Advertisement

Inequality ; ದುರ್ಬಲರ ಕೌಶಲವೃದ್ಧಿಯಿಂದ ಅಸಮಾನತೆ ದೂರ

11:31 PM Sep 06, 2023 | Team Udayavani |

ನಮ್ಮ ದೇಶದ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ನಮ್ಮ ಪ್ರಗತಿಗೆ ದೂರಗಾಮಿ ಪಿಡುಗು. ಐತಿಹಾಸಿಕ ಕಾರಣಗಳಿಂದ ಎಲ್ಲರೂ ಸಮಾನ ಭಾಗ್ಯ ಮತ್ತು ಸಂಪತ್ತನ್ನು ಪಡೆದು ಹುಟ್ಟುವುದಿಲ್ಲ. ಇದು ಅಸಮಾನತೆಯ ಉಗಮ ಮತ್ತು ಮುಂದುವರಿಕೆಗೆ ಕಾರಣವಾಗುತ್ತದೆ. ಈ ವಿಷ ವರ್ತುಲದ ಸಂಕಲೆಯನ್ನು ಛೇದಿಸಬೇಕಾದರೆ ಸಾಂಸ್ಥಿಕ/ ಪ್ರಭುತ್ವದ ಮಧ್ಯಸ್ಥಿಕೆ ಮತ್ತು ಹಸ್ತಕ್ಷೇಪ ಅಗತ್ಯವಾಗುತ್ತದೆ. ಇದನ್ನು ಸುಧಾರಿ ಸಲು ಹಲವು ತರದ ಪ್ರಯತ್ನಗಳು, ಪ್ರಯೋಗಗಳು ನಡೆದಿದ್ದರೂ ಯಾವುದೂ ನಿರೀಕ್ಷಿತ ಗೆಲುವನ್ನು ಪಡೆಯದಿರುವುದು ನಮ್ಮ ದೌರ್ಭಾಗ್ಯ.

Advertisement

ಇಂತಹ ಬಹುಮುಖ ಮತ್ತು ದೂರದೃಷ್ಟಿ ಯೋಜನೆ ಇಂದಿನ ಅಗತ್ಯವಾಗಿದೆ. ಆರ್ಥಿಕ ಸಮಾನತೆ ಗಾಗಿ ಇದ್ದವರಿಂದ ಕಸಿದು ಇಲ್ಲದವರಿಗೆ ಕೊಡುವುದು ದೀರ್ಘ‌ಕಾಲಿಕ ಪರಿಹಾರವಾಗಲಾರದು. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಅದು ನ್ಯಾಯಬದ್ಧವೂ ಅಲ್ಲ. ಬಹುಶಃ ಇದು ಬೇರೆ ಸಾಮಾಜಿಕ ಮತ್ತು ಆರ್ಥಿಕ ದಳ್ಳುರಿಗಳಿಗೆ ಕಾರಣವಾದರೂ ಅತಿಶಯೋಕ್ತಿಯಿಲ್ಲ. ಆದ್ದರಿಂದ ಸೂಕ್ತ ದೀರ್ಘ‌ಕಾಲಿಕ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳುವುದು ಇಂದಿನ ತುರ್ತು.

ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿ ಆಧಾರಿತ ಒಟ್ಟು ದೇಣಿಗೆ ಕಾಲಕ್ರಮೇಣ ಕ್ಷೀಣಿಸುತ್ತಿರುವ ಈ ದಿನಗಳಲ್ಲಿ ಇದು ಇನ್ನೂ ಮಹತ್ವದ ತುರ್ತನ್ನು ಬೇಡುತ್ತದೆ. ಇಂದು ದೇಶದ ಆರ್ಥಿಕತೆಗೆ ಕೃಷಿ ಕ್ಷೇತ್ರದ ಒಟ್ಟು ಕೊಡುಗೆ ಕೇವಲ ಶೇ.15ರಷ್ಟಿರುವುದು, ಸುಮಾರು ಶೇ.60ರಷ್ಟು ಜನರ ಜೀವನೋಪಾಯದ ದುರ್ಗತಿಯನ್ನು ಬಿಂಬಿಸುತ್ತದೆ. ಪರಿಸ್ಥಿತಿಯನ್ನು ಹೀಗೇ ಬಿಟ್ಟರೆ ಅಸಮಾನತೆ ಇನ್ನಷ್ಟು ವೃದ್ಧಿಸಿದರೂ ಅಚ್ಚರಿಯಿಲ್ಲ. ಆದ್ದರಿಂದ ಪರ್ಯಾಯ ಮಾರ್ಗೋಪಾಯವನ್ನು ಕಂಡು ಕೊಳ್ಳುವುದು ಮುಂದಿನ ತಲೆಮಾರಿನ ಹಿತದೃಷ್ಟಿ ಯಿಂದ ಮುಖ್ಯವಾಗುತ್ತದೆ.
ಜಾಗತೀಕರಣದ ಅನಂತರ ಕೆಲವು ಮಹತ್ವದ ಪಲ್ಲಟಗಳನ್ನು ಎಲ್ಲ ಕ್ಷೇತ್ರಗಳಲ್ಲೂ, ಮುಖ್ಯವಾಗಿ ಆರ್ಥಿಕ ಕ್ಷೇತ್ರದಲ್ಲಿ ನಾವು ಕಾಣುತ್ತಿದ್ದೇವೆ. ಇದು ಹಳೆಯ ಆರ್ಥಿಕ ನೀತಿಗಳಿಂದ ಹೊಸ ಪರ್ಯಾಯ ಗಳಿಗೆ ಇಂಬು ಕೊಟ್ಟಿರುವುದು ಒಂದು ಮುಖ್ಯ ಬೆಳವಣಿಗೆ. ಭಾರತವು ಹೊಸ ನೀತಿಗೆ ತೆರೆದುಕೊಂಡ ಕಾರಣ ದೇಶವು ಜಗತ್ತಿನ ಉತ್ಪಾದನ ಕಾರ್ಯಗಾರ ವಾದದ್ದು ಈಗ ಎಲ್ಲರಿಗೂ ಗೊತ್ತಿರುವ ವಿಚಾರ. ಇದರಿಂದ ನಗರೀಕರಣ, ಕಾರ್ಮಿಕರ ವಲಸೆ ಮುಂತಾದ ಪರಿಣಾಮಗಳನ್ನೂ ನಾವು ನಮ್ಮ ಸುತ್ತಲೂ ನೋಡುತ್ತಿದ್ದೇವೆ. ಇದರಿಂದ ಮನವರಿಕೆಯಾಗುವ ಅಂಶವೆಂದರೆ ಹೆಚ್ಚಿನ ಅಸಮಾನತೆ ಮತ್ತು ನಿರುದ್ಯೋಗ ಎದುರಿಸುತ್ತಿರುವ ಗ್ರಾಮೀಣ ಆರ್ಥಿಕತೆಗೆ ಸುಧಾರಣೆ ಕಂಡುಕೊಳ್ಳಬೇಕಾಗಿದೆ.

ನಮ್ಮ ಜನಸಂಖ್ಯೆಯ ಬಹುಜನರು ಶ್ರಮಿಕ ಜೀವನ ನಡೆಸುವವರು. ಅಸಮಾನತೆಗೆ ಮುಖ್ಯ ಕಾರಣ ಈ ಆರ್ಥಿಕ ದುರ್ಬಲರ ಪ್ರಗತಿ ಸಾಧ್ಯವಾಗದಿರುವುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಸ್ಪರ್ಧಾತ್ಮಕ ಮಾರುಕಟ್ಟೆಯು ಗುಣಮಟ್ಟದ ಕೌಶಲ ಪಡೆದ ಹೊಸ ಜನಾಂಗವನ್ನು ಉದ್ಯೋಗಕ್ಕೆ ಭರ್ತಿ ಮಾಡುತ್ತದೆ. ಇದರ ಪರಿಣಾಮವಾಗಿ ಕೌಶಲ ಪಡೆಯುವುದರಲ್ಲಿ ಹಿಂದುಳಿದು ಸ್ಪರ್ಧಾತ್ಮಕರಲ್ಲದ ದುರ್ಬಲ ಹಿನ್ನೆಲೆಯಿಂದ ಬಂದವರು ಮತ್ತೆ ಕೆಳಸ್ತರದ ಶ್ರಮಿಕ ಉದ್ಯೋಗಗಳಿಗೆ ಮಾತ್ರ ಸೀಮಿತರಾಗುತ್ತಾರೆ. ಈ ವಿಷ ವರ್ತುಲವನ್ನು ಮುರಿಯದಿದ್ದರೆ ಶತಮಾನಗಳು ಕಳೆದರೂ ಅಸಮಾನತೆ ಕೊನೆಗೊಳ್ಳಲಾರದು ಎಂಬುದು ತಜ್ಞರ ಅಭಿಪ್ರಾಯ.

ಇನ್ನೊಂದು ಮುಖ್ಯವಾದ ಪ್ರತಿಪಾದನೆ ಏನೆಂದರೆ, ಭೂಮಿ/ ಆಸ್ತಿ/ ಬಂಡವಾಳಗಳಷ್ಟೇ ಆದಾಯ ಹೆಚ್ಚಿಸುವ ಏಕಮಾತ್ರ ಮೂಲವಲ್ಲ. ಉತ್ತಮ ಕೌಶಲ ಹೊಂದಿರುವ ವೃತ್ತಿಪರರಿಗೆ ಎಲ್ಲೆಡೆಗೂ ಬೇಡಿಕೆಯಿದೆ. ಇಂದಿನ ತಂತ್ರಜ್ಞಾನ ಆಧಾರಿತ ಉದ್ಯೋಗಗಳ ಮೂಲಕ ಹೊಸ ತಲೆಮಾರು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳುತ್ತಿರುವುದು ನಮ್ಮ ಕಣ್ಣ ಮುಂದಿದೆ. ಈ ಉದ್ಯೋಗಗಳಿಗೆ ಉತ್ತಮ ಕೌಶಲ ಮತ್ತು ದುಡಿಮೆ ಮಾತ್ರ ಕಾರಣ ಎನ್ನುವುದು ಸರ್ವವಿದಿತ. ಈ ವಾಸ್ತವವನ್ನು ಒಪ್ಪಿಕೊಂಡರೆ ದೂರಗಾಮಿಯಾಗಿ ಆರ್ಥಿಕ ಸಮಾನತೆಯನ್ನು ಸಾಧಿಸಲು ಸ್ಪರ್ಧಾತ್ಮಕ ಕೌಶಲವೃದ್ಧಿ ಸೂಕ್ತ ಸೂತ್ರವಾಗಬಲ್ಲುದು.

Advertisement

ಈ ಪರ್ವ ಕಾಲದಲ್ಲಿ ಕೌಶಲವೃದ್ಧಿ ಆರ್ಥಿಕ ಪ್ರಗತಿಗೆ ಒಂದು ಹೊಸ ಪರ್ಯಾಯವಾಗುವ ಕ್ಷಮತೆಯನ್ನು ಹೊಂದಿದೆ ಎಂಬುದು ಕಳೆದ ಕಾಲು ಶತಮಾನದಲ್ಲಿ ಸಾಬೀತಾಗಿದೆ. ರೈತ, ಕಾರ್ಮಿಕನ ಮಕ್ಕಳೂ ತಮ್ಮ ಶ್ರಮಿಕ ದುಡಿಯುವ ಕ್ಷಮತೆಯನ್ನು ಏರಿಸಿಕೊಂಡು ಆರ್ಥಿಕ ಸ್ಥಿತಿಯನ್ನು ಎತ್ತರಿಸಿ¨ªಾರೆ. ಶಿಕ್ಷಣ ನೀತಿಯ ಸೂಕ್ತ ಬದಲಾವಣೆಯ ಮೂಲಕ ಸಮಾಜೋ- ಆರ್ಥಿಕ ಸಮಾನತೆಯತ್ತ ಮುಂದುವರಿಯಲು ಸಾಧ್ಯವಾದೀತು.
ಭಾರತದ್ದು ಶ್ರಮ ಆಧಾರಿತ ಆರ್ಥಿಕತೆ. ಬಹುಸಂಖ್ಯಾಕರಾದ ಈ ಜನವರ್ಗ ಹೆಚ್ಚು ಆದಾಯದ ಕೆಲಸ ಪಡೆಯಲು ಶಕ್ತರಾದರೆ ಪ್ರಗತಿಯ ವೇಗ ಹೆಚ್ಚಬಹುದು ಎಂಬುದು ಸಾಮಾನ್ಯಜ್ಞಾನ. ಆರ್ಥಿಕ ಸಮಾನತೆಯನ್ನು ಸಾಧಿಸಬೇಕಾದರೆ ಬಹುಜನರು ಉತ್ತಮಿತ ಕೌಶಲವನ್ನು ಪಡೆಯುವುದು ಅಗತ್ಯ. ಇದಕ್ಕೆ ಉದ್ಯೋಗಯೋಗ್ಯ ಕೌಶಲವನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಲಭ್ಯ ಮಾಡುವುದು ಪ್ರಭುತ್ವಗಳ ಜವಾಬ್ದಾರಿಯಾಗಬೇಕು. ತನ್ಮೂಲಕ ಅಭಿವೃದ್ಧಿಯ ಜತೆಗೆ ಆರ್ಥಿಕ ಅಸಮಾನತೆ ಕಡಿಮೆಯಾಗಬಲ್ಲುದು.

ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ವಿದ್ಯಾಭ್ಯಾಸ ಸಾರ್ವತ್ರಿಕವಾದರೂ, ಅದು ದುಬಾರಿಯಾಗಿದೆ. ಇದರಿಂದಾಗಿ ಗುಣಮಟ್ಟದ ಶಿಕ್ಷಣವು ಶ್ರೀಮಂತರ ತುತ್ತಾಗಿದ್ದು ಬಡವರ ಕೈಗೆಟಕುತ್ತಿಲ್ಲ. ದುರ್ಬಲರು ಅನಿವಾರ್ಯವಾಗಿ ಸಾಂಪ್ರದಾಯಿಕ ಸರಕಾರಿ ಶಾಲೆಗಳನ್ನು ಅವಲಂಬಿಸಿ¨ªಾರೆ. ಇತ್ತೀಚಿನ ವರ್ಷಗಳ ನಮ್ಮ ಶಿಕ್ಷಣ ಕ್ಷೇತ್ರವನ್ನು ಅವಲೋಕಿಸಿದರೆ ಇದರಲ್ಲಿ ಖಾಸಗಿ ಮತ್ತು ಸರಕಾರಿ ಮಾಲಕತ್ವವನ್ನು ಕಾಣ ಬಹುದು. ಸರಕಾರಿ ಮಾಲಕತ್ವದಲ್ಲಿ ಶಿಕ್ಷಣ ಇಲಾಖೆಗೆ ವಿಸ್ತೃತವಾದ ಬಾಹುಗಳಿವೆ. ದೇಶದ ಉದ್ದಗಲದಲ್ಲಿ ಮೂಲ ಸೌಕರ್ಯಗಳಿದ್ದರೂ, ಹೆಚ್ಚು ಮಕ್ಕಳನ್ನು ಆಕರ್ಷಿಸಲು ವಿಫ‌ಲವಾಗಿರುವುದು ವಿಪರ್ಯಾಸ. ಇದು ಒಂದು ರಾಜ್ಯಕ್ಕೆ ಸೀಮಿತವಾಗಿರದೆ ವ್ಯಾಪಕವಾದ ವಸ್ತುಸ್ಥಿತಿ. ಸರಕಾರೀ ರಂಗದ ಈ ವಿಫ‌ಲತೆಯ ಕಾರಣ ಖಾಸಗಿ ರಂಗ ಬಹುಬೇಗ ವ್ಯಾಪಿಸಿದೆ. ಉತ್ತಮ ಗುಣಮಟ್ಟದ ಶಿಕ್ಷಕ ವರ್ಗ, ಮೇಲ್ವಿಚಾರಕ ವ್ಯವಸ್ಥಾಪಕರು ಮತ್ತು ಮಾರುಕಟ್ಟೆ ಬೇಡುವ ಕೌಶಲಗಳನ್ನು ಬೆಳೆಸುವ ಚಾಕಚಕ್ಯತೆಯಿಂದಾಗಿ ಅಲ್ಲಿನ ದುಬಾರಿ ಶಿಕ್ಷಣವನ್ನು ಶ್ರೀಮಂತರು ಪಡೆಯಲು ಶಕ್ತರಾಗಿ¨ªಾರೆ. ಸಾಮಾನ್ಯ ದುರ್ಬಲರು ಆರ್ಥಿಕ ಅಸಾಮರ್ಥ್ಯದಿಂದ ಸರಕಾರಿ ಶಾಲೆಯಲ್ಲಿ ಕಲಿಯಬೇಕಾಗುತ್ತದೆ.

ಶಿಕ್ಷಣಕ್ಕೆ ಹೂಡಿದ ಹಣ ಜನಾಂಗದ ಭವಿಷ್ಯವನ್ನೇ ರೂಪಿಸಬಲ್ಲ ಕ್ಷಮತೆಯನ್ನು ಹೊಂದಿದೆ. ಎಲ್ಲ ದುರ್ಬಲರೂ ಮಾರುಕಟ್ಟೆ ಬೇಡುವ ಕೌಶಲ ಪಡೆಯಲು ಶಕ್ತರಾದರೆ ಜಾಗತಿಕ ವೃತ್ತಿಪರರನ್ನು ಪೂರೈಕೆ ಮಾಡುವ ಕ್ಷಮತೆ ನಮ್ಮದಾಗುತ್ತದೆ. ಬರೇ ತಂತ್ರಜ್ಞಾನದಲ್ಲಿ ಮಾತ್ರವಲ್ಲ ಹಲವು ಸೇವೆಗಳಲ್ಲಿ ಇಂತಹ ಸುಧಾರಿತ ಕೌಶಲ ಬೇಕಾಗುತ್ತದೆ. ಸದ್ಯೋಭವಿಷ್ಯದಲ್ಲಿ ಜಗತ್ತಿನ ಹಲವು ದೇಶಗಳು ವಯೋವೃದ್ಧವಾಗಲಿವೆ. ಆಗ ಆ ದೇಶಗಳು ಯುವಶಕ್ತಿಯ ಕುಶಲ ಕೆಲಸಗಾರರನ್ನು ಆಮದು ಮಾಡುವ ಸಾಧ್ಯತೆಗಳೇ ಹೆಚ್ಚು.

ಈ ಹಿನ್ನೆಲೆಯಲ್ಲಿ ಭಾರತವು ಕಾರ್ಯತಂತ್ರವನ್ನು ಹೆಣೆಯಬೇಕು. ದುರ್ಬಲರಿಗೆ ಉತ್ತಮ ಶಿಕ್ಷಣ ಮುಕ್ತವಾಗಿ ಸಿಗುವಂತೆ ಮಾಡಬೇಕು. ಹೈಸ್ಕೂಲ್‌ ಶಿಕ್ಷಣದ ವರೆಗೆ ರಾಜ್ಯ ಸರಕಾರ ಗುಣಮಟ್ಟದ ಮುಕ್ತ ಶಿಕ್ಷಣವನ್ನು ಒದಗಿಸಲು ಬದ್ಧವಾಗಬೇಕು. ಈಗಾಗಲೇ ಸಾಕಷ್ಟು ಮೂಲಸೌಕರ್ಯಗಳಿರುವುದರಿಂದ ಶಿಕ್ಷಣ ತಜ್ಞರ ಸೂಕ್ತ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯ ಮೂಲಕ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸಾಧ್ಯ. ಬೇಕಾಗಿರುವುದು ಇಚ್ಛಾ ಶಕ್ತಿ ಮತ್ತು ಸ್ಪರ್ಧಾತ್ಮಕತೆ ಮಾತ್ರ.

ಮುಂದಿನ ಹಂತದ ಕೌಶಲವೃದ್ಧಿಯನ್ನು ಕೇಂದ್ರ ಸರಕಾರ ನಿರ್ವಹಿಸಬೇಕು. ದುರ್ಬಲ ವರ್ಗದಿಂದ ಬರುವ ಅರ್ಹ ವಿದ್ಯಾರ್ಥಿಗಳಿಗೆ ತಾಂತ್ರಿಕ, ವೈದ್ಯಕೀಯ, ವೃತ್ತಿಪರ ಕೌಶಲ ವೃದ್ಧಿಗಳ ಮೇಲೆ ವಿಶೇಷ ನಿಗಾ ವಹಿಸಬೇಕು. ಕೌಶಲವೃದ್ಧಿ ಬೇಡುವ ಯುವಕರು ಬಡತನದ ಕಾರಣದಿಂದ ಅವಕಾಶ ವಂಚಿತರಾಗದಂತೆ ನೋಡಿಕೊಳ್ಳಬೇಕು. ಇದು ಸುಮಾರು 10-15 ವರ್ಷಗಳ ಬೃಹತ್‌ ಯೋಜನೆ. ಈ ಮೂಲಕ ದುರ್ಬಲ ವರ್ಗದ ಮಾನವ ಸಂಪನ್ಮೂಲವನ್ನು ಸಶಕ್ತೀ ಕರಿಸಿದರೆ ಮುಂದಿನ ಜನಾಂಗವೇ ರೆಕ್ಕೆ ಮೂಡಿಸಿ ಕೊಂಡು ಹಾರಬಲ್ಲುದು. ಇದೇ ಉದ್ದೇಶಕ್ಕಾಗಿಯೇ ಕೇಂದ್ರ ಸರಕಾರ ಶಿಕ್ಷಣ ಸಾಲಕ್ಕೆ ಒತ್ತು ಕೊಡುತ್ತಿದ್ದರೂ, ಆರ್ಥಿಕವಾಗಿ ದುರ್ಬಲರಾದವರು ಸ್ಥೈರ್ಯದ ಕೊರತೆಯ ಕಾರಣ ಸಾಲದ ಸಾಹಸಕ್ಕೆ ಕೈಹಾಕುವುದಿಲ್ಲ. ಆದ್ದರಿಂದ ನಿಃಶುಲ್ಕ ಕೌಶಲವೃದ್ಧಿಯೇ ಸರಳ ಪರ್ಯಾಯ.

ದುರ್ಬಲರ ಪರಿಸ್ಥಿತಿ ಹೀಗೆ ಸುಧಾರಿಸಿದರೆ ಸಾಮಾಜಿಕವಾಗಿ ಅವರ ಸ್ಥಾನಮಾನವೂ ವೃದ್ಧಿಸುವು ದನ್ನು ನಾವು ಕಳೆದ ಎರಡು ದಶಕಗಳಿಂದ ನೋಡುತ್ತಿದ್ದೇವೆ. ಇದೊಂದು ಆರ್ಥಿಕ ಸುಧಾರಣೆ ಕಾರ್ಯಕ್ರಮವಾಗಿ ಜಾರಿಯಾದರೆ ನಮ್ಮ ಆರ್ಥಿಕ ಸಮಾನತೆಯ ಕನಸು ನನಸಾಗಲು ಸಾಧ್ಯ. ಬಿದ್ದ ಪ್ರತೀ ಹನಿಯೂ ಸಮುದ್ರ ಸೇರದಿದ್ದರೂ, ಬಹುಪಾಲು ನೀರು ನಿರೀಕ್ಷಿತ ಜಲಾಶಯವನ್ನು ತಲಪುವ ಆಶಾಭಾವದಿಂದ ಇಂತಹ ಸಾಮಾಜಿಕ ಸುಧಾರಣೆ ನಡೆಯಲಿ, ಅಸಮಾನತೆ ದೂರವಾಗಲಿ.

ಡಾ| ಕೊಳ್ಚಪ್ಪೆ ಗೋವಿಂದ ಭಟ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next