Advertisement

ನಿನ್ನ ಕೆಲಸ ಉಳೀಬೇಕಂದ್ರೆ ಅವನ ಕೆಲಸ ಕಿತ್ತುಕೋ!

03:45 AM Jun 03, 2017 | |

ಬೆಂಗಳೂರು: ತಮಗಾಗುತ್ತಿರುವ ನಷ್ಟ ತಗ್ಗಿಸಿಕೊಳ್ಳಲು ಐಟಿ ಕಂಪನಿಗಳು ಈಗ ಉದ್ಯೋಗಿಗಳ ನಡುವೆಯೇ ವೈಮನಸ್ಸು ತಂದಿಡುವ ಕೆಲಸಕ್ಕೆ ಕೈಹಾಕಿವೆ ಎಂಬ ಆರೋಪಗಳು ಕೇಳಿಬರುತ್ತಿವೆ!

Advertisement

ಸಾಮಾನ್ಯವಾಗಿ ನಷ್ಟ ಸರಿದೂಗಿಸಿಕೊಳ್ಳಲು ಉದ್ಯೋಗಿಗಳನ್ನು ಬೇರೆ ಬೇರೆ ಕಾರಣ ನೀಡಿ ಮನೆಗೆ ಕಳಿಸಲಾಗುತ್ತದೆ. ಇಲ್ಲಿ ಅದೇ ಪ್ರಕ್ರಿಯೆ ನಡೆಯುತ್ತಿವೆಯಾದರೂ, ಒಬ್ಬ ಉದ್ಯೋಗಿ ತನ್ನ ಕೆಲಸ ಉಳಿಸಿಕೊಳ್ಳಬೇಕೆಂದರೆ ಮತ್ತೂಬ್ಬ ಸಹೋದ್ಯೋಗಿಯ ಕೆಲಸ ಕಿತ್ತುಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಐಟಿ ಕಂಪನಿಗಳಲ್ಲಿ ನಿರ್ಮಾಣವಾಗಿವೆ. ಈ ಬಗ್ಗೆ ಸ್ವತಃ ಉದ್ಯೋಗಿಗಳೇ ಹೇಳಿಕೊಂಡಿದ್ದಾರೆ. ಐಟಿ ಸಂಸ್ಥೆಗಳು ಈ ಮೂಲಕ ತಮಾಷೆ ನೋಡುತ್ತಿವೆ ಎಂದು ಆರೋಪಿಸಿದ್ದಾರೆ.

ಕೆಲ ಕಂಪನಿಗಳಲ್ಲಿ ಉದ್ಯೋಗಿಗೆ ನೇರವಾಗಿ ಕರೆ ಮಾಡುವ ಎಚ್‌ಆರ್‌, “”ನಿಮ್ಮ ವೇತನ ಕಂಪನಿಗೆ ಭಾರವಾಗಿದೆ. ಒಂದೋ ನೀವು ಕೆಲಸ ತೊರೆಯಿರಿ, ಇಲ್ಲವೇ ನಿಮ್ಮ ಸಹೋದ್ಯೋಗಿಗಳಲ್ಲಿ ಯಾರನ್ನು ಮನೆಗೆ ಕಳುಹಿಸಬೇಕೆಂದು ರೆಫ‌ರ್‌ ಮಾಡಿ,’ ಎಂಬ ನಂಬಲಸಾಧ್ಯ ಆಫ‌ರ್‌ಗಳನ್ನು ನೀಡುತ್ತಿದ್ದಾರೆ ಎಂದು ನ್ಯೂಸ್‌-18 ವರದಿ ಮಾಡಿದೆ.

ಐಟಿ ಕಂಪನಿಗಳು ತಮ್ಮಲ್ಲಿನ ವೃತ್ತಿಪರರ ಜತೆ ಆಡುತ್ತಿರುವ ಈ ಮ್ಯೂಜಿಕಲ್‌ ಚೇರ್‌ ಆಟಕ್ಕೆ ಮಧ್ಯವರ್ತಿಯಾಗಿ ಬಳಕೆಯಾಗಿರುವುದು ಕಂಪನಿಗಳ ಎಚ್‌ಆರ್‌ ಮ್ಯಾನೇಜರ್‌ಗಳು. ಕಂಪನಿಗೆ ಹೆಚ್ಚು ವೆಚ್ಚದಾಯಕ ಎನಿಸಿರುವ ಉದ್ಯೋಗಿಗಳನ್ನು ಗುರುತಿಸಿ, ಮೇಲಿನವರ ಆದೇಶದಂತೆ ಮನೆಗೆ ಕಳುಹಿಸುವ ಧಾವಂತದಲ್ಲಿ ಅತ್ಯಂತ ಕಡಿಮೆ ವೇತನ (ಪೇ ಆಫ್) ಪಡೆದು ಕೆಲಸ ತೊರೆಯಲು ಹೇಳುತ್ತಿದ್ದಾರೆ. ಎಚ್‌ಆರ್‌ಗಳನ್ನು ಮುಂದಿಟ್ಟುಕೊಂಡು ಐಟಿ ಕಂಪನಿಗಳು ನಡೆಸುತ್ತಿರುವ ಈ ಕಣ್ಣಾ ಮುಚ್ಚಾಲೆ ಆಟದಿಂದ ನೊಂದಿರುವ ಉದ್ಯೋಗಿಗಳೇ ಈ ಕುರಿತ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡುತ್ತಿದ್ದಾರೆ.

“ಕಳೆದ ತಿಂಗಳ 23ರಂದು ಎಚ್‌ಆರ್‌ ಮ್ಯಾನೇಜರ್‌ ಕರೆ ಮಾಡಿ ಭೇಟಿಯಾಗಲು ತಿಳಿಸಿದರು. ಅದರಂತೆ ಹೈದರಾಬಾದ್‌ನಲ್ಲಿದ್ದ ಎಚ್‌.ಆರ್‌. ಮುಖ್ಯಸ್ಥರ ಜತೆ ವೀಡಿಯೋ ಚಾಟ್‌ ಮಾಡುವಾಗ, ನಿನಗೆ 2 ವಾರ‌ ಕಾಲಾವಕಾಶ ಮತ್ತು 2 ತಿಂಗಳ ಮೂಲ ವೇತನ ಕೊಡುತ್ತೇವೆ. ಕೆಲಸ ಬಿಟ್ಟುಬಿಡು ಎಂದರು,’ ಎಂದು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪನಿಯ ಹಿರಿಯ ಉದ್ಯೋಗಿಯೊಬ್ಬರು ಹೇಳಿಕೊಂಡಿದ್ದಾರೆ ಎಂದು ವರದಿ ಮಾಡಿದೆ.

Advertisement

“29ರಂದು ಮತ್ತೂಮ್ಮೆ ಕರೆ ಮಾಡಿ ನೀವೇಕೆ ಇನ್ನೂ ರಾಜೀನಾಮೆ ನೀಡಿಲ್ಲ ಎಂದು ಪ್ರಶ್ನಿಸಿದರು. ರಾಜೀನಾಮೆ ಕೊಡುವುದಿಲ್ಲ ಎಂದೆ. ಹಾಗಾದರೆ ನಿಮ್ಮ ಕಾಂಟ್ರಾಕ್ಟ್ ಟರ್ಮಿನೇಟ್‌ ಮಾಡುತ್ತೇವೆ. ಆಗ ನಿಮಗೆ ಬೇರಾವ ಕಂಪನಿಯಲ್ಲೂ ಕೆಲಸ ಸಿಗುವುದಿಲ್ಲ ಎಂದು ಬೆದರಿಸಿದರು. 31ರಂದು ಮತ್ತೂಮ್ಮೆ ಕರೆ ಮಾಡಿ, “ನೀನು ನಿನ್ನ ಬದಲಿಗೆ ಮತ್ತೂಬ್ಬ ಉದ್ಯೋಗಿಯ ಹೆಸರು ಸೂಚಿಸಿದರೆ ಆತನನ್ನು ಕೆಲಸದಿಂದ ಕಿತ್ತೆಸೆದು, ನಿನ್ನನ್ನು ಉಳಿಸಿಕೊಳ್ಳುವ ಬಗ್ಗೆ ಆಲೋಚಿಸುತ್ತೇವೆ’ ಎಂಬ ವಿಚಿತ್ರ ಆಫ‌ರ್‌ ಕೊಟ್ಟರು! ಅದೇ ದಿನ ನನಗೆ ಆಟೋಮೇಟೆಡ್‌ ಇಮೇಲ್‌ ಒಂದು ಬಂತು. “ಕಂಪನಿಯಲ್ಲಿ ಇದು ನಿನ್ನ ಕೊನೆಯ ದಿನ. ಇಂದಿನಿಂದ ನಿನಗೆ ನೀಡಿರುವ ಕಂಪನಿ ಇಮೇಲ್‌ ಐಡಿ ಹಾಗೂ ಇತರ ಸೇವೆಗಳನ್ನು ರದ್ದು ಮಾಡಲಾಗುತ್ತಿದೆ,’ ಎಂದು ಮೇಲ್‌ನಲ್ಲಿ ತಿಳಿಸಲಾಗಿತ್ತು. ಆದರೆ ಈ ಬಗ್ಗೆ ಎಚ್‌.ಆರ್‌. ವಿಭಾಗದಿಂದ ಯಾವುದೇ ಅಧಿಕೃತ ಕರೆ ಬರಲಿಲ್ಲ,’ ಎಂದು ನೊಂದ ಉದ್ಯೋಗಿ ಆರೋಪಿಸಿದ್ದಾರೆ.

ಕಾರ್ಮಿಕ ಆಯುಕ್ತರ ಮೊರೆ
ಹೀಗೆ ಕಂಪನಿ ವಿರುದ್ಧ ಆರೋಪ ಮಾಡಿರುವ ಅನಾಮಧೇಯ ವ್ಯಕ್ತಿ, ಇತರ ಪ್ರತಿಷ್ಠಿತ ಕಂಪನಿಗಳ ಮೂವರು ಉದ್ಯೋಗಿಗಳೊಂದಿಗೆ, ರಾಜ್ಯ ಸರ್ಕಾರದ ಕಾರ್ಮಿಕ ಆಯುಕ್ತರ ಮೊರೆ ಹೋಗಿ, ನ್ಯಾಯ ಕೇಳಲು ನಿರ್ಧರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಐಟಿ ಉದ್ಯೋಗಿಗಳ ಒಕ್ಕೂಟದ (ಎಫ್ಐಟಿಇ) ಸಂಯೋಜಕ ರಾಜೇಶ್‌, “ಯಾವುದೇ ಕಾರಣವಿಲ್ಲದೇ ಉದ್ಯೋಗದಿಂದ ತೆಗೆಯಲಾಗಿದೆ ಎಂಬ ದೂರು ಹೇಳಿಕೊಂಡು ದಿನಕ್ಕೆ 10ಕ್ಕೂ ಹೆಚ್ಚು ಮಂದಿ ಕರೆ ಮಾಡುತ್ತಿದ್ದಾರೆ. ಉದ್ಯೋಗಿಗಳನ್ನು ಕರೆದು, ರಾಜೀನಾಮೆ ನೀಡುವಂತೆ ಕೇಳುವ ಹಂತಕ್ಕೆ ಐಟಿ ಕಂಪನಿಗಳು ಇಳಿದಿವೆ,’ ಎಂದಿದ್ದಾರೆ.

ಅಲ್ಲದೆ ಈವರೆಗೆ “ಪ್ರತ್ಯೇಕ ಸಂಘಟನೆ’ ಬಗ್ಗೆ ಆಲೋಚನೆ ಕೂಡ ಮಾಡಿರದ ಐಟಿ ಉದ್ಯೋಗಿಗಳು, ತಮ್ಮ ವೃತ್ತಿಗೆ ಕಂಟಕ ಬಂದಿರುವ ಈ ಸಂದರ್ಭದಲ್ಲಿ ಸಂಘಟನೆ ಹುಟ್ಟುಹಾಕುವ ಪ್ರಯತ್ನದಲ್ಲಿದ್ದಾರೆ. ಈ ನಡುವೆ ಕೆಲ ಉದ್ಯೋಗಿಗಳು ಎಚ್‌ಆರ್‌ಗಳ ಸಲಹೆ ಮೇರೆಗೆ, ಕೆಲಸದಿಂದ ಕಿತ್ತೆಸೆಯಲು ಇತರ ಸಹೋದ್ಯೋಗಿಗಳ ಹೆಸರು ಸೂಚಿಸಿ ತಮ್ಮ ಕೆಲಸ ಉಳಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next