Advertisement

ಕಾಂಗ್ರೆಸ್‌ ನಿಂದ ಹಸಿವು ಮುಕ್ತ ರಾಜ್ಯ: ಬಾದರ್ಲಿ

04:49 PM Mar 12, 2018 | Team Udayavani |

ಗೊರೇಬಾಳ: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದು ಬಡವರಿಗೆ ಅನ್ನ ನೀಡುವ ಮೂಲಕ ಹಸಿವು ಮುಕ್ತ ರಾಜ್ಯ ಮಾಡಿದೆ ಎಂದು ಶಾಸಕ, ಎಂಎಸ್‌ಐಎಲ್‌ ಅಧ್ಯಕ್ಷ ಹಂಪನಗೌಡ ಬಾದರ್ಲಿ ಹೇಳಿದರು.

Advertisement

ಸಿಂಧನೂರು ತಾಲೂಕಿನ ಕೆ.ಹಂಚಿನಾಳ ಗ್ರಾಮದಲ್ಲಿ ಬ್ಲಾಕ್‌ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಮನೆ-ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‌ ಪಕ್ಷ ಯಾವುದೇ ಜಾತಿಗೆ ಸೀಮಿತವಾಗಿಲ್ಲ. ತನ್ನದೇ ಆದ ತತ್ವ ಸಿದ್ದಾಂತ, ವಿಚಾರದಲ್ಲಿ ನಡೆಯುತ್ತಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸಾಮಾಜಿಕ ನ್ಯಾಯದಡಿ ಎಲ್ಲ ವರ್ಗಗಳ  ಶ್ರೇಯೋಭಿವೃದ್ಧಿಗೆ ಶ್ರಮಿಸಿದೆ. ಬೇರೆ ಪಕ್ಷದವರು ಒಂದು ಮಾಡಿದರೆ, ನೂರು ಹೇಳುತ್ತಾರೆ. ಆದರೆ ನಾವು ಪ್ರಚಾರಕ್ಕೆ ಆದ್ಯತೆ ಕೊಟ್ಟಿಲ್ಲ. ಪ್ರತಿಯೊಬ್ಬರ ರಕ್ಷಣೆ ನಮ್ಮ ಸರ್ಕಾರದ ಆದ್ಯತೆಯಾಗಿದೆ. 

ವಿಶೇಷವಾಗಿ ಪ.ಜಾತಿ, ತುಳಿತಕ್ಕೊಳಗಾದ ಪಂಗಡದ ಅಭಿವೃದ್ಧಿಗೆ ವಿಶೇಷ ಕಾನೂನು ರೂಪಿಸುವ ಮೂಲಕ ದೇಶದಲ್ಲಿ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದಿದೆ. ಚುನಾವಣೆ ಹತ್ತಿರ ಬರುತ್ತಿದ್ದು, ಸಾಧನೆಗಳನ್ನು ಪ್ರತಿಯೊಬ್ಬರ
ಮನೆ-ಮನಗಳಿಗೆ ತಲುಪುವಂತೆ ಮಾಡುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ರಾಜ್ಯದಲ್ಲಿ ಮತ್ತೂಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಸತತ ಪ್ರಯತ್ನ ಮಾಡಬೇಕು ಎಂದರು.

ಹೈ-ಕ ಭಾಗದ ಅಸಮಾನತೆ ತೊಲಗಿಸಲು ವಿಶೇಷ ಸ್ಥಾನಮಾನ ನೀಡಲು ಸಂವಿಧಾನದ ಕಲಂ 371 (ಜೆ)ಗೆ ತಿದ್ದುಪಡಿ ತಂದು ಈ ಭಾಗದ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗದಲ್ಲಿ ಶೇ.80 ಹಾಗೂ ಶಿಕ್ಷಣದಲ್ಲಿ ಶೇ.75ರಷ್ಟು ಮೀಸಲಾತಿ ನೀಡಿದ್ದು ಕಾಂಗ್ರೆಸ್‌ ಕೊಡುಗೆಯಾಗಿದೆ. ಈ ಭಾಗದ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವ ಮೂಲಕ ರಾಜ್ಯ ಕಾಂಗ್ರೆಸ್‌ ಸರ್ಕಾರ ಉದ್ಯೋಗ ಸೃಷ್ಟಿಯಲ್ಲಿ ಮುಂಚೂಣಿಯಲ್ಲಿದೆ. 

Advertisement

ಹೈಕ ಭಾಗದಲ್ಲಿ ಸುಮಾರು 30 ಸಾವಿರ ಹುದ್ದೆಗಳು ಖಾಲಿಯಿದ್ದು, ಅದರಲ್ಲಿ 12 ಸಾವಿರ ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ. ಶೇ.80ರಷ್ಟು ಹುದ್ದೆಗಳು ಈ ಭಾಗದವರಿಗೆ ದೊರೆಯುತ್ತವೆ ಎಂದು ವಿವರಿಸಿದರು.

ಕಲಂ 371 (ಜೆ) ಜಾರಿಯಿಂದ ಕಳೆದ ಎರಡು ವರ್ಷದಲ್ಲಿ ಸಿಂಧನೂರು ತಾಲೂಕು ಒಂದರಲ್ಲೇ 9 ಜನ ಕೆಎಎಸ್‌ ಉತ್ತೀರ್ಣರಾಗಿದ್ದಾರೆ. 4 ಜನ ಪಿಎಸ್‌ಐ, 22 ಜನ ಕಂದಾಯ ನಿರೀಕ್ಷಕರು, 29 ಜನ ಗ್ರಾಮ ಲೆಕ್ಕಿಗರು ನೇಮಕಗೊಂಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಪ್ರತಿವರ್ಷ 26 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿರುವ ಕರ್ನಾಟಕ ದೇಶದಲ್ಲಿಯೇ ಮೊದಲ ರಾಜ್ಯವಾಗಿದೆ. 

ಅನ್ನಭಾಗ್ಯ, ಕೃಷಿಭಾಗ್ಯ, ಪಶುಭಾಗ್ಯ, ಕ್ಷೀರಭಾಗ್ಯ, ವಿದ್ಯಾಶ್ರೀ, ಪರಿಶಿಷ್ಟ ಪಂಗಡದವರಿಗೆ ಭೂಮಿ, ಗಂಗಾಕಲ್ಯಾಣ ಯೋಜನೆ, ರೈತರ ಸಹಕಾರಿ ಬ್ಯಾಂಕ್‌ನಲ್ಲಿ 50 ಸಾವಿರ ರೂ. ಸಾಲಮನ್ನಾ ಮಾಡುವ ಮೂಲಕ 29 ಲಕ್ಷ ರೈತ ಕುಟುಂಬಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.

ಜಿಪಂ ಸದಸ್ಯ ಬಸವರಾಜ ಹಿರೇಗೌಡರ ಮಾತನಾಡಿ, ಧರ್ಮ, ಜಾತಿ ಹೆಸರಿನಲ್ಲಿ ಜಗಳ ಹಚ್ಚುವ ಕೆಲಸವನ್ನು ಕೆಲ ಪಕ್ಷಗಳು ಮಾಡುತ್ತಿವೆ. ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿವೆ. ಎಂದು ಬಿಜೆಪಿ ಹಾಗೂ ಜೆಡಿಎಸ್‌ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್‌ನಿಂದ ಮಾತ್ರ ಸೌಹಾರ್ದತೆ, ವಿಶ್ವಾಸ, ನೆಮ್ಮದಿ ಕಾಣಲು ಸಾಧ್ಯ ಎಂದರು.
 
ಹಂಪನಗೌಡ ಬಾದರ್ಲಿ ಅವರು ಶಾಸಕರಾದ ನಂತರ ಇತಿಹಾಸದಲ್ಲಿ ಕಂಡರಿಯದಷ್ಟು ಅನುದಾನವನ್ನು ಕ್ಷೇತ್ರಕ್ಕೆ ತರುವ ಮೂಲಕ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ. ನಮ್ಮಲ್ಲಿ ಪ್ರಚಾರದ ಕೊರತೆಯಿದೆ. ಹೀಗಾಗಿ ನಮ್ಮ ಶ್ರಮ
ಜನರಿಗೆ ತಿಳಿಯುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದ ಹಾಗೂ ಶಾಸಕರ ಸಾಧನೆಗಳನ್ನು ಪ್ರತಿಯೊಬ್ಬರ ಮನೆಗೆ ತಲುಪಿಸೋಣ ಎಂದರು. 

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಕಾಳಿಂಗಪ್ಪ ವಕೀಲ, ಲಿಂಗರಾಜ ಪಾಟೀಲ, ತಾಪಂ ಸದಸ್ಯ ಈಶಪ್ಪ ಸಾಹುಕಾರ, ಶಂಕರಗೌಡ, ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಖಾಜಿಮಲಿಕ್‌ ವಕೀಲ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಜಾಫರಲಿ ಜಾಗೀರದಾರ, ಶರಣಪ್ಪ ಹೂಗಾರ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next