Advertisement

Test; ಭಾರತ-ನ್ಯೂಜಿಲ್ಯಾಂಡ್‌ ಟೆಸ್ಟ್‌ ಸರಣಿ: ಪ್ರಕೃತಿ ಸಹಕರಿಸಿದರೆ ಬೆಂಗಳೂರು ಪಂದ್ಯ

10:21 PM Oct 15, 2024 | Team Udayavani |

ಬೆಂಗಳೂರು: ಅತೀ ಮಹತ್ವದ ಬೋರ್ಡರ್‌-ಗಾವಸ್ಕರ್‌ ಟ್ರೋಫಿ ಸರಣಿಗೂ ಮುನ್ನ ಭಾರತ ತಂಡ ನ್ಯೂಜಿಲ್ಯಾಂಡ್‌ ವಿರುದ್ಧ 3 ಪಂದ್ಯಗಳ ಟೆಸ್ಟ್‌ ಸರಣಿಗೆ ಅಣಿಯಾಗಿದೆ. ಆಸ್ಟ್ರೇಲಿಯಕ್ಕೆ ತೆರಳುವುದಕ್ಕೂ ಮೊದಲು ಇದು ಟೀಮ್‌ ಇಂಡಿಯಾ ಪಾಲಿನ ಕೊನೆಯ ತವರು ಸರಣಿಯಾಗಿದ್ದು, ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಬುಧವಾರ ಮೊದಲ ಟೆಸ್ಟ್‌ ಆರಂಭವಾಗಲಿದೆ.

Advertisement

ಇದು ಉದ್ಯಾನನಗರಿಯ 25ನೇ ಟೆಸ್ಟ್‌ ಆಗಿದ್ದು, ಕ್ರಿಕೆಟ್‌ ಅಭಿಮಾನಿಗಳು ದೊಡ್ಡದೊಂದು ಸಂಭ್ರಮಾಚರಣೆ ನಡೆಸಬೇಕಾ ಗಿತ್ತು. ಆದರೆ ಇದಕ್ಕೆ ಭಾರೀ ಮಳೆ ಯಿಂದ ಅಡಚಣೆಯಾಗುವುದು ಖಚಿತ ಎಂಬ ಪರಿಸ್ಥಿತಿ ಉದ್ಭವಿಸಿದೆ.

ಪರಿಪೂರ್ಣ ಸಾಧಕರ ಪ್ಯಾಕೇಜ್‌

ಮಳೆಯನ್ನು ಮರೆತು ಮುಂದುವರಿ ಯುವುದಾದರೆ, ರೋಹಿತ್‌ ಶರ್ಮ ನಾಯಕತ್ವದ ಭಾರತ ಮೊನ್ನೆಯಷ್ಟೇ ಬಾಂಗ್ಲಾದೇಶ ವಿರುದ್ಧ 2-0 ಕ್ಲೀನ್‌ಸ್ವೀಪ್‌ ಸಾಧಿಸಿದ ಹುರುಪಿನಲ್ಲಿದೆ. ಇನ್ನೊಂದೆಡೆ ನ್ಯೂಜಿಲ್ಯಾಂಡ್‌ ತಂಡ ಶ್ರೀಲಂಕಾ ವಿರುದ್ಧ ಎರಡೂ ಟೆಸ್ಟ್‌ ಪಂದ್ಯಗಳನ್ನು ಸೋತ ಸಂಕಟದಲ್ಲಿದೆ.

ಸದ್ಯ ಟೀಮ್‌ ಇಂಡಿಯಾ ಪರಿಪೂರ್ಣ ಸಾಧಕರ ಪ್ಯಾಕೇಜ್‌ ಒಂದನ್ನು ಹೊಂದಿದೆ. ಪಾಕಿಸ್ಥಾನವನ್ನು ಅವರದೇ ಅಂಗಳದಲ್ಲಿ ಮಣಿಸಿ ಬಂದ ಬಾಂಗ್ಲಾ ಟೈಗರ್‌ಗಳನ್ನು ಬೇಟೆಯಾಡಿದ ಪರಿ ಅಮೋಘ. 3 ದಿನ ಗಳ ಆಟ ಮಳೆಯಿಂದ ನಷ್ಟವಾದರೂ ಹೇಗೆ ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟ ರೋಹಿತ್‌ ಪಡೆಯ ಸಾಮರ್ಥ್ಯ ಸಾಟಿಯಿಲ್ಲದ್ದು. ಆದರೆ ನ್ಯೂಜಿಲ್ಯಾಂಡ್‌ ಬಾಂಗ್ಲಾಕ್ಕಿಂತ ಹೆಚ್ಚಿನ ಸಾಮರ್ಥ್ಯ ಹೊಂದಿರುವ ತಂಡ.

Advertisement

ತ್ರಿವಳಿ ಸ್ಪಿನ್‌ ದಾಳಿ?

ಸಾಮಾನ್ಯವಾಗಿ ತವರಲ್ಲಿ ತ್ರಿವಳಿ ಸ್ಪಿನ್‌ ದಾಳಿಯನ್ನು ಸಂಘಟಿಸುವ ಭಾರತ, ಬಾಂಗ್ಲಾದೆದುರು ಇಬ್ಬರೇ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿತ್ತು. ಬದಲಾಗಿ ಮೂವರು ವೇಗಿಗಳನ್ನು ಬಳಸಿತು. ಇವರಲ್ಲಿ ಬುಮ್ರಾ, ಆಕಾಶ್‌ ದೀಪ್‌ ಯಶಸ್ಸು ಸಾಧಿಸಿದರು. ಆದರೆ ಸಿರಾಜ್‌ ನಿರೀಕ್ಷಿತ ಮಟ್ಟಕ್ಕೇರಲಿಲ್ಲ. ನ್ಯೂಜಿಲ್ಯಾಂಡ್‌ ವಿರುದ್ಧದ ಮೂರೂ ಟ್ರ್ಯಾಕ್‌ಗಳು ಸ್ಪಿನ್ನರ್‌ಗಳಿಗೆ ಒಲಿಯುವ ಕಾರಣ ಭಾರತವಿಲ್ಲಿ 3ನೇ ಸ್ಪಿನ್ನರ್‌ನನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಆಗ ಈ ಅವಕಾಶ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಪಾಲಾಗಬಹುದು. ಅಕ್ಷರ್‌ ಪಟೇಲ್‌ ಕೂಡ ರೇಸ್‌ನಲ್ಲಿದ್ದಾರೆ.

ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ಬದಲಾವಣೆ ಸಂಭವಿಸುವ ಸಾಧ್ಯತೆ ಇಲ್ಲ. ರೋಹಿತ್‌, ಜೈಸ್ವಾಲ್‌, ಗಿಲ್‌, ಕೊಹ್ಲಿ, ಪಂತ್‌, ರಾಹುಲ್‌ ಮುಂದುವರಿಯಲಿದ್ದಾರೆ. ಆದರೆ ಗಿಲ್‌ ಕುತ್ತಿಗೆ ಉಳುಕಿಸಿಕೊಂಡಿದ್ದಾಗಿ ವರದಿಯಾಗಿದೆ. ಒಂದು ವೇಳೆ ಗಿಲ್‌ ಆಡದೇ ಹೋದರೆ ಈ ಅವಕಾಶ ಸರ್ಫರಾಜ್‌ ಖಾನ್‌ ಪಾಲಾಗುವುದು ಖಂಡಿತ.

ಅಜಾಜ್‌ ಪಟೇಲ್‌ ಇದ್ದಾರೆ!

ನ್ಯೂಜಿಲ್ಯಾಂಡಿನ ಫಾಸ್ಟ್‌ ಬೌಲಿಂಗ್‌ ಹೆಚ್ಚು ಘಾತಕ. ಟಿಮ್‌ ಸೌಥಿ, ಮ್ಯಾಟ್‌ ಹೆನ್ರಿ, ವಿಲಿಯಂ ಓ’ರೂರ್ಕ್‌ ಅವರ ಎಸೆತಗಳನ್ನು ಎದುರಿಸಿ ನಿಲ್ಲುವಲ್ಲಿ ನಮ್ಮವರು ಯಶಸ್ಸು ಕಾಣಬೇಕಿದೆ. ಜೈಸ್ವಾಲ್‌, ಗಿಲ್‌ ಮೊದಲಾದ ಯುವ ಬ್ಯಾಟರ್ ಇದಕ್ಕೂ ಮಿಗಿಲಾದ ಘಾತಕ ವೇಗಿಗಳನ್ನು ಆಸ್ಟ್ರೇಲಿಯದಲ್ಲಿ ನಿಭಾಯಿಸಿ ನಿಲ್ಲಬೇಕಿರುವುದರಿಂದ ಇದೊಂದು ಉತ್ತಮ ಪ್ರಾÂಕ್ಟೀಸ್‌ ಆಗಲಿದೆ.

ಸ್ಪಿನ್‌ ವಿಭಾಗದಲ್ಲಿ ಅಜಾಜ್‌ ಪಟೇಲ್‌ ಹೆಚ್ಚು ಅಪಾಯಕಾರಿಯಾಗಬಲ್ಲರು. ಕಳೆದ ಪ್ರವಾಸದಲ್ಲಿ ಮುಂಬಯಿ ಟೆಸ್ಟ್‌ ಪಂದ್ಯದ ಇನ್ನಿಂಗ್ಸ್‌ ಒಂದರ ಎಲ್ಲ 10 ವಿಕೆಟ್‌ ಉಡಾಯಿಸಿದ ಇವರ ಸಾಹಸವನ್ನೊಮ್ಮೆ ಮೆಲುಕು ಹಾಕುವುದು ಉತ್ತಮ. ಆಲ್‌ರೌಂಡರ್‌ಗಳ ಪಾತ್ರ ವಹಿಸಲು ಮಿಚೆಲ್‌, ಬ್ರೇಸ್‌ವೆಲ್‌, ಸ್ಯಾಂಟ್ನರ್‌ ಇದ್ದಾರೆ.

ನ್ಯೂಜಿಲ್ಯಾಂಡಿನ ಬ್ಯಾಟಿಂಗ್‌ ಸರದಿ ಕಾಗದದಲ್ಲಷ್ಟೇ ಬಲಿಷ್ಠ. ವಿಲಿಯಮ್ಸನ್‌ ಅವರ ಮೊದಲಿನ ಚಾರ್ಮ್ ಹೊರಟು ಹೋಗಿದೆ. ಕಾನ್ವೇ, ಯಂಗ್‌, ಚಾಪ್‌ಮನ್‌, ರಚಿನ್‌, ಲ್ಯಾಥಂ ಅವರ ಬ್ಯಾಟ್‌ ಹೇಗೆ ಮಾತಾಡುತ್ತದೆ ಎಂಬುದರ ಮೇಲೆ ನ್ಯೂಜಿಲ್ಯಾಂಡ್‌ ಭವಿಷ್ಯ ಅಡಗಿದೆ.

ಮೂರನೇ ದಿನ ಪಂದ್ಯ ಆರಂಭ?

ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರಿನಲ್ಲಿ ಸತತ ಮಳೆಯಾಗುತ್ತಿದ್ದು, ಇದರಿಂದ ಟೆಸ್ಟ್‌ ಪಂದ್ಯಕ್ಕೆ ಅಡ್ಡಿಯಾಗುವುದು ಗ್ಯಾರಂಟಿ ಎಂದೇ ಹೇಳಬಹುದು. ಆದರೆ ಚಿನ್ನಸ್ವಾಮಿ ಸ್ಟೇಡಿಯಂನ ಡ್ರೈನೇಜ್‌ ವ್ಯವಸ್ಥೆ ಅತ್ಯುತ್ತಮ ಮಟ್ಟದ್ದಾಗಿರುವ ಕಾರಣ, ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ಅಂಗಳವನ್ನು ಪಂದ್ಯಕ್ಕೆ ಸಜ್ಜುಗೊಳಿಸಬಹುದು ಎಂಬುದೊಂದು ಸಮಾಧಾನದ ಸಂಗತಿ.

ಹವಾಮಾನ ಮುನ್ಸೂಚನೆ ಪ್ರಕಾರ ಅ. 16 ಮತ್ತು 17ರಂದು ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ. ಪಂದ್ಯದ 3ನೇ ದಿನ ಮಳೆಯ ಸಾಧ್ಯತೆ ಕಡಿಮೆ. ಬಹುಶಃ ಪಂದ್ಯ ಕೂಡ ಅಂದೇ ಆರಂಭವಾದೀತೆಂಬುದು ಸದ್ಯದ ನಿರೀಕ್ಷೆ. ಮಂಗಳವಾರದ ಭಾರೀ ಮಳೆಯಿಂದಾಗಿ ಎರಡೂ ತಂಡಗಳಿಗೆ ಅಭ್ಯಾಸ ನಡೆಸಲಾಗಲಿಲ್ಲ.

 ಕಿವೀಸ್‌ ಕಾಲಿಟ್ಟಲ್ಲೆಲ್ಲ ಮಳೆ!

ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ತಂಡ ಭಾರತದಲ್ಲಿ ಕಾಲಿಟ್ಟಲ್ಲೆಲ್ಲ ಮಳೆ ಸುರಿಯುವುದೊಂದು ವಿಪರ್ಯಾಸ. ಇದಕ್ಕೂ ಮುನ್ನ ಅದು ಗ್ರೇಟರ್‌ ನೋಯ್ಡಾದಲ್ಲಿ ಅಫ್ಘಾನಿಸ್ಥಾನ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯವನ್ನು ಆಡಬೇಕಿತ್ತು. ಭಾರೀ ಮಳೆಯಿಂದ ಈ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ಅನಂತರ ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ಆಡಲಾದ ಎರಡೂ ಟೆಸ್ಟ್‌ ಪಂದ್ಯಗಳನ್ನು ಸೋತು ಭಾರತಕ್ಕೆ ಆಗಮಿಸಿದೆ. ಜತೆಗೆ ಮಳೆಯೂ!

ತಂಡಗಳು

ಭಾರತ: ರೋಹಿತ್‌ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌, ಸರ್ಫರಾಜ್‌ ಖಾನ್‌, ರಿಷಭ್‌ ಪಂತ್‌, ಧ್ರುವ ಜುರೆಲ್‌, ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಅಕ್ಷರ್‌ ಪಟೇಲ್‌, ಜಸ್‌ಪ್ರೀತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಆಕಾಶ್‌ ದೀಪ್‌.

ನ್ಯೂಜಿಲ್ಯಾಂಡ್‌: ಟಾಮ್‌ ಲ್ಯಾಥಂ (ನಾಯಕ), ಡೇವನ್‌ ಕಾನ್ವೇ, ಕೇನ್‌ ವಿಲಿಯಮ್ಸನ್‌, ಮಾರ್ಕ್‌ ಚಾಪ್‌ಮನ್‌, ವಿಲ್‌ ಯಂಗ್‌, ಡ್ಯಾರಿಲ್‌ ಮಿಚೆಲ್‌, ಗ್ಲೆನ್‌ ಫಿಲಿಪ್ಸ್‌, ಮೈಕಲ್‌ ಬ್ರೇಸ್‌ವೆಲ್‌, ಮಿಚೆಲ್‌ ಸ್ಯಾಂಟ್ನರ್‌, ರಚಿನ್‌ ರವೀಂದ್ರ, ಟಾಮ್‌ ಬ್ಲಿಂಡೆಲ್‌, ಅಜಾಜ್‌ ಪಟೇಲ್‌,  ಮ್ಯಾಟ್‌ ಹೆನ್ರಿ, ಟಿಮ್‌ ಸೌಥಿ, ವಿಲಿಯಂ ಓ’ರೂರ್ಕ್‌, ಜೇಕಬ್‌ ಡಫಿ.

Advertisement

Udayavani is now on Telegram. Click here to join our channel and stay updated with the latest news.

Next