ಹುಮನಾಬಾದ: ಅಧಿಕಾರಿಗಳು ಸೂಕ್ತವಾಗಿ ಕರ್ತವ್ಯ ನಿರ್ವಹಿಸಿದರೆ ಹಳ್ಳಿಖೇಡ (ಬಿ) ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.
ಹಳ್ಳಿಖೇಡ(ಬಿ) ಪಟ್ಟಣದ ಪುರಸಭೆ ಆವರಣದಲ್ಲಿ ಶುಕ್ರವಾರ 35 ಲಕ್ಷ ರೂ. ಅನುದಾನದ ಹೊಸ ಜೆಸಿಬಿ ವಾಹನಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿರು.
ಪಟ್ಟಣದ ಜನರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಬೇಕು. ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿವ ನೀರು, ಘನ ತ್ಯಾಜ್ಯ ನಿರ್ವಹಣೆ, ನೈರ್ಮಲ್ಯ ನಿರ್ವಹಣೆ, ಒಳ ಚರಂಡಿ ವ್ಯವಸ್ಥೆ ಕಾಮಗಾರಿಗಳು, ಮಳೆ ನೀರು ಚರಂಡಿ, ರಸ್ತೆ ಮತ್ತು ಪಾದಚಾರಿಗಳ ಮಾರ್ಗಗಳ ನಿರ್ವಹಣೆ, ವಿದ್ಯುತ್ ದೀಪ ಅಳವಡಿಕೆ, ವಿದ್ಯುತ್ ಉಳಿತಾಯ ಕ್ರಮಗಳು ಸೇರಿದಂತೆ ಜನರ ಕಲ್ಯಾಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಪಟ್ಟಣದ ಜನರಿಗೆ ವಿವಿಧ ಮೂಲ ಸೌಕರ್ಯ ಕಲ್ಪಿಸುವ ಪ್ರಾಮಾಣಿಕ ಕಾರ್ಯ ಮಾಡಬೇಕು ಎಂದರು.
ಹೊಸ ಪುರಸಭೆಗೆ ನೂತನ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ 1.70 ಕೋಟಿ ರೂ. ಅನುದಾನ ನೀಡಲಾಗಿದ್ದು, ಕಟ್ಟಡ ಕಾಮಗಾರಿ ನಡೆದಿದೆ. ಅಲ್ಲದೇ ವಿವಿಧ ಯೋಜನೆಗಳಿಗೆ ಸೂಕ್ತ ಅನುದಾನ ಕಲ್ಪಿಸುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದು, ಅಧಿಕಾರಿಗಳು ಯೋಜನೆ ಲಾಭ ಜನರಿಗೆ ಮುಟ್ಟಿಸಬೇಕು ಎಂದರು.
ಪುರಸಭೆ ಅಧ್ಯಕ್ಷ ಮಹಾಂತಯ್ನಾ ತೀರ್ಥಾ, ಉಪಾಧ್ಯಕ್ಷ ಹುರಮತ್ ಬೇಗಂ, ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪ್ರಭಾ, ಯುಸೂಫ್ ಸೌದಾಗರ್, ಸಾಜೀದ್ ಪಟೇಲ್, ಆರೀಫ್ ಬಾವಗಿ, ನಾಗರಾಜ ಹಿಬಾರೆ, ಅಬ್ದುಲ್ ಫಯುಮ್, ವಿಜಯಕುಮಾರ ಬೆಲ್ದಾಳೆ, ಪುರಸಭೆ ಮುಖ್ಯಾಧಿಕಾರಿ ಅಶೋಕ ಚಿನಕೋಟಿ, ಹಳ್ಳಿಖೇಡ್ ಪಿಎಸೈ ಸವಿತಾ ಪ್ರೀಯಾಂಕ, ಕೇಶವರಾವ್ ಮಹಾರಾಜ, ಎಂ.ಡಿ. ಹಸನ್, ಎಂ.ಡಿ. ಗೌಶೋದ್ದಿನ್, ಗೌರೀಶ ಸಿಂದೋಲ್, ರವೀಂದ್ರಕುಮಾರ ಹಾದಿಮನಿ, ವೀರಶಟ್ಟಿ ದೊಡ್ಡಮನಿ, ಸಂದೀಪ್ ಪ್ರಭಾ, ದಯಾನಂದ ಭಂದಾರಿ, ವಿಜಯದೀಪ ಬಿರಾದಾರ, ಸಂತೋಷ ಪಾಂಚಾಳ ಇತರರಿದ್ದರು.