Advertisement

ಸರಣಿ ಮುನ್ನಡೆಗೆ ಭಾರತ ಪ್ರಯತ್ನ

11:20 AM Aug 24, 2017 | |

ಪಲ್ಲೆಕಿಲೆ: ಶ್ರೀಲಂಕಾದಲ್ಲಿ ಅಮೋಘ ನಿರ್ವಹಣೆ ನೀಡುತ್ತಿರುವ ಭಾರತವು ಏಕದಿನ ಸರಣಿಯ ದ್ವಿತೀಯ ಪಂದ್ಯದಲ್ಲಿ ಗುರುವಾರ ಶ್ರೀಲಂಕಾವನ್ನು ಎದುರಿಸಲಿದ್ದು ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಶ್ರೀಲಂಕಾಕ್ಕೆ ಮತ್ತೆ ಪ್ರಬಲ ಹೊಡೆತ ನೀಡಲು ಭಾರತ ಯೋಚಿಸುತ್ತಿದೆ. ಉತ್ತಮ ಫಾರ್ಮ್ ಮತ್ತು ಬಹಳಷ್ಟು ಆತ್ಮ ವಿಶ್ವಾಸದಲ್ಲಿರುವ ಭಾರತವೂ ಏಕದಿನ ಸರಣಿಯಲ್ಲೂ ಸೋಲದಿರಲು ನಿಶ್ಚಯಿಸಿದೆ.

Advertisement

ಟೆಸ್ಟ್‌ ಸರಣಿಯಲ್ಲಿ 3-0 ಅಂತರದಿಂದ ಕ್ಲೀನ್‌ಸ್ವೀಪ್‌ ಸಾಧನೆಗೈದ ಭಾರತ ಏಕದಿನ ಸರಣಿಯ ಮೊದಲ ಪಂದ್ಯದಲ್ಲೂ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಭರ್ಜರಿ ಆಟ ವಾಡಿ 9 ವಿಕೆಟ್‌ಗಳಿಂದ ಶ್ರೀಲಂಕಾವನ್ನು ಮಣಿ ಸಿದೆ. ಆತಿಥೇಯ ತಂಡದ ಹೀನಾಯ ನಿರ್ವಹಣೆ ಯಿಂದ ಬೇಸತ್ತ ಅಭಿಮಾನಿಗಳು ತಂಡದ ಸದಸ್ಯರು ಪ್ರಯಾಣಿಸುತ್ತಿದ್ದ ಬಸ್‌ ಅನ್ನು ತಡೆದು ಕಳಪೆ ನಿರ್ವಹಣೆಗೆ ಕಾರಣ ನೀಡಿ ಎಂದು ಪ್ರತಿ ಭಟಿಸಿದ್ದರು. ತಂಡದ ಸದಸ್ಯರ ನಡುವೆ ಎಲ್ಲವೂ ಸರಿಯಾಗಿಲ್ಲ ಮತ್ತು ತಂಡದ ವ್ಯವಸ್ಥಾಪಕ ಅಸಂಕ ಗುರುಸಿನ್ಹ ಅವರ ಮಧ್ಯಪ್ರವೇಶದಿಂದ ಸಮಸ್ಯೆ ಉಂಟಾಗಿದೆ ಎಂದು ಮುಖ್ಯ ಕೋಚ್‌ ನಿಕ್‌ ಪೋಥಾಸ್‌ ಹೇಳಿದ್ದಾರೆ.

ಮೊದಲ ಏಕದಿನ ಪಂದ್ಯದಲ್ಲಿ ಶಿಖರ್‌ ಧವನ್‌ ಲಂಕಾ ದಾಳಿಯನ್ನು ಧ್ವಂಸಗೈದು ಅಜೇಯ 132 ರನ್‌ ಸಿಡಿಸಿದ್ದರು. ಅವರಿಗೆ ಉತ್ತಮ ಬೆಂಬಲ ನೀಡಿದ ನಾಯಕ ವಿರಾಟ್‌ ಕೊಹ್ಲಿ ಅಜೇಯ 82 ರನ್‌ ಗಳಿಸಿದ್ದರು. ಇದರಿಂದಾಗಿ ಭಾರತ ಸುಲಭವಾಗಿ ಗೆಲುವು ಪಡೆದಿತ್ತು. ಈ ಕಾರಣದಿಂದ ಭಾರತೀಯ ಆಟವಾಡುವ ತಂಡದಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆಯಿಲ್ಲ. ಸದ್ಯ ಒಂದೇ ಪಂದ್ಯ ಮುಗಿದ ಕಾರಣ ಗೆಲುವಿನ ತಂಡವನ್ನು ಉಳಿಸುವ ಸಾಧ್ಯತೆಯಿದೆ. ಯಾಕೆಂದರೆ ಸರಣಿ ಕ್ಲೀನ್‌ಸ್ವೀಪ್‌ಗೈಯುವುದು ಕೊಹ್ಲಿ ಅವರ ಗುರಿಯಾಗಿರುವ ಕಾರಣ ತಂಡದಲ್ಲಿ ಬಹಳಷ್ಟು ಬದಲಾವಣೆ ಆಗುವ ಸಾಧ್ಯತೆ ಕಡಿಮೆ.

ಶ್ರೀಲಂಕಾದ ಪಿಚ್‌ನಲ್ಲಿ ಮೂರು ಸ್ಪಿನ್ನರ್‌ಗಳನ್ನು ಆಡಿಸುವುದು ಕಷ್ಟ. ಆದರೆ ಪಲ್ಲೆಕಿಲೆ ಪಿಚ್‌ ಪರಿಪೂರ್ಣವಾಗಿ ಒಣಗಿದ್ದರೆ ಈ ಬಗ್ಗೆ ಆಲೋಚಿಸಬಹುದು. ಹಾಗಾಗಿ ಮತ್ತೆ ಕುಲದೀಪ್‌ ಯಾದವ್‌ ಸಹಿತ ಮನೀಷ್‌ ಪಾಂಡೆ, ಅಜಿಂಕ್ಯ ರಹಾನೆ ಮತ್ತು ಶಾದೂìಲ್‌ ಠಾಕುರ್‌ ತಂಡಕ್ಕೆ ಆಯ್ಕೆಯಾಗುವುದು ಅನುಮಾನವಾಗಿದೆ.

ಬ್ಯಾಟಿಂಗ್‌ನಲ್ಲಿ  ಬದಲಾವಣೆ
ಶ್ರೀಲಂಕಾದ ಬೌಲಿಂಗ್‌ ಅಷ್ಟೊಂದು ಮೊನಚಿ ಲ್ಲದ ಕಾರಣ ಬ್ಯಾಟಿಂಗ್‌ನಲ್ಲಿ ಕೆಲವೊಂದು ಬದಲಾವಣೆ ಮಾಡುವ ಸಾಧ್ಯತೆಯಿದೆ. ಕೆಎಲ್‌ ರಾಹುಲ್‌ ಮತ್ತು ಕೇದಾರ್‌ ಜಾಧವ್‌ ಅವರಿಗೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ. ಶ್ರೀಲಂಕಾ ತಂಡದ ಆಯ್ಕೆ ಪ್ರಕ್ರಿಯೆ ಕುರಿತು ಕೆಲವು ಪ್ರಶ್ನೆಗಳು ಎದ್ದಿವೆ. ಟೆಸ್ಟ್‌ ನಾಯಕ ಮತ್ತು ಶ್ರೀಲಂಕಾದ ಅತ್ಯಂತ ಆಕ್ರಮಣಕಾರಿ ಆಟಗಾರರಲ್ಲಿ ಒಬ್ಬರಾಗಿರುವ ದಿನೇಶ್‌ ಚಂಡಿ ಮಾಲ್‌ ಅವರನ್ನು ಆಟವಾಡುವ ತಂಡದಿಂದ ಕೈಬಿಡಲಾಗಿದೆ. ಹೆಚ್ಚಾಗಿ ಆರಂಭಿಕರಾಗಿ ಬ್ಯಾಟಿಂಗ್‌ ನಡೆಸುತ್ತಿದ್ದ ಏಕದಿನ ನಾಯಕ ಉಪುಲ್‌ ತರಂಗ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಇದರಿಂದ ಶ್ರೀಲಂಕಾದ ಡ್ರೆಸ್ಸಿಂಗ್‌ ರೂಂನಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳುವುದು ಕಷ್ಟವಾಗಿದೆ.

Advertisement

ಸದ್ಯದ ಸ್ಥಿತಿಯನ್ನು ಗಮನಿಸಿದರೆ ಟೆಸ್ಟ್‌ ಸರಣಿಯಂತೆ ಐದು ಪಂದ್ಯಗಳ ಏಕದಿನ ಸರಣಿ ಕೂಡ ಏಕಮುಖವಾಗಿ ಸಾಗುವ ನಿರೀಕ್ಷೆಯಿದೆ. ನಂಬರ್‌ ವನ್‌ ಮತ್ತು 7ನೇ ರ್‍ಯಾಂಕಿನ ಶ್ರೀಲಂಕಾ ನಡುವೆ ಟೆಸ್ಟ್‌ ಸರಣಿ ನಡೆದಿದ್ದು ಭಾರತವೇ ಪ್ರಾಬಲ್ಯ ಸ್ಥಾಪಿಸಿತ್ತು. ಏಕದಿನ ಸರಣಿಯಲ್ಲಿ ಭಾರತ ಮೂರನೇ ರ್‍ಯಾಂಕ್‌ನಲ್ಲಿದ್ದರೆ ಶ್ರೀಲಂಕಾ 8ನೇ ರ್‍ಯಾಂಕ್‌ ಹೊಂದಿದೆ. ಇದನ್ನು ನೋಡಿದರೆ ಏಕದಿನ ಸರಣಿ ಏಕಮುಖವಾಗಿ ಸಾಗಬಹುದು. ಮೊದಲ ಏಕದಿನ ಪಂದ್ಯದಲ್ಲಿ ಭಾರತ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಭರ್ಜರಿಯಾಗಿ ಆಡಿರುವುದು ಈ ಮಾತಿಗೆ ಇನ್ನಷ್ಟು ಬಲ ನೀಡಿದೆ.

ಎರಡು ಗೆಲುವು ಅಗತ್ಯ 
ಸೆ. 30ರ ಮೊದಲು 2019ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಗಳಿಸಲು ಏಕದಿನ ರ್‍ಯಾಂಕಿಂಗ್‌ನಲ್ಲಿ ವೆಸ್ಟ್‌ಇಂಡೀಸ್‌ ತಂಡವನ್ನು ಹಿಂದಿಕ್ಕಲು ಶ್ರೀಲಂಕಾ ತಂಡ ಭಾರತ ವಿರುದ್ಧದ ಈ ಸರಣಿಯಲ್ಲಿ ಕಡಿಮೆಪಕ್ಷ ಎರಡು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಆತಿಥೇಯ ತಂಡ ಬ್ಯಾಟಿಂಗ್‌ನಲ್ಲಿ ಸ್ಥಿರ ನಿರ್ವಹಣೆ ಮತ್ತು ಜವಾಬ್ದಾರಿಯಿಂದ ಆಡಬೇಕಾಗಿದೆ. 

ಅಗ್ರ ಕ್ರಮಾಂಕದ ಆಟಗಾರರು ಭಾರತೀಯ ದಾಳಿಯನ್ನು ದಿಟ್ಟವಾಗಿ ಎದುರಿಸಿ ಒತ್ತಡ ಹೇರಿದ್ದರು. ಮೊದಲ 28 ಓವರ್‌ ಮುಗಿದಾಗ ಶ್ರೀಲಂಕಾ 3 ವಿಕೆಟಿಗೆ 150 ರನ್‌ ಪೇರಿಸಿತ್ತು. ದನುಷ್ಕ ಗುಣತಿಲಕ, ನಿರೋಷನ್‌ ಡಿಕ್ವೆಲ್ಲ ಮತು ಕುಸಲ್‌ ಮೆಂಡಿಸ್‌ ಉತ್ತಮವಾಗಿ ಆಡಿದ್ದರು.  ಆದರೆ ಸ್ಪಿನ್‌ ದಾಳಿ ಆರಂಭವಾದ ಬಳಿಕ ಶ್ರೀಲಂಕಾ ನಾಟಕೀಯ ಕುಸಿತ ಕಂಡಿತು. 

ಸಂಭಾವ್ಯ ಉಭಯ ತಂಡಗಳು
ಭಾರತ 

ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮ, ಕೆಎಲ್‌ ರಾಹುಲ್‌, ಮನೀಷ್‌ ಪಾಂಡೆ, ಅಜಿಂಕ್ಯ ರಹಾನೆ, ಕೇದಾರ್‌ ಜಾಧವ್‌, ಎಂಎಸ್‌ ಧೋನಿ, ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಯುಜ್ವೇಂದ್ರ ಚಾಹಲ್‌, ಜಸ್‌ಪ್ರೀತ್‌ ಬುಮ್ರಾ. ಭುವನೇಶ್ವರ್‌ ಕುಮಾರ್‌, ಶಾದೂìಲ್‌ ಠಾಕುರ್‌.

ಶ್ರೀಲಂಕಾ 
ಉಪುಲ್‌ ತರಂಗ (ನಾಯಕ), ಏಂಜೆಲೊ ಮ್ಯಾಥ್ಯೂಸ್‌, ನಿರೋಷನ್‌ ಡಿಕ್ವೆಲ್ಲ, ದನುಷ್ಕ ಗುಣತಿಲಕ, ಕುಸಲ್‌ ಮೆಂಡಿಸ್‌, ಚಮರ ಕಪುಗೆಡರ, ಮಲಿಂದ ಸಿರಿವರ್ಧನ, ಮಲಿಂದ ಪುಷ್ಪಕುಮಾರ, ಅಖೀಲ ಧನಂಜಯ, ಲಕ್ಷಣ್‌ ಸಂದಕನ್‌, ತಿಸರ ಪೆರೆರ, ವನಿಂದು ಹಸರಂಗ, ಲಸಿತ ಮಾಲಿಂಗ, ದುಷ್ಮಂತ ಚಮೀರ, ವಿಶ್ವ ಫೆರ್ನಾಂಡೊ.

ಪಂದ್ಯ ಆರಂಭ: ಮಧ್ಯಾಹ್ನ 2.30 n ನೇರ ಪ್ರಸಾರ: ಸೋನಿ ಸಿಕ್ಸ್‌

Advertisement

Udayavani is now on Telegram. Click here to join our channel and stay updated with the latest news.

Next