Advertisement

ಸಾಹಿತ್ಯ ಅಕಾಡೆಮಿ ಪುಸ್ತಕಗಳ ಭರ್ಜರಿ ಮಾರಾಟ; 345 ಪುಸ್ತಕ ಒಳಗೊಂಡ ಸೆಟ್‌ಬಾಕ್ಸ್‌

09:52 AM Oct 14, 2022 | Team Udayavani |

ಬೆಂಗಳೂರು: ಹಣ ಕೊಟ್ಟು ಪುಸ್ತಕಗಳನ್ನು ಖರೀದಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂಬ ಮಾತಿಗೆ ಅಪವಾದ ಎಂಬಂತೆ ಕರ್ನಾಟಕ ಸಾಹಿತ್ಯಅಕಾಡೆಮಿ ರಾಜ್ಯದ ವಿವಿಧ ಕಾಲೇಜು ಮತ್ತು ವಿವಿಗಳಲ್ಲಿ ಹಮ್ಮಿಕೊಂಡಿದ್ದ ಶೇ.50ರ ರಿಯಾಯ್ತಿ ದರದ ಪುಸ್ತಕಗಳ ಮಾರಾಟದಲ್ಲಿ ಭರ್ಜರಿ ಖರೀದಿ ವಹಿವಾಟು ನಡೆದಿದೆ.

Advertisement

ಬೆಂಗಳೂರಿನಿಂದ ಆರಂಭವಾದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಬಸವ ಕಲ್ಯಾಣದಲ್ಲಿ ಮುಕ್ತಾಯವಾಗಿದ್ದು ಸುಮಾರು 5 ಸಾವಿರಕ್ಕೂ ಹೆಚ್ಚಿನ ವಿವಿಧ ಶೀರ್ಷಿಕೆ ಗಳ ಪುಸ್ತಕಗಳ ಮಾರಾಟವಾಗಿವೆ. ಸುಮಾರು 35ಲಕ್ಷ ರೂ.ಗಳ ಖರೀದಿ ವಹಿವಾಟು ನಡೆದಿದೆ.

ಹಿರಿಯ ಸಾಹಿತಿಗಳ ಕೃತಿಗಳು ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿದ್ದು ಅಕಾಡೆಮಿಯ ಉತ್ಸಾಹ ಇಮ್ಮಡಿಸಿದೆ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಅಕಾಡೆಮಿ ರಾಜ್ಯದ 75 ಪದವಿ, ಪದವಿ ಪೂರ್ವ ಕಾಲೇಜು ಹಾಗೂ ಕೆಲ ವಿಶ್ವವಿದ್ಯಾಲಯಗಳಲ್ಲಿ ತಾನು ಪ್ರಕಟಿಸಿದ್ದ ಪುಸ್ತಕಗಳ ಪ್ರದರ್ಶನ, ಮಾರಾಟವನ್ನು ಏರ್ಪಡಿಸಿತ್ತು. ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಲವು ಕಾರ್ಯಕ್ರಮಗಳನ್ನು ರೂಪಿಸಿತ್ತು.

ಆ ಹಿನ್ನೆಲೆಯಲ್ಲಿ ಅಕಾಡೆಮಿ ಕೂಡ ದೇಶದ ಸ್ವಾತಂತ್ರ ಸಾಧಕರ ಕುರಿತು ಕನ್ನಡ ಭಾಷೆಯಲ್ಲಿ 75 ಪುಸ್ತಕಗಳ ಮಾಲೆಯನ್ನು ಹೊರತಂದಿತ್ತು. ಇದಾದ ಬಳಿಕ ಸಾಕ್ಷ್ಯ ಚಿತ್ರದ ಜತೆಗೆ ರಾಜ್ಯದ 31 ಜಿಲ್ಲೆಗಳ ಪದವಿ ಮತ್ತು ಪದವಿ ಪೂರ್ವ ಮತ್ತು ವಿವಿಗಳಲ್ಲಿ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಂಡಿತ್ತು. ಇಲ್ಲಿ ಭರ್ಜರಿಯಾಗಿಯೇ ಪುಸ್ತಕ ಖರೀದಿಯ ವಹಿವಾಟು ನಡೆದಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್‌ ಕರಿಯಪ್ಪ ಹೇಳುತ್ತಾರೆ.

ಗಿರಡ್ಡಿ, ಬರಗೂರು, ಸಿದ್ದಲಿಂಗಯ್ಯ ಪುಸ್ತಕಗಳಿಗೆ ಬೇಡಿಕೆ: ಅಕಾಡೆಮಿ ಪುಸ್ತಕ ಮಾರಾಟದಲ್ಲಿ  ಹಿರಿಯ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರ “ಸಾಹಿತ್ಯ ಪರಿಭಾಷಿಕ ಮಾಲೆ” (16 ಪುಸ್ತಕಗಳು), ಬರಗೂರು ರಾಮಚಂದ್ರ ಅವರ “ಕನ್ನಡ ಸಾಹಿತ್ಯ ಸಂಗಾತಿ’, ಹಿರಿಯ ಕವಿ ಸಿದ್ದಲಿಂಗಯ್ಯ ಮತ್ತು ಎಂ.ಎಚ್‌.ಕೃಷ್ಣಯ್ಯ ಸಂಪಾದನೆಯ “ಸಾಲು ದೀಪಗಳು’ ಹಾಗೂ ಮಲ್ಲೇಪುರಂ ಜಿ.ವೆಂಕಟೇಶ ಅವರ “ದೇಶಿಯ ದರ್ಶನ ಮಾಲೆ” ಕೃತಿಗಳನ್ನು ಅಧಿಕ ಸಂಖ್ಯೆಯಲ್ಲಿ ಓದುಗರು ಖರೀದಿಸಿದ್ದಾರೆ.

Advertisement

ರಿಯಾಯ್ತಿ ಪುಸ್ತಕ ಮಾರಾಟದಲ್ಲಿ ಸ್ನಾತಕೋತ್ತರ ಮತ್ತು ಪದವೀಧರ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಕನ್ನಡ ಪುಸ್ತಕಗಳನ್ನು ಖರೀದಿಸಿದ್ದಾರೆ. ಜತೆಗೆ ಕಾಲೇಜು ಉಪನ್ಯಾಸಕರು, ಸಾಹಿತ್ಯಆಸಕ್ತರು ಕೂಡ ಅಕಾಡೆಮಿ ಹೊರತಂದಿರುವ ವಿವಿಧ ಕೃತಿಗಳನ್ನು ಮಾರಾಟ ಕೇಂದ್ರಕ್ಕೆ ಬಂದು ಕೊಂಡುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ ಎಂದು ಅಕಾಡೆಮಿ ಅಧಿಕಾರಿಗಳು ಹೇಳುತ್ತಾರೆ.

345 ಪುಸ್ತಕಗಳ ಒಳಗೊಂಡ ಸೆಟ್‌ಬಾಕ್ಸ್‌
ಅಕಾಡೆಮಿ ರಿಯಾಯ್ತಿ ಪುಸ್ತಕ ಮಾರಾಟಕ್ಕಾಗಿ 15,435 ರೂ. ಮುಖ ಬೆಲೆಯ 345 ಪುಸ್ತಕಗಳ ಒಳಗೊಂಡ ಸೆಟ್‌ ಸಿದ್ಧಪಡಿಸಿತ್ತು. ಇದರಲ್ಲಿ ಸುಮಾರು 22 ಸೆಟ್‌ ಬಾಕ್ಸ್‌ಗಳು ಮಾರಾಟವಾಗಿದೆ. ಬಹುತೇಕ ಸೆಟ್‌ ಬಾಕ್ಸ್‌ ಪುಸ್ತಕಗಳನ್ನು ವಿವಿಗಳು ಮತ್ತು ಕಾಲೇಜುಗಳು ಖರೀದಿ ಮಾಡಿವೆ. ಈ ಪುಸ್ತಕ ಮಾರಾಟ ಮತ್ತು ಪ್ರದರ್ಶನ ಆಯೋಜನೆಯಿಂದಾಗಿ ಅಕಾಡೆಮಿಯಲ್ಲಿ ಉತ್ತಮ ಪುಸ್ತಕಗಳು ಇವೆ ಎಂಬುವುದು ಕಾಲೇಜು ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ಗಮನಕ್ಕೆ
ಬಂದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಅಕಾಡೆಮಿ ರಾಜ್ಯದ 75 ಸ್ಥಳಗಳಲ್ಲಿ ಪುಸ್ತಕ ಪ್ರದರ್ಶನ ಮತ್ತು ರಿಯಾಯ್ತಿ ದರದಲ್ಲಿ ಪುಸ್ತಕಗಳ ಮಾರಾಟವನ್ನು ಹಮ್ಮಿಕೊಂಡಿತ್ತು. 35 ಲಕ್ಷ ರೂ. ಖರೀದಿ ವಹಿವಾಟು ನಡೆದಿದ್ದು, ಇದು ಕನ್ನಡ ಪುಸ್ತಕ ಓದುಗರಿಗೆ ಬರವಿಲ್ಲ ಎಂಬುವುದನ್ನು ತೋರಿಸುತ್ತದೆ.
● ಡಾ.ಬಿ.ವಿ. ವಸಂತಕುಮಾರ್‌,
ಅಧ್ಯಕ್ಷರು ಕರ್ನಾಟಕ ಸಾಹಿತ್ಯ ಅಕಾಡೆಮಿ

*ದೇವೇಶ ಸೂರುಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next