Advertisement

Bengaluru: ಕೆಲಸ ಬಿಟ್ಟಿದ್ದಕ್ಕೆ ಯುವಕನ ಬೆತ್ತಲೆಗೊಳಿಸಿದ ಮಾಲೀಕ!

01:35 PM Aug 15, 2024 | Team Udayavani |

ಬೆಂಗಳೂರು: ಕೆಲಸ ಬಿಟ್ಟು ಬೇರೆಡೆ ಕೆಲಸಕ್ಕೆ ಸೇರಿಕೊಂಡ ದೂರದ ಸಂಬಂಧಿ ಮೇಲೆ ಹಲ್ಲೆ ನಡೆಸಿ, ಆತನನ್ನು ನಗ್ನಗೊಳಿಸಿ ವಿಡಿಯೋ ಮಾಡಿದ್ದಲ್ಲದೆ, ಗೃಹ ಬಂಧನದಲ್ಲಿರಿಸಿದ ಆರೋಪದಡಿ ಹಾಸಿಗೆ ಮಳಿಗೆ ಮಾಲಿಕನಿಗೆ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗಲು ನೋಟಿಸ್‌ ನೀಡಿದ್ದಾರೆ.

Advertisement

ಆಂಧ್ರಪ್ರದೇಶದ ಮೂಲದ ಷರೀಫ್(22) ಹಲ್ಲೆಗೊಳಗಾದ ಯುವಕ. ಈ ಸಂಬಂಧ ಆತನ ದೂರದ ಸಂಬಂಧಿ ಹಾಗೂ ಹಾಸಿಗೆ ತಯಾರಿಕಾ ಮಳಿಗೆ ಮಾಲಿಕ ಶಕ್ಷಾವಲಿಗೆ ನೋಟಿಸ್‌ ನೀಡಲಾಗಿದೆ. ಆರೋಪಿ ಶಕ್ಷಾವಲಿ ಸುಬ್ರಮಣ್ಯಪುರದ ಉತ್ತರಹಳ್ಳಿಯಲ್ಲಿ ಹಾಸಿಗೆ ತಯಾರಿಕಾ ಮಳಿಗೆ ನಡೆಸುತ್ತಿದ್ದು, ಅದರಲ್ಲಿ 3 ತಿಂಗಳಿಂದ ಷರೀಫ್ ಕೆಲಸ ಮಾಡಿಕೊಂಡಿದ್ದ. ಈ ಮಧ್ಯೆ 1 ತಿಂಗಳ ಹಿಂದೆ ಷರೀಫ್, ಏಕಾಏಕಿ ಕೆಲಸ ಬಿಟ್ಟು ಬೇರೆಡೆ ಕೆಲಸಕ್ಕೆ ಸೇರಿಕೊಂಡಿದ್ದ. ಅದರಿಂದ ಕೋಪಗೊಂಡಿದ್ದ ಶಕ್ಷಾವಲಿ, ಷರೀಫ್ಗೆ ಕರೆ ಮಾಡಿ ನಿಂದಿಸಿದ್ದಾನೆ. ಅದರಿಂದ ಆಕ್ರೋಶಗೊಂಡ ಷರೀಫ್, ಶಕ್ಷಾವಲಿ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಈ ಹಿನ್ನೆಲೆಯಲ್ಲಿ ಕೋಪಗೊಂಡ ಆರೋಪಿ, ಜುಲೈ 24ರಂದು, ಷರೀಫ್ ಕೆಲಸ ಮಾಡುತ್ತಿದ್ದ ಮಳಿಗೆಗೆ ಹೋಗಿ, ಆತನ ಮೇಲೆ ಹಲ್ಲೆ ನಡೆಸಿ ತನ್ನ ಮನೆಗೆ ಕರೆ ತಂದಿದ್ದಾನೆ. ಬಳಿಕ ಷರೀಫ್ನನ್ನು ನಗ್ನಗೊಳಿಸಿ ಹಲ್ಲೆ ನಡೆಸಿ, ವಿಡಿಯೋ ಮಾಡಿಕೊಂಡಿದ್ದ. ಅಲ್ಲದೆ, 1 ದಿನ ಗೃಹ ಬಂಧನದಲ್ಲಿರಿಸಿ ಕಳುಹಿಸಿದ್ದ ಎಂದು ಪೊಲೀಸರು ಹೇಳಿದರು.

ನಗ್ನ ವಿಡಿಯೋ ವೈರಲ್‌: ಜುಲೈ 27ರಂದು ಶಕ್ಷಾವಲಿ, ಷರೀಫ್ ವಿರುದ್ಧ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಡಿ ದೂರು ನೀಡಿದ್ದ. ಹೀಗಾಗಿ ಪೊಲೀಸರು ಷರೀಫ್ನನ್ನು ಕರೆದು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆದರೆ, ಆ.6ರಂದು ನಗ್ನ ವಿಡಿಯೋ ವೈರಲ್‌ ಆಗಿತ್ತು. ಈ ಸಂಬಂಧ ಪೊಲೀಸರು ಷರೀಫ್ನನ್ನು ಸಂಪರ್ಕಿಸಿ ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಘಟನೆ ವಿವರಿಸಿದ್ದಾನೆ. ಈ ಬೆನ್ನಲ್ಲೇ ಷರೀಫ್ನಿಂದ ದೂರು ಸ್ವೀಕರಿಸಿ, ಎಫ್ಐಆರ್‌ ದಾಖಲಿಸಿಕೊಂಡು, ಆರೋಪಿ ಶಕ್ಷಾವಲಿಗೆ ವಿಚಾರಣೆಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ಆರೋಪಿ ಹಾಗೂ ದೂರುದಾರ ಸಂಬಂಧಿಗಳಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next