Advertisement

ಮನ ರಂಜಿಸಿದ ಅದಲು ಬದಲು

03:11 PM Jan 05, 2018 | |

ಕಳೆದ ಇಪ್ಪತ್ತಾರು ವರ್ಷಗಳಿಂದ ಮಕ್ಕಳಿಗಾಗಿ ಮತ್ತು ದೊಡ್ಡವರಿಗಾಗಿ ಪ್ರತೀ ವರ್ಷ ಎರಡು ನಾಟಕಗಳನ್ನು ಆಯ್ದು ಪ್ರದರ್ಶಿಸುತ್ತಾ ಬರುತ್ತಿರುವ ಕಿನ್ನರ ಮೇಳ, ತುಮರಿ, ಸಾಗರ ಇವರು ಈ ಬಾರಿ ಮಕ್ಕಳಿಗಾಗಿ “ಅದಲು ಬದಲು’ ಎನ್ನುವ ನಾಟಕವನ್ನು ಆಯ್ದು ರಾಜ್ಯದಾದ್ಯಂತ ಪ್ರದರ್ಶನ ನೀಡಲನುವಾಗಿದ್ದು, ಆ ಪ್ರಯುಕ್ತ ಬ್ರಹ್ಮಾವರ ಸರಕಾರಿ ಪ. ಪೂ. ಕಾಲೇಜಿನ ಆವರಣದಲ್ಲಿ ನಾಟಕವನ್ನು ಪ್ರದರ್ಶಿಸಿದರು. ಆಗ ತಾನೇ ಹುಟ್ಟಿದ ಮಾನವ ಶಿಶುವನ್ನು ರಾಕ್ಷಸರು ಕದ್ದುಕೊಂಡು ಆ ಜಾಗದಲ್ಲಿ ತಮ್ಮ ಶಿಶುವನ್ನು ಬಿಟ್ಟು ಹೋಗುತ್ತಾರೆ ಎನ್ನುವ ನಂಬಿಕೆ ಸ್ವೀಡನ್‌ ದೇಶದ ಸಂಪ್ರದಾಯದಲ್ಲಿದೆ. ಇದನ್ನೇ ಆಧಾರವಾಗಿಸಿ ರಚಿಸಲಾಗಿದೆ ಈ ನಾಟಕ. ದಂಪತಿ ತಮ್ಮ ಮಗುವಿನೊಂದಿಗೆ ವಿಹಾರಕ್ಕೆ ಹೊರಟಾಗ ಕಾಡಿನ ನಡುವೆ ಮಗುವನ್ನು ಕಳೆದುಕೊಳ್ಳುತ್ತಾರೆ. ಅರಸುತ್ತಿದ್ದ ಅವರಿಗೆ ರಾಕ್ಷಸ ಮಗುವೊಂದು ದೊರಕುತ್ತದೆ. ಗಂಡ ಬೇಡವೆಂದರೂ ಹೆಂಡತಿ ಆ ಮಗುವನ್ನು ತಂದು ಸಾಕುತ್ತಾಳೆ. ಮಾತೃ ಹೃದಯವೇ ಹಾಗೆ, ಒಡಲಾಳದಲ್ಲಿ ಕಳೆದುಕೊಂಡ ತನ್ನ ಮಗುವಿನ ಬಗ್ಗೆ ಸಂಕಟವಿದ್ದರೂ ಈ ಮಗುವಿನ ಪಾಲನೆಯಲ್ಲಿ ತೊಡಗುತ್ತಾಳೆ. ರಾಕ್ಷಸ ಮಗುವಿನ ಒರಟು ಸ್ವಭಾವ, ಗಂಡನ ಅನಾದರ, ಮಗುವಿನ ಬಗ್ಗೆ ಜನರ ಅಪಹಾಸ್ಯದ ಮಾತು, ಹೀಗೆ ಸಮಾಜದೆದುರು ಎದುರಿಸಬೇಕಾಗಿ ಬಂದ ಸವಾಲುಗಳನ್ನು ಚಿತ್ರಿಸುತ್ತದೆ ನಾಟಕ. ಅದರೊಂದಿಗೆ ತಾಯಿಯ ಮಮತೆ, ತ್ಯಾಗ ಮತ್ತು ಪ್ರೀತಿಯ ಮಹತ್ವವನ್ನು ಸಾರುತ್ತದೆ.

Advertisement

ಇಲ್ಲಿ ಮಗುವಿನ ತಾಯಿಯಾಗಿ ಕು. ರಂಜಿತಾ ಜಾದವ್‌ ಅವರು ಪಾತ್ರದಲ್ಲಿನ ವಿವಿಧ ಸಂದರ್ಭಗಳನ್ನು ಬಹಳ ತನ್ಮಯತೆಯಿಂದ ಅಭಿವ್ಯಕ್ತಿಗೊಳಿಸಿದ್ದರೆ, ಗಂಡನಾಗಿ ಬಾಲಕೃಷ್ಣ ಅವರು ಮಗುವನ್ನು ಅನಾದರಿಸುವ ಪರಿ ಸಹಜತೆಯಿಂದ ಕೂಡಿತ್ತು. ರಾಕ್ಷಸಿಯಾಗಿ ಕಾರ್ತಿಕ, ಮಾನವ ಮಗುವಾಗಿ ನಿಶಾಂತ, ರಕ್ಕಸ ಮಗುವಾಗಿ ತೀಕ್ಷ್ಣಕುಮಾರ ಇವರುಗಳು ಲವಲವಿಕೆಯಿಂದ ಅಭಿನಯಿಸಿದ್ದು, ಮನೆಕೆಲಸದಾಳುಗಳಾಗಿ ಕುಮಾರಿ ರಂಜನಿ ಮತ್ತು ದಿನೇಶ ಅವರು ಹಾಸ್ಯದ ಸನ್ನಿವೇಶಗಳೊಂದಿಗೆ ಎಳೆಯರಿಗೆ ಖುಷಿ ನೀಡಿದರು. ಊರ ಜನರಾಗಿ ಶರತ್‌, ಸಾಯಿಕುಮಾರ್‌, ರಂಗನಾಥ, ಕುಮಾರಿ ಶ್ರೀಮತಿ ಪಾತ್ರಕ್ಕೆ ನ್ಯಾಯ ಒದಗಿಸಿದರು.

ನಿರೂಪಕರಾಗಿದ್ದವರು ಶಶಿಧರ್‌. ಮೂಲ ನಾಟಕ “ದ ಚೇಂಜಿಗ್‌’ (ಲೇ:ಗೊರಾನ್‌ ಟನ್‌ಸ್ಟ್ರಾಮ್‌, ಸ್ವೀಡಿಷ್‌)ನ ಅನುವಾದಿಸಿದವರು : ಕೆ. ಶೋಭಾ ಕೆ. ಜಿ. ಕೃಷ್ಣಮೂರ್ತಿ. ಸಂಗೀತ: ಶ್ರೀàಕಾಂತ ಕಾಳಮಂಜಿ, ವಿನ್ಯಾಸ-ನಿರ್ದೇಶನ: ಕೆ.ಜಿ. ಕೃಷ್ಣಮೂರ್ತಿಯವರದ್ದಾಗಿತ್ತು. ಎಳೆಯರ ಮನಸ್ಸನ್ನು ಸೆಳೆಯುವಂತಿದ್ದ ಹಿನ್ನೆಲೆಯ ರಾಕ್ಷಸ ಕಲಾಕೃತಿಗಳು, ಆ ದೇಶದ ಗ್ರಾಮೀಣ ಸಂಸ್ಕೃತಿಗೆ ತಕ್ಕಂತೆ ಪಾತ್ರಗಳ ಉಡುಗೆ-ತೊಡುಗೆಗಳು ಮತ್ತು ಸೀಮಿತ ರಂಗ ಪರಿಕರಗಳು ಹೀಗೆ ಇವೆಲ್ಲವೂ ಬಹಳ ಕಡಿಮೆ ಖರ್ಚಿನೊಂದಿಗೆ ಹಾಗೂ ಲಭ್ಯ ಜಾಗದಲ್ಲೇ ಹಗಲು ಬೆಳಕಿನಲ್ಲಿ ಪ್ರದರ್ಶನವನ್ನು ಪರಿಣಾಮಕಾರಿಯಾಗಿ ನೀಡುತ್ತಿರುವುದು ಮೆಚ್ಚ ಬೇಕಾದ ಅಂಶ.ಒಟ್ಟಾರೆ ಒಂದು ಗಂಟೆ ಅವಧಿಯ ಈ ನಾಟಕ ಎಳೆಯರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.

ಕೆ. ದಿನಮಣಿ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next