Advertisement

ಬಿಎಂಟಿಸಿ ಬಸ್‌ಗಳಲ್ಲಿ ಹೆಚ್ಚಿದ ಕಳ್ಳರ ಹಾವಳಿ

12:25 PM Dec 19, 2018 | |

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳಲ್ಲಿ ಈಚೆಗೆ ಕಳ್ಳರ ಹಾವಳಿ ಹೆಚ್ಚಿದ್ದು, ಇದು ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ತಲೆನೋವಾಗಿ ಪರಿಣಮಿಸಿದೆ. 

Advertisement

“ಪೀಕ್‌ ಅವರ್‌’ನಲ್ಲಿ ಸಾಮಾನ್ಯರಂತೆ ಬಸ್‌ಗಳನ್ನು ಏರುವ ಕಿಡಿಗೇಡಿಗಳು, ಒಂದೆರಡು ತಂಗುದಾಣಗಳನ್ನು ದಾಟುತ್ತಿದ್ದಂತೆ ನಿಧಾನವಾಗಿ ತಮ್ಮ ಕೈಚಳಕ ತೋರಿಸಿ ಕಣ್ಮರೆಯಾಗುತ್ತಾರೆ. ಪ್ರತಿದಿನ ಒಂದಿಲ್ಲೊಂದು ಘಟನೆಗಳು ವರದಿಯಾಗುತ್ತಿವೆ. ಆದರೆ, ಇದರಲ್ಲಿ ಕೆಲವು ಮಾತ್ರ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತುತ್ತವೆ. ಉಳಿದವು ಸ್ಥಳೀಯವಾಗಿ ಬೆಳಕಿಗೆ ಬಂದು ಮರೆಯಾಗುತ್ತವೆ.

ದಿನದ ಪಾಸು ತೆಗೆದುಕೊಂಡು ತುಂಬಿತುಳುಕುವ ಬಸ್‌ ಏರುವ ಜೇಬುಗಳ್ಳರ ತಂಡ, ಪ್ರಯಾಣಿಕರು ಒಳಗಡೆ ಕಂಬಿ ಹಿಡಿದು ನಿಂತಿರುವುದನ್ನು ಗಮನಿಸಿ, ಅವರೊಂದಿಗೆ ನಿಲ್ಲುತ್ತಾರೆ. ಗದ್ದಲದಲ್ಲಿ ಮೈಮೇಲೆ ಬಿದ್ದಂತೆ ನಟಿಸಿ ಮೊಬೈಲ್‌, ವ್ಯಾಲೆಟ್‌ಗಳನ್ನು ಎಗರಿಸುತ್ತಾರೆ.

ಹಾಗೊಂದು ವೇಳೆ ಸಿಕ್ಕಿಬಿದ್ದರೆ, ಆ ತಂಡದ ಉಳಿದ ಸದಸ್ಯರೇ ಕದ್ದವನಿಗೆ ನಾಲ್ಕು ಏಟು ಹಾಕಿದಂತೆ ನಟಿಸಿ ಪೊಲೀಸ್‌ ಠಾಣೆಗೆ ಕರೆದೊಯ್ಯುವುದಾಗಿ ಇಳಿದುಬಿಡುತ್ತಾರೆ. ಕೇವಲ ಒಂದು ವಾರದಲ್ಲಿ ಇಂತಹ ಹಲವು ಘಟನೆಗಳು ವರದಿಯಾಗಿವೆ ಎನ್ನಲಾಗಿದೆ.

ವಸಂತನಗರ-ಟಿವಿ ಟವರ್‌, ಮೆಜೆಸ್ಟಿಕ್‌-ನೆಲಮಂಗಲ, ಯಲಹಂಕ ಮಾರ್ಗ, 8ನೇ ಮೈಲಿ-ದಾಸರಹಳ್ಳಿ- ಜಾಲಹಳ್ಳಿ ಕ್ರಾಸ್‌- ಆರ್‌ಎಂಸಿ-ಯಶವಂತಪುರ, ಕಾರ್ಪೊರೇಷನ್‌- ನಿಮ್ಹಾನ್ಸ್‌-ಕೋರಮಂಗಲ ಮಾರ್ಗಗಳ ಬಸ್‌ಗಳಲ್ಲಿ ಹೆಚ್ಚಾಗಿ ಈ ಘಟನೆಗಳು ನಡೆಯುತ್ತಿವೆ. ಸಾಮಾನ್ಯವಾಗಿ ಒಂದೇ ರೀತಿಯ ಬ್ಯಾಗ್‌ಗಳನ್ನು ಹಾಕಿಕೊಂಡಿರುವ ಈ ಜೇಬುಗಳ್ಳರ ತಂಡ, ಒಂದೇ ಕಡೆಗೆ ಇಳಿಯುತ್ತಾರೆ.

Advertisement

ಮೊಬೈಲ್‌, ವ್ಯಾಲೆಟ್‌ ಮತ್ತಿತರ ವಸ್ತುಗಳನ್ನು ಎಗರಿಸಿದವನನ್ನು ಮೊದಲು ಕೆಳಗಡೆ ಇಳಿಸುತ್ತಾರೆ. ಕಳ್ಳತನ ಮಾಡಿದವನನ್ನು ಈ ತಂಡ ಮೊದಲು ನಿಧಾನವಾಗಿ ಯಾವುದಾದರೂ ಸ್ಟಾಪ್‌ನಲ್ಲಿ ಇಳಿಸಿಬಿಡುತ್ತಾರೆ. ನಂತರ ಸಂತ್ರಸ್ತನನ್ನು ಸ್ವತಃ ಈ ತಂಡ ಸದಸ್ಯರೇ ಸಂತೈಸುತ್ತಾರೆ.

ಬಸ್‌ ಏರಿದ ತಕ್ಷಣ ಹರಿದು ಹಂಚಿಹೋಗುತ್ತಾರೆ. ಒಂದಿಬ್ಬರು ಪ್ರವೇಶ ದ್ವಾರಗಳಲ್ಲಿ ನಿಂತು “ರೈಟ್‌’ ಅಥವಾ “ಸ್ಟಾಪ್‌’ ಹೇಳುತ್ತಾರೆ. ಜೇಬಿಗೆ ಕತ್ತರಿ ಹಾಕುವುದಿಲ್ಲ. ಅಕ್ಕಪಕ್ಕದ ಪ್ರಯಾಣಿಕರ ಚಲನವಲನ ವೀಕ್ಷಿಸುತ್ತಾರೆ. ತಮ್ಮ ಮೇಲೆಯೇ ಕಣ್ಣಿಟ್ಟಿದ್ದರೆ, ತಮ್ಮ ತಂಡಕ್ಕೆ ಕಣ್ಣಿನಲ್ಲೇ ಸಿಗ್ನಲ್‌ ಕೊಡ್ತಾರೆ. ಬಸ್‌ ಬಂದು ನಿಲ್ಲುತ್ತಿದ್ದಂತೆ ಪ್ರಯಾಣಿಕರು ಮುಗಿಬೀಳುತ್ತಾರೆ.

ಈ ವೇಳೆ ಜೇಬುಗಳ್ಳರು ತಮ್ಮ ಕೈಚಳಕ ತೋರಿಸುವುದು ಹೆಚ್ಚು ಎಂದು ಪ್ರತ್ಯಕ್ಷದರ್ಶಿ ಹಾಗೂ ಕೆ.ಆರ್‌. ಮಾರುಕಟ್ಟೆ ವ್ಯಾಪಾರಿ ಸಂತೋಷ್‌ ತಿಳಿಸುತ್ತಾರೆ. ಕಳ್ಳತನ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಹೊರವರ್ತುಲ ರಸ್ತೆಗಳ ಮಾರ್ಗದುದ್ದಕ್ಕೂ ಬರುವ ಪೊಲೀಸ್‌ ಠಾಣೆಗಳಿಗೆ ನಿಗಮದಿಂದ ಪತ್ರ ಬರೆದು, ಸೂಕ್ತ ಕ್ರಮಕ್ಕೆ ಮನವಿ ಮಾಡಲಾಗಿದೆ. ಪೊಲೀಸರಿಂದ ಪೂರಕವಾಗಿ ಸ್ಪಂದಿಸುವುದಾಗಿ ಲಿಖೀತ ಉತ್ತರವೂ ಬಂದಿದೆ.

ಅಷ್ಟೇ ಅಲ್ಲ, ಬಿಎಂಟಿಸಿ ಅಧಿಕಾರಿಗಳು ಕೂಡ ಹೆಚ್ಚು ದೂರುಗಳು ಕೇಳಿ ಬಂದ ಬಸ್‌ಗಳಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಪ್ರಯಾಣಿಸುತ್ತಿದ್ದಾರೆ. ಹಾಗಾಗಿ, ಈ ಕಳ್ಳರ ಹಾವಳಿಗೆ ಶೀಘ್ರದಲ್ಲೇ ಕಡಿವಾಣ ಬೀಳಲಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಬಸ್‌ಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಕೂಡ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಾರೆ. ಈ ಬಗ್ಗೆಯೂ ದೂರುಗಳು ಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಎಂಟಿಸಿಯ ಎಲ್ಲ ಘಟಕಗಳ ವ್ಯವಸ್ಥಾಪಕರಿಗೂ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

450ಕ್ಕೂ ಅಧಿಕ ದೂರುಗಳು: ಜನವರಿಯಿಂದ ಡಿಸೆಂಬರ್‌ವರೆಗೆ ಬಿಎಂಟಿಸಿ ನಿಯಂತ್ರಣ ಕೊಠಡಿಗೇ 450ಕ್ಕೂ ಅಧಿಕ ದೂರುಗಳು ಬಂದಿವೆ. ಇವರೆಲ್ಲರೂ ಬ್ಯಾಗ್‌, ಪವರ್‌ಬ್ಯಾಂಕ್‌, ಮೊಬೈಲ್‌, ವ್ಯಾಲೆಟ್‌ ಸೇರಿದಂತೆ ಒಂದಿಲ್ಲೊಂದು ವಸ್ತುಗಳನ್ನು ಕಳೆದುಕೊಂಡವರು.

ಆದರೆ, ಕಳ್ಳತನ ಆಗಿದೆ ಎಂದು ಹೇಳಿಕೊಂಡಿಲ್ಲ. ಹಾಗಾಗಿ, ಕೆಲವರು ಬಸ್‌ ಇಳಿಯುವಾಗ ಮರೆತು ಹೋಗಿರುವ ಸಾಧ್ಯತೆಗಳೂ ಇವೆ. 50ಕ್ಕೂ ಹೆಚ್ಚು ವಸ್ತುಗಳನ್ನು ಹಿಂತಿರುಗಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next