Advertisement

ಬಿಜೆಪಿ ಜತೆಗಿನ ಸಂಬಂಧ ಮುಗಿಯಿತು, ಮುಂದಿನ ಚುನಾವಣೆಯಲ್ಲೇ ಸ್ಪರ್ಧೆ ಮಾಡ್ತೇನೆ: ಗುಡುಗಿದ ರೆಡ್ಡಿ

12:57 PM Dec 25, 2022 | Team Udayavani |

ಬೆಂಗಳೂರು: “ಹೇಳಿದ್ದು ‌ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು.‌ ನಿಧಾನಿಸಿ ಯೋಚಿಸಿದಾಗ ನಿಜ ತಿಳಿಯುವುದು…  ಬಿಜೆಪಿಗೂ ನನಗೂ ಸಂಬಂಧ ಮುಗಿಯಿತು..” ಕರ್ನಾಟಕ ಸರ್ಕಾರದ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರು ಹೀಗೆ ಘೋಷಣೆ ಮಾಡಿಕೊಂಡಿದ್ದಾರೆ.

Advertisement

ಹೊಸ ರಾಜಕೀಯ ಇನ್ನಿಂಗ್ಸ್ ನ ಭಾಗವಾಗಿ ನೂತನ ಪಕ್ಷವನ್ನು ಸ್ಥಾಪನೆ ಮಾಡುವುದಾಗಿ ಜನಾರ್ದನ ರೆಡ್ಡಿ ಅವರು ಘೋಷಣೆ ಮಾಡಿಕೊಂಡಿದ್ದಾರೆ. ಹೊಸ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ವನ್ನು ಸ್ಥಾಪನೆ ಮಾಡಿ ಮುಂದಿನ‌ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಮುಂದಿನ ಚುನಾವಣೆಯಲ್ಲೇ ಸ್ಪರ್ಧೆ ಮಾಡುತ್ತೇನೆ. ಗಂಗಾವತಿ ಕ್ಷೇತ್ರದಲ್ಲಿ ಈಗಾಗಲೇ ಮನೆ ಮಾಡಿದ್ದೇನೆ. ವೋಟರ್ ಲಿಸ್ಟ್ ನಲ್ಲೂ ನನ್ನ ಹೆಸರು ಸೇರ್ಪಡೆಯಾಗಿದೆ. ಅಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ ಯಾವುದೇ ಅನುಮಾನ ಬೇಡ ಎಂದು ಘೋಷಿಸಿದರು.

ಬಿಎಸ್ ವೈ ಶಕ್ತಿ ಕಿತ್ತುಕೊಳ್ಳಲಾಗದು: ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಸಹಾಯವನ್ನು ಈ ವೇಳೆ ಜನಾರ್ದನ ರೆಡ್ಡಿ ನೆನೆದರು. ನಾನು ಕಷ್ಟದಲ್ಲಿ ಇದ್ದಾಗ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಬಿಟ್ಟು ಇನ್ಯಾರೂ ನನ್ನ ಮನೆಗೆ ಬಂದಿರಲಿಲ್ಲ. ಅವರು ಇಬ್ಬರು ಮಾತ್ರ ನನಗೆ ಧೈರ್ಯ ತುಂಬಿದ್ದರು. ಅವರನ್ನು ನಾನು ನೆನಪು ಮಾಡಿಕೊಳ್ಳುತ್ತೇನೆ ಎಂದರು.

ಇದನ್ನೂ ಓದಿ:ಹೊಸ ರಾಜಕೀಯ: ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಮಾಡುವುದಾಗಿ ಘೋಷಿಸಿದ ಜನಾರ್ದನ ರೆಡ್ಡಿ

Advertisement

ವಿಜಯೇಂದ್ರ ಅವರು ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದರು. ಆದರೆ ವಿಜಯೇಂದ್ರಗೆ ಟಿಕೆಟ್ ಕೊಡುವುದಿಲ್ಲವೆಂದು ಮೊದಲೇ ಹೈಕಮಾಂಡ್ ಹೇಳಬೇಕಿತ್ತು. ನಾಮಪತ್ರ ಸಲ್ಲಿಕೆಗೆ ಅವರು ಸಿದ್ದವಾಗಿದ್ದರು. ರಾಮುಲು ಕೂಡಾ ವಿಜಯೇಂದ್ರ ನಾಮಪತ್ರ ಸಲ್ಲಿಕೆಗೆ ಹೋಗಬೇಕೆಂದು ಹೇಳಿದ್ದರು. ಆದರೆ ವೇದಿಕೆ ಮೇಲೆ ಯಡಿಯೂರಪ್ಪ ವಿಜಯೇಂದ್ರ ಸ್ಪರ್ಧೆ ಮಾಡುವುದಿಲ್ಲ ಅಂದರು. ಯಡಿಯೂರಪ್ಪ ಬಾಯಲ್ಲಿಯೇ ಅದನ್ನ ಹೇಳಿಸಿದರು. ತಂದೆ ಬಾಯಲ್ಲಿ ಹೀಗೆ ಹೇಳಿಸಲು ಏನೆಲ್ಲ ಒತ್ತಡವಿತ್ತು. ಅವತ್ತು ವಿಜಯೇಂದ್ರಗೆ ಟಿಕೆಟ್ ಕೊಟ್ಟಿದ್ದರೆ ಇನ್ನಷ್ಟು ಸ್ಥಾನ ಬಿಜೆಪಿಗೆ ಬರುತ್ತಿತ್ತು. ನನ್ನನ್ನು ಮೊಳಕಲ್ಮೂರಿಗೆ ಸೀಮಿತ ಮಾಡದೇ ಇದ್ದಿದ್ದರೆ 130 ಸ್ಥಾನ ಬಿಜೆಪಿಗೆ ಬರುತ್ತಿತ್ತು ಎಂದು ರೆಡ್ಡಿ ಹೇಳಿದರು.

ಬಿಜೆಪಿಯಲ್ಲಿ ಯಡಿಯೂರಪ್ಪ ಸೈಡ್ ಲೈನ್ ಆಗಿದ್ದಾರಾ ಎಂಬ ಪ್ರಶ್ನಗೆ ಉತ್ತರಿಸಿದ ಅವರು, ಯಡಿಯೂರಪ್ಪನವರ ಅಧಿಕಾರವನ್ನು ಕಿತ್ತುಕೊಳ್ಳಬಹುದು. ಆದರೆ ಅವರ ಶಕ್ತಿ ಯಾರು ಕಿತ್ತುಕೊಳ್ಳಲು ಆಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next