Advertisement

ನೀರಿನ ರೇಷನಿಂಗ್‌ ಆರಂಭ; ಎರಡು ದಿನಗಳಿಗೊಮ್ಮೆ ನೀರು

03:34 PM May 06, 2023 | Team Udayavani |

ಮಹಾನಗರ: ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿತ ಕಾಣುತ್ತಿದ್ದು, ನಗರದಲ್ಲಿ ಕುಡಿಯುವ ನೀರಿನ ರೇಷನಿಂಗ್‌ ಆರಂಭಗೊಂಡಿದೆ.

Advertisement

ತುಂಬೆ ಅಣೆಕಟ್ಟಿನಲ್ಲಿ ಮೇ 5ರಂದು 4.15 ಮೀ.ನಷ್ಟು ನೀರಿದೆ. ಮೇ 5ರಂದು ಮಂಗಳೂರು ನಗರ ಉತ್ತರ (ಸುರತ್ಕಲ್‌) ಭಾಗಕ್ಕೆ ನೀರು ಸರಬರಾಜು ಆಗಿದ್ದು, ಮಂಗಳೂರು ದಕ್ಷಿಣ (ನಗರ)ಕ್ಕೆ ನೀರು ಸರಬರಾಜು ಸ್ಥಗಿತಗೊಂಡಿತ್ತು. ಮೇ 6ರಂದು ಮಂಗಳೂರು ನಗರ ದಕ್ಷಿಣಕ್ಕೆ ನೀರು ಸರಬರಾಜು ಆಗಲಿದೆ. ಇದೇ ರೀತಿ, ಕ್ರಮಾನುಗತವಾಗಿ ನೀರು ಪೂರೈಕೆಯಾಗಲಿದೆ.

ನೀರು ರೇಷನಿಂಗ್‌ ಕುರಿತಂತೆ ಪಾಲಿಕೆಯಿಂದ ಈ ಹಿಂದೆಯೇ ಮಾಹಿತಿ ಇದ್ದ ಕಾರಣ ಮನೆ ಮಂದಿ ನೀರು ಶೇಖರಣೆ ಮಾಡಲು ಸಹಾಯವಾಯಿತು. ಆದರೆ ಕೆಲವೊಂದು ವಾರ್ಡ್‌ ಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಉದ್ಭವಿಸಿದ್ದು, ಆ ಭಾಗಕ್ಕೆ ಭಾರೀ ತೊಂದರೆ ಉಂಟಾಗಿದೆ. ಇದೀಗ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಆದರೆ, ಮುಂದೇನು? ಎಂಬ ಚಿಂತೆಯಲ್ಲಿದ್ದು, ಟ್ಯಾಂಕರ್‌ ನೀರನ್ನೇ ಆಶ್ರಯಿಸಬೇಕಾಗಿದೆ.

ಪೈಪ್‌ ಹಾನಿ ತಡೆಗೆ ಕ್ರಮ
ತುಂಬೆ ವೆಂಟೆಡ್‌ ಡ್ಯಾಂನಿಂದ ಮಂಗಳೂರಿಗೆ ನೀರು ಸರಬರಾಜು ಆಗುವ ವೇಳೆ ಪ್ರತೀದಿನ 20 ಎಂ.ಎಲ್‌.ಡಿ. (ಮಿಲಿಯನ್‌ ಲೀಟರ್‌) ನೀರು ಸೋರಿಕೆಯಾಗುತ್ತಿರುವುದನ್ನು ತಡೆ ಯುವುದು ಸವಾಲಾಗಿದೆ. ನೀರು ಸರಬರಾಜು ಮಾಡುವಾಗ ಪೈಪ್‌ಲೈನ್‌ಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ಎಚ್ಚರ ವಹಿಸಲು ಪಾಲಿಕೆಗೆ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಅವರು ಸೂಚನೆ ನೀಡಿದ್ದಾರೆ. ತುಂಬೆಯಿಂದ ಪ್ರತೀದಿನ 160 ಎಂ.ಎಲ್‌.ಡಿ. ನೀರು ಪಂಪಿಂಗ್‌ ಮಾಡಲಾಗುತ್ತಿದೆ. ಇದರಲ್ಲಿ 140 ಎಂ.ಎಲ್‌.ಡಿ.ಯಷ್ಟು ಮಾತ್ರ ನೀರು ಬಳಕೆಯಾಗುತ್ತಿದೆ. ಉಳಿದ 20 ಎಂ.ಎಲ್‌.ಡಿ. ನೀರು ಸೋರಿಕೆಯಾಗುತ್ತಿದೆ. ನಗರದ ಪಂಪ್‌ಹೌಸ್‌ಗಳಿಗೆ ಪೂರೈಕೆ ಮಾಡುವ ಹಂತದಲ್ಲಿ ಭಾರೀ ನೀರು ಸೋರಿಕೆಯಾಗುತ್ತಿದೆ. ಕೆಲವೊಂದು ಕಡೆಗಳಲ್ಲಿ ಅಕ್ರಮ ಸಂಪರ್ಕ ಇದ್ದು, ಇದನ್ನು ತಡೆಹಿಡಿಯುವುದು ಪಾಲಿಕೆಗೆ ಸವಾಲಾಗಿದೆ.

ಮೂಲ್ಕಿ : ನೀರಿನ ಸಮಸ್ಯೆ
ಮೂಲ್ಕಿ: ಮೂಲ್ಕಿ ನ. ಪಂ. ವ್ಯಾಪ್ತಿ ಯೊಳಗೆ ನೀರಿನ ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕುಡಿ ಯುವ ನೀರನ್ನು ಟ್ಯಾಂಕರಿನ ಮೂಲಕ ಸರಬರಾಜು ಮಾಡುವ ಮೂಲಕ ನಗರ ಪಂಚಾಯತ್‌ ಜನರ ನೀರಿನ ಬವಣೆಗೆ ಸರಿ ದೂಗಿಸಿಕೊಂಡು ಬಂದಿದೆ. ಪಂಚಾಯತ್‌ ವ್ಯಾಪ್ತಿಯ ಖಾಸಗಿ ಬಾವಿಗಳಿಂದ ಟ್ಯಾಂಕರ್‌ಗೆ ನೀರು ತುಂಬಿ ಸರಬ ರಾಜು ಮಾಡಲಾಗುತ್ತದೆ.

Advertisement

ಸಂಜೆ 6 ಗಂಟೆಯ ವರೆಗೆ ಬಾವಿಗಳಿಂದ ನೀರು ತೆಗೆಯಲಾಗುತ್ತಿದ್ದು ರಾತ್ರಿಯ ವರೆಗೆ ಸರಬರಾಜು ನಡೆಯುತ್ತಿತ್ತು. ಈಗ ಈ ಬಾವಿಗಳಲ್ಲಿ ಒರತೆ ಕಡಿಮೆಯಾಗಿರುವ ಕಾರಣ ಅಪ ರಾಹ್ನ 3 ಗಂಟೆಯ ಮೇಲೆ ನೀರು ತೆಗೆಯುವುದನ್ನು ನಿಲ್ಲಿಸಿರುವ ಕಾರಣ ಟ್ಯಾಂಕರ್‌ ಸರಬರಾಜು ವ್ಯವಸ್ಥೆಯಲ್ಲೂ ವ್ಯತ್ಯಯ ಉಂಟಾಗಿದೆ.

ಕೆಲವು ದಿನಗಳಿಂದ ಪಾವಂಜೆ ಸಮೀಪದಲ್ಲಿ ಮಹಾನಗರ ಪಾಲಿಕೆಯಿಂದ ಮೂಲ್ಕಿಗೆ ಸರಬರಾಜು ಆಗುತ್ತಿದ್ದ ಕೊಳವೆ ಮಾರ್ಗ ಒಡೆದಿದ್ದು, ರಿಪೇರಿ ಕೆಲಸ ನಡೆಯುತ್ತಿದೆ. ಇದರಿಂದಾಗಿ ಮಹಾನಗರ ಪಾಲಿಕೆಯಿಂದ ಮೂಲ್ಕಿಗೆ ನೀರು ಬರುವುದು ನಿಂತು ಹೋಗಿದ್ದು, ಈಗ ಆ ಪ್ರದೇಶಕ್ಕೂ ನೀರು ಸರಬರಾಜು ಮಾಡಬೇಕಾದ ಅನಿವಾರ್ಯತೆ ಇಲ್ಲಿದೆ.

ಮಂಗಳೂರು ನಗರದಲ್ಲಿ ನೀರಿನ ರೇಷನಿಂಗ್‌ ಜಾರಿಯಾದ ಕಾರಣ ಮೂಲ್ಕಿಗೆ ನೇರವಾಗಿ ಅದರ ಹೊಡೆತ ಬಿದ್ದಿದ್ದು, ಮೂಲ್ಕಿಯ ನೀರಿನ ಬವಣೆ ಮತ್ತಷ್ಟು ಹೆಚ್ಚಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next