Advertisement

ನೈತಿಕತೆ ಇದ್ದರೆ ಗೃಹ ಸಚಿವರು ರಾಜೀನಾಮೆ ನೀಡಲಿ

04:50 PM Aug 28, 2021 | Team Udayavani |

ಹಾಸನ: ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾದ ಒಂದು ತಿಂಗಳೊಳಗೇ ತಾವು ಗೃಹ ಸಚಿವರಾಗಲು ಅದಕ್ಷ, ಅಸಮರ್ಥ ಎಂಬುದನ್ನು ಖಚಿತಪಡಿಸಿದ್ದಾರೆ. ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಲಿ ಎಂದು ರಾಜ್ಯ ಜೆಡಿಎಸ್‌ ಅಧ್ಯಕ್ಷ, ಮಾಜಿ ಸಚಿವ ಎಚ್‌.ಕೆ.ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೃಹ ಸಚಿವರಾದ ಬಳಿಕ ಆರಗ ಜ್ಞಾನೇಂದ್ರ ಅವರು ನಿದ್ದೆಯೇ ಬರುತ್ತಿಲ್ಲ. ಸಚಿವನಾಗಿ ನನ್ನ ಕಷ್ಟ ನನಗೇ ಗೊತ್ತು ಎಂದೆಲ್ಲಾ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಮೈಸೂರು ವಿದ್ಯಾರ್ಥಿನಿ ಅತ್ಯಾಚಾರ ಪ್ರರಕಣದಲ್ಲಿಯೂ ಸಚಿವರ ಹೇಳಿಕೆ ಅವರ ಅಸಹಾಯಕತೆಯನ್ನು ಸಾಬೀತು ಪಡಿಸಿದೆ. ಅವರು ರಾಜೀನಾಮೆ ಕೊಡಲಿ ಎಂದು ಜೆಡಿಎಸ್‌ ಒತ್ತಾಯಿಸುವುದಿಲ್ಲ. ಆದರೆ ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಲಿ ಎಂದರು.

ಗೃಹ ಸಚಿವರ ವಿರುದ್ಧ ವಾಗ್ಧಾಳಿ: ವಿದ್ಯಾರ್ಥಿನಿ ಅಷ್ಟು ಹೊತ್ತಿನಲ್ಲಿ ಅಲ್ಲಿಗೆ ಹೋಗಬಾರದಿತ್ತು ಎಂದು ಗೃಹ ಸಚಿವರು ಹೇಳುವುದಾದರೆ ಸಂಜೆ 6 ಗಂಟೆ ನಂತರ ಹೆಣ್ಣು ಮಕ್ಕಳು ಮನೆ ಬಿಟ್ಟು ಹೊರಹೋಗ ಬಾರದೆಂದು ಆದೇಶ ಹೊರಡಿಸಲಿ. ನಾಯಿಗಳಿವೆ ಎಂದು ಮಕ್ಕಳನ್ನು ಹೊರಗೆ ಕಳುಹಿಸದಿರಲು ಆಗುತ್ತದೆಯೇ ? ಗೃಹ ಸಚಿವರ ಹೇಳಿಕೆ ಹೇಸಿಗೆ ತರವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದಿದ್ದರೆ, ಸಂಬಂಧಪಟ್ಟ ಪೊಲೀಸ್‌ ಠಾಣೆಯ
ಸಿಬ್ಬಂದಿ ಮೇಲೆ ಈ ವೇಳೆಗಾಗಲೇ ಸಸ್ಪೆಂಡ್‌ ಮಾಡಿ ಕ್ರಮ ಕೈಗೊಳ್ಳ ಬೇಕಾಗಿತ್ತು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮದ್ಯದ ಪಾರ್ಟಿಗಳು,
ದರೋಡೆಯಂಥ ಅನಾಚಾರ ನಡೆಯುತ್ತಿರುವುದು ಪೊಲೀಸರಿಗೆ ಗೊತ್ತಿರಲಿಲ್ಲವೇ? ಏಕೆ ಗಸ್ತು ತಿರುಗುತ್ತಿರಲಿಲ್ಲ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಮಾದರಿ ಗೋಶಾಲೆ ನಿರ್ಮಾಣ ಕಾರ್ಯಕ್ಕೆ ಸಚಿವ ಸುಧಾಕರ್ ಚಾಲನೆ

Advertisement

ಅದಕ್ಷ ಪೊಲೀಸರೇ ಹೆಚ್ಚು: ಪೊಲೀಸ್‌ ಇಲಾಖೆಯಲ್ಲಿ ಶೇ. 30 ಹುದ್ದೆಗಳು ಖಾಲಿ ಇವೆ. ಪೊಲೀಸ್‌ ಅತಿ ಮುಖ್ಯವಾದ ಇಲಾಖೆ ಅಗತ್ಯ ಸಿಬ್ಬಂದಿ ಇಲ್ಲದಿದ್ದರೆ ಕಾನೂನು, ಸುವ್ಯವಸ್ಥೆ ಕಾಪಾಡುವುದು. ಅಪರಾಧ ಪ್ರಕರಣಗಳನ್ನು ತಡೆಯುವುದು ಹೇಗೆ? ಪೊಲೀಸರನ್ನು ಹೊರ ಗುತ್ತಿಗೆಯಲ್ಲಿ ನೇಮಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಸಿಬ್ಬಂದಿ ನೇಮಕಾತಿ ಆಗಬೇಕು. ಯುವಕರು ತನಿಖೆಗೆ ಬರಬೇಕು. ಈಗಿರುವ ಪೊಲೀಸ್‌ ಸಿಬ್ಬಂದಿಯಲ್ಲಿ ಅದಕ್ಷರೇ ಹೆಚ್ಚಿದ್ದು,ಕಮೀಷನ್‌ ದಂಧೆ, ಲಂಚ ವಸೂಲಿಯಲ್ಲಿ ತೊಡಗಿರುವವರೇ ಹೆಚ್ಚು. ಅವರನ್ನು ಕೆಲ ವರ್ಷಗಳ ಕಾಲ ಗ್ರಾಮಾಂತರ ಪ್ರದೇಶಕ್ಕೆ ವರ್ಗ ಮಾಡಲಿ. ಪೊಲೀಸ್‌ ಮತ್ತು ಕಂದಾಯ ಇಲಾಖೆ ಪ್ರಾಮಾಣಿಕವಾಗಿ ಹಾಗೂ ದಕ್ಷತೆಯಿಂದ ಕಾರ್ಯ ನಿರ್ವಹಿಸಿದರೆ ಸರ್ಕಾರದ ಇತರೆ ಇಲಾಖೆಗಳಲ್ಲಿ ಆಡಳಿತ ಚನ್ನಾಗಿರುತ್ತದೆ ಎಂದರು.

ಜೆಡಿಎಸ್‌ ತೀವ್ರ ಖಂಡನೆ: ಮೈಸೂರಿನ ಪ್ರಕರಣವನ್ನು ನಾನು ವೈಯಕ್ತಿಕವಾಗಿ ಹಾಗೂ ಪಕ್ಷದಿಂದ ತೀವ್ರವಾಗಿ ಖಂಡಿಸುತ್ತೇವೆ. ಇದು ಮೈಸೂರಿಗೆ ಕಪ್ಪು ಚುಕ್ಕೆ. ದೆಹಲಿಯ ನಿರ್ಭಯ ಅತ್ಯಾಚಾರ ಪ್ರಕರಣವನ್ನು ನೆನಪಿಸುವಂತಹ ಪ್ರಕರಣವಿದು. ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಘನತೆ ಹಾಳಾಗಿದೆ. ಪೊಲೀಸ್‌ ವೈಫ‌ಲ್ಯವೇ ಇದಕ್ಕೆ ಕಾರಣ. ಪ್ರಕರಣ ನಡೆದು 2 ದಿನಗಳಾದರೂ ಆರೋಪಿಗಳನ್ನು ಪತ್ತೆ ಹಚ್ಚಿಲ್ಲ. ಇದು ಪೊಲೀಸರ ವೈಫ‌ಲ್ಯಕ್ಕೆ ಸಾಕ್ಷಿಯಾಗಿದೆ. ಈ ಪ್ರಕರಣವನ್ನು ಯಾವುದೇ ಪಕ್ಷ ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎಂದರು.

ಗಂಭೀರ ಕ್ರಮಕ್ಕೆ ಒತ್ತಾಯ
ಮೈಸೂರು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮುಖ್ಯಮಂತ್ರಿಯವರೇ ಮಧ್ಯ ಪ್ರವೇಶಿಸಿ ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸಲುಕ್ರಮಕೈಗೊಳ್ಳಬೇಕು.ಕಳೆದ2 ವರ್ಷಗಳಿಂದ ರಾಜ್ಯದಲ್ಲಿ ಮಹಿಳೆಯರ ಮೇಲೆ ಬಹಳಷ್ಟು ದೌರ್ಜನ್ಯ ಪ್ರಕರಣಗಳು ನಡೆದಿವೆ. ದೆಹಲಿಯಲ್ಲಿರುವಂತೆ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next