Advertisement

2020ರ ಒಲಿಂಪಿಕ್ಸ್‌ನಲ್ಲಿ ಸರ್ಫಿಂಗ್‌: ಜಾಂಟಿ ರೋಡ್ಸ್‌ ಆಶಯ

11:02 AM May 29, 2017 | Karthik A |

ಮಂಗಳೂರು: ಒಲಿಂಪಿಕ್ಸ್‌ನಲ್ಲಿ 2020ರ ವೇಳೆಗೆ ಸರ್ಫಿಂಗ್‌ ಕ್ರೀಡೆಯನ್ನು ಇನ್ನಷ್ಟು ಪರಿಪೂರ್ಣ ರೀತಿಯಲ್ಲಿ ಆಡುವ ಮೂಲಕ ಈ ಕ್ರೀಡೆಗೆ ವಿಶೇಷ ಒತ್ತು ನೀಡಬೇಕು. ಈ ಕುರಿತು ಎಲ್ಲ ಸಾಧ್ಯತೆಗಳಿಗೆ ಸರ್ಫಿಂಗ್‌ ಪಟುಗಳು ಸಿದ್ಧರಾಗಿರಬೇಕು ಎಂದು ದಕ್ಷಿಣ ಆಫ್ರಿಕಾದ ಖ್ಯಾತ‌ ಕ್ರಿಕೆಟ್‌ ಆಟಗಾರ ಜಾಂಟಿ ರೋಡ್ಸ್‌ ಆಶಯ ವ್ಯಕ್ತಪಡಿಸಿದರು. ಸಸಿಹಿತ್ಲು ಬೀಚ್‌ನಲ್ಲಿ ಮೂರು ದಿನಗಳ ಕಾಲ ನಡೆದ ಇಂಡಿಯನ್‌ ಓಪನ್‌ ಸರ್ಫಿಂಗ್‌ನ ಕೊನೆಯ ದಿನವಾದ ರವಿವಾರ ಸಂಜೆ ನಡೆದ ಅದ್ದೂರಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

‘ನಮಸ್ಕಾರ’ ಎಂದು ಮಾತು ಆರಂಭಿಸಿದ ಜಾಂಟಿ ರೋಡ್ಸ್‌, ಸರ್ಫಿಂಗ್‌ ಆಸಕ್ತಿಯುತ ಕ್ರೀಡೆ. ನಮ್ಮ ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಈ ಕ್ರೀಡೆ ಅತ್ಯಂತ ಉಪಯುಕ್ತ. ಭಾರತದಲ್ಲಿ ಸರ್ಫಿಂಗ್‌ ಆಸಕ್ತರು ಬಹಳಷ್ಟು ಮಂದಿ ಇದ್ದಾರೆ. ಅದರಲ್ಲೂ ಕರಾವಳಿ ಭಾಗದಲ್ಲಿ ಈ ಸಾಹಸ ಕ್ರೀಡೆಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿರುವುದು ಸಂತೋಷದ ವಿಚಾರ ಎಂದರು. ಕಳೆದ ಮೂರು ವರ್ಷಗಳ ಹಿಂದೆ ಸಸಿಹಿತ್ಲುವಿಗೆ ನಾನು ಬಂದಾಗ ಇಲ್ಲಿನ ಬೀಚ್‌ ನಿರೀಕ್ಷಿತ ಅಭಿವೃದ್ಧಿ ಕಂಡಿರಲಿಲ್ಲ. ಆದರೆ ಕಳೆದ ವರ್ಷ ನಡೆದ ಇಂಡಿಯನ್‌ ಓಪನ್‌ ಸರ್ಫಿಂಗ್‌ನ ಮೂಲಕ ಪ್ರಸ್ತುತ ಸಸಿಹಿತ್ಲು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ. ಪ್ರಸ್ತುತ, ಭಾರತ ಸರ್ಫಿಂಗ್‌ನಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಈ ಬಾರಿ ನಡೆದ ಇಂಡಿಯನ್‌ ಓಪನ್‌ ಸರ್ಫಿಂಗ್‌ ಅತ್ಯಂತ ಯಶಸ್ವಿಯಾಗಿದೆ ಎಂದರು.

ಸರ್ಫಿಂಗ್‌ ಮಾಂತ್ರಿಕ ಕ್ರೀಡೆ: ಸುನೀಲ್‌ ಶೆಟ್ಟಿ
ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಮಾತನಾಡಿ, ಸರ್ಫಿಂಗ್‌ ಒಂದು ಮಾಂತ್ರಿಕ ಕ್ರೀಡೆ. ಕರಾವಳಿಯಲ್ಲಿ ಸರ್ಫಿಂಗ್‌ಗೆ ಹೆಚ್ಚಿನ ಪ್ರೋತ್ಸಾಹ ದೊರಕುತ್ತಿರುವುದು ಹೊಸ ಪ್ರತಿಭೆಗಳಿಗೆ ಇನ್ನಷ್ಟು ಪ್ರೇರಕವಾಗಲಿದೆ. ತನ್ವಿ ಜಗದೀಶ್‌ ಸೇರಿದಂತೆ ಕರಾವಳಿಯ ಬಹಳಷ್ಟು ಸರ್ಫಿಂಗ್‌ ಸಾಧಕರ ಹೆಸರು ಇಂದು ದೇಶ -ವಿದೇಶದಲ್ಲಿ ಮಾನ್ಯತೆ ಪಡೆದಿರುವುದು ನಮ್ಮೆಲ್ಲರ ಹೆಮ್ಮೆ ಎಂದರು. ಸರ್ಫಿಂಗ್‌ನ ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಶಾಸಕರಾದ ಕೆ. ಅಭಯಚಂದ್ರ ಜೈನ್‌, ಐವನ್‌ ಡಿ’ಸೋಜಾ, ಮೇಯರ್‌ ಕವಿತಾ ಸನಿಲ್‌, ಮಿಸ್‌ ಇಂಡಿಯಾ ಸೌತ್‌ ನಿಶಿತಾ ಶೆಣೈ, ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌, ಅಪರ ಜಿಲ್ಲಾಧಿಕಾರಿ ಕುಮಾರ್‌, ಪ್ರಮುಖರಾದ ಮನೋಹರ ಶೆಟ್ಟಿ, ವಸಂತ ಬರ್ನಾಡ್‌, ಸರ್ಫಿಂಗ್‌ ಸ್ವಾಮಿ, ಜಲಜಾ, ಕಿಶೋರ್‌ ಕುಮಾರ್‌, ಮಿಥುನ್‌ ರೈ, ಯತೀಶ್‌ ಬೈಕಂಪಾಡಿ, ಗೌರವ ಹೆಗ್ಡೆ, ಜೀವನ್‌ ಸಲ್ದಾನ ಉಪಸ್ಥಿತರಿದ್ದರು.

ನೀರಾಟವಾಡಿದ ಜಾಂಟಿ ರೋಡ್ಸ್‌ 
ಇಂಡಿಯನ್‌ ಓಪನ್‌ ಸರ್ಫಿಂಗ್‌ನಲ್ಲಿ ಭಾಗವಹಿಸಲು ಆಗಮಿಸಿದ್ದ ಖ್ಯಾತ ಕ್ರಿಕೆಟ್‌ ತಾರೆ ಜಾಂಟಿ ರೋಡ್ಸ್‌ ಸಸಿಹಿತ್ಲು ಕಡಲ ಕಿನಾರೆಯಲ್ಲಿ ನೀರಾಟವಾಡುತ್ತಾ ಗಮನ ಸೆಳೆದರು. ಸಂಜೆ ಸಸಿಹಿತ್ಲುವಿಗೆ ಆಗಮಿಸಿದ ಅವರು ಫೈನಲ್‌ ಸ್ಟಾಂಟ್‌ ಅಪ್‌ ಪೆಡ್ಲಿಂಗ್‌ ಮತ್ತು ಸರ್ಫಿಂಗ್‌ನ ಫೈನಲ್‌ ಪಂದ್ಯಕ್ಕೆ ಹಸಿರು ನಿಶಾನೆ ತೋರಿದರು. ಬಳಿಕ ಸ್ಪೀಡ್‌ ಬೋಟ್‌ ಮೂಲಕ ಸುಮಾರು ಹೊತ್ತು ನೀರಿನಲ್ಲಿ ಸವಾರಿ ನಡೆಸಿದರು. ಅನಂತರ ಸಸಿಹಿತ್ಲು ಬೀಚ್‌ ವ್ಯಾಪ್ತಿಯಲ್ಲಿ ನಡೆದುಕೊಂಡು ಎಲ್ಲರ ಜತೆಗೆ ಬೆರೆಯುತ್ತಿದ್ದ ದೃಶ್ಯ ಕಂಡು ಬಂತು. ಜತೆಗೆ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಕೂಡ ಬೀಚ್‌ ವ್ಯಾಪ್ತಿಯಲ್ಲಿ ಸಂಜೆಯ ಸುಮಾರಿಗೆ ಸುತ್ತಾಡುತ್ತಾ ಕಾಲ ಕಳೆದರು. ಸರ್ಫಿಂಗ್‌ ಕ್ರೀಡಾಪಟುಗಳು ಹಾಗೂ ಅಭಿಮಾನಿಗಳ ಜತೆಗೆ ಬೆರೆಯುತ್ತಾ, ತುಳುವಿನಲ್ಲೇ ಮಾತನಾಡುತ್ತಾ ಗಮನ ಸೆಳೆದರು. ಸಮಾರೋಪ ಸಮಾರಂಭದಲ್ಲೂ ತುಳುವಿನಲ್ಲಿ ಮಾತನಾಡಿದರು, ಆದರೆ ಇಲ್ಲಿ ಬೇರೆ ನಗರದವರು ಇರುವುದರಿಂದ ಅವರಿಗೆ ತುಳು ಅರ್ಥವಾಗಲ್ಲ, ಅದಕ್ಕಾಗಿ ಇಂಗ್ಲಿಷ್‌ನಲ್ಲಿ ಮಾತನಾಡುವ ಎಂದರು. ಈ ಮಧ್ಯೆ ಮಧ್ಯಾಹ್ನದ ವೇಳೆಗೆ ಚಿತ್ರನಟ ಹುಚ್ಚ ವೆಂಕಟ್‌ ಆಗಮಿಸಿ ಅಭಿಮಾನಿಗಳಲ್ಲಿ ಪುಳಕವುಂಟು ಮಾಡಿದರು.

Advertisement

ಕಡಲ ಕಿನಾರೆಯಲ್ಲಿ ಬೃಹತ್‌ ಜನಸ್ತೋಮ 
ಸರ್ಫಿಂಗ್‌ಗೆ ಕೊನೆ ದಿನವಾದ ಕಾರಣ ಹಾಗೂ ರಜಾದಿನವಾದ ಹಿನ್ನೆಲೆಯಲ್ಲಿ ರವಿವಾರ ಸುಮಾರು 15 ಸಾವಿರಕ್ಕೂ ಮಿಕ್ಕಿ ಜನರು ಆಗಮಿಸಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಪಾರ್ಕಿಂಗ್‌ಗಾಗಿ ಕೆಲವು ಕಿ.ಮೀ. ಅಂತರದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ಸಂಘಟಕರ ಉಚಿತ ವಾಹನ ಸೇವೆ ಮೂಲಕ ಜನರನ್ನು ಬೀಚ್‌ನತ್ತ ಕರೆತರಲಾಯಿತು. ಜನ ಜಾಸ್ತಿಯಾದ ಹಿನ್ನೆಲೆಯಲ್ಲಿ ಉಚಿತ ವಾಹನಕ್ಕಾಗಿ ಕ್ಯೂ ನಿಲ್ಲುವ ಪ್ರಮೇಯ ಎದುರಾಯಿತು. ಸರ್ಫಿಂಗ್‌ನ ಮೊದಲ ದಿನ ಸುಮಾರು 5,000, ಎರಡನೇ ದಿನ ಸುಮಾರು 6,000 ಜನರು ಸೇರಿದ್ದರು. ದೇಶ-ವಿದೇಶದ ಸುಮಾರು 300ಕ್ಕೂ ಅಧಿಕ ಕ್ರೀಡಾಪಟುಗಳು ಮೂರು ದಿನ ಭಾಗವಹಿಸಿದ್ದರು. ಅವರ ಜತೆಗೆ ನೂರಾರು ಬೆಂಬಲಿಗರು ಕೂಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next