Advertisement

ಎಪಿಡಿ ಫೌಂಡೇಶನ್‌ನಿಂದ ‘ನಿಮ್ಮ ಬೆರಳಿಗೆ ಶಾಯಿ’ಮತದಾನ ಜಾಗೃತಿ ಕಾರ್ಯ!

10:52 AM Apr 05, 2018 | |

ಮಹಾನಗರ: ಮಂಗಳೂರಿನ ನಗರ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲಿ ಮತ ಚಲಾವಣೆಯ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ನಗರದ ಎಪಿಡಿ ಫೌಂಡೇಶನ್‌ ಜಿಲ್ಲಾ ಸ್ವೀಪ್‌ ನಿರ್ದೇಶನದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸ್ವೀಪ್‌ ತಂಡ ಸಿದ್ಧಗೊಂಡಿದೆ.

Advertisement

ಮನಪಾದ ಕಸ ವಿಂಗಡಣೆ ಹಾಗೂ ನಗರ ಸುಂದರೀಕರಣ ಕ್ಷೇತ್ರದಲ್ಲಿ ಮಾಹಿತಿ, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಯಶಸ್ವಿಯಾಗಿತ್ತು. ಇದೀಗ ತಂಡವು ಮತದಾನ ಜಾಗೃತಿಗಾಗಿ ‘ನಿಮ್ಮ ಬೆರಳಿಗೆ ಶಾಯಿ’ ಶೀರ್ಷಿಕೆಯಡಿ ಜಾಗೃತಿ ಕಾರ್ಯದಲ್ಲಿ ತೊಡಗಿಕೊಂಡಿದೆ. ತಂಡವು ಬುಧವಾರ ಮಂಗಳೂರು ವಿವಿ ಕಾಲೇಜಿಗೆ ಭೇಟಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಕಾರ್ಯವನ್ನು ಮಾಡಿದೆ.

ಎಪಿಡಿ ಫೌಂಡೇಶನ್‌ನಲ್ಲಿ 6 ಮಂದಿ ಆಪರೇಟರ್ ಕಾರ್ಯನಿರ್ವಹಿಸುತ್ತಿದ್ದು, ಮತದಾನ ಜಾಗೃತಿಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಬೆಂಗಳೂರಿನ ಇಎಫ್‌ಐಎಂ ಬ್ಯುಸಿನೆಸ್‌ ಸ್ಕೂಲ್‌ನಿಂದ 15 ಮಂದಿ ವಿದ್ಯಾರ್ಥಿಗಳ ತಂಡ ಆಗಮಿಸಿದೆ. ಇವರು ಸುಮಾರು 15 ದಿನಗಳ ಕಾಲ ಎಪಿಡಿ ಜತೆ ಕಾರ್ಯನಿರ್ವಹಿಸಿ 2 ಕ್ಷೇತ್ರಗಳ ಸುಮಾರು ಶೇ. 60 ಮತದಾರರನ್ನು ತಲುಪಿ ಜಾಗೃತಿ ಕಾರ್ಯ ನಡೆಸುವ ಗುರಿಹೊಂದಿದೆ.

ಏನೇನು ಕಾರ್ಯಕ್ರಮಗಳು.?
ಜಾಗೃತಿ ಕಾರ್ಯದ ಹಿನ್ನೆಲೆಯಲ್ಲಿ ಎ. 6ರಂದು ನಗರದ ಮನಪಾ ಕಚೇರಿಯ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಕಾರ್ಯ ಹಮ್ಮಿಕೊಳ್ಳಲಾಗಿದೆ. ಮುಂದಿನ ವಾರ ಮೊಬೈಲ್‌ ಟಾರ್ಚ್‌ ಮೂಲಕ ಜಾಗೃತಿ ಕಾರ್ಯ ನಡೆಯಲಿದ್ದು, ಅದು ಎಲ್ಲಿ ನಡೆಯುತ್ತದೆ ಮತ್ತು ದಿನಾಂಕ ಇನ್ನೂ ನಿಗದಿಯಾಗಿಲ್ಲ. ಮುಂದಿನ ಹಂತದಲ್ಲಿ ಬ್ಯಾಕಥಾನ್‌ (ಹಿಮ್ಮುಖವಾಗಿ ನಡೆದು ಕೊಂಡು ಹೋಗುವುದು) ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಲಾಗುವುದು.

ಜತೆಗೆ ಮ್ಯಾನಿಕ್ಯುನ್‌ ಸ್ಟಾಚ್ಯು ಮೂಲಕವೂ ಜನರಲ್ಲಿ ಮತದಾನದ ಜಾಗೃತಿ ಕಾರ್ಯ ನಡೆಯಲಿದೆ. ಕಾಲೇಜುಗಳು, ಮಂಗಳೂರಿನ ಮೂರು ಮಾಲ್‌ಗ‌ಳು, ಮಾರ್ಕೆಟ್‌ಗಳಲ್ಲಿ ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಲಾಗಿದೆ. ಈ ರೀತಿ ಚುನಾವಣೆಯವರೆಗೆ ಇಂತಹ ಹತ್ತು ಹಲವು ಕಾರ್ಯಗಳ ಮೂಲಕ ಎಪಿಡಿ ಫೌಂಡೇಶನ್‌ ಕಾರ್ಯನಿರ್ವಹಿಸಲಿದೆ.

Advertisement

ಎಪಿಡಿಯ ನಿಮ್ಮ ಬೆರಳಿಗೆ ಶಾಯಿ ಕಾರ್ಯಕ್ರಮವು ಹೇಗೆ ಮತದಾನ ಮಾಡಬೇಕು, ಮತಗಟ್ಟೆಗಳ ಅವಧಿ, ಅವುಗಳು ಇರುವ ಸ್ಥಳ ಇತ್ಯಾದಿ ವಿಷಯಗಳ ಕುರಿತು ಮತದಾರರನ್ನು ಸುಶಿಕ್ಷಿತರನ್ನಾಗಿಸಲಿದೆ. ಪ್ರಜಾಪ್ರಭುತ್ವದಲ್ಲಿ ಮತದಾನ ನಾಗರಿಕರ ಪವಿತ್ರ ಕರ್ತವ್ಯ ಎಂಬ ಸಂವೇದನೆಯನ್ನು ಮೂಡಿಸಲಿದೆ. ಸಾಮಾಜಿಕ ಜಾಲತಾಣಗಳಲ್ಲೂ ಮತದಾನ ಜಾಗೃತಿ ಕಾರ್ಯ ಆಯೋಜನೆಗೊಂಡಿದೆ.

ಸರಣಿ ಕಾರ್ಯಕ್ರಮ
ಸಾರ್ವಜನಿಕ ಶಿಕ್ಷಣ ಹಾಗೂ ಸಮುದಾಯದ ಭಾಗವಹಿಸುವಿಕೆ ಎಂಬ ಉದ್ದೇಶದಿಂದ ಒಂದು ತಿಂಗಳ ಕಾಲ ಸರಣಿ ಕಾರ್ಯಕ್ರಮ ಆಯೋಜನೆಗೊಂಡಿದೆ. ವಸತಿ ಪ್ರದೇಶಗಳು, ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳು, ಮಾಲ್‌ಗ‌ಳು ಮತ್ತು ವಾಣಿಜ್ಯ ಸಂಸ್ಥೆಗಳು, ಕಾಲೇಜು ಮತ್ತು ವಿಶ್ವವಿದ್ಯಾಲಯಗಳು, ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಆವ ರಣಗಳು, ಸರಕಾರಿ ಕಚೇರಿಗಳು, ಸಭಾಂಗಣಗಳು, ಮದುವೆ ಛತ್ರಗಳು, ಉದ್ಯಾನವನಗಳು, ಕಡಲ ಕಿನಾರೆಗಳು ಮತ್ತು ಇತರ ಮನೋರಂಜನ ತಾಣಗಳು ಇತ್ಯಾದಿ ಪ್ರದೇಶಗಳಲ್ಲಿ ಜಾಗೃತಿ ಕಾರ್ಯ ನಡೆಯಲಿದೆ. 

ಚಟುವಟಿಕೆ ಆರಂಭ
ಮಂಗಳೂರಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಮತ ಚಲಾವಣೆಯ ಜಾಗೃತಿ ಕಾರ್ಯ ನಡೆಯಲಿದೆ. ಈಗಾಗಲೇ ಬೆಂಗಳೂರಿನಿಂದ 15 ವಿದ್ಯಾರ್ಥಿಗಳು ಈ ಕಾರ್ಯಕ್ಕೆ ಆಗಮಿಸಲಿದ್ದು, ಈಗಾಗಲೇ ಕಾರ್ಯ ಚಟುವಟಿಕೆ ಆರಂಭಗೊಂಡಿದೆ. ಮಾನವ ಸರಪಳಿ, ಮೊಬೈಲ್‌ ಟಾರ್ಚ್ ನಂತಹ ವಿಭಿನ್ನ ಕಾರ್ಯಗಳ ಮೂಲಕ ಜಾಗೃತಿ ಕಾರ್ಯ ನಡೆಯಲಿದೆ. 
– ಅಬ್ದುಲ್ಲಾ ರೆಹ್ಮಾನ್‌,
ಸ್ಥಾಪಕರು, ಎಪಿಡಿ ಫೌಂಡೇಶನ್ 

Advertisement

Udayavani is now on Telegram. Click here to join our channel and stay updated with the latest news.

Next