Advertisement

Bangalore: ಆಂಟಿ ಎಂದ ಸೆಕ್ಯೂರಿಟಿಗೆ ಚಪ್ಪಲಿ ಏಟು!

11:31 AM Sep 24, 2023 | Team Udayavani |

ಬೆಂಗಳೂರು: ಎಟಿಎಂ ಕೇಂದ್ರಕ್ಕೆ ಹಣ ತುಂಬಿಸುವ ಸಂದರ್ಭದಲ್ಲಿ ಬಂದ ಮಹಿಳೆಗೆ “ಆಂಟಿ ಪಕ್ಕಕ್ಕೆ ಸರಿಯಿರಿ’ ಎಂದ ಭದ್ರತಾ ಸಿಬ್ಬಂದಿ ಮೇಲೆ ಮಹಿಳೆ ಚಪ್ಪಲಿಯಿಂದ ಹೊಡೆದಿರುವ ಘಟನೆ ಮಲ್ಲೇಶ್ವರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಖಾಸಗಿ ಭದ್ರತಾ ಏಜೆನ್ಸಿಯ 65 ವರ್ಷದ ಭದ್ರತಾ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಮಲ್ಲೇಶ್ವರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಸೆ.19ರಂದು ಘಟನೆ ನಡೆದಿದೆ.

ಕಳೆದ ಮಂಗಳವಾರ ಸಂಜೆ ಮಲ್ಲೇಶ್ವರದ ಗಣೇಶ ದೇವಸ್ಥಾನದ ಮುಂದಿರುವ ಖಾಸಗಿ ಬ್ಯಾಂಕ್‌ ಎಟಿಎಂಗೆ ಹಣ ತುಂಬಿಸಲು ವಾಹನ ಬಂದಿದ್ದು, ಎಟಿಎಂ ಕೇಂದ್ರದ ಡೋರ್‌ ಅನ್ನು ಅರ್ಧಕ್ಕೆ ಎಳೆದು ಸಿಬ್ಬಂದಿ ಯಂತ್ರಕ್ಕೆ ಹಣ ತುಂಬುತ್ತಿದ್ದರು. ಅದೇ ವೇಳೆ ಕೇಂದ್ರದ ಬಳಿ ಆರೋಪಿತ ಮಹಿಳೆ ಬಂದಿದ್ದಾರೆ. ಅದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್‌, “ಆಂಟಿ ಪಕ್ಕಕ್ಕೆ ಸರಿಯಿರಿ’ ಎಂದಿದ್ದಾರೆ. ಅದಕ್ಕೆ ಕೋಪಗೊಂಡ ಮಹಿಳೆ, ಸೆಕ್ಯೂರಿಟಿ ಗಾರ್ಡ್‌ಗೆ, “ನನ್ನನ್ನೇ ಆಂಟಿ ಎನ್ನುತ್ತಿಯಾ’? ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳ ಮೋಕ್ಷ ಮಾಡಿದ್ದಾರೆ. ಅಲ್ಲದೆ, ಚಪ್ಪಲಿಯಿಂದ ಕಪಾಳಕ್ಕೆ ಹೊಡೆದಿದ್ದಾರೆ.

ಬಳಿಕ ಸ್ಥಳದಲ್ಲಿದ್ದ ಸಾರ್ವಜನಿಕರು ಮಹಿಳೆಗೆ ಸಮಾಧಾನ ಪಡಿಸಿ ಕಳುಹಿಸಿದ್ದಾರೆ. ಘಟನೆಯಿಂದ ನೊಂದ ಭದ್ರತಾ ಸಿಬ್ಬಂದಿ ಮಲ್ಲೇಶ್ವರ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಮಹಿಳೆಗೆ ನೋಟಿಸ್‌ ಕೊಟ್ಟು ವಿಚಾರಣೆ ನಡೆಸುವುದಾಗಿ ಪೊಲೀಸರು ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next