Advertisement

ನಾನು ತಪ್ಪು ಮಾಡಿಲ್ಲ, ಸುಳ್ಳು ಹೇಳಿ 2ನೇ ಸೈಟ್‌ ಪಡೆದಿಲ್ಲ ದಾಖಲೆ ಇದೆ

03:45 AM Jan 18, 2017 | Harsha Rao |

ಬೆಂಗಳೂರು: “ನನ್ನ ವಿರುದ್ಧ ಮಾಡಲಾಗಿರುವ ನಿವೇಶನ ಖರೀದಿ ಹಾಗೂ ಗೋಮಾಳ ಜಮೀನು ವಿವಾದ ಆಧಾರ ರಹಿತ. ನಾನು ನ್ಯಾಯಮೂರ್ತಿಯಾಗಲು ಅರ್ಹನಾಗಿದ್ದವನು. ಈಗ ಏಕೆ ಅನರ್ಹನಾಗುತ್ತೇನೆ? ಲೋಕಾಯುಕ್ತ ಹುದ್ದೆ ಭರ್ತಿಯಾಗದಂತೆ ನೋಡಿಕೊಳ್ಳಲು ಕೆಲವರು ನಡೆಸುತ್ತಿರುವ ಷಡ್ಯಂತ್ರವಿದು. ಕಾನೂನುಪ್ರಕಾರ ನಾನೇನೂ ತಪ್ಪು ಮಾಡಿಲ್ಲ. ಎಲ್ಲವನ್ನೂ ಉಡುಪಿಯ ಶ್ರೀಕೃಷ್ಣ ಪರಮಾತ್ಮನೇ ನೋಡಿಕೊಳ್ಳುತ್ತಾನೆ’.

Advertisement

ಲೋಕಾಯುಕ್ತ ಸ್ಥಾನಕ್ಕೆ ಸರ್ಕಾರದಿಂದ ಶಿಫಾರಸುಗೊಂಡಿರುವ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಹೇಳಿರುವ ನೇರ ಮಾತಿದು. ರಾಜ್ಯಪಾಲರು ಇದೀಗ ನ್ಯಾ.ವಿಶ್ವನಾಥ ಶೆಟ್ಟಿ ಮೇಲಿರುವ ಆರೋಪಗಳ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಕೇಳಿ ಅವರ ಶಿಫಾರಸು ಕಡತವನ್ನು ವಾಪಸ್‌ ಕಳುಹಿಸಿದ್ದಾರೆ. ಈ ಬೆಳವಣಿಗೆ ಹಾಗೂ ತಮ್ಮ ಮೇಲಿನ ಆರೋಪಗಳ ಬಗ್ಗೆ ನ್ಯಾ.ವಿಶ್ವನಾಥ ಶೆಟ್ಟಿ ಅವರು “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ
ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.

ರಾಜ್ಯಪಾಲರು ಈಗ ಲೋಕಾಯುಕ್ತ ನೇಮಕ ಶಿಫಾರಸು ಕಡತವನ್ನು ವಾಪಸ್‌ ಕಳುಹಿಸಿರುವ ಬಗ್ಗೆ ನಿಮ್ಮ ಅಭಿಪ್ರಾಯ?
-ಆ ಬಗ್ಗೆ ನನಗೇನೂ ಗೊತ್ತಿಲ್ಲ. ಅಷ್ಟೇ ಅಲ್ಲ, ಈ ಹಂತದಲ್ಲಿ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ರಾಜ್ಯಪಾಲರ ಬಗ್ಗೆ ಮತ್ತು ಆ ಹುದ್ದೆಯ ಬಗ್ಗೆ ನನಗೆ ಅಪಾರ ಗೌರವವಿದೆ. ಹೀಗಾಗಿ, ನೋ ಕಮೆಂಟ್ಸ್‌.

-„ ಲೋಕಾಯುಕ್ತ ಹುದ್ದೆಗೆ ನೀವು ಆಕಾಂಕ್ಷಿಯಾಗಿದ್ದೀರಾ?
 ಲೋಕಾಯುಕ್ತ ಹುದ್ದೆ ಕೊಡಿ ಅಂತ ನಾನೆಂದು ಸರ್ಕಾರಕ್ಕೆ ಕೇಳಿರಲಿಲ್ಲ. ಏಕೆಂದರೆ, ಅದಕ್ಕಿಂತ ಉನ್ನತ ಮಟ್ಟದ ಸಾಂವಿಧಾನಿಕ ಹುದ್ದೆಯಾದ ನ್ಯಾಯಮೂರ್ತಿಯಾಗಿ ಸುದೀರ್ಘ‌ ಕಾಲ ಕೆಲಸ ಮಾಡಿ ಬಂದವನು. ನನ್ನ ವ್ಯಕ್ತಿತ್ವ ಮತ್ತು ಹಿನ್ನೆಲೆ ಪರಿಗಣಿಸಿ ಸರ್ಕಾರವೇ ನನ್ನ ಹೆಸರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಿ, ಉನ್ನತ ಮಟ್ಟದ ಸಮಿತಿ ಮೂಲಕ ಶಿಫಾರಸು ಮಾಡಿದೆ. ಆದರೆ, ರಾಜ್ಯಪಾಲರಿಗೆ ಶಿಫಾರಸು ಕಳುಹಿಸುವ ಮೊದಲು ಪರೋಕ್ಷವಾಗಿ ಸರ್ಕಾರ ನನ್ನ
ಒಪ್ಪಿಗೆ ಕೇಳಿತ್ತು. ಅದಕ್ಕೆ ನಾನು ಓಕೆ ಅಂದಿದ್ದೆ ಅಷ್ಟೇ. 

-„ ಏನಿದು ನಿಮ್ಮ ಮೇಲಿನ ಅಕ್ರಮ ಸೈಟ್‌ ಖರೀದಿ ಆರೋಪ?
 ನೋಡಿ, ನ್ಯಾಯಮೂರ್ತಿ ಆಗುವುದಕ್ಕೂ ಮೊದಲೇ ಅಂದರೆ, 1976ರಲ್ಲಿ ಆರ್‌ಟಿ ನಗರದಲ್ಲಿ ನನಗೆ ಬಿಡಿಎನಿಂದ ನಿವೇಶನ ಮಂಜೂರು ಆಗಿತ್ತು. 1984ರಿಂದಲೂ ಆ ಮನೆಯಲ್ಲಿ ವಾಸವಾಗಿದ್ದೇನೆ. ಆನಂತರ, 1995ರಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದು, ಆ ಹುದ್ದೆಯಲ್ಲಿ ಇರುವಾಗಲೇ ಜಿಕೆವಿಕೆ ಬಳಿಯಿರುವ ನ್ಯಾಯಾಂಗ ಬಡಾವಣೆಯಲ್ಲಿ 2ನೇ ನಿವೇಶನವನ್ನು ನನ್ನ ಹೆಸರಿನಲ್ಲೇ ಮಂಜೂರು ಮಾಡಿಸಿಕೊಂಡಿದ್ದೆ. ಆಗ ಆ ಬಡಾವಣೆ ಬಿಡಿಎ ವ್ಯಾಪ್ತಿಯಿಂದ ಹೊರಗಿತ್ತು.

Advertisement

-„ ಹಾಗಾದರೆ, 2ನೇ ನಿವೇಶನ ಪಡೆದು ಕೊಂಡಿರುವುದು ಕಾನೂನುಬಾಹಿರವಲ್ಲವೇ?
ಈ ವಿಚಾರದಲ್ಲಿ ನಾನೇನು ತಪ್ಪು ಮಾಡಿಲ್ಲ. ಏಕೆಂದರೆ, ನ್ಯಾಯಾಂಗ ಬಡಾವಣೆ ಈ ನಿವೇಶನಕ್ಕೆ ಅರ್ಜಿ ಸಲ್ಲಿಸಬೇಕಾದರೆ, ಆರ್‌.ಟಿ.ನ ಗರ ನಿವೇಶನದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖೀಸಿದ್ದೆ. ಆದರೆ, ಆ ಬಗ್ಗೆ ಅμಡವಿಟ್‌ ಸಲ್ಲಿಸಿರಲಿಲ್ಲ. ಹೀಗಾಗಿ, ಸುಳ್ಳು ಹೇಳಿ 2ನೇ ನಿವೇಶನ ಖರೀದಿಸಿಲ್ಲ.

„ ಹಾಗಾದರೆ, ಇಲ್ಲಿ ನಿಮ್ಮದೇನೂ ತಪ್ಪಿಲ್ಲ ವೇ?
ಖಂಡಿತಾ ಇಲ್ಲ; ಅಷ್ಟೇ ಏಕೆ, ನ್ಯಾಯಮೂರ್ತಿ ಸ್ಥಾನದಲ್ಲಿರುವಾಗಲೇ ಈ ನಿವೇಶನ ನನ್ನ ಹೆಸರಿಗೆ ಹಂಚಿಕೆಯಾಗಿತ್ತು. ನನ್ನ ಜತೆಗೆ ಬಹಳಷ್ಟು ಮಂದಿ ನ್ಯಾಯಮೂರ್ತಿಗಳು ಈ ಬಡಾವಣೆಯಲ್ಲಿ ನಿವೇಶನಗಳನ್ನು ಪಡೆದುಕೊಂಡಿದ್ದರು. ಈ ಬಡಾವಣೆಯಲ್ಲಿ ಸೈಟ್‌ ಇರುವ ಬಹಳಷ್ಟು ಹಾಲಿ ಹೈಕೋರ್ಟ್‌, ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳು ಉನ್ನತವಾದ ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಹೀಗಾಗಿ, ನ್ಯಾಯಮೂರ್ತಿಯಾಗಿದ್ದಾಗ ಇಲ್ಲದ ಆರೋಪಗಳು ಈಗ ಯಾಕೆ?

-„ ಇನ್ನು, ನಿಮ್ಮ ಹೆಂಡತಿ, ಮಗನ ಹೆಸರಿನಲ್ಲಿಯೂ ಸೈಟ್‌ ಇದೆಯಲ್ಲಾ?
 ಸೂಕ್ತ ದಾಖಲೆಗಳೊಂದಿಗೆ 1986ರಲ್ಲಿ ಬೆಂಗಳೂರಿನಲ್ಲಿ ನನ್ನ ಹೆಂಡತಿ ಹೆಸರಿನಲ್ಲಿ ಕೃಷಿ ಭೂಮಿ ಖರೀದಿಯಾಗಿದೆ. ಅದು ಸರ್ಕಾರಿ ಗೋಮಾಳ ಭೂಮಿ ಅಲ್ಲ ಎಂಬುದಕ್ಕೆ ಸೂಕ್ತ ದಾಖಲೆಯಿದೆ. ನನ್ನ ಮಕ್ಕಳು ಸ್ವತಂತ್ರವಾಗಿ
ಬದುಕುತ್ತಿದ್ದಾರೆ. ಈ ನಡುವೆ, ನನ್ನ ಮತ್ತು ಹೆಂಡತಿ ಕುಟುಂಬ ಕೂಡ ಉಡುಪಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಹೊಂದಿದ್ದೇಧಿವೆ.

-„ ಆರೋಪಗಳನ್ನು ನೋಡಿದರೆ, ನೀವು ಲೋಕಾಯುಕ್ತ ಸ್ಥಾನಕ್ಕೆ ಅರ್ಹ ವ್ಯಕ್ತಿ ಅಂಥ ಅನಿಸುತ್ತದೆಯೇ?
ಜಡ್ಜ್ ಆಗಿ ಅರ್ಹನಾಗಿದ್ದವನು, ಈಗ ಹೇಗೆ ಅನರ್ಹನಾಗುತ್ತೇನೆ? ಒಂದು ವೇಳೆ, ನಾನು ಅರ್ಹನಾಗಿಲ್ಲದಿದ್ದರೆ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಲಹಾ ಸಮಿತಿ ನನ್ನ ಹೆಸರನ್ನು ಶಿಫಾರಸು ಮಾಡುವುದೇ? ಸಮಿತಿಯಲ್ಲಿ ಒಮ್ಮತದ ತೀರ್ಮಾನ ಆಗುವುದೇ?

– ಹಾಗಾದರೆ, ನಿಮ್ಮ ಹೆಸರು ಲೋಕಾಯುಕ್ತ ಹುದ್ದೆಗೆ ಸೂಕ್ತ ಆಯ್ಕೆಯೇ?
ಈ ಬಗ್ಗೆ ನಾನೇನು ಹೇಳಲಾರೆ. 1995ರಿಂದ ಹತ್ತೂವರೆ ವರ್ಷ ನ್ಯಾಯಮೂರ್ತಿಯಾಗಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ನಿವೃತ್ತಿ ಬಳಿಕವೂ ಸುಪ್ರೀಂಕೋರ್ಟ್‌ನಲ್ಲಿ ಹಿರಿಯ ವಕೀಲನಾಗಿದ್ದೇನೆ. ವಕೀಲನಾಗಿ, ನ್ಯಾಯಮೂರ್ತಿ
ಯಾಗಿ ನನ್ನ ನಡತೆ ಬಗ್ಗೆ ನಿವೃತ್ತ ನ್ಯಾ.ಸಂತೋಷ್‌ ಹೆಗ್ಡೆ ಸೇರಿದಂತೆ ಬೇರೆಯವರಲ್ಲಿ ಕೇಳಿಕೊಳ್ಳಿ. ಅವರೆಲ್ಲ ನಾನು “ಅನ್‌μಟ್‌’ ಅಂಥ ಹೇಳಲಿ.

-„ ರಾಜ್ಯಪಾಲರು ಒಪ್ಪಿದರೆ, ಲೋಕಾಯುಕ್ತ ಹುದ್ದೆ ವಹಿಸಿಕೊಳ್ಳಲು ನೀವು ಸಿದ್ಧರಿದ್ದೀರಾ?
ದುಡ್ಡು ಮಾಡುವ ಉದ್ದೇಶವಿಟ್ಟುಕೊಂಡು ಲೋಕಾಯುಕ್ತನಾಗಲು ಬಯಸಿಲ್ಲ. ಜನರ ಸೇವೆಗೆ ಇದೊಂದು ದೊಡ್ಡ ಅವಕಾಶ ಎಂಬ ಕಾರಣಕ್ಕೆ ಆ ಸ್ಥಾನಕ್ಕೆ ಆಸೆಪಟ್ಟಿದ್ದೇನೆ. ಒಂದೊಮ್ಮೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದರೆ,
ಸಂತೋಷದಿಂದ ಆ ಹುದ್ದೆಯಲ್ಲಿ ಕೆಲಸ ಮಾಡುವೆ.

-„ ಇಂತಹ ಆರೋಪ ಗಮನಿಸಿದರೆ, ರಾಜ್ಯದಲ್ಲಿ ಲೋಕಾಯುಕ್ತಕ್ಕೆ ಅರ್ಹರು ಇಲ್ಲವೇ?
ಲೋಕಾಯುಕ್ತ ಸ್ಥಾನಕ್ಕೆ ಅರ್ಹರಾದವರು ಕರ್ನಾಟಕದಲ್ಲಿ ಯಾರೂ ಇಲ್ಲವೇ? ಎಷ್ಟು ದಿನ ಅಂತ ಆ ಸ್ಥಾನವನ್ನು ಹಾಗೆಯೇ ಖಾಲಿ ಬಿಟ್ಟಿರಬೇಕು. ಆದರೆ, ಇದರಿಂದ ಬಹಳಷ್ಟು ಮಂದಿಗೆ ಲಾಭವಾಗುತ್ತದೆ. ಅದೊಂದೇ ಕಾರಣಕ್ಕೆ
ಕೆಲವರು ವಿವಾದ ಸೃಷ್ಟಿಸಿ, ಲೋಕಾಯುಕ್ತವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

-„ ಒಂದು ವೇಳೆ ನಿಮಗೆ ಲೋಕಾಯುಕ್ತ ಹುದ್ದೆ ಕೈತಪ್ಪಿ ಹೋದರೆ?
ಹಾಗಾದರೆ, ನನಗೇನೂ ಬೇಸರವಿಲ್ಲ. ನನ್ನ ಮೇಲೆ ಕೆಲವರು ಮಾಡುತ್ತಿರುವ ಇಂಥಹ ಸುಳ್ಳು ಆರೋಪಗಳಿಗೆ ತಲೆಕೆಡಿಸಿಕೊಳ್ಳುವ ವ್ಯಕ್ತಿ ನಾನಲ್ಲ. ಅಧಿಕಾರದ ಬಗ್ಗೆ ಆಸೆ ಇಲ್ಲ. ಎಲ್ಲ ಆರೋಪಗಳಿಗೂ ನನ್ನ ಬಳಿ ಸೂಕ್ತ
ದಾಖಲೆಗಳೊಂದಿಗೆ ಉತ್ತರಿಸಲು ಸಿದ್ಧ.

– ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next