Advertisement

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನ ದೊರೆಯದಿರುವುದು, ಜಲಮಂಡಳಿಯ ನೀರಿನ ಬಿಲ್‌ ಕಟ್ಟದಿರುವುದು, ಗ್ರಾಹಕರಿಗೆ ರುಚಿಯಿಲ್ಲದ ಆಹಾರ ದೊರೆಯದೇ ಇರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಹಳ್ಳ ಹಿಡಿದಿದ್ದ “ಇಂದಿರಾ ಕ್ಯಾಂಟೀನ್‌ ‘ಗೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬೆನ್ನಲ್ಲೆ ಮತ್ತೆ ಪುನಾರಂಭಗೊಳ್ಳುವ ಆಸೆ ಚಿಗುರೊಡೆದಿದೆ.

Advertisement

ಆರ್ಥಿಕತೆ ಕೊರತೆ ಎದುರಿಸುತ್ತಿರುವ ಸಿಲಿಕಾನ್‌ ಸಿಟಿಯ ಇಂದಿರಾ ಕ್ಯಾಂಟೀನ್‌ಗಳಿಗೆ ಆಗಾಗ್ಗೆ ನೀರಿನ ಸಮಸ್ಯೆ ಎದುರಾಗಿ ಬಿಲ್‌ ಪಾವತಿ ಆಗಿಲ್ಲ ಎಂಬ ಕಾರಣಕ್ಕೆ ಜಲಮಂಡಳಿ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಿತ್ತು. ಜತೆಗೆ ರುಚಿ ಮತ್ತು ಶುಚಿತ್ವ ಆಹಾರ ದೊರೆಯುತ್ತಿಲ್ಲ ಎಂಬ ಕಾರಣದಿಂದಾಗಿ ಗ್ರಾಹಕರ ಸಂಖ್ಯೆ ಕೂಡ ಕಡಿಮೆಯಾಗಿತ್ತು. ಆ ಹಿನ್ನೆಲೆಯಲ್ಲಿ ಎಲ್ಲಿ ಇಂದಿರಾ ಕ್ಯಾಂಟೀನ್‌ಗಳು ಮುಚ್ಚಿ ಹೋಗುತ್ತವೆಯೋ ಎಂಬ ಆಂತಕ ನಗರದಲ್ಲಿ ನೆಲೆಸಿದ್ದ ಕೂಲಿ ಕಾರ್ಮಿಕರು, ವಲಸಿಗರು ಮತ್ತು ಆಟೋ ಚಾಲಕರಲ್ಲಿ ಮನೆ ಮಾಡಿತ್ತು.

ಆದರೀಗ ಸಿದ್ದರಾಮಯ್ಯ ಅವರು 2ನೇ ಬಾರಿಗೆ ಮುಖ್ಯಮಂತ್ರಿ ಆಗಿ ಘೋಷಣೆ ಆಗುತ್ತಿದ್ದಂತೆ ಇತ್ತ ಮೈ ಕೊಡವಿವೆದ್ದಿರುವ ಬಿಬಿಎಂಪಿ ಕೂಡ ಅಗತ್ಯವಿರುವ ಕೊಳಗೇರಿ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟಿನ್‌ಗಳನ್ನು ಶಿಫ್ಟ್ ಮಾಡುವ ಆಲೋಚನೆಯನ್ನು ಮಾಡಿದೆ. ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಮತ್ತಷ್ಟು ಮೊಬೈಲ್‌ ಕ್ಯಾಂಟೀನ್‌ಗಳನ್ನು ಆರಂಭಿಸುವ ಚಿಂತನೆ ನಡೆಸಿದ್ದು, ಒಟ್ಟಾರೆ ಇಂದಿರಾ ಕ್ಯಾಂಟೀನ್‌ಗೆ ಹೊಸ ರೂಪ ನೀಡುವ ನಿರೀಕ್ಷೆಯಲಿದ್ದಾರೆ. ಸರ್ಕಾರದ ಅನುಮತಿ ಪಡೆದು ಮುಂದುವರಿಯುವುದಾಗಿ ಅಧಿಕಾರಿಗಳು ಹೇಳುತ್ತಾರೆ.

ಪದ್ಮಾವತಿ ಅವಧಿಯಲ್ಲಿ ಪ್ರಾರಂಭ: ಮಾಜಿ ಮೇಯರ್‌ ಪದ್ಮಾವತಿ ಆಡಳಿತ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 171 ಇಂದಿರಾ ಕ್ಯಾಂಟೀನ್‌ ಗಳನ್ನು ಆರಂಭಿಸಲಾಗಿತ್ತು. 20ಕ್ಕೂ ಅಧಿಕ ಮೊಬೈಲ್‌ ಕ್ಯಾಂಟೀನ್‌ಗಳನ್ನು ತೆರೆಯಲಾಗಿತ್ತು. ನಾನು ಮೇಯರ್‌ ಆಗಿದ್ದ ಅವಧಿಯಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆದು ಜನರಿಗೆ ಗುಣಮಟ್ಟದ ಜತೆಗೆ ಶುಚಿತ್ವದ ಆಹಾರ ನೀಡಲಾಗಿತ್ತು ಎಂದು ಮಾಜಿ ಮೇಯರ್‌ ಪದ್ಮಾವತಿ ನೆನಪಿಸಿಕೊಳ್ಳುತ್ತಾರೆ. ಇಂದಿರಾ ಕ್ಯಾಂಟಿನ್‌ಗೆ ರಾಹುಲ್‌ ಗಾಂಧಿ ಚಾಲನೆ ನೀಡಿದ್ದರು. ಊಟ ಸೇವಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಾಜಧಾನಿಯ ಎಲ್ಲ ವಾರ್ಡ್‌ಗಳಲ್ಲಿ ಕ್ಯಾಂಟೀನ್‌ ತೆರೆಯಲು ಆಲೋಚನೆ ಮಾಡಲಾಗಿತ್ತು. ಆದರೆ ಆಗ ಪಾಲಿಕೆಯ ಕೆಲ ಬಿಜೆಪಿ ಸದಸ್ಯರು ತೆರೆಯಲು ಅವಕಾಶ ನೀಡಲಿಲ್ಲ.

ಹೀಗಾಗಿ, ಮೊಬೈಲ್‌ ಕ್ಯಾಂಟೀನ್‌ಗಳನ್ನು ಕೂಡ ತರೆಯಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಡವರ ಕ್ಯಾಂಟೀನ್‌ಗೆ ಅಂತಿಮ ಮೊಳೆ ಹೊಡೆಯುವ ಕೆಲಸ ಮಾಡಿತ್ತು. ಇದೀಗ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಿದ್ದು ಇಂದಿರಾ ಕ್ಯಾಂಟೀನ್‌ಗೆ ಜೀವ ಕಳೆ ಸಿಗಲಿ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ. ಆರಂಭದಲ್ಲಿ 145 ಕೋಟಿ ರೂ.ಅನುದಾನ ರಾಜ್ಯಾದ್ಯಂತ 400 ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸಲಾಗಿತ್ತು.2017-18ರ ಅವಧಿಯಲ್ಲಿ ಬಜೆಟ್‌ನಲ್ಲಿ 145 ಕೋಟಿ ರೂ.ನೀಡಲಾಗಿತ್ತು. ನಂತರ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಮತ್ತು ನಿರ್ವಹಣೆ ಹೊಣೆ ವಹಿಸಲಾಗಿತ್ತು.

Advertisement

2017ರ ಆಗಸ್ಟ್‌ 16ರಂದು ಇಂದಿರಾ ಕ್ಯಾಂಟೀನ್‌ಗಳು ಶುರುವಾದವು. ಶೇಕಡಾ 100ರಷ್ಟು ಸರ್ಕಾರದ ಅನುದಾನವನ್ನೇ ನೆಚ್ಚಿಕೊಂಡು ಬಿಬಿಎಂಪಿ ಈ ಯೋಜನೆ ಆರಂಭಿಸಿತು. 2019-20ರಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ಬಜೆಟ್‌ನಲ್ಲಿ ಯಾವುದೇ ಹಣ ಒದಗಿಸಲಿಲ್ಲ. ಪಾಲಿಕೆ ಕ್ಯಾಂಟೀನ್‌ಗಳ ನಿರ್ವಹಣೆಗೆ ತಗಲುವ ವೆಚ್ಚದಲ್ಲಿ ಶೇ.50 ರಷ್ಟನ್ನಾದರೂ ಭರಿಸುವಂತೆ ಕೋರಿತ್ತು. ಸರ್ಕಾರದಿಂದ ನಿರೀಕ್ಷಿತ ಅನುದಾನ ಸಿಗಲೇ ಇಲ್ಲ. ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳಿಗೆ ಅನುದಾನ ನೀಡಲು ಹಿಂದೇಟು ಹಾಕಿತು. ಆ ಹಿನ್ನೆಲೆಯಲ್ಲೇ ಇಂದಿರಾ ಕ್ಯಾಂಟೀನ್‌ಗಳನ್ನು ನಡೆಸಲು ಬಿಬಿಎಂಪಿ 2022-23ರ ಬಜೆಟ್‌ನಲ್ಲಿ 50 ಕೋಟಿ ರೂ.ಮೀಸಲಿಟ್ಟಿತ್ತು.

40 ಲಕ್ಷ ರೂ. ನೀರಿನ ಬಿಲ್‌ ಬಾಕಿ: ಸಿಲಿಕಾನ್‌ ಸಿಟಿಯ ಎಂಟೂ ವಲಯಗಳಲ್ಲೂ ಇರುವ ಇಂದಿರಾ ಕ್ಯಾಂಟೀನ್‌ಗಳಿಗೆ ನೀರಿನ ಬಿಲ್‌ ಬಾಕಿಯಿದೆ. ಜಲಮಂಡಳಿಗೆ ಸುಮಾರು 40 ಲಕ್ಷಕ್ಕೂ ಅಧಿಕ ನೀರಿನ ಬಿಲ್‌ ಪಾವತಿಸಬೇಕಾಗಿದೆ. ನೀರಿನ ಬಿಲ್‌ ಪಾವತಿಯಾಗಿಲ್ಲ ಎಂಬುದನ್ನು ಪಾಲಿಕೆ ಅಧಿಕಾರಿಗಳು ಖಚಿತ ಪಡಿಸುತ್ತಾರೆ. ಕ್ಯಾಂಟೀನ್‌ ಗಳಲ್ಲಿ ಕುಡಿಯುವ ನೀರಿನ ಕೊರತೆಯ ಬಗ್ಗೆ ನನಗೆ ದೂರುಗಳು ಬಂದಿವೆ. ಒಪ್ಪಂದದಂತೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ನೀರು ಒದಗಿಸುವ ಜವಾಬ್ದಾರಿ ಗುತ್ತಿಗೆದಾರರ ಮೇಲಿದ್ದು, ನೀರಿನ ಬಿಲ್‌ ಪಾವತಿಸಬೇಕು. ಇದು ಗುತ್ತಿಗೆದಾರ ಮತ್ತು ಜಲಮಂಡಳಿ ನಡುವಿ ಒಪ್ಪಂದವಾಗಿದೆ ಎನ್ನುತ್ತಾರೆ.

ಕೆಲವು ಕಡೆಗಳಲ್ಲಿ ವಿವಿಧ ಕಾರಣಗಳಿಂದಾಗಿ ಇಂದಿರಾ ಕ್ಯಾಂಟೀನ್‌ಗಳು ಬಂದ್‌ ಆಗಿವೆ. ಆದರೆ ಅವುಗಳ ಸಬಲೀಕರಣ ಕಾರ್ಯ ನಡೆಯಲಿದೆ. ಹೆಚ್ಚು ಅವಶ್ಯಕತೆ ಇರುವ ಪ್ರದೇಶಗಳಿಗೆ ಶಿಫ್ಟ್ ಮಾಡುವ ಆಲೋಚನೆ ಇದೆ. ಕೊಳಗೇರಿ ಪ್ರದೇಶಗಳಲ್ಲಿ ಎರಡೆರಡು ಇಂದಿರಾ ಕ್ಯಾಂಟೀನ್‌ ತೆರೆಯುವ ಚಿಂತನೆ ಇದೆ. –ತುಷಾರ್‌ ಗಿರಿನಾಥ್‌, ಪಾಲಿಕೆ ಮುಖ್ಯ ಆಯುಕ್ತ

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next