Advertisement

Valmiki Community ಬಿ.ಶ್ರೀರಾಮುಲು ಬೆಳೆಸಿದ ಹೆಮ್ಮೆ ನನಗಿದೆ: ಗಾಲಿ ರೆಡ್ಡಿ

06:46 PM Oct 28, 2023 | Team Udayavani |

ಗಂಗಾವತಿ: ಅತ್ಯಂತ ಹಿಂದುಳಿದ ಸಮಾಜದಿಂದ ಬಂದಿರುವ ಮಾಜಿ ಸಚಿವ ಬಿ.ಶ್ರೀರಾಮುಲು, ಸಿರಗುಪ್ಪ ಮಾಜಿ ಶಾಸಕ ಸೋಮಲಿಂಗಪ್ಪ ಇವರನ್ನು ಮೀಸಲು ಇಲ್ಲದ ಸಾಮಾನ್ಯ ಕ್ಷೇತ್ರದಿಂದ ಗೆಲ್ಲಿಸಿ ರಾಜ್ಯ, ರಾಷ್ಟ್ರ
ನಾಯಕರನ್ನಾಗಿ ಮಾಡಿದ ಹೆಮ್ಮೆ ತಮಗಿದ್ದು ರಾಜ್ಯದಲ್ಲಿ ಎಸ್ಟಿ ಸಮುದಾಯದ ಸ್ವಾಭಿಮಾನಕ್ಕೆ ತಕ್ಕಂತೆ ವಾಲ್ಮೀಕಿ ಸಮಾಜಕ್ಕೆ ಸದಾ ಕಾರ್ಯ ಮಾಡಿದ್ದೇನೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

Advertisement

ಅವರು ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.ರಾಜ್ಯದಲ್ಲಿ ಸುಮಾರು 17 ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರಗಳು ಎರಡು ಲೋಕಸಭಾ ಕ್ಷೇತ್ರಗಳಿದ್ದು ಇಲ್ಲಿ ವಾಲ್ಮೀಕಿ ಸಮಾಜದವರನ್ನು ಗೆಲ್ಲಿಸುವ ಮೂಲಕ ಇಡೀ ಸಮಾಜ ಮತ್ತು ಬಿಜೆಪಿಗೆ ಕೊಡುಗೆ ಕೊಡುವುದರಲ್ಲಿ ನನ್ನ ಪಾಲು ಹೆಚ್ಚಿದೆ. ಬಳ್ಳಾರಿ ಸೇರಿ ಸುತ್ತಲಿನ ಜಿಲ್ಲೆಗಳ ವಾಲ್ಮೀಕಿ ಸಮಾಜಕ್ಕೆ ಬೇಕಾಗುವ ಎಲ್ಲಾ ಕೆಲಸ ಕಾರ್ಯವನ್ನು ಬಿ.ಶ್ರೀರಾಮುಲು ನಾವಿಬ್ಬರೂ ಸೇರಿ ಮಾಡಿದ್ದೇವೆ. ಬಿಜೆಪಿಯಲ್ಲಿ ಉಪಮುಖ್ಯಮಂತ್ರಿ ಸ್ಥಾನ ಸೇರಿ ವಿವಿಧ ಸ್ಥಾನಗಳನ್ನು ಪಡೆಯಲು ರಾಜಕೀಯವಾಗಿ ಉತ್ತುಂಗದ ಕನಸಿನೊಂದಿಗೆ ಪ್ರಸ್ತುತ ಬಿ.ಶ್ರೀರಾಮುಲು ಬಿಜೆಪಿಯಲ್ಲಿದ್ದಾರೆ. ನಾನು ಯಾವತ್ತೂ ಕೂಡ ಕೆಆರ್‌ಪಿ ಪಕ್ಷಕ್ಕೆ ಅವರನ್ನು ಕರೆದಿಲ್ಲ. ವಾಲ್ಮೀಕಿ ಸಮಾಜ ಮಾತು ಕೊಟ್ಟರೆ ತಪ್ಪುವ ಸಮಾಜವಲ್ಲ. ನಾನು ರಾಜಕೀಯದಲ್ಲಿ ಸ್ಥಾನಮಾನ ಪಡೆಯಲು ಈ ಸಮಾಜವೂ ಸಹ ಪ್ರಮುಖ ಕಾರಣವಾಗಿದೆ.

ಮರ್ಯಾದಾ ಪುರುಷ ಶ್ರೀರಾಮನ ಸೃಷ್ಠಿಸಿದ ವಾಲ್ಮೀಕಿ ಮಹಾಕವಿ ಶ್ರೇಷ್ಠ ಕಾವ್ಯವನ್ನು ಜಗತ್ತಿಗೆ ನೀಡಿದ್ದಾರೆ. ವಾಲ್ಮೀಕಿ ಮಹರ್ಷಿಗಳನ್ನು ಸದಾ ಸ್ಮರಣೆ ಮಾಡಬೇಕು. ಹಿಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ಸಚಿವರಾಗಿದ್ದ ಬಿ.ಶ್ರೀರಾಮುಲು ಹಾಗೂ ನಾನು ಕಲಬುರ್ಗಿಯಲ್ಲಿ ಜರುಗಿದ ಕ್ಯಾಬಿನೆಟ್‌ನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಸರಕಾರಿ ರಜೆ ಸಹಿತ ಘೋಷಣೆ ಮಾಡಲಾಯಿತು.

ಪ್ರತಿ ಜಿಲ್ಲಾ, ತಾಲೂಕು ಮತ್ತು ಹೋಬಳಿಗಳಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಅನುದಾನವನ್ನು ಸಹ ಘೋಷಣೆ ಮಾಡಲಾಗಿದೆ. ನನ್ನ ರಾಜಕೀಯ ಜೀವನದಲ್ಲಿ ವಾಲ್ಮೀಕಿ ಸಮಾಜದವರನ್ನು ಸಹೋದರರಂತೆ ಪ್ರೀತಿ ಗೌರವದಿಂದ ಕಂಡಿದ್ದೇನೆ . ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಹಾಗೂ ಮಾಜಿ ಶಾಸಕ ಪರಣ್ಣ ಮುನವಳ್ಳಿಯವರ ಮನವಿಯಂತೆ ಕಿಷ್ಕಿಂಧಾ ಏಳುಗುಡ್ಡ ಪ್ರದೇಶಕ್ಕೆ ವಾಲ್ಮೀಕಿ ಅಭಯಾರಣ್ಯ ಎಂದು ನಾಮಕರಣ ಮಾಡುವ ಪ್ರಸ್ತಾಪ ಮುಖ್ಯಮಂತ್ರಿ , ಅರಣ್ಯ ಸಚಿವರ ಗಮನಕ್ಕೆ ತಂದು ಕಾರ್ಯಗತ ಮಾಡಲಾಗುತ್ತದೆ. ನಾನು ಗಂಗಾವತಿ ಯಿಂದ ಸ್ಪರ್ಧೆ ಮಾಡಲು ಆಗಮಿಸಿದಾಗಲೂ ವಾಲ್ಮೀಕಿ ಸಮಾಜದ ಯುವಕರು ಸರ್ವರೂ ನನ್ನ ಜತೆಗಿದ್ದು ಸಹಕಾರ ನೀಡಿದ್ದು ವಾಲ್ಮೀಕಿ ನಗರ ನಿರ್ಮಿಸಿ ವಸತಿ ರಹಿತರಿಗೆ ನಿವೇಶ ಮನೆ ನಿರ್ಮಿಸಿಕೊಡಲಾಗುತ್ತದೆ. ಕಿಷ್ಕಿಂಧಾ ಅಂಜನಾದ್ರಿಯಲ್ಲಿ 5 ಸಾವಿರ ಜನರು ಕೂರಲು ವಾಲ್ಮೀಕಿ ಹೆಸರಿನಲ್ಲಿ ಸಭಾ ಭವನ ನಿರ್ಮಿಸಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿ.ವೀರಪ್ಪ, ಎಚ್.ಆರ್.ಶ್ರೀನಾಥ, ಮುಖಂಡರಾದ ತಿಪ್ಪೇರುದ್ರಸ್ವಾಮಿ, ಸಿಂಗನಾಳ ಪಂಪಾಪತಿ, ಕೆ.ದುರುಗಪ್ಪ ಆಗೋಲಿ, ಅಮರಜ್ಯೋತಿ ನರಸಪ್ಪ, ಪತ್ರಕರ್ತ ಸೈಯದ್ ಅಲಿ, ಜೋಗದ ನಾರಾಯಣಪ್ಪ, ಜೋಗದ ಹನುಮಂತಪ್ಪ, ವಡ್ರಟ್ಟಿ ವೀರಭದ್ರಪ್ಪ, ಚೌಡ್ಕಿ ರಮೇಶ, ಚೌಡ್ಕಿ ಯಮನೂರ, ಚೌಡ್ಕಿ ಹನುಮಂತಪ್ಪ, ಮಾರೆಪ್ಪ, ಶರಣಪ್ಪ, ಅರ್ಜುನನಾಯಕ, ದುರುಗಪ್ಪ ದಳಪತಿ , ಭಾಗ್ಯವಂತ ನಾಯಕ,ಡಾ.ಅಮರೇಶ ಪಾಟೀಲ್, ಸಿಪಿಐ ಮಂಜುನಾಥ ಸಿಲವೇರಿ,ಮನೋಹರಗೌಡ, ಚನ್ನವೀರನಗೌಡ, ತಹಸೀಲ್ದಾರ್ ಮಂಜುನಾಥ ಭೋಗಾವತಿ, ಇಒ ಲಕ್ಷ್ಮಿ ದೇವಿ, ಸಮಾಜಕಲ್ಯಾಣಾಧಿಕಾರಿ ಶರಣಪ್ಪ ಚವ್ಹಾಣ, ಗ್ಯಾನನಗೌಡ ಸೇರಿ ಅನೇಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next