ನವದೆಹಲಿ:ಭಾರೀ ಹಿಮಪಾತದಲ್ಲಿ ನೂರಾರು ವಾಹನಗಳು ಸಿಲುಕಿಕೊಂಡಿದ್ದು, ಭಾರತೀಯ ಸೇನಾಪಡೆ ಸುಮಾರು 2,500ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಿಸಿರುವ ಘಟನೆ ಸಿಕ್ಕಿಂನ ಗ್ಯಾಂಗ್ಟಕ್ ಸಮೀಪದ ನಾಥೂಲಾದಲ್ಲಿ ನಡೆದಿದೆ. ಈ ಪ್ರದೇಶದಲ್ಲಿ ಬರೋಬ್ಬರಿ 400ಕ್ಕೂ ಅಧಿಕ ವಾಹನಗಳು ಸಿಲುಕಿಕೊಂಡಿದ್ದವು.
ಹಿಮಪಾತದಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸಿದ ಬಳಿಕ ಅವರನ್ನು ಶುಕ್ರವಾರ ರಾತ್ರಿ ಊಟೋಪಚಾರ, ಔಷಧೋಪಚಾರ ಹಾಗೂ ತಾತ್ಕಾಲಿಕ ಶಿಬಿರದ ವ್ಯವಸ್ಥೆ ಮಾಡಿಕೊಡಲಾಗಿತ್ತು ಎಂದು ವರದಿ ವಿವರಿಸಿದೆ. ಈ ಘಟನೆ ಬಗ್ಗೆ ಟ್ವೀಟ್ ಮಾಡಿರುವ ಆರ್ಮಿ, ಭಾರೀ ಹಿಮಪಾತದಲ್ಲಿ ಸಿಲುಕಿದ್ದ 400 ವಾಹನಗಳಲ್ಲಿದ್ದ 2,500ಕ್ಕೂ ಹೆಚ್ಚು ಜನರನ್ನು ನಾಥೂಲಾದಲ್ಲಿ ರಕ್ಷಿಸಲಾಗಿದೆ ಎಂದು ತಿಳಿಸಿತ್ತು.