Advertisement

ಮೂರೂವರೆ ವರ್ಷ ನಾನೇ ಮುಖ್ಯಮಂತ್ರಿ

11:10 PM Oct 30, 2019 | Team Udayavani |

ಬೆಂಗಳೂರು: “ಪಕ್ಷದ ಕೇಂದ್ರ ನಾಯಕರಿಗೆ ನನ್ನ ಮೇಲೆ ವಿಶ್ವಾಸವಿರುವುದರಿಂದಲೇ ನನ್ನನ್ನು ಮುಖ್ಯಮಂತ್ರಿಯಾಗಿ ಮಾಡಿದ್ದಾರೆ. ಮುಂದೆಯೂ ಅವಧಿ ಪೂರ್ಣಗೊಳಿಸಲು ಸಂಪೂರ್ಣ ಸಹಕಾರ ನೀಡುವ ವಿಶ್ವಾಸ ವಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಆ ಮೂಲಕ ಮುಂದಿನ ಮೂರೂವರೆ ವರ್ಷಕ್ಕೂ ತಾವೇ ಮುಖ್ಯಮಂತ್ರಿಯಾಗಿರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಬೆಂಗಳೂರು ಪ್ರಸ್‌ಕ್ಲಬ್‌ ಬುಧವಾರ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಯಡಿಯೂ ರಪ್ಪ, ನಮ್ಮದು ರಾಷ್ಟ್ರೀಯ ಪಕ್ಷವಾಗಿರುವುದರಿಂದ ಕೆಲ ಇತಿಮಿತಿಗಳಲ್ಲಿ ಕೆಲಸ ಮಾಡಬೇಕು ಎಂಬ ಅಪೇಕ್ಷೆ ರಾಷ್ಟ್ರೀಯ ನಾಯಕರಿಗೆ ಇರುತ್ತದೆ. ಆದರೆ, ನಾನು ಈವರೆಗೆ ಕೈಗೊಂಡ ಯಾವುದೇ ನಿರ್ಧಾರದ ವಿರುದ್ಧವಾಗಿ ಕೇಂದ್ರ ನಾಯಕರು ಒಂದೇ ಒಂದು ಶಬ್ದ ಆಡಿಲ್ಲ. ನನಗೆ ಮುಕ್ತ ಅವಕಾಶ ನೀಡಿದ್ದಾರೆ. ಸಚಿವ ಸಂಪುಟ ರಚನೆ ಸೇರಿದಂತೆ ಯಾವುದಕ್ಕೂ ಅಡ್ಡಿ ಎದುರಾಗಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ 100 ದಿನ ಆಡಳಿತ ನಡೆಸುವಲ್ಲಿ ಏನೆಲ್ಲಾ ಸಮಸ್ಯೆ ಎದುರಿಸಿದ್ದೇನೆ ಎಂಬುದು ಮಾಧ್ಯಮಗಳಿಗೇ ಗೊತ್ತು. ಎಲ್ಲವನ್ನು ಸರಿಪಡಿಸಿಕೊಂಡು ಮುಂದೆ ಹೋಗುವುದು ಮುಖ್ಯಮಂತ್ರಿ, ನಾಯಕನಾದವನ ಕರ್ತವ್ಯ. ಆ ಕೆಲಸವನ್ನು ಮಾಡುತ್ತಿದ್ದೇನೆ. ಆಡಳಿತ ಪಕ್ಷ, ಪ್ರತಿಪಕ್ಷ ಸೇರಿದಂತೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇನೆ. ಅದರಲ್ಲಿ ಶೇ.100 ಯಶಸ್ಸು ಸಾಧಿಸಿ ಮುಂದಿನ ಮೂರೂವರೆ ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ತಿಳಿಸಿದರು.

12-13 ಸ್ಥಾನ ಗೆಲ್ಲುವ ಸವಾಲಿದೆ: ಸದ್ಯ ನಮ್ಮ ಮುಂದೆ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಯಿದ್ದು, ಅದರಲ್ಲಿ 12- 13 ಸ್ಥಾನ ಗೆಲ್ಲಬೇಕಾದ ಸವಾಲಿದೆ. ಉಪಚುನಾವಣೆಯಲ್ಲಿ ಎಲ್ಲ 15 ಸ್ಥಾನ ಗೆಲ್ಲಲು ಪ್ರಯತ್ನ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು. “ಮುಖ್ಯಮಂತ್ರಿಗಳ ಸಚಿವಾಲಯದ ಕೆಲ ಅಧಿಕಾರಿಗಳ ವರ್ಗಾವಣೆಗೆ ಹೈಕಮಾಂಡ್‌ನ‌ ಒತ್ತಡವಿತ್ತೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮೂವರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಪಕ್ಷದ ವರಿಷ್ಠರ ನಿರ್ಧಾರ.

ಮೂರೂ ಮಂದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ, ನಾನು ಯಾರಿಗೂ ಹೊಸದಾಗಿ ಸ್ಥಾನಮಾನ ನೀಡಿಲ್ಲ. 15- 20 ವರ್ಷಗಳಿಂದ ನಡೆದು ಬಂದಂತೆ ರಾಜ್ಯದ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆಗೆ ಪೂರಕವಾಗಿ ಕೆಲವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲಾಗಿದೆ. ಇದರಲ್ಲಿ ತಪ್ಪಾಗಿದೆ ಎನಿಸುವುದಿಲ್ಲ ಎಂದು ಹೇಳಿದರು.

Advertisement

ಅನರ್ಹ ಶಾಸಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅದು ಪಕ್ಷದ ವರಿಷ್ಠರ ನಿರ್ಧಾರದ ಮೇಲೆ ಅವಲಂಬಿ ತವಾಗಿದೆ. ಅನರ್ಹಗೊಂಡ ಶಾಸಕರ ಪ್ರಕರ ಣಕ್ಕೆ ಸಂಬಂಧಪಟ್ಟಂತೆ ನ.4 ಇಲ್ಲವೇ 5ಕ್ಕೆ ಸುಪ್ರೀಂಕೋರ್ಟ್‌ ತೀರ್ಪು ನೀಡುವ ನಿರೀಕ್ಷೆಯಿದ್ದು, ಅದರಂತೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಒಂದೆರಡು ಅಪವಾದ ಇರಬಹುದು!: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆ ಕುರಿತು ಸಮಿತಿಯಲ್ಲಿ ವಿಸ್ತೃತ ಚರ್ಚೆ ನಡೆಸಿ, ಅಂತಿಮಗೊಳಿಸ ಲಾಗಿದೆ. ಒಂದೆರಡು ಅಪವಾದಗಳಿರಬಹುದು. ಆದರೆ, 64ರಲ್ಲಿ ಬಹಳಷ್ಟು ಮಂದಿ ಯೋಗ್ಯರಿಗೆ ಪ್ರಶಸ್ತಿ ನೀಡಿರುವ ತೃಪ್ತಿ ರಾಜ್ಯದ ಜನರಿಗಿದೆ. ಮೊದಲ ಬಾರಿಗೆ ಪ್ರತಿ ಜಿಲ್ಲೆಗೆ ಆದ್ಯತೆ ನೀಡಲಾ ಗಿದ್ದು, ಇತರ ಕ್ಷೇತ್ರಗಳಲ್ಲಿ ಪರಿಣತಿ ಪಡೆದವರಿಗೂ ಒತ್ತು ನೀಡಲಾಗಿದೆ. ಸಮಿತಿಯಲ್ಲಿದ್ದವರು ನೀಡಿದ ಸಲಹೆ ಕುರಿತೂ ಚರ್ಚೆಯಾಗಿದೆ. ನಾನು ಕೂಡ ಕೆಲ ಸಲಹೆ ನೀಡಿದ್ದೆ. ಎಲ್ಲರ ಸಲಹೆಯಂತೆ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಬಗ್ಗೆ ಅಪಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಯಡಿಯೂರಪ್ಪ ಹೇಳಿದರು.

ಸಿಎಂ ಹೇಳಿದ್ದು…
-ಸಂಪೂರ್ಣ ಹಾನಿಗೊಳಗಾದ 9,366 ಮನೆಗಳ ಪೈಕಿ 7,481 ಮನೆಗಳಿಗೆ ಈಗಾಗಲೇ ಒಂದು ಲಕ್ಷ ರೂ.ನಂತೆ 72.89 ಕೋಟಿ ರೂ.ಬಿಡುಗಡೆಯಾಗಿದೆ. 826 ಮನೆಗಳಿಗೆ ಹಣ ಪಾವತಿಸಬೇಕಿದೆ.

-ಭಾಗಶಃ ಹಾನಿಯಾದ 23,419 ಮನೆಗಳ ಪೈಕಿ 20,049 ಮನೆಗೆ 115.6 ಕೋಟಿ ರೂ.ಬಿಡುಗಡೆಯಾಗಿದ್ದು, 3,500 ಮನೆಗಳಿಗೆ ಪರಿಹಾರ ಪಾವತಿಸಬೇಕಿದೆ.

-ಒಟ್ಟು ಸಂಪೂರ್ಣ ಹಾನಿಯಾದ 32,785 ಮನೆಗಳಿಗೆ ತಲಾ ಒಂದು ಲಕ್ಷ ರೂ.ಮುಂಗಡ ಪಾವತಿಸಲಾಗುತ್ತಿದೆ.

-ಅಲ್ಪ ಸ್ವಲ್ಪ ಹಾನಿಯಾದ 69,440 ಮನೆಗಳ ಪೈಕಿ 64,734 ಮನೆಗಳಿಗೆ 161.51 ಕೋಟಿ ರೂ.ಬಿಡುಗಡೆಯಾಗಿದೆ. 2,360 ಮನೆಗಳಿಗೆ ಪರಿಹಾರವನ್ನು ವಾರದಲ್ಲಿ ಪಾವತಿಸಲಾಗುವುದು.

-ನೆರೆಯಿಂದ ವಿದ್ಯುತ್‌ ಅಡಚಣೆ ಉಂಟಾಗಿದ್ದ 2,877 ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದು, ಇನ್ನು ಎರಡು ಗ್ರಾಮಗಳಿಗೆ ಸದ್ಯದಲ್ಲೇ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುವುದು.

-2,07,623 ಕೃಷಿ ಪಂಪ್‌ಸೆಟ್‌ಗೆ ಹಾನಿಯಾಗಿದ್ದು, ಇದರಲ್ಲಿ 1,89,492 ಕೃಷಿ ಪಂಪ್‌ಸೆಟ್‌ ದುರಸ್ಥಿಪಡಿಸಲಾಗಿದೆ. ಇನ್ನೂ 18,131 ಪಂಪ್‌ಸೆಟ್‌ ದುರಸ್ಥಿಯಾಗಬೇಕಿದ್ದು, ವಾರದಲ್ಲಿ ಸರಿಪಡಿಸಲಾಗುವುದು. ಒಟ್ಟು 269 ಕೋಟಿ ರೂ.ಅಂದಾಜು ನಷ್ಟವಾಗಿದ್ದು, ಸರ್ಕಾರ ಭರಿಸಲಿದೆ.

ರಾಜ್ಯ ಸರ್ಕಾರದ ಹಣಕಾಸಿನ ಸ್ಥಿತಿ ಚೆನ್ನಾಗಿದ್ದು, ತೆರಿಗೆ ಸಂಗ್ರಹಣೆಯೂ ಉತ್ತಮವಾಗಿದೆ. ಎಲ್ಲ ಸಮಸ್ಯೆ, ಸವಾಲು ಎದುರಿಸಲು ಅಗತ್ಯವಾದ ಆರ್ಥಿಕ ನೆರವು ಕೇಂದ್ರದಿಂದ ಬರಲಿದೆ. ನಮ್ಮ ಸಂಪನ್ಮೂಲವನ್ನೂ ಕ್ರೋಢೀಕರಿಸಿಕೊಂಡು ಅಭಿವೃದ್ಧಿ ಕಡೆಗೆ ಗಮನ ಹರಿಸಲಾಗುವುದು. ಸದ್ಯಕ್ಕೆ ಹಣಕಾಸಿನ ಕೊರತೆ ಇಲ್ಲ.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next