Advertisement

ಹೆಚ್ಚಿದೆ ಚಳಿ, ಇರಲಿ ಆರೋಗ್ಯ ಕಳಕಳಿ

10:57 AM Dec 09, 2019 | Suhan S |

ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಕಾವು ಜೋರಿದೆ. ಆದರೆ, ಉದ್ಯಾನ ನಗರಿಯ ವಾತಾವರಣಇದಕ್ಕೆ ಭಿನ್ನವಾಗಿದ್ದು, ಸ್ಪಲ್ಪ ಯಾಮಾರಿದರು ಆಸ್ಪತ್ರೆ ಮೆಟ್ಟಿಲೇರಬಹುದು ಎಚ್ಚರ..!

Advertisement

ಡಿಸೆಂಬರ್‌ ಆರಂಭದಿಂದಲೇ ರಾಜ್ಯದಲ್ಲಿ ಚಳಿಗಾಲವೂ ಆರಂಭವಾಗಿದೆ. ಕಳೆದ ಕೆಲ ದಿನಗಳಿಂದ ಉದ್ಯಾನ ನಗರಿಯಲ್ಲಿ ಚಳಿ ತೀವ್ರವಾಗುತ್ತಿದ್ದು, ಶೀತಗಾಳಿ ಮೈ ಕೊರೆಯುತ್ತಿದೆ. ಕಳೆದ ಒಂದು ವಾರದಲ್ಲಿ ಗರಿಷ್ಠ ತಾಪಮಾನ ಶನಿವಾರ 24.9 ಡಿಗ್ರಿ, ಭಾನುವಾರ ಈ ಬಾರಿಯ ಕನಿಷ್ಠ ತಾಪಮಾನ 17.8 ಡಿಗ್ರಿ ದಾಖಲಾಗಿದೆ. ಹಗಲಿನಲ್ಲಿ ಕೂಡ ಮೋಡ ಮುಚ್ಚಿದ ವಾತಾವರಣ ಇದ್ದು, ನಾಲೈದು ದಿನಗಳಿಂದ ಬಿಸಿಲು ಸಹ ಮರೆಯಾಗಿದೆ. ಇನ್ನು ಸಂಜೆಯಾಗುತ್ತಿದ್ದಂತೆ ಶೀತಗಾಳಿ ಆರಂಭವಾಗುತ್ತದೆ. ಈ ಹವಾಮಾನ ಬದಲಾವಣೆಯಿಂದ ನಗರದಲ್ಲಿ ವೈರಾಣು ಸೋಂಕು ಉಲ್ಬಣಗೊಂಡಿದೆ. ಜತೆಗೆ ಹೃದ್ರೋಗ, ಶ್ವಾಸಕೋಶ ಸಂಬಂಧಿ ಸೋಂಕುಗಳು ಕಾಣಿಸಿಕೊಳ್ಳತೊಡಗಿವೆ. ಹೀಗಾಗಿ, ಚಳಿಗಾಲಕ್ಕೆ ತಕ್ಕಂತೆ ಜೀವನಶೈಲಿ ಬದಲಾವಣೆ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಖಂಡಿತಾ ಆಸ್ಪತ್ರೆ ಹಾದಿ ಹಿಡಿಯಬೇಕಾಗುತ್ತದೆ.

ಬೇಸಿಗೆ ಹಾಗೂ ಮಳೆಗಾಲಕ್ಕೆ ಹೋಲಿಕೆ ಮಾಡಿದರೆ ವೈರಾಣುಗಳು ಚಳಿಗಾಲದಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಈ ವೈರಾಣುಗಳಿಂದ ಕಾಣಿಸಿಕೊಳ್ಳುವ ಇನ್‌ಫ್ಲೊಯೆಂಜಾ ವ್ಯಾಪಕವಾಗಿ ಹರಡಿ, ಜ್ವರ, ನೆಗಡಿ, ಕೆಮ್ಮಿನಂತಹ ಸಮಸ್ಯೆಗಳು, ಶ್ವಾಸಕೋಶ ಸೋಂಕು, ತೀವ್ರ ಗಂಟಲಿನ ಸೋಂಕು ಕಾಣಿಸಿಕೊಳ್ಳುತ್ತಿವೆ. ಪ್ರಮುಖವಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಿರುವ ಮಕ್ಕಳು ಹಾಗೂ ವೃದ್ಧರು ಬಹುಬೇಗ ಈ ವೈರಾಣು ಸೋಂಕಿಗೆ ಒಳಗಾಗುತ್ತಿದ್ದಾರೆ. ಇದರಿಂದ ನಗರದ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ ಹಾಗೂ ಬಡಾವಣೆಗಳಲ್ಲಿನ ಕ್ಲಿನಿಕ್‌, ನರ್ಸಿಂಗ್‌ ಹೋಮ್‌ಗಳ ಮುಂದೆ ಚಿಕಿತ್ಸೆ ಪಡೆಯಲು ರೋಗಿಗಳು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿರುತ್ತವೆ.

ನಗರದ ಬೌರಿಂಗ್‌, ವಿಕ್ಟೋರಿಯಾ ಹಾಗೂ ಕೆಸಿ ಜನರಲ್‌ ಆಸ್ಪತ್ರೆಗಳಲ್ಲಿ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಕಳೆದ ಒಂದು ವಾರದಿಂದ ವೈರಾಣು ಸೋಂಕಿಗೆ ಚಿಕಿತ್ಸೆ ಪಡೆದವರ ಸಂಖ್ಯೆ ಶೇ.10ರಷ್ಟು ಹೆಚ್ಚಾಗಿದ್ದು, ಖಾಸಗಿ ಕ್ಲಿನಿಕ್‌, ನರ್ಸಿಂಗ್‌ ಹೋಮ್‌ ಗಳಲ್ಲೂ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಸಂಖ್ಯೆ ಶೇ.50 ರಷ್ಟು ಹೆಚ್ಚಾಗಿದೆ.

ಹೃದ್ರೋಗಿಗಳು ಎಚ್ಚರ ವಹಿಸಿ: ಚಳಿಗಾಲದ ರಾತ್ರಿ ಗಳಲ್ಲಿ ತಾಪಮಾನ ಸಾಕಷ್ಟು ಕಡಿಮೆ ಇರುವುದರಿಂದರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ರಕ್ತದೊತ್ತಡ ಹಾಗೂ ಪೊ›ಟೀನ್‌ ಪ್ರಮಾಣ ಹೆಚ್ಚಾಗಿ ರಕ್ತ ಹೆಪ್ಪುಗಟ್ಟಬಹುದು. ಇದರಿಂದ ರಕ್ತ ಸಂಚಾರಕ್ಕೆ ತೊಂದರೆಯಾಗಿ ಹೃದಯಕ್ಕೆ ಸಾಕಷ್ಟು ಆಮ್ಲಜನಕ ದೊರೆಯದೇ ಹೃದಯಾಘಾತವಾಗುವ ಸಾಧ್ಯತೆ ಅಧಿಕವಾಗಿರುತ್ತದೆ ಎನ್ನುತ್ತಾರೆ ಹೃದ್ರೋಗ ತಜ್ಞರು. ಹೀಗಾಗಿ, ಹೃದಯಸಂಬಂಧಿ ಕಾಯಿಲೆಯುಳ್ಳವರು ಉಸಿರಾಟ ಸಮಸ್ಯೆ, ಎದೆಯುರಿ, ಬೆವರುವಿಕೆ ಕಂಡಾಗ ಎಚ್ಚರ ವಹಿಸಬೇಕು. ಇನ್ನು ಅಸ್ತಮಾ, ಮಧುಮೇಹ, ಉಸಿರಾಟ ಮತ್ತಿತರ ಸಮಸ್ಯೆ ಇರುವವರೂ ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ ವೈದ್ಯರು.

Advertisement

ಕಾಡಲಿದೆ ಅಸ್ತಮಾ, ಒಣ ಚರ್ಮ: ಚಳಿಗಾಲದಲ್ಲಿ ಧೂಳು ಮಂಜಿನೊಂದಿಗೆ ಸೇರುವುದರಿಂದ, ಮಂಜು ಮಿಶ್ರಿತ ಗಾಳಿ ಸೇವನೆ ಅಸ್ತಮಾ ತರುವಂತಹ ಅಪಾಯವಿರುತ್ತದೆ. ಉಷ್ಣಾಂಶ ಕೊರತೆಯಿಂದ ರಕ್ತ ಚಲನೆ ಕುಗ್ಗಿ ಶೀತ ಗಾಳಿಗೆ ಚರ್ಮ ಒಣಗುತ್ತದೆ. ಜತೆಗೆ ದೇಹದ ಸೂಕ್ಷ್ಮಭಾಗಗಳಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಚರ್ಮದ ಮೇಲ್ಪದರದಲ್ಲಿ ನೀರಿನಾಂಶ ಕಡಿಮೆಯಾದಂತೆ ಚರ್ಮ ಒಣಗುತ್ತದೆ. ಚರ್ಮದಲ್ಲಿ ನಿರ್ಜಲೀಕರಣವಾದಂತೆ ಚರ್ಮದ ಕೋಶಗಳು ಸಾಯಲಾರಂಭಿಸುತ್ತವೆ. ಪರಿಣಾಮ ಚರ್ಮ ಸಂಕುಚಿತಗೊಂಡು ಒಡೆಯಲು ಆರಂಭಿಸುತ್ತದೆ. ಇದು ಚರ್ಮದ ಸೋಂಕಿಗೂ ಕಾರಣವಾಗುತ್ತದೆ.

 

-ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next