Advertisement

ಮಳೆಗಾಲದ ಪೂರ್ವತಯಾರಿ ಆಮೆಗತಿ

10:26 PM Jun 03, 2020 | Sriram |

ಉಡುಪಿ: ಮುಂಗಾರು ಪೂರ್ವ ಮಳೆ ಈಗಾಗಲೇ ಸುರಿದಿದ್ದು, ಕೆಲವೇ ದಿನಗಳಲ್ಲಿ ಮುಂಗಾರು ಕೂಡ ಆರಂಭಗೊಳ್ಳಲಿದೆ. ಆದರೆ ಇಂದಿರಾ ನಗರ, ಬಡಗುಬೆಟ್ಟು ವಾರ್ಡ್‌ಗಳಲ್ಲಿ ಮಳೆಗಾಲದ ಪೂರ್ವತಯಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಚರಂಡಿಗಳ ಹೂಳೆತ್ತುವ ಕಾರ್ಯ ಸೇರಿ ಬೀದಿದೀಪ ಗಳ ಸಮಸ್ಯೆ ಈ ಭಾಗದಲ್ಲಿ ಕಾಡುತ್ತಿದೆ.

Advertisement

ಹೂಳೆತ್ತುವ ಕೆಲಸ ಬಾಕಿ
ನಗರಸಭೆ ವ್ಯಾಪ್ತಿಯಲ್ಲಿ 2ನೇ ಅತೀ ದೊಡ್ಡ ವಾರ್ಡ್‌ ಆಗಿರುವ ಬಡಗುಬೆಟ್ಟು ವಾರ್ಡ್‌ನಲ್ಲಿ ಮಳೆ ನೀರು ಹರಿದು ಹೋಗುವ ಚರಂಡಿಗಳ ಹೂಳೆತ್ತುವ ಕೆಲಸ ಬಹುತೇಕ ಬಾಕಿ ಇದ್ದು, ಇಲ್ಲಿನ ಪ್ರಮುಖ ಮಳೆ ಹರಿಯುವ ಚರಂಡಿ ಕುಕ್ಕಿಕಟ್ಟೆಯಿಂದ ಬಲಾಯಿ ಪಾದೆ ನಡುವೆ ಮುಖ್ಯ ತೋಡುಗಳ ಹೂಳೆತ್ತುವ ಕಾರ್ಯ ಬಾಕಿಯಲ್ಲೇ ಇದೆ. ವಾಸುದೇವಕೃಪಾ ಇಂಗ್ಲಿಷ್‌ ಮೀಡಿಯಂ ಶಾಲೆ, ಭೀಮಾನಗರ, ವಾಸುಕಿ ನಗರ, ಜಗನ್ನಾಥ ನಗರ, ದುರ್ಗಾನಗರ, ಬಡಗುಬೆಟ್ಟು ಪಾರ್ಕ್‌ ಬಳಿ ಪರಿಸ್ಥಿತಿ ಹೀಗೆಯೇ ಇದೆ.

ಕಳೆದ ವರ್ಷ ಇಷ್ಟ ಮಹಾಲಿಂಗೇಶ್ವರ ರಸ್ತೆಯಲ್ಲಿ ವಿದ್ಯುತ್‌ ಕಂಬಗಳು ಬಿದ್ದು ಸಮಸ್ಯೆ ಎದುರಾಗಿತ್ತು. ವಾರ್ಡ್‌ನ ಬಹುತೇಕ ಭಾಗಗಳಲ್ಲಿ ಅಪಾಯಕಾರಿ ಮರಗಳು ಇರುವುದರಿಂದ ಈ ಬಾರಿಯೂ ತೊಂದರೆ ಯಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. ಇಂದಿರಾ ನಗರ ವಾರ್ಡ್‌ನ ಕಲ್ಯಾಣ್‌ ನಗರ ಕುಕ್ಕಿಕಟ್ಟೆ, ಮಂಚಿ ಮೂಲಸ್ಥಾನ, ಪೋಸ್ಟ್‌ ಆಫೀಸ್‌ ದುಗ್ಲಿ ಪದವು ಮೊದಲಾದ ಭಾಗದಲ್ಲೂ ಚರಂಡಿಯ ಹೂಳೆತ್ತುವ ಕೆಲಸ ಬಾಕಿ ಇದೆ. ಅವೈಜ್ಞಾನಿಕ ರೀತಿಯಲ್ಲಿ ಈ ಭಾಗದ ಮಳೆ ನೀರು ಹರಿಯುವ ಚರಂಡಿಗಳನ್ನು ನಿರ್ಮಿಸಲಾಗಿದೆ. ಇದರಿಂದ ಪ್ರತಿವರ್ಷ ಇಂದಿರಾನಗರದ ಮೊದಲ ಕ್ರಾಸ್‌, 6ನೇ ಕ್ರಾಸ್‌ ಸೇರಿದಂತೆ ಕೆಲ ಭಾಗಗಳ ಮನೆಗಳಿಗೆ ನೀರು ಸೇರುತ್ತದೆ. ಹಾಗೆಯೇ ಮಂಚಿ ಭಾಗದ ಹಲವೆಡೆ ಕಳೆದ ಬಾರಿ ಮಳೆಗಾಲದಲ್ಲಿ ಗೆಲ್ಲುಗಳು ಮುರಿದು ತೊಂದರೆಯಾಗಿದ್ದು, ಈ ಬಾರಿಯೂ ಈ ಭಾಗದಲ್ಲಿ ಅಪಾಯವಿದೆ ಎಂದು ಇಂದಿರಾನಗರದ ಸ್ಥಳೀಯರಾದ ಪ್ರಶಾಂತ್‌ ಹೇಳಿದ್ದಾರೆ.

ನೀರಿನ ಸಮಸ್ಯೆ
ಇಂದಿರಾನಗರ ವಾರ್ಡ್‌ನ ದುಗ್ಲಿ ಪದವಿನಲ್ಲಿ ಮುಂಜಾವ 3 ಗಂಟೆಗೆ ನೀರು ಬಂದು 4 ಗಂಟೆಗೆ ಸ್ಥಗಿತವಾಗುವುದು ಮತ್ತು ಕೆಲವೊಮ್ಮೆ ಅದೂ ಇರುವುದಿಲ್ಲ. ಈ ಭಾಗದಲ್ಲಿ 170 ಮನೆ ಇದ್ದು, ಇಲ್ಲಿನ ಮಂದಿ ನೀರಿಗೆ ಪರದಾಡುವಂತಾಗಿದೆ. ಬೇಸಗೆಯಲ್ಲಿ ನೀರಿನ ಸಮಸ್ಯೆ ಇಲ್ಲಿ ಉಲ್ಬಣವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ನೀರಿನ ಸಮಸ್ಯೆ
2 ತಿಂಗಳಿಂದ ಕಾರ್ಮಿಕರಿಲ್ಲದೆ ಮಳೆಗಾಲದ ಪೂರ್ವತಯಾರಿಗೆ ಸಮಸ್ಯೆಯಾಗಿದೆ. ಈ ಹಿಂದೆ ವಾರಕ್ಕೆ 2 ಬಾರಿ ಕಾರ್ಮಿಕರು ಬರುತ್ತಿದ್ದರು. ಈಗ ವಾರಕ್ಕೆ ಒಮ್ಮೆ 4 ಜನ ಮಾತ್ರ ಸಿಗುತ್ತಿದ್ದಾರೆ. ದುಗ್ಲಿಪದವಿನಲ್ಲಿ ತುಂಬ ನೀರಿನ ಸಮಸ್ಯೆ ಇದೆ. ಸದ್ಯ ಒಂದು ಕೊಳವೆ ಬಾವಿ ಮಾಡಿ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಕೆಲವೆಡೆ ಚರಂಡಿ ಕೆಲಸ ನಡೆಯುತ್ತಿದೆ.
– ಚಂದ್ರಶೇಖರ್‌ ಯು. ಶೇರಿಗಾರ್‌, 21ನೇ ಇಂದಿರಾನಗರ ವಾರ್ಡ್‌ ಸದಸ್ಯ.

Advertisement

ಕಾರ್ಮಿಕರ ಕೊರತೆ
ಮಳೆಗಾಲದ ಪೂರ್ವತಯಾರಿ ಯಾದ ಚರಂಡಿಗಳ ಹೂಳೆತ್ತುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. 2 ವಾರಗಳಿಂದ, ವಾರದಲ್ಲಿ ಒಂದು ದಿನದಂತೆ 4 ಮಂದಿ ಮಾತ್ರ ಕಾರ್ಮಿಕರು ವಾರ್ಡ್‌ನ ಕೆಲಸಕ್ಕೆ ಸಿಗುತ್ತಿದ್ದಾರೆ. ಬಡಗುಬೆಟ್ಟು ಮುಖ್ಯ ರಸ್ತೆಯ ತೋಡು ವೇಗಸ್‌ ಬಳಿಯ ತೋಡುಗಳ ಹೂಳು ತೆರವುಗೊಳಿಸಿದ್ದು ಬಿಟ್ಟರೆ ಬೇರೆ ಎಲ್ಲೂ ಕೆಲಸ ಆಗಿಲ್ಲ. ಬಡಗುಬೆಟ್ಟು ಪಾರ್ಕ್‌ ಬಳಿ ಹೊಸ ರಸ್ತೆಯ ಕಾಮಗಾರಿಯಾಗಿದ್ದು, ಚರಂಡಿ ಯಾಗದೆ ಇಲ್ಲಿ ನೀರು ನಿಲ್ಲುವ ಸಾಧ್ಯತೆಯೂ ಇದೆ.
– ವಿಜಯ ಪೂಜಾರಿ ಬೈಲೂರು, 22ನೇ
ಬಡಗುಬೆಟ್ಟು ವಾರ್ಡ್‌

Advertisement

Udayavani is now on Telegram. Click here to join our channel and stay updated with the latest news.

Next