Advertisement

35 ಸಾವಿರ ಯೋಧರ ಜಮೆ: ಎಲ್‌ಎಸಿಯಿಂದ ಚೀನ ವಾಪಸಾತಿ ಸುಳ್ಳು: ಭಾರತ

01:20 AM Jul 31, 2020 | Hari Prasad |

ಹೊಸದಿಲ್ಲಿ: ರಫೇಲ್‌ ಸಮರ ವಿಮಾನಗಳ ಆಗಮನದ ಬೆನ್ನಲ್ಲೇ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಇನ್ನೂ 35 ಸಾವಿರ ಯೋಧರನ್ನು ಭಾರತ ನಿಯೋಜಿಸಿದೆ.

Advertisement

ಎರಡು ದೇಶಗಳ ನಡುವಿನ ಉದ್ವಿಗ್ನ ಸ್ಥಿತಿ ಇನ್ನೂ ಸುಧಾರಣೆಯಾಗದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ ಈ ಬಗ್ಗೆ ಸೇನೆ ಯಾವುದೇ ಮಾಹಿತಿ ನೀಡಿಲ್ಲ.

ಕಾರ್ಪ್ಸ್ ಕಮಾಂಡರ್‌ಗಳ ಮಟ್ಟದ ಹಲವಾರು ಸುತ್ತಿನ ಮಾತುಕತೆಯ ಅನಂತರ ಎಲ್‌ಎಸಿಯಿಂದ ಸೇನೆಯನ್ನು ವಾಪಸ್‌ ಕರೆಸಿಕೊಳ್ಳುವುದಕ್ಕೆ ಎರಡೂ ದೇಶಗಳು ನಿರ್ಧರಿಸಿದ್ದವು.

ಮುಂದಿನ ವಾರ ಮತ್ತೂಂದು ಸುತ್ತಿನ ಕಾರ್ಪ್ಸ್ ಕಮಾಂಡರ್‌ ಮಟ್ಟದ ಮಾತು ಕತೆ ಇದೆ. ಒಂದು ವೇಳೆ ಇದು ವಿಫ‌ಲವಾದರೆ ಉದ್ಭವಿಸಬಹುದಾದ ಯಾವುದೇ ಪರಿಸ್ಥಿತಿ ಎದುರಿಸಲು ಭಾರತ ಈ ಹೆಜ್ಜೆ ಇರಿಸಿದೆ ಎಂದು ಮೂಲಗಳು ತಿಳಿಸಿವೆ.

ಗಡಿ ಬದಲು ಮಾಡುವಂತಿಲ್ಲ: ಆಸ್ಟ್ರೇಲಿಯಾ
ಈ ಬೆಳವಣಿಗೆಗಳ ಮಧ್ಯೆ ಆಸ್ಟ್ರೇಲಿಯಾ ಮತ್ತೂಮ್ಮೆ ಭಾರತದ ಬೆಂಬಲಕ್ಕೆ ನಿಂತಿದ್ದು, ಎಲ್‌ಎಸಿಯಲ್ಲಿ ಯಥಾಸ್ಥಿತಿ ಬದಲಾವಣೆ ಮಾಡಲು ಚೀನ ಯತ್ನಿಸಬಾರದು ಎಂದು ಸೂಚಿಸಿದೆ. ಗಡಿಯಲ್ಲಿ ಯಥಾಸ್ಥಿತಿ ಬದಲಾವಣೆಯನ್ನು ನಾವು ವಿರೋಧಿಸುತ್ತೇವೆ ಎಂದು ಭಾರತದಲ್ಲಿರುವ ಆಸ್ಟ್ರೇಲಿಯಾದ ಹೈಕಮಿಷನರ್‌ ಹೇಳಿದ್ದಾರೆ.

Advertisement

ಚೀನ ಹೇಳಿಕೆ ತಿರಸ್ಕರಿಸಿದ ಭಾರತ
ಎಲ್‌ಎಸಿಯುದ್ದಕ್ಕೂ ಸೇನೆಯನ್ನು ವಾಪಸ್‌ ಕರೆಸಿ ಕೊಳ್ಳ ಲಾಗಿದೆ ಎಂದು ಚೀನ ಬುಧವಾರ ನೀಡಿದ್ದ ಹೇಳಿಕೆ ಯನ್ನೂ ಕೇಂದ್ರ ಸರಕಾರ ತಿರಸ್ಕರಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅದು, ಎಲ್‌ಎಸಿಯ ಕೆಲವು ಕಡೆ ಗಳಲ್ಲಿ ಚೀನದ ಸೈನಿಕರು ಇನ್ನೂ ಇದ್ದಾರೆ, ಚೀನ ಸುಳ್ಳು ಹೇಳು ತ್ತಿದೆ ಎಂದಿದೆ. ಪಾಂಗೋಂಗ್‌ ತ್ಸೊ ಮತ್ತು ಗೋಗ್ರಾದ 17 ಎ ಗಸ್ತು ಪಾಯಿಂಟ್‌ನಿಂದ ಚೀನ ಕಾಲ್ತೆಗೆದಿಲ್ಲ ಎಂದೂ ತಿಳಿಸಿದೆ.

ಸ್ಮಾರಕದಲ್ಲಿ ಗಾಲ್ವಾನ್‌ ಹುತಾತ್ಮರ ಹೆಸರು
ಗಾಲ್ವಾನ್‌ ಕಣಿವೆಯಲ್ಲಿ ಚೀನದ ಸೈನಿಕರ ಜತೆಗೆ ಸಂಭವಿಸಿದ ಘರ್ಷಣೆಯಲ್ಲಿ ಹುತಾತ್ಮರಾದ 20 ಮಂದಿ ಭಾರತೀಯ ವೀರಯೋಧರ ಹೆಸರುಗಳನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಉಲ್ಲೇಖಿಸಲಾಗುವುದು ಎಂಬುದಾಗಿ ಕೇಂದ್ರ ಸರಕಾರ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next