Advertisement

ಜಿಎಸ್‌ಬಿ ಸಮಾಜಕ್ಕೂ ಉಡುಪಿಗೂ ಅವಿನಾಭಾವ ಸಂಬಂಧ: ಪೇಜಾವರ ಶ್ರೀ

03:35 PM May 01, 2017 | |

ಉಡುಪಿ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜಕ್ಕೂ ಉಡುಪಿಗೂ ಅವಿನಾಭಾವ ಸಂಬಂಧವಿದೆ. 800 ವರ್ಷಗಳ ಮಧ್ವಾಚಾರ್ಯರ ಚರಿತ್ರೆ ಬರೆಯುವಾಗ ಗೋವೆಗೆ ಹೋಗಿ ಜಿಎಸ್‌ಬಿ ಸಮಾಜದವರ ಅನುಗ್ರಹವನ್ನು ಪಡೆದದ್ದು ಇತಿಹಾಸದಲ್ಲಿದೆ. ಪೂರ್ವಜರು ಧರ್ಮನಿಷ್ಠೆ, ತ್ಯಾಗ,ಸತ್ಯ, ಸಂಸ್ಕೃತಿಗೆ ಮಹತ್ವ ಕೊಟ್ಟದ್ದರಿಂದ ಸಂಪದ್ಭರಿತ ಸಮಾಜವಾಗಿದೆ ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

Advertisement

ಅವರು ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮಾಜದ ವೈದಿಕರ ಧನ್ವಂತರಿ ಹವನ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
 
ವಿದೇಶಿಯರು ಆಕ್ರಮಣ ಮಾಡಿದಾಗಲೂ ಸಂಸ್ಕೃತಿ, ಧರ್ಮ ಮುಖ್ಯ ಎಂದು ಗೋವೆಯಿಂದ ಕರಾವಳಿಗೆ ಬಂದು ನೆಲೆಸಿ, ವ್ಯಾಪಾರ, ಶಿಕ್ಷಣ, ವೈದಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಯಶಸ್ವಿಯಾಗಿದ್ದಾರೆ. ಜಿಎಸ್‌ಬಿ ಸಮಾಜ ಒಂದು ಅಪೂರ್ವ ಪರಂಪರೆಯನ್ನೇ ಹೊಂದಿದೆ ಎಂದರು.

ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಜೀವನದಲ್ಲಿ ಯಶಸ್ವಿಯಾಗಲು ಭಗವಂತನ ಆರಾಧನೆ ಆವಶ್ಯಕ. ದಿನದ 24 ಗಂಟೆಯೂ ದೇವರ ಆರಾಧನೆ ಅಗತ್ಯ. ಅದು ವೃತ್ತಿಯಲ್ಲಿ, ಸೇವೆಯಲ್ಲಿ, ವ್ಯಾಪಾರ, ಕೃಷಿ ಎಲ್ಲವನ್ನು ನಿಷ್ಠೆಯಿಂದ ಮಾಡಿದರೆ ಅದೇ ಭಗವಂತನ ಆರಾಧನೆ. ಅದನ್ನು ಜಿಎಸ್‌ಬಿ ಸಮಾಜ ಅಕ್ಷರಶಃ ಪಾಲಿಸಿಕೊಂಡು ಬರುತ್ತಿದೆ. ಅದರಿಂದಲೇ ಅವರು ಎಲ್ಲ ಕಡೆ ಯಶಸ್ವಿಯಾಗುತ್ತಿದ್ದಾರೆ ಎಂದರು.

ಐತಿಹಾಸಿಕ ಕಾರ್ಯ
“ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಮಾತನಾಡಿ, ಹಿಂದೆ ಎಲ್ಲ ಧರ್ಮಗಳು ಒಂದೇ ಆಗಿದ್ದವು. ವೃತ್ತಿ ಪೃವೃತ್ತಿಯನ್ನು ನುಂಗಿದಾಗ ಧರ್ಮಗಳು, ಜಾತಿಗಳ ಮಧ್ಯೆ ಭೇದಭಾವ, ಬೇಲಿಗಳು ನಿರ್ಮಾಣವಾದವು. ಇದರಿಂದ ಅಸಹಿಷ್ಣುತೆ ಹುಟ್ಟಿಕೊಂಡಿತು. ಇದು ಈಗ ಅತ್ಯಂತ ಭೀಕರತೆಯನ್ನು ಹುಟ್ಟಿಹಾಕಿದೆ. ಇದರಿಂದ ಜೀವನದ ಗುರಿಯನ್ನು ತಿಳಿದುಕೊಳ್ಳುವುದು ಅಸಾಧ್ಯ. ಸಮಾಜಮುಖೀ ಕಾರ್ಯ ಮಾಡುತ್ತಿರುವ ಶ್ರೀಗಳು ಎಲ್ಲರನ್ನು ಒಂದುಗೂಡಿಸುವ ಐತಿಹಾಸಿಕ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ ಎಂದರು.

ಮಲ್ಪೆ ಗೋಪಾಲ ಭಟ್‌ ಹಾಗೂ ಪಾಂಡುರಂಗ ಕುಡ್ವ ಅವರನ್ನು ಸಮ್ಮಾನಿಸಲಾಯಿತು. ಗುಜ್ಜಾಡಿ  ಪ್ರಭಾಕರ ನಾಯಕ್‌, ಸೇವಾದಾರ ರಾದ ವಿಶ್ವನಾಥ ಶೆಣೈ, ಪಾಂಗಾಳ ವಿಲಾಸ್‌ ನಾಯಕ್‌, ಮಂಜುನಾಥ ಸಿ. ನಾಯಕ್‌, ಜಗದೀಶ್‌ ನಾಯಕ್‌, ಕಲ್ಯಾಣಪುರ ಸುಧೀರ್‌ ಭಟ್‌, ಚೇಂಪಿ ರಾಘವೇಂದ್ರ ಭಟ್‌, ಶಿರಾಲಿ ವೆಂಕಟೇಶ್‌ ಭಟ್‌, ಶೃಂಗೇರಿ ಸುಧಾಕರ ಭಟ್‌, ವೇ|ಮೂ| ರಾಘವೇಂದ್ರ ಭಟ್‌ ಚೇಂಪಿ, ಕಾಪು ಗಣೇಶ್‌ ಭಟ್‌, ಉದ್ಯಮಿಗಳಾದ ರಘುವೀರ್‌ ಶೆಣೈ, ಅಮೃತ್‌ ಶೆಣೈ, ಜಿಎಸ್‌ಬಿ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ವಿವೇಕಾನಂದ ಶೆಣೈ, ಉದ್ಯಮಿ ಪ್ರಶಾಂತ್‌ ಕಾಮತ್‌ ಉಪಸ್ಥಿತರಿದ್ದರು. ವೇ|ಮೂ| ಚೇಂಪಿ ರಾಮಚಂದ್ರ ಅನಂತ ಭಟ್‌ ಸ್ವಾಗತಿಸಿದರು.

Advertisement

“ಸಂಪ್ರದಾಯದಲ್ಲಿ ವ್ಯತ್ಯಾಸ, ಸಿದ್ಧಾಂತ ಒಂದೇ’
ಜಿಎಸ್‌ಬಿ ಸಮಾಜ ಹಾಗೂ ಶಿವಳ್ಳಿ ಸಮಾಜದಲ್ಲಿ ಸಂಪ್ರದಾಯದಲ್ಲಿ ವ್ಯತ್ಯಾಸವಿರಬಹುದು, ಆದರೆ ಸಿದ್ಧಾಂತ ಮಾತ್ರ ಒಂದೇ ಆಗಿದೆ. ಜಿಎಸ್‌ಬಿ ಸಮಾಜದ ಕೈವಲ್ಯ ಮಠ, ಕಾಶೀ ಹಾಗೂ ಪರ್ತಗಾಳಿ ಮಠಗಳೆಲ್ಲವುಗಳ ಜತೆಗೂ ಅನ್ಯೋನ್ಯ ಸಂಬಂಧವಿದೆ. ಎಲ್ಲ ಮಠಗಳ ಶ್ರೀಗಳು ಹಾಗೂ ಶಿಷ್ಯ ವೃಂದ ಆತ್ಮೀಯರಾಗಿದ್ದಾರೆ. ಮೊದಲ ಪರ್ಯಾಯದಲ್ಲಿ ಅ.ಭಾ. ಮಾಧ್ವ ತಣ್ತೀಜ್ಞಾನ ಸಮ್ಮೇಳನ, ಎರಡನೇ ಪರ್ಯಾಯದಲ್ಲಿ ಹಿಂದೂ ಸಮಾವೇಶದಲ್ಲಿ ಜಿಎಸ್‌ಬಿ ಸಮಾಜದವರು ಸಹಕಾರ ನೀಡಿದ್ದಾರೆ. ಈ ಕಾರ್ಯಕ್ರಮದಿಂದ ಆ ಸಂಬಂಧ ಇನ್ನಷ್ಟು ಗಟ್ಟಿಯಾಗಿ ರೂಪುಗೊಳ್ಳಲಿ ಎಂದು ಶ್ರೀಗಳು ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next