Advertisement

“ಕಷ್ಟ ಬಂದಾಗ ಡಿಕೆಶಿ ಜತೆ ನಿಲ್ಲದ ಎಚ್ಡಿಕೆ’

11:01 PM Sep 16, 2019 | Team Udayavani |

ಮಂಡ್ಯ: “ಕುಮಾರಸ್ವಾಮಿ ಅವರ ಅಧಿಕಾರ ಉಳಿಸುವ ಸಲುವಾಗಿ ಡಿ.ಕೆ.ಶಿವಕುಮಾರ್‌ ಎಲ್ಲರ ವಿರೋಧ ಕಟ್ಟಿಕೊಂಡರು. ಬಿಜೆಪಿ ನಾಯಕರ ಕೆಂಗಣ್ಣಿಗೂ ಗುರಿಯಾದರು. ಆದರೆ, ಡಿ.ಕೆ.ಶಿವಕುಮಾರ್‌ಗೆ ಕಷ್ಟ ಬಂದಾಗ ಕುಮಾರಸ್ವಾಮಿ ಅವರ ಜತೆ ನಿಲ್ಲಲಿಲ್ಲ’ ಎಂದು ಮಾಜಿ ಸಚಿವ ಎನ್‌. ಚಲುವರಾಯಸ್ವಾಮಿ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಕುಮಾರಸ್ವಾಮಿ ಅವರಿಗೇ ಇಂತಹ ಕಷ್ಟ ಬಂದಿದ್ದರೆ ಶಿವಕುಮಾರ್‌ ಹಿಂದು-ಮುಂದು ನೋಡದೆ ಠಾಣೆ ಎದುರಿನಲ್ಲೇ ಧರಣಿ ಕೂರುತ್ತಿದ್ದರು ಎಂದು ಹೇಳಿದರು.

Advertisement

ಡಿ.ಕೆ.ಶಿವಕುಮಾರ್‌ ಬಂಧನವಾದಾಗ ಕುಮಾರ ಸ್ವಾಮಿ ಮಲೇಶಿಯಾದಲ್ಲಿದ್ದರು. ಆಗಲಾದರೂ ದೆಹಲಿಗೆ ಬಂದು ಡಿ.ಕೆ.ಶಿವಕುಮಾರ್‌ ಜತೆ ಮಾತ ನಾಡಬಹುದಿತ್ತು. ಮಾನಸಿಕ ಧೈರ್ಯ ತುಂಬ ಬಹುದಾಗಿತ್ತು. ಅದಾದ ಬಳಿಕ ಬೆಂಗಳೂರಿಗೆ ಬಂದರು. ಇಲ್ಲಿಯೂ ಒಕ್ಕಲಿಗ ಮುಖಂಡರು ಪ್ರತಿ ಭಟನೆ ನಡೆಸಿದರು. ಅದಕ್ಕೂ ಬೆಂಬಲ ನೀಡಲಿಲ್ಲ. ಕನಿಷ್ಠ ಪಕ್ಷ ಮಾಧ್ಯಮಗಳ ಮೂಲಕವೂ ಹೋರಾಟಕ್ಕೆ ಬೆಂಬಲವಿದೆ. ಕಾನೂನುಬಾಹಿರವಾಗಿ ಬಂಧನದಲ್ಲಿಟ್ಟು ಕಿರುಕುಳ ನೀಡುವುದು ಸರಿಯಲ್ಲ ಎಂದು ಸೌಜನ್ಯಕ್ಕೂ ಒಂದು ಮಾತು ಹೇಳಲಿಲ್ಲ ಎಂದು ಚಲುವರಾಯಸ್ವಾಮಿ ಛೇಡಿಸಿದರು.

ಇದಕ್ಕೆ ಬದಲು ಪೂರ್ವಯೋಜಿತವಾಗಿ ಕಾರ್ಯ ಕ್ರಮ ಹಾಕಿಕೊಂಡರು. ಚನ್ನಪಟ್ಟಣಕ್ಕೆ ಹೋದ ಉದ್ದೇಶವೇನು, ಜನರನ್ನು ನಿಯಂತ್ರಿಸುವುದಕ್ಕಾಗಿಯೇ ಅಲ್ಲಿಗೆ ಹೋದರಾ, ಪ್ರತಿಭಟನೆಗೆ ಏಕೆ ಬೆಂಬಲ ಕೊಡಲಿಲ್ಲ , ಮೈಸೂರು ಸಭೆಯಲ್ಲಿ ಮಾತನಾಡಿದ್ದು ಸತ್ಯವಾ ಇವೆಲ್ಲಾ ವಿಷಯಗಳು ಚರ್ಚೆಯಾಗುತ್ತಿವೆ. ಇದೆಲ್ಲಕ್ಕೂ ಕುಮಾರಸ್ವಾಮಿ ಅವರೇ ಉತ್ತರಿಸಬೇಕು ಎಂದು ಹೇಳಿದರು.

ಕುಟುಂಬದ ಹಿಡಿತದಲ್ಲೇ ಪಕ್ಷ: ಜೆಡಿಎಸ್‌ ಸಾರ್ವತ್ರಿಕ ಪಕ್ಷವಾಗಿ ಹಾಗೂ ರಾಜಕೀಯ ಪಕ್ಷವಾಗಿ ಬೆಳೆಯಲು ಅವಕಾಶವನ್ನೇ ನೀಡಲಿಲ್ಲ. ಕ್ರಮೇಣ ಕುಟುಂಬದ ಹಿಡಿತದಲ್ಲೇ ಪಕ್ಷ ಹಿಡಿದಿಟ್ಟುಕೊಂಡು ಬಂದರು. ಅದರಿಂದ ಅಲ್ಲಿ ಮುಖಂಡತ್ವ ಸಾಧಿಸಲು ಯಾರಿಂ ದಲೂ ಸಾಧ್ಯವಾಗಲೇ ಇಲ್ಲ. ಮಾಜಿ ಸಚಿವರಾಗಿ ನಾಯಕನಾಗಿ ಬೆಳವಣಿಗೆ ಕಂಡವರು ಯಾರೂ ಅಲ್ಲಿ ಉಳಿದಿಲ್ಲ. ಅದಕ್ಕೆ ಅವಕಾಶವನ್ನೇ ನೀಡಿಲ್ಲ ಎಂದು ದೂಷಿಸಿದರು.

ದೇವೇಗೌಡರಿಂದ ಅನೇಕರಿಗೆ ನೋವು: ದೇವೇಗೌಡರು ಹೇಳ್ಳೋದೆಲ್ಲ ಸುಳ್ಳು. ಅವರ ನಡವಳಿಕೆ, ನಿರ್ಧಾರಗಳಿಂದ ಅನೇಕರಿಗೆ ನೋವಾಗಿರುವುದು ಸತ್ಯ. ಜನರಿಗೆ ಮನವರಿಕೆ ಆಗುವವರೆಗೂ ಇದು ನಡೆಯುತ್ತಲೇ ಇರುತ್ತೆ. ಜನರಿಗೆ ಅರ್ಥವಾದಾಗ ಎಲ್ಲವೂ ಸರಿಹೋಗುತ್ತೆ. ಆ ದಿನ ಬೇಗ ಬರುತ್ತೆ ಎಂದು ಚಲುವರಾಯಸ್ವಾಮಿ ಹೇಳಿದರು.

Advertisement

ದರೋಡೆ ಮಾಡೋಕೆ ನಾವು ಹೇಳಿದ್ದೆವಾ?
ಮಂಡ್ಯ: “ಡಿ.ಕೆ.ಶಿವಕುಮಾರ್‌ಗೆ ದರೋಡೆ ಮಾಡೋಕೆ ನಾವು ಹೇಳಿದ್ದೆವಾ, ಇದಕ್ಕೆಲ್ಲ ನಾನು ಹೊಣೆಯೇ?’ ಎಂದು ಮೈಸೂರಿನಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರಂತೆ ಎಂದು ಮಾಜಿ ಸಚಿವ ಎನ್‌. ಚಲುವರಾಯಸ್ವಾಮಿ ಹೊಸ ಬಾಂಬ್‌ ಸಿಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, “ಕುಮಾರಸ್ವಾಮಿ ಅವರು ಈ ರೀತಿ ಮಾತನಾಡಿದ್ದಾರೋ ಇಲ್ಲವೋ ಎಂಬ ಬಗ್ಗೆ ನನಗೆ ಸತ್ಯ ಗೊತ್ತಿಲ್ಲ. ಸತ್ಯ ಗೊತ್ತಿಲ್ಲದೇ ನಾನೂ ಮಾತನಾಡುವುದು ತಪ್ಪು. ಕುಮಾರಸ್ವಾಮಿಯವರ ಹೇಳಿಕೆ ಬಗ್ಗೆ ಯಾರೋ ಆ ರೀತಿ ಹೇಳುತ್ತಿದ್ದರು’ ಎಂದು ಹೇಳುವ ಮೂಲಕ ಜಾರಿಕೊಂಡರು.

ಪಕ್ಷ ಬಿಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ
ಬೆಂಗಳೂರು: ಪಕ್ಷ ಬಿಟ್ಟು ಹೋಗುವವರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ, ಪಕ್ಷ ಹೇಗೆ ಸಂಘಟನೆ ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತಿಳಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಜಿಲ್ಲಾವಾರು ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು, ಪಕ್ಷದಿಂದ ಬೆಳೆದು ಕೆಲವರು ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ. ಕಾರ್ಯಕರ್ತರನ್ನು ನಂಬಿ ಸಂಘಟನೆ ಮಾಡಿದ್ದೇನೆ. ಯಾರೇ ಪಕ್ಷ ತೊರೆದರೂ ಎದೆಗುಂದುವುದಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಯಿದೆ.

ಜೆಡಿಎಸ್‌ ಸ್ವತಂತ್ರವಾಗಿಯೇ ಸ್ಪರ್ಧೆ ಮಾಡಲಿದೆ. ಯಾರ ಜತೆಯೂ ಮೈತ್ರಿ ಬೇಡ ಎಂದು ಹೇಳಿದರು. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಒಳ್ಳೆಯ ಕೆಲಸ ಮಾಡಿದರೂ ಕಾಂಗ್ರೆಸ್‌ನವರಿಂದಲೂ ಸಹಕಾರ ಸಿಗಲಿಲ್ಲ, ಇನ್ಮುಂದೆ ಆ ತಪ್ಪು ಮಾಡಲ್ಲ, ಎಲ್ಲ ಚುನಾವಣೆ ಸ್ವತಂತ್ರವಾಗಿ ಎದುರಿಸೋಣ. ಪಕ್ಷದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದ್ದರೂ ಬದಿಗೊತ್ತಿ ಪಕ್ಷ ಸಂಘಟನೆ ಮಾಡಿ, ನಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವಂತೆ ಮಾಡಿ ಎಂದು ತಿಳಿಸಿದರು. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಉತ್ತಮ ಕೆಲಸ ಮಾಡಿದರೂ ಹೆಸರು ಬರಲಿಲ್ಲ.

ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಲು ಕಾರ್ಯಕರ್ತರು ಹಾಗೂ ಮುಖಂಡರಿಗೆ ಸೂಚಿಸಿದರು. ಜನವರಿ ಅಥವಾ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಹೀಗಾಗಿ, ಪಕ್ಷ ಸದೃಢಗೊಳಿಸಬೇಕಾಗಿದೆ. ನಾನೂ ರಾಜ್ಯ ಪ್ರವಾಸ ಮಾಡಲಿದ್ದೇನೆ, ಎಚ್‌.ಡಿ. ಕುಮಾರಸ್ವಾಮಿಯವರೂ ಜಿಲ್ಲಾ ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದರು. ಸೋಮವಾರ ಪಕ್ಷದ ಕಚೇರಿಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಮುಖಂಡರ ಸಭೆ ನಡೆಸಿದರು. ಬುಧವಾರ ರಾಯಚೂರು, ಯಾದಗಿರಿ, ಕಲಬುರಗಿ, ಉಡುಪಿ ಜಿಲ್ಲೆಗಳ ಸಭೆ ನಿಗದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next