Advertisement

ಆದರ್ಶ ಗ್ರಾಮ ಯೋಜನೆ ಅನುಷ್ಠಾನ: ಸಂಸದರು ಹೆಚ್ಚಿನ ಆಸ್ಥೆ ವಹಿಸಲಿ

12:27 AM Oct 13, 2022 | Team Udayavani |

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರಕಾರ ತನ್ನ ಮೊದಲ ಅವಧಿಯಲ್ಲಿ ಜಾರಿಗೆ ತಂದಿದ್ದ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ದೇಶಾದ್ಯಂತ ಸಹಸ್ರಾರು ಗ್ರಾಮಗಳಲ್ಲಿ ಅಭಿವೃದ್ಧಿಯ ಆಶಾಕಿರಣ ಗೋಚರಿಸತೊಡಗಿದೆ. ಮಹಾತ್ಮಾ ಗಾಂಧಿ ಅವರ ಗ್ರಾಮಾಭಿವೃದ್ಧಿಯ ಕನಸನ್ನು ಸಾಕಾರಗೊಳಿಸುವ ದಿಸೆಯಲ್ಲಿ ಕೇಂದ್ರ ಸರಕಾರ 2014ರಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿತ್ತು. ಪ್ರತಿಯೊಬ್ಬ ಸಂಸದರ ಕ್ಷೇತ್ರದಿಂದ ಅತ್ಯಂತ ಹಿಂದುಳಿದ ಗ್ರಾಮವನ್ನು ಆಯ್ದು ಆ ಗ್ರಾಮಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಜತೆಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಈ ಯೋಜನೆಯ ಮೂಲೋದ್ದೇಶವಾಗಿದೆ.

Advertisement

2014-2019ರ ಅವಧಿಯಲ್ಲಿ ದೇಶಾದ್ಯಂತದ 1,508 ಹಳ್ಳಿಗಳನ್ನು ಸಂಸದರು ಆಯ್ಕೆ ಮಾಡಿ ಈ ಹಳ್ಳಿಗಳ ಅಭಿವೃದ್ಧಿಗೆ ಪಣತೊಟ್ಟಿದ್ದರು. ಈಗ ಎರಡನೇ ಅವಧಿಯಲ್ಲಿ ಅಂದರೆ 2019-24ರ ಅವಧಿಯಲ್ಲಿ ಎಸ್‌ಎಜಿವೈ ಅಡಿಯಲ್ಲಿ ಸಂಸದರು 1,491 ಗ್ರಾಮಗಳನ್ನು ಆಯ್ದುಕೊಂಡಿದ್ದಾರೆ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಚಾರ ಇಲಾಖೆ ತಿಳಿಸಿದೆ. ಈ ಯೋಜನೆಯಡಿ ಆಯ್ದುಕೊಳ್ಳಲಾದ ಗ್ರಾಮ ಇಲ್ಲವೇ ಹಳ್ಳಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವತಿಯಿಂದ ಜಾರಿಗೊಳಿಸಲಾಗುವ ಎಲ್ಲ ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಮೊದಲ ಆದ್ಯತೆ ನೀಡ ಲಾಗುತ್ತಿದೆ.

ಅಲ್ಲದೆ ಈ ಹಳ್ಳಿಗಳಿಗೆ ಕುಡಿಯುವ ನೀರು, ವಿದ್ಯುತ್‌ ಸಂಪರ್ಕ, ಶಾಲೆ ಸಹಿತ ಎಲ್ಲ ಮೂಲಸೌಕರ್ಯಗಳ ಒದಗಣೆ, ವಸತಿರಹಿ ತರಿಗೆ ಮನೆ, ನಿವೇಶನರಹಿತರಿಗೆ ನಿವೇಶನ, ಸಮರ್ಪಕ ಸಂಪರ್ಕ ವ್ಯವಸ್ಥೆ ಆದಿಯಾಗಿ ಎಲ್ಲ ಪ್ರಾಥಮಿಕ ಆವಶ್ಯಕತೆಗಳನ್ನು ಒದಗಿಸಲಾಗುತ್ತದೆ. ಸ್ಥಳೀಯ ನಿವಾಸಿಗಳ ಸಮಸ್ಯೆಗಳಿಗೆ ಪರಿಹಾರ, ಇಲ್ಲಿ ಜಾರಿಯಲ್ಲಿರುವ ಕೆಲವೊಂದು ಅನಿಷ್ಠ ಪದ್ಧತಿ ಮತ್ತು ಆಚರಣೆಗಳ ನಿರ್ಮೂಲನೆಗೆ ಹೆಚ್ಚಿನ ಒತ್ತು ನೀಡುವ ಹಾಗೂ ಸ್ಥಳೀಯವಾಗಿ ಸಣ್ಣ ಉದ್ಯಮಗಳನ್ನು ಸ್ಥಾಪಿಸಿ ವಿದ್ಯಾವಂತ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿ ಕೊಡುವುದೂ ಈ ಯೋಜನೆಯ ಆಶಯಗಳಲ್ಲಿ ಒಂದಾಗಿದೆ.

ಕಳೆದ ಅವಧಿಯಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಸಂಸ ದರು ಆಯ್ದುಕೊಂಡ ಗ್ರಾಮಗಳು ಸಾಕಷ್ಟು ಅಭಿವೃದ್ಧಿಯನ್ನು ಕಂಡಿವೆ ಯಾದರೂ ಯೋಜನೆ ನಿರೀಕ್ಷಿತ ಪ್ರಗತಿಯನ್ನು ಸಾಧಿಸಿಲ್ಲ ಎಂಬುದು ಮಾತ್ರ ಅಕ್ಷರಶಃ ನಿಜ. ಈ ಹಿನ್ನಡೆಗೆ ಸ್ಥಳೀಯ ಸಂಸದರ ಅನಾಸ್ಥೆಯೇ ಪ್ರಮುಖ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಜತೆಯಲ್ಲಿ ಈ ಗ್ರಾಮ ಗಳ ಪರಿಸ್ಥಿತಿ ತಿಳಿದುಕೊಳ್ಳಲು ಸರಕಾರದಿಂದ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಕೂಡ ಯೋಜನೆಯ ಹಿನ್ನಡೆಗೆ ಕಾರಣವಾಯಿತು. ಈಗ 2ನೇ ಅವಧಿಯಲ್ಲಿ ಸಂಸದರು ತಮ್ಮ ಕ್ಷೇತ್ರಗಳಲ್ಲಿ ತೀರಾ ಹಿಂದುಳಿದ ಗ್ರಾಮ ಅಥವಾ ಹಳ್ಳಿಗಳನ್ನು ಆಯ್ಕೆ ಮಾಡಿ ಅವುಗಳನ್ನು ಅಭಿ ವೃದ್ಧಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ಅನುದಾನವೂ ಬಿಡುಗಡೆಯಾಗಿದ್ದು ಕಾಮಗಾರಿಗಳು ವಿವಿಧ ಹಂತಗಳಲ್ಲಿವೆ. ಕಳೆದ ಬಾರಿ ಯೋಜನೆಯ ಅನುಷ್ಠಾನ ಮತ್ತು ಆ ಬಳಿಕ ನಿರ್ವಹಣೆಯಲ್ಲಾದ ಲೋಪದೋಷಗಳು ಈ ಬಾರಿ ಆಗದಂತೆ ಎಚ್ಚರಿಕೆಯಿಂದ ಸಂಸದರು ಕಾರ್ಯ ನಿರ್ವಹಿಸುವ ಅಗತ್ಯ ಇದೆ. ಈ ಎರಡೂ ಅವಧಿಯಲ್ಲಿ ಯೋಜನೆಯಡಿ ಕೈಗೆತ್ತಿಕೊಂಡ ಗ್ರಾಮಗಳನ್ನು ಹೆಸರಿಗೆ ತಕ್ಕಂತೆ ಆದರ್ಶ ಗ್ರಾಮವಾಗಿ ರೂಪಿಸುವ ಹೊಣೆಗಾರಿಕೆಯನ್ನು ಸಂಸದರು ಇನ್ನಷ್ಟು ಹೆಚ್ಚು ಬದ್ಧತೆಯಿಂದ ನಿಭಾ ಯಿಸಿದ್ದೇ ಆದಲ್ಲಿ ಮೋದಿ ಅವರ ಮಹತ್ವಾಕಾಂಕ್ಷೆ ಈಡೇರಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next