.

ಪ್ರವಾಹ ಪರಿಹಾರ ಕ್ರಮಗಳು ಮತ್ತು ವಿವಿಧ ರಕ್ಷಣಾ ತಂಡಗಳ ಸಮನ್ವಯದ ಕುರಿತು ನಾವು ದೈನಂದಿನವಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರವನ್ನು ಕಳುಹಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಕಚೇರಿಯ (ಸಿಎಂಒ) ಅಧಿಕಾರಿ ತಿಳಿಸಿದ್ದಾರೆ. ಕೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿ ಭಾರೀ ಮಳೆಯೊಂದಿಗೆ ವಿವಿಧ ಅಣೆಕಟ್ಟುಗಳಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆಯಾಗಿದ್ದರಿಂದ ಭೀಕರ ಪ್ರವಾಹ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next