Advertisement
ಓ ನೆನಪೇ…ಬರೀ ಬೂದಿಯಷ್ಟೇ ಉಳಿಯುತ್ತದೇನೋ ಅನ್ನುವಷ್ಟು ರಣರಣ ಬಿಸಿಲಿನಲ್ಲಿ , ನಿರ್ಜನ ಕ್ಯಾನ್ವಾಸಿನ ಮೇಲೆ ನಿಶ್ಶಬ್ದದ ಬಣ್ಣದಲ್ಲಿ ಅದ್ದಿ ಬರೆದ, ನಿರ್ಮಾನುಷ ಚಿತ್ರದಂತೆ ಕಾಣುತ್ತಿದ್ದ ಹೆಸರೇ ಗೊತ್ತಿಲ್ಲದ ಆ ಊರಿನಲ್ಲಿ , ತುಸು ನಿಟ್ಟುಸಿರು ಬಿಡುವಂತೆ ಮಾಡಿದ್ದು, ಹಸಿರು ಮೈತುಂಬಿಕೊಂಡು ನೆರಳಿನ ಶಾಮಿಯಾನ ಹಾಕಿಕೊಂಡ ಆ ಒಬ್ಬಂಟಿ ಹೊಂಗೆ ಮರ. ಅದರ ಟಿಸಿಲೊಂದನ್ನು ಆಸರೆಯಾಗಿ ಹಿಡಿದುಕೊಂಡು, ಎತ್ತ ಹೋಗಲೂ ದಿಕ್ಕು ತೋಚದಂತೆ ನಿಂತ ಘಳಿಗೆಯಲ್ಲಿ, ಧೂಳೆಬ್ಬಿಸುತ್ತಾ ಬಂತು ಲಟಾರಿ ಬಸ್ಸು. ಸದ್ಯ, ಇಲ್ಲಿಂದ ಪಾರಾದೆ ಅಂದುಕೊಳ್ಳುತಿರುವಾಗಲೇ , ಶುಭ್ರ ಬಿಳಿ ಪಲ್ಲುವನ್ನು ತಲೆ- ಮುಖಕ್ಕೆ ಸುತ್ತಿಕೊಂಡು, ಬರೀ ಕಣ್ಣಷ್ಟೇ ಕಾಣುವ ಚಂದದ ಭಯೋತ್ಪಾದಕಿಯಂತೆ ನೀನು ಇಳಿದು ಬಂದೆ.
Related Articles
ಬೇಸಿಗೆಯ ಮಧ್ಯಾಹ್ನದ ಉರಿಬಿಸಿಲನ್ನು ಎಲ್ಲರೂ ಶಪಿಸುತ್ತಾರೆ. ಆದರೆ ನನ್ನೊಳಗೆ ಆ ಬಿಸಿಲ ಮೇಲೆ ಮಗಿಯದ ಪ್ರೀತಿಯಿದೆ. ಹೊಂಗೆಯ ನೆರಳಲ್ಲಿ ಒಲವ ಅನುಭೂತಿಯಿದೆ. ಧೂಳೆಬ್ಬಿಸುತ್ತಾ ಸಾಗುವ ಬಸ್ಸು ಮನದಲ್ಲಿ ಚಂದದ ನೆನಪುಗಳನ್ನು ಬಡಿದೆಬ್ಬಿಸುತ್ತದೆ. ಬಿಳಿಯ ಪಲ್ಲುವಿನ ಮೇಲೆ ತೀರದ ಅನುರಾಗವಿದೆ. ನಿಶ್ಶಬ್ದವೇ ಮೈವೆತ್ತ ಅನಾಮಿಕ ಊರುಗಳ ನಿರ್ಜನ ಮಧ್ಯಾಹ್ನಗಳು ವಿನಾಕಾರಣ ಇಷ್ಟವಾಗುತ್ತವೆ.
Advertisement
ಯಾವತ್ತಾದರೂ ಮತ್ತೆ ನೀ ಎದುರಾಗಿ ಬರುತ್ತೀಯೆಂಬ ದೂರದ ಆಸೆಯೊಂದು ಸದಾ ನನ್ನನ್ನು ಕೈ ಹಿಡಿದು ನಡೆಸುತ್ತಿದೆ. ಇಂಥ ಚಂದದ ಆಸೆಯ ಕೈ ಹಿಡಿದು ನಡೆಯುವುದರಲ್ಲಿ ಅದಮ್ಯ ಖುಷಿಯಿದೆ. ಮನದೊಳಗೆ ನಿನಗೊಂದು ಚಂದದ ಹೆಸರಿಟ್ಟುಕೊಂಡಿದ್ದೇನೆ… ಇನಿ ….
ಒಬ್ಬಂಟಿ ಅನ್ನಿಸಿದಾಗೆಲ್ಲಾ ಮನದೊಳಗೆ ಪಿಸುಗುಟ್ಟುಕೊಳ್ಳುತ್ತೇನೆ. ನೀ ಎದುರಿಗೆ ಬಂದಂತಾಗುತ್ತದೆ. ಮಾತಿಲ್ಲ, ಕತೆಯಿಲ್ಲ ಬರೀ ರೋಮಾಂಚನವೆಂದರೆ ಇದೇ ಏನೇ ಹುಡುಗಿ?
ನನ್ನ ಬದುಕಿನ ಒಂದು ಪುಟದಲ್ಲಿ ಮೂಡಿದ , ನಿನ್ನ ಹೆಜ್ಜೆಯ ಗುರುತಿನ ಗೆಜ್ಜೆಯ ಸದ್ದು ಸದಾ ನನ್ನ ಮನಸ್ಸನ್ನು ತುಂಬುತ್ತಲೇ ಇದೆ. ಯಾವ ಚೌಕಟ್ಟಿಗೂ ಸಿಕ್ಕದ ಚಿತ್ರವಾಗಿಹೋದೆ ನೀನು. ನಾನು ಕನ್ನಡಿ ನೀನೇ ಬಿಂಬ. ಕನ್ನಡಿ ನಿನ್ನದಾಗಲಿಲ್ಲ, ಬಿಂಬ ನನ್ನದಾಗಿ ಉಳಿಯಲಿಲ್ಲ.
ನೆನಪುಗಳಲ್ಲೇ ಭೇಟಿಯಾಗುತ್ತಿರೋಣ. ಕನಸುಗಳಿಗೆ ಹೊಸ ಬಣ್ಣ ತುಂಬೋಣ. ಬದುಕು ರಂಗಾಗಲಿ.
ಜೀವ ಮುಳ್ಳೂರು