Advertisement

ಮುಂದಿನ 25 ವರ್ಷಗಳಲ್ಲಿ ಭಾರತ ಸೂಪರ್ ಪವರ್ : ವಿದೇಶಾಂಗ ಸಚಿವ ಜೈ ಶಂಕರ್

07:00 PM Apr 02, 2023 | Team Udayavani |

ಧಾರವಾಡ : ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಇರುವ ಭಾರತ ದೇಶವು ಮುಂದಿನ 25 ವರ್ಷಗಳಲ್ಲಿ ಬಲಶಾಲಿ ಭಾರತ (ಸೂಪರ್ ಪವರ್) ಆಗಲಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಡಾ.ಎಸ್.ಜೈ ಶಂಕರ ಹೇಳಿದರು.

Advertisement

ಇಲ್ಲಿಯ ವಿದ್ಯಾಗಿರಿಯ ಜೆಎಸ್‌ಎಸ್ ಕಾಲೇಜು ಆವರಣದ ಸನ್ನಿಧಿ ಕಲಾಕ್ಷೇತ್ರದಲ್ಲಿ ರವಿವಾರ ಹಮ್ಮಿಕೊಂಡಿದ್ದ ವಿವಿಧ ತಜ್ಞರು ಮತ್ತು ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗಿನ ಅಮೃತ ಮಹೋತ್ಸವದಿಂದ ಶತಮಾನೋತ್ಸವ ಹೊತ್ತಿಗೆ ಇಡೀ ಜಗತ್ತಿಗೆ ಭಾರತವು ಸೂಪರ್ ಪವರ್ ದೇಶವಾಗಿ ಹೊರಹೊಮ್ಮುದರ ಜತೆಗೆ ಡಿಜಿಟಲ್ ದೇಶದಲ್ಲಿ ವಿಶ್ವಕ್ಕೆ ಮುಂಚೂಣಿಯಲ್ಲಿ ಇರಲಿದೆ. ಈಗಂತೂ ಸೂಕ್ತ ಸಮಯದಲ್ಲಿ ಭಾರತಕ್ಕೆ ಜಿ20  ಅಧ್ಯಕ್ಷಗಿರಿ ಸಿಕ್ಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಆದೇಶದಂತೆ ದೇಶದ 60 ನಗರಗಳಲ್ಲಿ 200 ಸಭೆಗಳನ್ನು ಆಯೋಜಿಸುತ್ತಿದೆ. ಇದರಿಂದ ವಿದೇಶಗಳ ಪ್ರತಿನಿಧಿಗಳು ದೇಶದ ವಿವಿಧ ನಗರಗಳ ವಿಶೇಷತೆ ಅರಿಯಲು ಸಹಾಯಕ ಆಗಲಿದೆ ಎಂದರು.

ಭಾರತಕ್ಕೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಶಾಶ್ವತ ಸದಸ್ಯತ್ವ ಪಡೆಯಲು ಅರ್ಹತೆ ಹೊಂದಿದ್ದರೂ ಕೆಲ ದೇಶಗಳಿಂದ ಹಿನ್ನಡೆಯಾಗಿದೆ. ಆದರೆ ಸದಸ್ಯತ್ವ ಸಿಕ್ಕೇ ಸಿಗಲಿದೆ ಎಂಬ ಭರವಸೆ ಇದೆ. ಇನ್ನು ಲಂಡನ್‌ನಲ್ಲಿನ ಭಾರತದ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಿ, ಧ್ವಜಕ್ಕೆ ಅವಮಾನ ನಡೆಸಿದ್ದು ಖಂಡನೀಯ. ಈ ಹೋರಾಟಗಾರರ ಜತೆಗೆ ಅವರಿಗೆ ಬಂಬಲ ನೀಡುವವರ ಬಗ್ಗೆ ಸಹ ಗಂಭೀರವಾಗಿ ಪರಿಗಣಿಸಿ ಖಡಕ್ ಎಚ್ಚರಿಕೆ ನೀಡಲಾಗುವುದು ಎಂದರು.

ಚೀನಾ ಗಡಿಯಲ್ಲಿ ಸೇನೆಯ ನಿಯೋಜನೆ, ಭಯೋತ್ಪಾದನೆಯಂತಹ ಪಿಡುಗನ್ನು ಬೇರು ಸಹಿತ ಕಿತ್ತೊಗೆದ ಕ್ರಮಗಳಿಂದಾಗಿ ಇಡೀ ಜಗತ್ತೇ
ಭಾರತದತ್ತ ಬೆರಗು ಮತ್ತು ಭರವಸೆಯ ಕಣ್ಣುಗಳಿಂದ ನೋಡುತ್ತಿದೆ. ಇವುಗಳಿಗೆ ಪೂರಕವಾಗಿ ಜಗತ್ತಿನ ಹಲವು ರಾಷ್ಟ್ರಗಳಿಗೆ ಭಾರತ ಚಾಚಿದ ನೆರವಿನ ಹಸ್ತವು, ಭವಿಷ್ಯದಲ್ಲಿ ಶಕ್ತಿ ಕೇಂದ್ರವಾಗುವತ್ತ ಭಾರತ ದಾಪುಗಾಲಿಡುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಜಾಗತಿಕ ಮಟ್ಟದಲ್ಲಿ ದೇಶವನ್ನು ಮುನ್ನೆಡಸಲು ಪ್ರತಿ ರಾಜ್ಯಗಳ ಒಗ್ಗೂಡುವಿಕೆಯೇ ಒಕ್ಕೂಟ ವ್ಯವಸ್ಥೆಯ ಬಲ. ಅದರಲ್ಲೂ ದೇಶದ ಭವಿಷ್ಯದ ದೃಷ್ಟಿಯಲ್ಲಿ ಕರ್ನಾಟಕವು ತಂತ್ರಜ್ಞರ ಉತ್ಪಾದನೆ, ಸ್ಟಾರ್ಟ್‌ಅಪ್ಸ್, ನಾವೀನ್ಯತೆ, ವಿದೇಶಿ ಬಂಡವಾಳ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಗ್ರಸ್ಥಾನದಲ್ಲಿದೆ. ಇದು ಭಾರತದ ಆರ್ಥಿಕತೆ ಮತ್ತು ಜನಪ್ರಿಯತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದರು.

ಅಭಿವೃದ್ಧಿ ಹೊಂದಿದ ಹಲವು ರಾಷ್ಟ್ರಗಳಲ್ಲಿ ಕೌಶಲ್ಯ ಮತ್ತು ಪ್ರತಿಭೆಯ ಕೊರತೆ ಇದೆ. ಹೀಗಾಗಿ ಅಂತಹ ರಾಷ್ಟ್ರಗಳು ಜಗತ್ತಿನಲ್ಲಿ ಶಿಕ್ಷಣ, ಪ್ರತಿಭೆ, ನಾವೀನ್ಯತೆ ಇರುವ ಕಡೆ ನೋಡುತ್ತಿದ್ದು, ಇದರ ಲಾಭ ದೇಶವಾಶಿಗಳಿಗೆ ಆಗಲಿದೆ. ಇದಕ್ಕೆ ಪೂರಕವಾಗಿ ಚೀನಾ ಮತ್ತು ಅಮೆರಿಕ ನಡುವಿನ ಬಿಕ್ಕಟ್ಟಿನ ಲಾಭ ಭಾರತದಂತ ಪ್ರತಿಭಾವಂತ ರಾಷ್ಟ್ರಕ್ಕೆ ಆಗಲಿದೆ ಎಂದರು.

ಎಲೆಕ್ಟ್ರಾನಿಕ್ ಎಂಬುದು ಇಡೀ ಜಗತ್ತನ್ನೇ ಆಳುತ್ತಿದೆ. ಪ್ರತಿಭೆ ಮತ್ತು ನಾವೀನ್ಯತೆಯನ್ನೇ ಬಯಸುವ ಈ ಕ್ಷೇತ್ರವು ಭಾರತದಲ್ಲಿರುವ ಇಂತಹ ಮಾನವ ಸಂಪನ್ಮೂಲದತ್ತ ಕಣ್ಣಿಟ್ಟಿದೆ. ಇದರ ಲಾಭ ದೇಶದ ಜನರಿಗೆ ಆಗಲಿದೆ. ಡಿಜಿಟಲೀಕರಣ ಕ್ಷೇತ್ರದಲ್ಲಿ ಭಾರತ ಕೆಲ ವರ್ಷಗಳ ಹಿಂದೆ ಕೇವಲ ೬ ಕೋಟಿ ಜನ ಬ್ರಾಡ್ ಬ್ಯಾಂಡ್ ಹೊಂದಿದ್ದರು. ಆದರೆ, ಇಂದು ೮೦ ಕೋಟಿಗೆ ಏರಿಕೆಯಾಗಿದೆ. ಅಂತರ್ಜಾಲ ವ್ಯವಸ್ಥೆ ಹಿಂದೆ ೨೦ ಕೋಟಿಯಷ್ಟು ಜನರ ಬಳಿ ಇತ್ತು. ಇಂದು ೮೫ ಕೋಟಿ ಜನರಿಗೆ ಅದು ತಲುಪಿದೆ ಎಂದರು.

ಇಂದು ಡಿಜಿಟಲೀಕರಣದತ್ತ ಭಾರತ ದಾಪುಗಾಲಿಡುತ್ತಿರುವುದನ್ನು ಜಗತ್ತು ಬೆರಗುಗಣ್ಣಿನಿಂದ ನೋಡುತ್ತಿದೆ. ಪ್ರಸ್ತುತ ಭಾರತ ಬದಲಾವಣೆಯ ಕಾಲಘಟ್ಟದಲ್ಲಿ ಇದ್ದು, ವಿದೇಶಾಂಗ ನೀತಿಯಲ್ಲಿ ದೇಶ ತೆಗೆದುಕೊಳ್ಳುವ ನಿರ್ಧಾರಗಳು ಕೆಲವರ ಪರವಾಗಿರದೇ, ಪ್ರತಿಯೊಬ್ಬ ಪ್ರಜೆಯ ಹಿತ ಕಾಯುವುದೇ ಆಗಿರುತ್ತದೆ. ದೇಶ ಹಾಗೂ ಪ್ರಜೆಗಳ ಹಿತದಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಕೆಲ ನಿರ್ಧಾರಗಳ ಕುರಿತು ಪ್ರಜೆಗಳು ಅಸಮಾಧಾನಗೊಂಡರೇ, ಅವುಗಳಿಂದ ಹಿಂದೆ ಸರಿಯಲಾಗುತ್ತಿದೆ. ಇನ್ನೂ ಕೆಲವನ್ನು ದೇಶದ ಭದ್ರತೆಯ ದೃಷ್ಟಿಯಿಂದ ಗೌಪ್ಯವಾಗಿ ಇಡಲಾಗುತ್ತದೆ. ಆದರೆ, ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳ ಹಿಂದೆ ದೇಶದ ಹಿತ ಬಿಟ್ಟರೆ ಬೇರೇನೂ ಇರಲ್ಲ ಎಂದು ಸ್ಪಷ್ಟಪಡಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಸಚಿವ ಜೈ ಶಂಕರ ಅವರು ತಜ್ಞರು, ವಿದ್ಯಾರ್ಥಿಗಳ ಪ್ರಶ್ನೆಗಳನ್ನು ಉತ್ತರಿಸಿದರು. ಶಾಸಕ ಅರವಿಂದ್ ಬೆಲ್ಲದ ಮಾತನಾಡಿ, ೨೦೧೪ ರಿಂದ ಪ್ರಧಾನಿ ಮೋದಿ ದೇಶದ ಚುಕ್ಕಾಣಿ ಹಿಡಿದ ಮೇಲೆ ಇಡೀ ಜಗತ್ತು ಭಾರತದ ಕಡೆ ನೋಡುವ ದೃಷ್ಟಿ ಬದಲಾಗಿದೆ ಎಂದರು. ಹಿರಿಯ ನ್ಯಾಯವಾದಿ ಅರುಣ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಅಜಿತ್ ಪ್ರಸಾದ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ವಿಜಯಾನಂದ ಶೆಟ್ಟಿ, ಮೋಹನ ರಾಮದುರ್ಗ, ಮಹಾವೀರ
ಉಪಾಧ್ಯ, ಜೀನೇಂದ್ರ ಕುಂದಗೋಳ, ಬಸವರಾಜ ಗರಗ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next