Advertisement

ರಾಜ್ಯದಲ್ಲೂ ಪ್ಲಾಸ್ಮಾ ಥೆರಪಿ ಚಿಕಿತ್ಸಾ ಪ್ರಯೋಗಕ್ಕೆ ಅನುಮತಿ

09:16 AM Apr 23, 2020 | Hari Prasad |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ವೈರಸ್ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸಾ ಪ್ರಯೋಗ ಆರಂಭಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಬೆಂಗಳೂರಿನ ಹೆಲ್ತ್‌ ಕೇರ್‌ ಗ್ಲೋಬಲ್‌ ಎಂಟ್ರಪ್ರೈಸಸ್‌ ಲಿ.ನವರಿಗೆ ಒಪ್ಪಿಗೆ ನೀಡಿದೆ.

Advertisement

ಪ್ಲಾಸ್ಮಾ ಥೆರಪಿ ಅಳವಡಿಸಿಕೊಳ್ಳಲು ಅನುಮತಿ ನೀಡಲು ಐಸಿಎಂಆರ್‌ಗೆ ರಾಜ್ಯ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ಐಸಿಎಂಆರ್‌ ಎಚ್‌ಸಿಜಿ ಬೆಂಗಳೂರು ಇನ್ಸ್ಟಿಟ್ಯೂಟ್‌ ಆಫ್ ಆಂಕಾಲಾಜಿಯ ಡಾ|ವಿಶಾಲ್‌ ರಾವ್‌ ನೇತೃತ್ವದ ತಜ್ಞ ವೈದ್ಯರ ತಂಡದಿಂದ ಪ್ಲಾಸ್ಮಾ ಚಿಕಿತ್ಸೆ ಅಧ್ಯಯನ ಆರಂಭಿಸಲು ಅನುಮತಿ ನೀಡಿದೆ.

ಡಾ| ವಿಶಾಲ್‌ರಾವ್‌ ನೇತೃತ್ವದ ತಂಡವು ಕೋವಿಡ್‌ 19 ವೈರಸ್‌ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವ ವಿಕ್ಟೋರಿಯಾ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡು ಕೆಲವು ಸೋಂಕಿತರ ಮೇಲೆ ತಮ್ಮ ಅಧ್ಯಯನ ಮಾಡಲಿದೆ.

ಈ ಮಧ್ಯೆ, ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿಗೆ ಅನುಮತಿ ಸಿಕ್ಕಿರುವುದರಿಂದ ರಾಜ್ಯದ ಎಲ್ಲ ವೈದ್ಯಕೀಯ ಮಹಾವಿದ್ಯಾಲಯಗಳು ಕೂಡ ಈ ಕುರಿತಂತೆ ಕೂಡಲೇ ಪ್ರಸ್ತಾವನೆ ಸಲ್ಲಿಸಲು ಆರೋಗ್ಯ ಇಲಾಖೆ ನಿರ್ದೇಶನ ಜಾರಿ ಮಾಡಿದೆ ಎಂದು ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಪ್ಲಾಸ್ಮಾ ಥೆರಪಿ ಹೇಗೆ?
ಕೋವಿಡ್ 19 ವೈರಸ್ ‌ನಿಂದ ಚೇತರಿಸಿಕೊಂಡವರ ದೇಹದಿಂದ ರಕ್ತ ಪಡೆದು ಅದರಲ್ಲಿನ ರೋಗ ನಿರೋಧಕ ಕಣಗಳನ್ನು (ಪ್ಲಾಸ್ಮಾ) ಬೇರ್ಪಡಿಸಿ ಅದನ್ನು ಮತ್ತೂಬ್ಬ ಸೋಂಕಿತ ರೋಗಿಯ ದೇಹಕ್ಕೆ ಸೇರಿಸುತ್ತಾರೆ.

Advertisement

ಒಬ್ಬ ವ್ಯಕ್ತಿಯ ದೇಹದಿಂದ ರೋಗ ನಿರೋಧಕ ಕಣ ತೆಗೆದು, ಒಂದು ಡೋಸ್‌ನಂತೆ ಇಬ್ಬರು ರೋಗಿಗಳಿಗೆ ನೀಡಬಹುದಾಗಿದೆ. ಕೋವಿಡ್ 19 ವೈರಸ್ ನಿಂದ ಚೇತರಿಸಿಕೊಂಡವರ ದೇಹದಲ್ಲಿ ವೈರಾಣು ವಿರುದ್ಧ ಹೋರಾಡಿದ್ದ ಕಣಗಳು, ಇನ್ನೊಬ್ಬರ ದೇಹ ಸೇರಿದಾಗ ಹೋರಾಟ ಮುಂದುವರಿಸುತ್ತವೆ.

ಜತೆಗೆ ಆ ರೋಗಿಯ ದೇಹದಲ್ಲೂ ರೋಗ ನಿರೋಧಕ ಕಣಗಳನ್ನು ಸಕ್ರಿಯವಾಗಿಸುತ್ತವೆ. ಇದರಿಂದ ಆ ರೋಗಿ ಕೂಡ ಸೋಂಕಿನಿಂದ ಚೇತರಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next