Advertisement

ವಿಶ್ವಕ್ಕೇ ಸಹಕಾರಿ ತತ್ವದ ದರ್ಶನ ಮಾಡಿದ್ದು ಭಾರತ: ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ

10:06 PM Nov 18, 2023 | Team Udayavani |

ಶಿರಸಿ: ಸಹಕಾರಿ ತತ್ವ ಇಂದು ನಿನ್ನೆಯದಲ್ಲ. ಹತ್ತು ಸಾವಿರ ವರ್ಷಗಳ ಹಿಂದೆಯೇ ಇದರ ಬಗ್ಗೆ ಉಲ್ಲೇಖವಿದೆ. ಭಾರತವು ವಿಶ್ವಕ್ಕೇ ಸಹಕಾರಿ ತತ್ವದ ಎಲ್ಲ ಲಾಭ, ಎಲ್ಲ ಮುಖಗಳ ದರ್ಶನ ತೋರಿಸಿದೆ ಎಂದು ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಬಣ್ಣಿಸಿದರು.
ಅವರು ಶನಿವಾರ ನಗರದ ಟಿಎಂಎಸ್ ಸಭಾಂಗಣದಲ್ಲಿ ೭೦ನೇ ಸಹಕಾರಿ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ನಿಷ್ಠಾವಂತ ಸದಸ್ಯರಿಗೆ ಸಮ್ಮಾನ, ಉಪನ್ಯಾಸ, ಗಾನ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ನಮ್ಮ ಭಾರತೀಯರ ದರ್ಶನವನ್ನು ಉಳಿದವರು ಕೂಡ ಜಾರಿಗೆ ತಂದಿರಬಹುದು. ಆದರೆ, ಇಡೀ ವಿಶ್ವಕ್ಕೆ ಸಹಕಾರಿ ತತ್ವ ಕೊಟ್ಟಿದ್ದು ಭಾರತ. ದುಡಿಯುವ ಮನಸ್ಸುಗಳು ಒಂದಾಗುವದೇ ಸಹಕಾರ. ಹಂಚಿ ತಿನ್ನುವ ಸಂಯಮ ಇಲ್ಲಿದೆ. ಟಿಎಂಎಸ್ ಸಂಸ್ಥೆ ಸಹಕಾರಿ ಕ್ಷೇತ್ರಕ್ಕೆ ಮಾದರಿಯಾಗಿ ಕೆಲಸ ಮಾಡುತ್ತಿದೆ. ಇಲ್ಲಿ ಯಾರೂ ಸೌಜನ್ಯ ಮರೆತು ಕೆಲಸ ಮಾಡುವದಿಲ್ಲ ಎಂದ ಕೆರೇಕೈ ಅವರು, ಟಿಎಂಎಸ್ ಸಂಘವನ್ನು ನಮ್ಮ ಸಂಘ ಎಂದು ಭಾವಿಸುತ್ತೆವೆ. ಟಿಎಂಎಸ್ ಹೇಗೆ ಇರುತ್ತದೋ ಹಾಗೇ ನಮ್ಮ ಮನೆ, ಹಾಗೂ ಮನಸ್ಸು ಇಟ್ಟವರು ಎಂದು ಭರವಸೆ ಇಟ್ಟವರು. ನಮ್ಮ ಮನಸ್ಸು ಹಾಳಾದರೆ ಮನೆ ಹಾಳಾಗುತ್ತದೆ. ಮನೆ ಹಾಳಾದರೆ ಊರು, ಸಂಘಗಳು ಹಾಳಾಗುತ್ತವೆ. ಇದು ಹಾಳಾಗದಂತೆ ನಾಗರೀಕ ಹೊಣೆಗಾರಿಕೆ ಆಗಿದೆ. ನಿಷ್ಠೆ ಹಾಗೂ ಸಹಕಾರದಿಂದಲೇ ಸಹಕಾರ ವ್ಯವಸ್ಥೆ ಬಲವಾಗಿ ಬೆಳೆದಿದೆ ಎಂದರು.

ಸಂಸ್ಥೆಯ ಅನ್ನಕ್ಕಾಗಿ ಕಾಯದೇ ಮನೆಯಿಂದ ಬುತ್ತಿ ಕಟ್ಟಿಕೊಂಡು ಬಂದು ನಿರ್ದೇಶಕರು, ಅಧ್ಯಕ್ಷರು, ಸಿಬಂದಿಗಳು ಟಿಎಂಎಸ್ ಸಂಸ್ಥೆ ಕಟ್ಟಿದ್ದಾರೆ. ಇಲ್ಲಿ ಎಲ್ಲರೂ ಸೌಜನ್ಯ ಮರೆತು ವ್ಯವಹಾರ ಮಾಡುವದಿಲ್ಲ ಎಂದೂ ಹೇಳಿದರು.

ಸಹಕಾರಿ ಸಪ್ತಾಹ ನಿಲುವು ಗನ್ನಡಿಯಂತೆ. ನಮ್ಮ ನಡೆಯನ್ನು ನಾವು ನೋಡಿಕೊಳ್ಳುವ ಕಾಲ ಇದು. ರಾಜ್ಯದಲ್ಲಿ ಸಹಕಾರಿ ಚಳುವಳಿಯಲ್ಲಿ ಉತ್ತರ ಕನ್ನಡವು ಮೇಲ್ಪಂಕ್ತಿಯಾಗಿದೆ. ಸಹಕಾರಿ ವ್ಯವ್ಯಸ್ಥೆ ನಂಬಿಕೆಯಿಂದಲೇ ನೀಡಿದೆ. ಸಹಕಾರಿ ವ್ಯವಸ್ಥೆ ನಮಗೆ ಹೆಮ್ಮೆ. ನಮ್ಮ ನಮ್ಮ ಮನೆಯಲ್ಲೂ ಸಹಕಾರಿ ತತ್ವ ಬೆಳೆಸಬೇಕು ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಭೀಮಣ್ಣ ನಾಯ್ಕ, ಹಿರಿಯರ ತ್ಯಾಗದ ಪ್ರತಿಫಲದ ಸಹಕಾರಿ ವ್ಯವಸ್ಥೆ ನಿರ್ಮಾಣ ಆಗಿದೆ. ಈ ಸಹಕಾರಿ ವ್ಯವಸ್ಥೆಯಿಂದ ಸದಸ್ಯರಿಗೆ, ರೈತರಿಗೆ ನೆಮ್ಮದಿ ಕೊಡಲು ಕಾರಣ ಆಗಿದೆ. ಸಹಕಾರಿ ವ್ಯವಸ್ಥೆ ಕುರಿತು ಅರಿವು ಮೂಡಿಸುವ ಕೆಲಸ ಇಂಥ ಸಪ್ತಾಹಗಳು ಮಾಡುತ್ತಿದೆ. ಈ ವ್ಯವಸ್ಥೆ ಸಹಕಾರಿ ಬದುಕು ರೈತರಿಗೆ ಬಲ ಕೊಟ್ಟಿದೆ. ಅಂದಿನಿಂದ ಇಲ್ಲಿ ತನಕ ಅಚ್ಚುಕಟ್ಟಾಗಿ ಸಹಕಾರಿ ವ್ಯವಸ್ಥೆ ನಡೆಯುತ್ತಿದೆ ಎಂದ ಅವರು, ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಸಹಕಾರಿ ಕ್ಷೇತ್ರ ಬಲವಾಗಿದೆ. ನಂಬಿಕೆ ಉಳಿಸಿಕೊಂಡ ಸಂಘಗಳು. ರೈತರ ಏಳ್ಗೆ ಬಯಸಿಕೊಂಡು ಕೆಲಸ ಮಾಡಿದೆ. ಟಿಎಂಎಸ್ ಸಹಕಾರಿ ಅನೇಕ ಕುಟುಂಬಗಳ ಆಸರೆಯಾಗಿದೆ ಎಂದರು.

Advertisement

ಅಡಿಕೆ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಎಲೆ ಚುಕ್ಕೆ ರೋಗ, ಹಳದಿ ಎಲೆ ಸಮಸ್ಯೆ ಇದೆ. ಬೆಟ್ಟ ಬ ಖರಾಬು ಸಮಸ್ಯೆ ಕೂಡ ಇದೆ. ಬೆಟ್ಟ ಸಮಸ್ಯೆ ನಿವಾರಣೆಗೆ, ಅಡಿಕೆ ರೋಗ ಸಮಸ್ಯೆಯ ಕುರಿತು ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದು, ರೈತರು ನಿಶ್ಚಿಂತೆಯಿಂದ ಇರಲು ಸರಕಾರದಿಂದ ಎಷ್ಟು ಸಾಧ್ಯವೋ ಅಷ್ಟೂ ಸಹಕಾರ ನೀಡುತ್ತೇವೆ ಎಂದರು.

ಪ್ರಸಿದ್ಧ ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಮಾತನಾಡಿ, ಟಿಎಂಎಸ್ ಸಹಕಾರಿ ವ್ಯವಸ್ಥೆಯಲ್ಲಿ ಮಾದರಿಯಾಗಿ ಕೆಲಸ ಮಾಡುತ್ತಿದೆ. ಹಿರಿಯ ನಿಷ್ಠಾವಂತ ಸದಸ್ಯರನ್ನು ಗೌರವಿಸುತ್ತಿರುವದು ಶ್ಲಾಘನೀಯ ಎಂದರು.

ಸಹಕಾರಿ ಸಹಾಯಕ ನಿಬಂಧಕ ಟಿ.ವಿ.ಶ್ರೀನಿವಾಸ, ಮಾರಾಟ ಸಹಕಾರಿ ಸಂಘಗಳು ಕೇವಲ ಬೆಳೆ ಮಾರಾಟ ಮಾಡಿಸದೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸದಸ್ಯರ ಸಂಪೂರ್ಣ ಹಿತ ಕಾಯುತ್ತಿವೆ ಎಂದರು. ಸಹಕಾರ ವ್ಯವಸ್ಥೆಯ ಕುರಿತು ಹಿರಿಯ ಸಹಕಾರಿ ಶ್ರೀನಿವಾಸ ಪಿ. ಶೆಟ್ಟಿ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಹಿರಿಯ ಸಹಕಾರಿ ಜಿ.ಟಿ.ಹೆಗಡೆ ತಟ್ಟಿಸರ ಇದ್ದರು. ಅಧ್ಯಕ್ಷತೆಯನ್ನು ಸಹಕಾರಿ ರತ್ನ ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ವಹಿಸಿದ್ದರು.

ಮುಖ್ಯ ಕಾರ್ಯನಿರ್ವಾಹಕ ಎಂ.ಎ.ಹೆಗಡೆ ಸ್ವಾಗತಿಸಿದರು. ಎಂ.ಪಿ.ಹೆಗಡೆ ಹೊನ್ನೆಕಟ್ಟ ವಂದಿಸಿದರು. ಗಿರಿಧರ ಕಬ್ನಳ್ಳಿ ನಿರ್ವಹಿಸಿದರು. ಇದೇ ವೇಳೆ ನಿಷ್ಠಾವಂತ ಸದಸ್ಯರಾದ ದಾಮೋದರ ಸ್ವಾದಿ ಆಲೇಸರ, ಕೇಶವ ಹೆಗಡೆ ಕೆಶಿನಮನೆ, ಗೋಪಾಲಕೃಷ್ಣ ಹೆಗಡೆ ಹೊರಾಲೆ, ಗೋವಿಂದ ಹೆಗಡೆ ಪುಟ್ಟಣಮನೆ, ಗಣೇಶ ಹೆಗಡೆ ಕಾಟಿಮನೆ, ಉಮಾಮಹೇಶ್ವರ.ತಿ. ಹೆಗಡೆ ಕೊಪ್ಪರಗದ್ದೆ, ಗಣಪತಿ ಹೆಗಡೆ ಕೊರ್ಟಿಬೈಲ್, ಮಹಾಬಲೇಶ್ವರ ಹೆಗಡೆ ಬಾಳೇಗದ್ದೆ, ರಘುಪತಿ ಭಟ್ಟ ನಿಡಗೋಡ, ರಾಮಚಂದ್ರ ಹೆಗಡೆ ಕಡಕಿನಬೈಲು, ಮಂಜುನಾಥ ಶೇಟ್ ಹೆಬ್ಬಳ್ಳಿ, ರಾಜಶೇಖರ ಗೌಡ ಲಿಂಗನಮಟ್ಟಿ, ವೆಂಕಟ್ರಮಣ ಭಟ್ಟ ಶಿರಗುಣಿ, ರಾಮನಾಥ ಹೆಗಡೆ ಬೆಂಗಳಿ ಓಣಿಕೇರಿ, ಭಾಸ್ಕರ ಹೆಗಡೆ ನಾಡಗುಳಿ, ಮೀಟು ಗಿಡ್ಡು ಮರಾಠಿ ಬೆಣಗಾಂವ, ಶ್ರೀಪಾದ ಹೆಗೆಡೆ ಚಿಳಗಾರ, ಸುಶೀಲಾ ಹೆಗಡೆ ಕೊಟ್ಟೆಗದೆ, ಖರೀದಿದಾರರಾದ ಗಣಪತಿ ಹೆಗಡೆ ಊರತೋಟ, ಅಷ್ಟಾಕ್ ಸಿದ್ಧಿಕ್ ಖೋಬ್ರಾ ಅವರನ್ನು ಗೌರವಿಸಲಾಯಿತು.

ಬಳಿಕ ಪ್ರಸಿದ್ಧ ಭಾಗವತ ಹಿಲ್ಲೂರು ರಾಮಕೃಷ್ಣ, ಶ್ರೀರಕ್ಷಾ ಬಾಗಿನಕಟ್ಟ ಅವರಿಂದ ಗಾನ ವೈಭವ ನಡೆಯಿತು. ಹಿಮ್ಮೇಳದಲ್ಲಿ ಅನಿರುದ್ಧ ವರ್ಗಾಸರ, ಪ್ರಸನ್ನ ಭಟ್ಟ ಹೆಗ್ಗಾರ ಸಹಕಾರ ನೀಡಿದರು. ಯಕ್ಷಗಾನದ ಪ್ರಸಿದ್ಧ ಪದ್ಯಗಳು ಪ್ರೇಕ್ಷಕರಲ್ಲಿ ಮುದ ನೀಡಿದವು.

Advertisement

Udayavani is now on Telegram. Click here to join our channel and stay updated with the latest news.

Next