Advertisement

ಗಲ್ಫ್ ವಾಸಿ ಭಾರತೀಯರ ಕರೆತರಲು ನೌಕಾಪಡೆ ಸಜ್ಜು

08:12 AM May 01, 2020 | Hari Prasad |

ಹೊಸದಿಲ್ಲಿ: ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಸಹಸ್ರಾರು ಭಾರತೀಯ ವಲಸೆ ಕಾರ್ಮಿಕರನ್ನು ತಾಯ್ನಾಡಿಗೆ ಕರೆತರಲು ನೌಕಾಪಡೆ, ವಾಯುಪಡೆಗಳು ಸಜ್ಜಾಗಿವೆ.

Advertisement

ನೌಕಾಪಡೆಯು ಕನಿಷ್ಠ ಮೂರು ಹಡಗುಗಳನ್ನು ಇದಕ್ಕಾಗಿ ಸಿದ್ಧಪಡಿಸುತ್ತಿದ್ದು, ವೈದ್ಯಕೀಯ ಸೌಲಭ್ಯಗಳ ಜತೆಗೆ ಸಾಮಾಜಿಕ ಅಂತರದಲ್ಲಿ ಆಸನ ವ್ಯವಸ್ಥೆಯನ್ನೂ ಮಾಡಿಕೊಳ್ಳುತ್ತಿದೆ.

ಡಜನ್‌ಗಟ್ಟಲೆ ಯುದ್ಧ ಟ್ಯಾಂಕ್‌ಗಳನ್ನು ಸಾಗಿಸಬಲ್ಲ, ಭಾರತೀಯ ನೌಕಾದಳದ ಎರಡನೇ ದೈತ್ಯ ಹಡಗು ಐಎನ್‌ಎಸ್‌ ಜಲಾಶ್ವ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಇದಕ್ಕೆ ನಿಯೋಜಿಸಲ್ಪಟ್ಟ ಪ್ರತೀ ಹಡಗಿನಲ್ಲೂ ವೈದ್ಯಕೀಯ ತಂಡಗಳು ಇರಲಿವೆ. ಭಾರತ ಹಿಂದೆಂದೂ ಕೈಗೊಂಡಿರದಂಥ ಬಹುದೊಡ್ಡ ಸ್ಥಳಾಂತರ ಪ್ರಕ್ರಿಯೆ ಇದಾಗಿದ್ದು, ಸುಮಾರು 1 ಲಕ್ಷಕ್ಕೂ ಅಧಿಕ ಮಂದಿಯನ್ನು ಕರೆತರಲಾಗುತ್ತದೆ.

ವ್ಯವಸ್ಥೆ ಹೇಗಿದೆ?
ಪ್ರತೀ ಹಡಗಿನಲ್ಲಿ ಸಾಮಾಜಿಕ ಅಂತರ ನೀಡಿ, ತಲಾ 500 ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಮೇಲ್ಭಾಗದ ಡೆಕ್‌ಗಳಲ್ಲಿ, ತೆರೆದ ಸ್ಥಳಗಳಲ್ಲಿ ಪುರುಷರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದರೆ, ಮಹಿಳೆಯರು, ಮಕ್ಕಳು, ವೃದ್ಧರಿಗೆ ಕೆಳಗಿನ ಡೆಕ್‌ಗಳಲ್ಲಿ ವಸತಿ ವ್ಯವಸ್ಥೆ ಇರುತ್ತದೆ. ಆಹಾರ, ಔಷಧ ಸಂಗ್ರಹ ಕಾರ್ಯ ಭರದಿಂದ ಸಾಗಿದೆ. ಕೊಚ್ಚಿ, ವಿಶಾಖಪಟ್ಟಣ, ಕಾರವಾರದಿಂದ ಈ ಹಡಗುಗಳು ಹೊರಡಲಿವೆ.

Advertisement

ಸ್ಥಳಾಂತರಕ್ಕೂ ಮುನ್ನ ಆರೋಗ್ಯ ಪರೀಕ್ಷೆ ನಡೆಸಲಾಗುತ್ತದೆ. ಕೋವಿಡ್ ನೆಗೆಟಿವ್‌ ಇದ್ದವರನ್ನು ವಿಮಾನಗಳಲ್ಲೂ ಕರೆತರಲಾಗುತ್ತದೆ. ಏರ್‌ ಇಂಡಿಯಾ, ಏರ್‌ಫೋರ್ಸ್‌ನ ವಿಮಾನಗಳು ಈ ಕಾರ್ಯಾಚರಣೆಗೆ ಸಜ್ಜಾಗುತ್ತಿವೆ.

ತಾಯ್ನಾಡಿಗೆ ಬಂದ ಪ್ರತಿಯೊಬ್ಬರನ್ನೂ ಮತ್ತೆ ಆರೋಗ್ಯ ಪರೀಕ್ಷೆಗೊಳಪಡಿಸಿ, 14 ದಿನಗಳ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತದೆ. ಇಂಥವರಿಗೆ ಕ್ವಾರಂಟೈನ್‌ ವ್ಯವಸ್ಥೆ ಕಲ್ಪಿಸಲು ಕೇರಳ ಈಗಾಗಲೇ ಮುಂದೆ ಬಂದಿದೆ. ಕರಾವಳಿ ತೀರಗಳನ್ನು ಹೊಂದಿರುವ ಇತರ ರಾಜ್ಯಗಳನ್ನೂ ಇದಕ್ಕಾಗಿ ಕೇಂದ್ರ ಸರಕಾರ ಒಪ್ಪಿಸುವ ಸಾಧ್ಯತೆ ಇದೆ.

ಕಾರ್ಮಿಕರಿಗೆ ಮೊದಲ ಆದ್ಯತೆ
ಯುಎಇ, ಸೌದಿ ಅರೇಬಿಯಾ, ಕುವೈಟ್‌, ಒಮಾನ್‌, ಕತಾರ್‌, ಬಹ್ರೈನ್‌ಗಳಲ್ಲಿ ನೆಲೆಸಿರುವ ಶೇ.70 ಭಾರತೀಯರು ತಾಯ್ನಾಡಿಗೆ ಮರಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅಲ್ಲಿನ ರಾಯಭಾರಿ ಕಚೇರಿಗಳನ್ನು ಸಂಪರ್ಕಿಸಿ ಸ್ಥಳಾಂತರಿಸಬೇಕಾದವರ ವಿವರಗಳನ್ನು ಒಟ್ಟುಗೂಡಿಸುವ ಪ್ರಕ್ರಿಯೆ ಆರಂಭಗೊಂಡಿದೆ.

ಮೂಲಗಳ ಪ್ರಕಾರ, ವಲಸೆ ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಕೆಲಸದ ಅವಧಿಯ ವೀಸಾ ಮುಗಿದಿರುವ, ಇನ್ನೇನು ಮುಗಿಯಲಿರುವ, ಹಸಿವಿನಿಂದ ಕಂಗೆಟ್ಟಿರುವ ವಲಸೆ ಕಾರ್ಮಿಕರನ್ನು ಮೊದಲ ಹಂತದಲ್ಲಿಯೇ ಕರೆತರಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next