Advertisement

IFFI Film festival: ವಿಗ್ರಹ ಕಳೆಗುಂದದಿರಲಿ

12:10 AM Nov 26, 2023 | Team Udayavani |

ಅದು ಆ ಊರಿನ ಪರಂಪರೆ. ನದಿ, ಮರ, ಅರಣ್ಯವನ್ನೆಲ್ಲ ಪೂಜಿಸುತ್ತಿದ್ದರು. ಪ್ರತೀ ತಿಂಗಳೂ ಒಂದೊಂದು ಜಾತ್ರೆ. ಉದಾಹರಣೆಗೆ ಚೈತ್ರ ಮಾಸದ ಒಂದು ದಿನ ಜನರೆಲ್ಲ ಸೇರಿ ತಮ್ಮ ಊರಿನ ನದಿ ಪ್ರದೇಶವನ್ನು ಸ್ವತ್ಛಗೊಳಿಸುತ್ತಿದ್ದರು. ದೀಪಾರತಿ ಎತ್ತಿ ಪೂಜಿಸುತ್ತಿದ್ದರು. ಒಂದಿಷ್ಟು ಸಿಹಿ ಪ್ರಸಾದ ಹಂಚಿ ಸಂಭ್ರಮಿಸುತ್ತಿದ್ದರು. ಆ ದಿನ ಊರಿನಲ್ಲೇ ಸಂಭ್ರಮ. ಈ ಜಾತ್ರೆ ಇಡೀ ವಾರ ನಡೆಯುತ್ತಿತ್ತು. ಹಾಗಾಗಿ ವಾರಪೂರ್ತಿ ಊರ ತುಂಬ ಸಂತಸದ ವಾತಾವರಣ.

Advertisement

ಹೀಗೇ ಮತ್ತೂಂದು ತಿಂಗಳಿನಲ್ಲಿ ಕಾಡು-ಮರಗಳಿಗೆ ಪೂಜೆ. ಅದಕ್ಕೆಲ್ಲ ಸಿಂಗರಿಸಿ, ಸುತ್ತಲೂ ದೀಪ ಹಚ್ಚಿದಾಗ ಊರಿಗೆಲ್ಲ ಬೆಳಕು. ಅಲ್ಲಿ ಬೆಳಗುತ್ತಿರುವ ಲೋಕದಲ್ಲಿ ತಮ್ಮೆಲ್ಲರನ್ನೂ ಒಮ್ಮೆ ನೋಡಿಕೊಳ್ಳುತ್ತಿದ್ದರಲ್ಲದೇ, ಆ ಬೆಳಕಿನಲ್ಲಿ ತಮ್ಮ ಋಣಾತ್ಮಕ ಗುಣಗಳನ್ನೂ ಸುಟ್ಟುಕೊಳ್ಳುತ್ತಿದ್ದರು. ಒಂದು ರೀತಿಯಲ್ಲಿ ನಮ್ಮಲ್ಲಿ ಹೋಳಿ ಇಲ್ಲವೇ ಹಾಗೆ ಎಂದುಕೊಳ್ಳಿ. ಕಾಮದಹನ ವೆಂದರೆ ನಮ್ಮ ದುರಾಸೆಯನ್ನು ಸುಟ್ಟುಕೊಳ್ಳುವುದಲ್ಲವೇ? ಇಂಥದ್ದೇ ಒಂದು ಸಂಪ್ರದಾಯ.

ಈ ಮೂಲಕ ಇಡೀ ಊರಿನ ಪ್ರಕೃತಿಯನ್ನು ಆರಾಧಿಸುತ್ತಿದ್ದರು. ನೆವದಿಂದ ಈ ವರ್ಷಪೂರ್ತಿ ಜಾತ್ರೆ ಆರಂಭವಾಗುತ್ತಿದ್ದುದು ಆ ಊರಿನ ಗ್ರಾಮ ದೇವರ ಹೆಸರಿನಲ್ಲಿ. ಅದರೊಂದಿಗೆ ಉಳಿದ ದೇವರುಗಳೂ ಸೇರುತ್ತಿದ್ದವು. ಒಟ್ಟೂ ಪ್ರಕೃತಿ-ದೇವರ ಆರಾಧನೆ. ಊರಿನ ಮಂದಿ ಸೇರುತ್ತಿದ್ದರು. ಊರಿನ ಸಾಂಸ್ಕೃತಿಕ ಸಂಪತ್ತೂ ಕಂಗೊಳಿಸುತ್ತಿತ್ತು. ಒಂದಿಷ್ಟು ಮಂದಿ ಹಾಡುತ್ತಿದ್ದರು, ಮತ್ತೂಂದಿಷ್ಟು ಮಂದಿಯದು ನೃತ್ಯ, ಇನ್ನೂ ಉಳಿದವರದ್ದು ಚಿತ್ರ. ಸಾಂಸ್ಕೃತಿಕ ಸಿರಿವಂತಿಕೆಗೊಂದು ವೇದಿಕೆ ಈ ಜಾತ್ರೆ. ಸಂಶೋಧಕರು ಇದಕ್ಕೆ ಹೀಗೆಂದು ಅರ್ಥ ಕಲ್ಪಿಸಬಹುದು. ಸಂಶೋಧಕರಿಗೆ ಇದು ಸಂಶೋಧನೆಯ ವಸ್ತು. ಜನರಿಗೆ ಅದು ಜೀವನದ ಭಾಗ.

ಕೆಲವು ಸಂವತ್ಸರಗಳು ಕಳೆದವು. ಎಲ್ಲವೂ ಸಾಂಗವಾಗಿ ನಡೆಯುತ್ತಿತ್ತು. ಈ ಊರಿನವ ಒಬ್ಬ ಉದ್ಯೋಗಕ್ಕೆಂದು ಹೋದವ ಈ ಬಾರಿಯ ಜಾತ್ರೆಗೆ ಬಂದ. ಬರುವಾಗ ದೊಡ್ಡ ಎರಡು ಸ್ಪೀಕರ್‌ಗಳನ್ನು ತಂದಿದ್ದ. ಮನೆಗೆ ಅವುಗಳನ್ನು ತಂದಿದ್ದಾದರೂ ಊರಿನವರಿಗೆ ಪ್ರದರ್ಶಿಸುವ ಆಸೆಯಿತ್ತು. ಹಾಗಾಗಿ ಜಾತ್ರೆಯ ದಿನ ದೊಡ್ಡ ಎರಡು ಮರಗಳಿಗೆ ಕಟ್ಟಿ, ಟೇಪ್‌ ರೆಕಾರ್ಡರ್‌ನಲ್ಲಿ ಹಾಡು ಹಾಕಿದ. ಊರಿಗೇ ಕೇಳಿಸುವಂತೆ ಬೊಬ್ಬೆ ಹಾಕತೊಡಗಿತು. ಮನೆಗಳಿಂದ ಜನರೆಲ್ಲ ಹೊರ ಬಂದು ಕಣ್‌ ಬಿಟ್ಟುಕೊಂಡು ನೋಡತೊಡಗಿದರು. ಕಾಣಲಿಕ್ಕೆ ಏನೂ ಇರಲಿಲ್ಲ; ಬದಲಾಗಿ ದೊಡ್ಡದಾಗಿ ಸ್ವರ ಕೇಳಿಬರುತ್ತಿತ್ತು. ಎಲ್ಲರೂ ಅಚ್ಚರಿಪಟ್ಟರು.

ಸ್ವಲ್ಪ ಹೊತ್ತಿಗೆ ಯಾಕೋ ಕಿರಿಕಿರಿ ಎನಿಸತೊಡಗಿತು. ಊರ ಹಿರಿಯವ ಈ ನಗರವಾಸಿಯವನಲ್ಲಿ ಬಂದು, ಅಪ್ಪಾ, ಅದನ್ನು ಆರಿಸಪ್ಪ ಎಂದರು. ಇವನು ಏನೋ ಹೇಳಲಿಕ್ಕೆ ಹೋದ. ಆದರೆ ಅವರು ಕೈ ಮುಗಿದರು. ಅಂತಿಮವಾಗಿ ಸ್ಪೀಕರ್‌ಗಳು ಮೌನ ತಾಳಿದವು!

Advertisement

ಈ ಮಾಸದ ಜಾತ್ರೆ ಮುಗಿಯಿತು. ಅಷ್ಟರಲ್ಲಿ ಈ ಮೊದ ಲಿನವ ಮತ್ತಷ್ಟು ಮಂದಿಯನ್ನು ನಗರಕ್ಕೆ ಕರೆದುಕೊಂಡು ಹೋದ. ಅವರೆಲ್ಲ ಮತ್ತೂಂದು ಜಾತ್ರೆಗೆ ಬರುವಾಗ ಮತ್ತಷ್ಟು ಹೊಸ ಪದ್ಧತಿಗಳು ಬಂದವು. ಕೆಲವರು ವಿದ್ಯುತ್‌ ದೀಪಾಲಂಕಾರದ ಸರಗಳನ್ನು ತಂದರು. ಮರಗಳಿಗೆಲ್ಲ ತೊಡಿಸಿದರು. ಜನರಿಗೆ ಮತ್ತೆ ಅಚ್ಚರಿ. ಕೆಲವರಿಗೆ ಎಣ್ಣೆ, ಬತ್ತಿ ಹಾಗೂ ಹೊತ್ತಿಸುವ ಶ್ರಮ ಉಳಿಯಿತಲ್ಲ. ಒಂದು ಹೀಗೆ (ಸ್ವಿಚ್‌) ಒತ್ತಿದರೆ ಸಾಕು, ಅಲ್ಲೆಲ್ಲ ಹೊತ್ತಿಕೊಳ್ಳುತ್ತದೆ. ಇನ್ನು ಕೆಲವರಿಗೆ ಇದು ರುಚಿಸಲಿಲ್ಲ. ಆದರೂ ಹೊಸತೇನೋ ನಡೆಯುತ್ತಿದೆ ಎಂದು ಸುಮ್ಮನಿದ್ದರು. ಹೀಗಾಗಿ ಜಾತ್ರೆಯಲ್ಲಿ ಸ್ಪೀಕರ್‌, ಸೀರಿಯಲ್‌ ಲೈಟ್ಸ್‌ ಇತ್ಯಾದಿ ಎಲ್ಲವೂ ರೂಪ ತಳೆದವು. ಜಾತ್ರೆಗೆ ಹಣವೂ ಬಂದಿತು, ಜನರೂ ಬಂದರು. ಮೆರವಣಿಗೆಯಲ್ಲಿ ಮೂಲ ದೇವರ ಬದಲು ಉತ್ಸವ ಮೂರ್ತಿ ಬಂದಿತು. ಜನರು ಅದಕ್ಕೇ ಕೈಮುಗಿದು ಹೋಗತೊಡಗಿದರು. ಮೂಲ ದೇವರನ್ನು ಮರೆತರು. ನಿಧಾನವಾಗಿ ಜನರೂ ಮರ, ನದಿ, ದೀಪಗಳನ್ನು ಮರೆತು ಈ ಸ್ವೀಕರ್‌ ಕೇಳುತ್ತಾ, ಒಂದಿಷ್ಟು ಹಾಡಿಗೆ ಕುಣಿಯುತ್ತಾ, ವಿದ್ಯುತ್‌ ದೀಪಾಲಂಕಾ ರದಲ್ಲಿ ಕಳೆದುಹೋದರು. ಊರಿನ ಮಾಸದ ಜಾತ್ರೆಗಳೂ ಮೆಲ್ಲಗೆ ವರ್ಷಕ್ಕೆ ಬಂದಿತು. ಇಲ್ಲಿಗೇ ಮುಗಿಯಲಿಲ್ಲ.

ಜಾತ್ರೆಗೆ ಬರುವ ಜನ ಹೆಚ್ಚಾದರು. ಅಂಗಡಿ, ಮಳಿಗೆಗಳೂ ಬಂದವು. ಜಾತ್ರೆ ಮೆರವಣಿಗೆಯಲ್ಲಿ ಕುಣಿಯಲಿಕ್ಕೆಂದೇ ಕೆಲವರು ಬರತೊಡಗಿದರು. ಸಿನೆಮಾ ನಟರೂ ಜಾತ್ರೆಗೆ ರಂಗು ತುಂಬಿದರು. ಜನರೂ ಅಷ್ಟೇ ಸಿನೆಮಾ ಸ್ಟಾರ್‌ಗಳ ಹಿಂದೆ ಬಿದ್ದರು. ಸಿಳ್ಳೆ ಹಾಕಿ ಸಂಭ್ರಮಿಸಿದರು. ಜನರು ಪ್ರಕೃತಿ-ಇಬ್ಬರೂ ಅಲ್ಲಿಂದ ಮರೆಯಾದರು.
****
ಭಾರತದಲ್ಲೂ ಇಂಥದ್ದೇ ಒಂದು ಉತ್ಸವ ಪ್ರಾರಂಭವಾಗಿತ್ತು. ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಆಗಿನ ಆರ್‌. ಆರ್‌. ದಿವಾಕರ್‌ ಅವರಲ್ಲಿ ದೇಶ ವಿದೇಶಗಳ ಸಂಸ್ಕೃತಿಯನ್ನು ಸಂಭ್ರಮಿಸುವಂಥ ಚಿತ್ರೋತ್ಸವದಂಥ ಕಲ್ಪನೆಯ ಕುರಿತು ಪ್ರಸ್ತಾವಿಸಿದ್ದರು. ಅದರಂತೆ ಅರಂಭವಾಗಿದ್ದು ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(ಐಊಊಐ). 1952ರಲ್ಲಿ. ಮುಂಬಯಿಯಲ್ಲಿ ಚಿತ್ರೋತ್ಸವದ ಮರ ಹೂ ಬಿಟ್ಟಿದ್ದು ಮೊದಲು. ಆ ಬಳಿಕ ಅದರ ಕಂಪು ಎಲ್ಲೆಡೆ ಹರಡಿತೆನ್ನಿ. ಆರಂಭದಲ್ಲಿ ಮೇಲಿನ ಊರಿನಂತೆಯೇ “ಚಿತ್ರೋತ್ಸವ’ದ ಮೆರವಣಿಗೆ ಆಲ್ಲಲ್ಲಿ ನಡೆಯುತ್ತಿತ್ತು. ಹತ್ತಾರು ವೈವಿಧ್ಯಗಳ ಮೂಲಕವೇ ಬೆಳೆದು ಬಂದ ಚಿತ್ರೋತ್ಸವವೆಂಬ ದೇವರು ಕೊನೆಗೆ ಬಂದು ನಿಂತಿದ್ದು 2004 ರಲ್ಲಿ ಗೋವಾದಲ್ಲಿ.

ಈ ಉತ್ಸವದಲ್ಲೂ ಅರಂಭವಾದದ್ದು ಮೂಲ ವಿಗ್ರಹಕ್ಕೇ ಮೊದಲು ಆರಾಧನೆ. ಅಂದರೆ ಅದ್ಭುತವೆನ್ನಿಸುವಂಥ ಭಾರತೀಯ ಚಿತ್ರಗಳು, ಸತ್ಯಜಿತ್‌ ರೇ ರಂಥ ನಿರ್ದೇಶಕರು… ಹೀಗೆ ಒಟ್ಟಿನಲ್ಲಿ ಸಿನೆಮಾ…ಸಿನೆಮಾ… ಸಿನೆಮಾ. ಆಧುನಿಕ ಭಾಷೆಯಲ್ಲಿ ಹೇಳುವಂತೆ, ಬೆಳಗಿನ ತಿಂಡಿಯೂ ಅದೇ, ಮಧ್ಯಾಹ್ನದ ಊಟವೂ ಇದೇ, ರಾತ್ರಿಯ ಊಟವೂ ಅದೇ. ಒಂದಿಷ್ಟು ವರ್ಷಗಳು ಹೀಗೆ ಕಳೆದು ಮೂಲ ದೇವರ ಮೆರವಣಿಗೆ ವಿಜೃಂಭಣೆಯಿಂದ ನಡೆಯುತ್ತಿತ್ತು. ಜನರೂ ಸೇರುತ್ತಿದ್ದರು. ಒಟ್ಟೂ ಸಿನೆಮಾಗಳ ವೈಭವದ ಉತ್ಸವವಾಗಿತ್ತು.
ಮೆರವಣಿಗೆಗೆ ಅಬ್ಬರವಿರಲಿಲ್ಲ ನಿಜ, ಮಾಧು ರ್ಯವಿತ್ತು. ಊರೂರಿಗೆ ತಿರುಗುತ್ತಿದ್ದ ಮೂಲ ವಿಗ್ರಹ 2004 ರಲ್ಲಿ ಗೋವಾವೆಂಬ ಕಡಲ ಕಿನಾರೆಗೆ ಬಂದು ಕುಳಿತಿತು. ಮೊದಲ ಒಂದೆರಡು ವರ್ಷ ಆ ಊರಿ ನಂತೆಯೇ ಮೂಲ ವಿಗ್ರಹಕ್ಕೆ ಪೂಜೆ ನಡೆಯತೊಡಗಿತು. ಕ್ರಮೇಣ ಆ ಊರಿನಲ್ಲಾದಂತೆ ಎಲ್ಲವೂ ಘಟಿಸತೊಡ ಗಿದವು. ಇಲ್ಲಿನ ಮೆರವಣಿಗೆಗೂ ಉತ್ಸವ ಮೂರ್ತಿ ಬಂದಿತು. ಬಾಲಿವುಡ್‌ನ‌ ಉತ್ಸವ ಮೂರ್ತಿಗಳೆಲ್ಲ ರಾರಾಜಿಸತೊಡಗಿದವು. ಮೂಲ ವಿಗ್ರಹ, ಅದರ ಭಕ್ತರೆಲ್ಲ ಹಿಂದೆ ಉಳಿಯತೊಡಗಿದರು. ಆದರೇನು? ಮೆರವಣಿ ಗೆಯಲ್ಲಿ ಧ್ವನಿ ವರ್ಧಕಗಳ ಅಬ್ಬರ ಕಡಿಮೆಯಾಗಿಲ್ಲ, ವಿದ್ಯುತ್‌ ದೀಪಗಳ ಬೆಳಕು ಕಡಿಮೆಯಾಗಿಲ್ಲ. ಜಾತ್ರೆಯಲ್ಲಿನ ಸರ್ಕಸ್‌, ಆಂಗಡಿ, ಮಳಿಗೆಗಳ ಸಂಖ್ಯೆಗಳು ಹೆಚ್ಚತೊಡಗಿವೆ. ಇಡೀ ವ್ಯವಸ್ಥೆಗೆ ಹೊಸ ಉತ್ತರಾಧಿಕಾರಿ ಗಳು ಬಂದಿದ್ದಾರೆ. ಅವರು ಹೇಳಿದವರೇ ಆರಾಧಕರು, ಅವರು ಹೇಳಿದವರೇ ಭಕ್ತರು. ಹೊರಗೆ ಇದ್ದ ಅಂಗಡಿ ವ್ಯಾಪಾರಸ್ಥರೆಲ್ಲ ಒಳಗೆ ಬಂದು ಕುಳಿತುಕೊಂಡಿದ್ದಾರೆ. ಎಲ್ಲವೂ ಬಿಕರಿಯಾಗುತ್ತಿದೆ. ಜಾತ್ರೆಯ ಬದಲು ಸಂತೆ ಯಾಗತೊಡಗಿದೆ. ರಾತ್ರಿಯಾದ ಮೇಲೆ ಬಿಕರಿಯಾಗದೇ ಉಳಿಯುವುದೇನು ಯಾರಿಗೂ ಗೊತ್ತಿಲ್ಲ.

ಆ ಊರ ಜಾತ್ರೆಗೂ ಈ ಊರ ಜಾತ್ರೆಗೂ ಸಣ್ಣದೊಂದು ವ್ಯತ್ಯಾಸವಿದೆ. ಆಲ್ಲೀಗ ಸದ್ದಿದೆ, ಅಬ್ಬರವಿದೆ. ನದಿಯ ನಾದವಿಲ್ಲ, ಮೌನದ ಮಾಧುರ್ಯವಿಲ್ಲ. ದೀಪದ ಬೆಳಕಿಲ್ಲ. ಆ ಕಾಂತಿಯೊಳಗಿನ ಹೊಳಪು ಎಲ್ಲೂ ಕಂಡು ಬರುತ್ತಿಲ್ಲ. ಜನರಿಗೇನೂ ಕೊರತೆಯಿಲ್ಲ. ಮಂಕು ಬಡಿದು ಕೊಂಡು ಕುಣಿಯುತ್ತಿದ್ದಾರೆ. ಆದರೂ ಮೂಲ ದೇವರಿಗೆ ನಿತ್ಯ ಪೂಜೆ. ಉತ್ಸವ ಮೂರ್ತಿಗೆ ಜಾತ್ರೆ ಪೂಜೆ. ಒಟ್ಟಿನಲ್ಲಿ ಜಾತ್ರೆ ನಿಂತಿಲ್ಲ, ಮೆರವಣಿಗೆಯೂ ನಿಂತಿಲ್ಲ, ಪೂಜೆಯೂ ನಿಂತಿಲ್ಲ. ಅದುವೇ ಸಮಾಧಾನ ಎಂದುಕೊಳ್ಳೋಣ.

ಈ ಊರಿನ ಜಾತ್ರೆಯಲ್ಲಿ ಹಾಗಲ್ಲ. ಮೆರವಣಿಗೆಗೆ ಬರುವ ಜನರೂ ಕಡಿಮೆ ಯಾಗಿದ್ದಾರೆ. ಉತ್ಸವದ ಹುರುಪೂ ಹಿಂದಿನಂತಿಲ್ಲ. ಬಣ್ಣವಿದೆ, ಅಬ್ಬರವಿದೆ, ಸದ್ದು ಜೋರಾಗಿಯೇ ಇದೆ. ಉತ್ಸವ ಮೂರ್ತಿಗೆ ಕೈ ಮುಗಿಯುವವರೂ ಇದ್ದಾರೆ, ಇತ್ತೀಚಿನ ಮೂರು ವರ್ಷಗಳಲ್ಲಿ ಜಾತ್ರೆ ನಡೆಸುವವರೇ ಬದಲಾಗಿ¨ªಾರೆ. ಜಾತ್ರೆಯ ನಿಯಮಗಳೂ ಬದಲಾಗು ತ್ತಿವೆ. ಮುಂದೊಂದು ದಿನ ಜಾತ್ರೆಗೆ ಜನರೇ ಬೇಕಿಲ್ಲ; ಮೂರ್ತಿಗಳೇ ಸಾಕು ಎನ್ನಲೂ ಬಹುದು. ಯಾಕೆಂದರೆ ಮೂಲ ವಿಗ್ರಹ ಇರುವುದನ್ನೇ ಮರೆತಿದ್ದಾರೆ. ಒಂದು ದಿನ ಇಡೀ ವ್ಯವಸ್ಥೆ ಮೂಲ ದೇಗುಲಕ್ಕೇ ಬೀಗ ಜಡಿದು ಕುಳಿತುಕೊಳ್ಳಲೂ ಬಹುದು.

ಈ ಚಿತ್ರೋತ್ಸವದ ಜಾತ್ರೆ ಆರಂಭಿಸಿದ್ದ ಆಗಿನ ಪ್ರಧಾನಿ ನೆಹರೂ, ಈ ಜಾತ್ರೆ ನಮ್ಮ ಸಾಂಸ್ಕೃತಿಕ ಸಂಪತ್ತಿನ ಜಾತ್ರೆಯಾಗಬೇಕು. ಯಾವುದೇ ಕಾರಣಕ್ಕೂ ಅಪರಾಧ ವನ್ನು ವೈಭವೀಕರಿಸಬಾರದು. ಆದರಲ್ಲೂ ಅಪರಾಧ ಮಾರಿ ಹಣ ಮಾಡಿಕೊಳ್ಳುವವರನ್ನು ಹತ್ತಿರ ಸೇರಿಸ ಬಾರದು ಎಂದೆಲ್ಲ ಹೇಳಿದ್ದರು. ಅವೆಲ್ಲವೂ ಬದಿಗೆ ಸರಿ ದಿವೆ. ಯಾವ ಆಂಗಡಿಗಳನ್ನು ತೆರೆಯಬಾರದೆಂದು ಹೇಳಿ ದ್ದರೋ ಅವೆಲ್ಲದಕ್ಕೂ ಸ್ಥಾನ ಸಿಕ್ಕಿದೆ. ಆದಕ್ಕೇ ಬರುವ ಜನರೂ ಕಡಿಮೆಯಾಗತೊಡಗಿದ್ದಾರೆ, ಉತ್ಸವದ ಕಳೆಯೂ ಕರಗತೊಡಗಿದೆ. ಮುಂದೊಂದು ದಿನ ಏನಾಗುತ್ತೋ ತಿಳಿದಿಲ್ಲ.
****
ಈಗ ಆಕಾಶದಲ್ಲಿ ಮೋಡ ಮುಸುಕುತ್ತಿದೆ ಎಂದು ಕೊಳ್ಳೋಣ. ತಾರೆ ಸದ್ಯಕ್ಕೆ ಕಾಣಸಿಗದೂ ಎಂದು ಕೊಳ್ಳೋಣ. ಒಂದಿಷ್ಟು ಹೊತ್ತಿನ ಬಳಿಕ, ಆಗಸ ತಿಳಿಯಾದ ಬಳಿಕ ತಾರೆಗಳು ಮಿನುಗುವುದನ್ನು ಮತ್ತೆ ನೋಡಬಹುದು ಎಂಬ ಆಶಾವಾದವಿದೆ. ಈ ಮಾತು ಭಾರತೀಯ ಚಿತ್ರ ಜಗತ್ತಿನ “ಇಫಿ’ ತಾರೆಗೂ ಅನ್ವಯ. ಆದರೆ ಆತಂಕವಾಗು ತ್ತಿರುವುದು ಎಲ್ಲಿ ತಾರೆಯೇ ಸ್ಫೋಟಗೊಂಡು ಚರಿತ್ರೆಯ ಭಾಗವಾಗುವುದೋ ಎಂಬ ಭಯ. ಹಾಗಾಗದಿರಲಿ ಎಂದೇ ಆಶಿಸೋಣ. ನಾವೆಲ್ಲ ಸೇರಿ ಮುಸುಕಿದ ಮೋಡವ ಸರಿಸೋಣ. ಮತ್ತೆ ಜಾತ್ರೆ ಜೋರಾಗಲಿ, ಉತ್ಸವದ ಕಳೆ ಕರಗದಿರಲಿ. ಉತ್ಸವದ ಮೂರ್ತಿಗಳೂ ಇರಲಿ, ಮೂಲ ವಿಗ್ರಹಕ್ಕೇ ಪೂಜೆ ನಡೆಯಲಿ. ಜನ ಸೇರಲಿ, ಜಾತ್ರೆಯೂ ಬೆಳಗಲಿ.

ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next