Advertisement

ಬುದ್ದಿ ಶುದ್ಧವಾಗಿದ್ದರೆ ಸುಖ-ಶಾಂತಿ ಪ್ರಾಪ್ತಿ

04:03 PM May 26, 2022 | Team Udayavani |

ರಾಣಿಬೆನ್ನೂರ: ಮನುಷ್ಯನ ಬುದ್ಧಿ ಶುದ್ಧವಾಗಿದ್ದರೆ ಸುಖ-ಶಾಂತಿ ಪ್ರಾಪ್ತಿಯಾಗುತ್ತದೆ. ಮನಸ್ಸು, ಬುದ್ಧಿ, ಚಿತ್ತ ಶುದ್ಧವಾಗಿರದ ವ್ಯಕ್ತಿಗೆ ಶಾಂತಿ, ನೆಮ್ಮದಿ, ಸಂತೃಪ್ತಿ ಮತ್ತು ಮುಕ್ತಿ ಸಿಗುವುದಿಲ್ಲ ಎಂದು ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ| ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.

Advertisement

ಬುಧವಾರ ತಾಲೂಕಿನ ಸುಕ್ಷೇತ್ರ ಖಂಡೇರಾಯನಹಳ್ಳಿ ಸಿದ್ಧಾರೂಢ ಮಠದಲ್ಲಿ ಸದ್ಗುರು ಸಿದ್ಧಾರೂಢಸ್ವಾಮಿಗಳ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ 25ನೇ ವೇದಾಂತ ಪರಿಷತ್‌, ಡಾ| ಶಿವಾನಂದ ಭಾರತಿ ಮಹಾಸ್ವಾಮೀಜಿಗಳ 82ನೇ ಜಯಂತ್ಯುತ್ಸವ ಹಾಗೂ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶಿವಾವತಾರಿ ಭೂಲೋಕ ವಾಸಿಯಾದ ಸಿದ್ಧಾರೂಢರು ಸರ್ವ ಜೀವಿಗಳೂ ಸುಖ, ಶಾಂತಿ, ನೆಮ್ಮದಿ, ಮುಕ್ತಿ ಪಡೆಯಲೆಂಬ ಸಂಕಲ್ಪದಿಂದ ಜಾತಿ, ಮತ, ಪಂಥಗಳ ಬೇಧವಿಲ್ಲದೆ ಶಾಂತಿ ಮಂತ್ರ ಬೋಧಿಸಿದ ಮಹಾತ್ಮರು. ಅಂತಹವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಜಾತಿಯ ಸೋಂಕು ತಗುಲದೆ ಸರ್ವರೂ ಒಂದಾಗಿ ಬಾಳಲು ಸಾಧ್ಯ. ಅಲ್ಲದೇ, ಸತ್ಸಂಗದಿಂದ ಜನ್ಮಜನ್ಮಾಂತರ ಪಾಪ ಕರ್ಮಗಳು ನಾಶವಾಗಿ ಮುಕ್ತಿ ಪಡೆಯಲು ಸಾಧ್ಯ ಎಂದು ನುಡಿದರು.

ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಶ್ರೀಗಳು ಮಾತನಾಡಿ, ಮನುಷ್ಯ ಮನಸ್ಸು, ಬುದ್ಧಿ, ಚಿತ್ತಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಸದ್ಗುರುವಿನ ಉಪದೇಶ ಆಲಿಸಿದಾಗಲೇ ಸದ್ಗತಿ ಪಡೆಯಲು ಸಾಧ್ಯ. ಮಹಾತ್ಮರ ದರ್ಶನ ಫಲದಿಂದಾಗಿ ಕಠೊರತೆಯಿಂದ ಕಾಡಿನಲ್ಲಿ ಜೀವಿಸುತ್ತಿದ್ದ ವಾಲ್ಮೀಕಿ ಶ್ರೀರಾಮನ ದರ್ಶನ ಪಡೆದ ಕಾರಣ ಸಕ್ಷಾತ್ಕಾರ ಹೊಂದಿ ರಾಮಾಯಣ ರಚಿಸಿ, ಆದಿಕವಿ ವಾಲ್ಮೀಕಿ ಮಹರ್ಷಿಯಾದರು. ಸತ್ಸಂಗ ಮನುಷ್ಯನನ್ನು ಒತ್ತಡದ ಜೀವನದಿಂದ ಬಿಡುಗಡೆ ಮಾಡಿ ಮುಕ್ತಿಯ ಕಡೆಗೆ ಕೊಂಡೊಯ್ಯುವ ಸನ್ಮಾರ್ಗವಾಗಿದೆ ಎಂದರು.

ಹಲವಾರು ಜನ್ಮಗಳ ಪುಣ್ಯದ ಫಲವಾಗಿ ಮನುಷ್ಯ ಜನ್ಮ ಪ್ರಾಪ್ತಿಯಾಗಿದೆ. “ಪರೋಪಕಾರಂ ಇದಂ ಶರೀರಂ’ ಎಂಬಂತೆ ಪ್ರತಿಯೊಬ್ಬ ಮನುಷ್ಯ ತನ್ನ ಜೀವಿತದ ಅವ ಧಿಯಲ್ಲಿ ಪುಣ್ಯ ಕಾರ್ಯಗಳನ್ನು ಮಾಡುವುದರೊಂದಿಗೆ ಭಗವಂತನ ಕೃಪೆಗೆ ಪಾತ್ರರಾಗಬೇಕು. ಗುರುವಿನ ಸೇವೆ ಹಾಗೂ ಪುಣ್ಯ ಕಾರ್ಯ ಮಾಡಲು ಏಕಾಗ್ರತೆಗೆ ಸತ್ಸಂಗ ಉತ್ತಮ ಮಾರ್ಗವಾಗಿದೆ ಎಂದು ತಿಳಿಸಿದರು.

Advertisement

ದಾವಣಗೆರೆ ಜಡಿಸಿದ್ಧೇಶ್ವರ ಮಠದ ಶಿವಾನಂದ ಶ್ರೀಗಳು ಮಾತನಾಡಿ, ಮನುಷ್ಯನ ಜೀವನ ಬಂಡಿಗೆ ಬುದ್ಧಿಯೇ ಸಾರಥಿ. ಸಾರಥಿ ಸರಿಯಾದ ಮಾರ್ಗದಲ್ಲಿ ಸಾಗಿದಾಗ ಮೋಕ್ಷದ ಗುರಿ ಮುಟ್ಟಲು ಸಾಧ್ಯ. ಮಹಾಭಾರತದಲ್ಲಿ ಕರ್ಣನಿಗೆ ಸರಿಯಾದ ಸಾರಥಿ ಇರದ ಕಾರಣ ಆತ ಸೋಲು ಕಂಡ. ಅದೇ ಅರ್ಜುನನಿಗೆ ಬುದ್ಧಿ ಎಂಬ ಶ್ರೀಕೃಷ್ಣ ಪರಮಾತ್ಮ ಸಾರಥಿಯಾಗಿದ್ದರಿಂದ ಗೆಲುವೆಂಬ ಗುರಿ ಮುಟ್ಟಲು ಸಾಧ್ಯವಾಯಿತೆಂದು ಹೇಳಿದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಕುಗ್ರಾಮವಾದ ಖಂಡೇರಾಯನಹಳ್ಳಿಗೆ ದಾರಿಯೇ ಇರಲಿಲ್ಲ. ಗುರು ಕೃಪೆಯಿಂದ ಇಂದು ಈ ಗ್ರಾಮ ಸಂಪದ್ಭರಿತವಾಗಿದೆ. “ಗುರು ಪಾದವನಿಟ್ಟ ನೆಲ ಪುಣ್ಯಕ್ಷೇತ್ರ, ನೀನಿಟ್ಟ ಜಲ ಪಾವನ ತೀರ್ಥ’ ಎಂಬಂತೆ ಡಾ| ಶಿವಾನಂದ ಭಾರತಿ ಶ್ರೀಗಳ ಪಾದ ಸ್ಪರ್ಶದಿಂದ ಇಂದು ಪುಣ್ಯಕ್ಷೇತ್ರವಾಗಿದೆ. ಮುಂದಿನ ವರ್ಷ ಮಹಾರಥೋತ್ಸವದ ಜೊತೆಗೆ ರಜತ ಮಹೋತ್ಸವ ಆಚರಿಸುವ ಸಂಕಲ್ಪ ಮಾಡಿದ್ದೇವೆ ಎಂದರು.

ಶ್ರೀಮಠದ ಪೀಠಾಧಿಪತಿ ನಾಗರಾಜಾನಂದ ಮಹಾಸ್ವಾಮೀಜಿ, ಚಳಗೇರಿ ಕಟಗಿಹಳ್ಳಿ ಮಠದ ಡಾ|ಮಹಾಂತೇಶ್ವರ ಶ್ರೀಗಳು, ಐರಣಿ ಹೊಳೆಮಠದ ಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಇಂಚಲದ ಪ್ರರ್ಣಾನಂದ ಭಾರತಿ ಶ್ರೀಗಳು, ಹದಡಿ ಚಂದ್ರಗಿರಿ ಮಠದ ಮುರಳೀಧರ ಶ್ರೀಗಳು, ನಗರ ವಿರಕ್ತಮಠದ ಗುರುಬಸವ ಶ್ರೀಗಳು, ಮಣಕೂರ ಸಿದ್ಧಾರೂಢ ಗುರುದೇವಾಶ್ರಮದ ಮಾತಾಜಿ ಚನ್ನಬಸಮ್ಮನವರು, ಗೋಕಾಕ ತಾಲೂಕು ಹಡಗಿನಾಳದ ಸುಜ್ಞಾನ ಕುಟೀರದ ಮಲ್ಲೇಶ್ವರ ಶರಣರು ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿಯ ಒಂದು ಚರಣದ ಮತಿಗೆ ಮಂಗಲವಿವುದಾವದುತ್ತಮರ ಸಂಗ ವಿಷಯ ಕುರಿತು ಉಪದೇಶಾಮೃತ ನೀಡಿದರು.

ಹರಿಹರ ಮಾಜಿ ಶಾಸಕರಾದ ಶಿವಶಂಕರ, ಬಿ.ಪಿ. ಹರೀಷ, ಬೆಂಗಳೂರ ಗಿರೀಶ ಭೈರತಿ, ಗ್ರಾಪಂ ಅಧ್ಯಕ್ಷೆ ನೀಲಮ್ಮ ಪೂಜಾರ, ಉಪಾಧ್ಯಕ್ಷೆ ಲಲಿತಾ ಹಿರೇಬಿದರಿ, ಸದಸ್ಯರಾದ ಮಲ್ಲೇಶಪ್ಪ ತೋಟಗೇರ, ಶಕುಂತಲಾ ಕೊಡ್ಲೇರ, ಶ್ರೀಮಠದ ಅಧ್ಯಕ್ಷ ಫಕ್ಕೀರಪ್ಪಗೌಡ್ರ, ಜನಾರ್ದನ ಕಡೂರ, ಡಾ| ಎಂ.ಸುನಿತಾ, ಅರುಣಸ್ವಾಮಿ ಹಿರೇಮಠ, ನ್ಯಾಯವಾದಿ ಎಂ.ಬಿ.ಚಿನ್ನಪ್ಪನವರ, ಡಾಕೇಶ ಲಮಾಣಿ, ಗಂಗಾಧರ ಬಣಕಾರ, ಕರಬಸಪ್ಪ ಮಾಕನೂರ ಇತರರಿದ್ದರು.

ಬ್ರಾಹ್ಮೀ ಮುಹೂರ್ತದಲ್ಲಿ ಸಿದ್ಧಾರೂಢರ ಪಂಚಲೋಹದ ಮೂರ್ತಿಗೆ ಪಂಚಾಮೃತ ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳನ್ನು ಚನ್ನಯ್ಯ ಶಾಸ್ತ್ರೀಗಳು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ನಗರದ ವಕೀಲ ಎಂ.ಬಿ. ಚಿನ್ನಪ್ಪನವರ ಹಾಗೂ ದಾವಣಗೆರೆ ಬಾಪೂಜಿ ಮೆಡಿಕಲ್‌ ಕಾಲೇಜಿನ ಡಾ| ಎಂ.ಸುನಿತಾ ಕುಟುಂಬದವರಿಂದ ಡಾ| ಶಿವಾನಂದ ಭಾರತಿ ಶ್ರೀಗಳ ತುಲಾಬಾರ ನೆರವೇರಿಸಲಾಯಿತು. ನಂತರ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next