Advertisement

ಭಾರತದ ಜಾಗತಿಕ ಪ್ರಭಾವದ ಝಲಕ್‌: ದಳವೀರ್‌ ಭಂಡಾರಿ ಗೆಲವು 

07:46 AM Nov 23, 2017 | |

ಜಾಗತಿಕ ರಂಗಮಂಚದಲ್ಲಿ ಬ್ರಿಟನ್‌ನ ಸ್ಥಾನಮಾನ ಕುಗ್ಗಿದೆ ಎಂದು ಅಲ್ಲಿನ ಮಾಧ್ಯಮಗಳು ಈ ಸೋಲನ್ನು ವಿಶ್ಲೇಷಿಸಿವೆ. 

Advertisement

ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ದಳವೀರ್‌ ಸಿಂಗ್‌ ಭಂಡಾರಿ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಂದಿರುವ ಪ್ರಭಾವವನ್ನು ಅನಾವರಣಗೊಳಿಸಿದೆ. ಇದು ಭಾರತದ ರಾಜತಾಂತ್ರಿಕ ಕೌಶಲಕ್ಕೆ ದಕ್ಕಿದ ಜಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಸೋಮವಾರ ನ್ಯಾಯಾಧೀಶರನ್ನು ಆರಿಸಲು ನಡೆದ ಚುನಾವಣೆಯಲ್ಲಿ ವಿಶ್ವಸಂಸ್ಥೆಯ ಜನರಲ್‌ ಅಸೆಂಬ್ಲಿಯ 193 ದೇಶಗಳ ಪೈಕಿ 183 ದೇಶಗಳು ಭಂಡಾರಿ ಪರವಾಗಿ ಮತ ಹಾಕಿವೆ. ಭದ್ರತಾ ಮಂಡಳಿಯ ಎಲ್ಲ 15 ಮತಗಳನ್ನು ಪಡೆಯುವಲ್ಲಿ ಭಂಡಾರಿ ಸಫ‌ಲರಾಗಿದ್ದಾರೆ. ಈ ಮೂಲಕ ತನ್ನ ಎದುರಾಳಿಯಾಗಿದ್ದ ಬ್ರಿಟನ್‌ನ ಕ್ರಿಸ್ಟೋಫ‌ರ್‌ ಗ್ರೀನ್‌ವುಡ್‌ ಅವರನ್ನು ಮೂರನೇ ಎರಡು ಬಹುಮತಗಳಿಂದ ಪರಾಭವಗೊಳಿಸಿ ಪಾರಮ್ಯ ಮೆರೆದಿದ್ದಾರೆ. ಇದರಿಂದಾಗಿ  71 ವರ್ಷಗಳ ಬಳಿಕ ಇದೇ ಮೊದಲ ಸಲ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಬ್ರಿಟನ್‌ ಪ್ರತಿನಿಧಿ ಇಲ್ಲದಂತಾಗಿದೆ. ಅಂತಾರಾಷ್ಟ್ರೀಯ ನ್ಯಾಯಾಲಯದ 15 ನ್ಯಾಯಾಧೀಶರನ್ನು 9 ವರ್ಷದ ಅವಧಿಗಾಗಿ ಆರಿಸಲಾಗುತ್ತದೆ. ಭಂಡಾರಿಗೆ ಇದು ಎರಡನೇ ಅವಧಿ. ವಿಶ್ವಸಂಸ್ಥೆಯ ಜನರಲ್‌ ಅಸೆಂಬ್ಲಿ ಮತ್ತು ಭದ್ರತಾ ಮಂಡಳಿಯಲ್ಲಿ ನಿಚ್ಚಳ ಬಹುಮತ ಸಿಕ್ಕಿದರೆ ಮಾತ್ರ ಗೆಲುವು ಸಾಧ್ಯ. ಈ ಸಲ 15ನೇ ನ್ಯಾಯಾಧೀಶರ ಸ್ಥಾನಕ್ಕೆ ಭಂಡಾರಿ ಮತ್ತು ಗ್ರೀನ್‌ವುಡ್‌ ನಡುವೆ ತೀವ್ರ ಪೈಪೋಟಿ ಇತ್ತು. ಆದರೆ ಗೆಲುವು ಅಸಾಧ್ಯ ಎಂದು ಮನವರಿಕೆಯಾಗಿ ಗ್ರೀನ್‌ವುಡ್‌ ಸ್ಪರ್ಧಾಕಣದಿಂದ ಹಿಂದೆಗೆದ ಕಾರಣ ಭಂಡಾರಿ ಗೆಲುವಿನ ನಗೆ ಬೀರಿದ್ದಾರೆ. ಈ ಬೆಳವಣಿಗೆಯಿಂದ ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯ ರಾಷ್ಟ್ರಗಳ ಪೈಕಿ ಒಂದಾಗಿರುವ ಬ್ರಿಟನ್‌ ತೀವ್ರ ಮುಖಭಂಗಕ್ಕೀಡಾಗಿದೆ. ಸುಮಾರು 2 ಶತಮಾನ ಕಾಲ ಭಾರತ ಬ್ರಿಟನ್‌ನ ವಸಾಹತು ಆಗಿತ್ತು. ಆದರೆ ಬದಲಾದ ಜಾಗ ತಿಕ ಪರಿಸ್ಥಿತಿಯಲ್ಲಿ ತನ್ನನ್ನಾಳಿದ ದೇಶವನ್ನೇ ಸೋಲಿಸುವ ಮಟ್ಟಕ್ಕೆ ಭಾರತ ಬೆಳೆದಿದೆ. ಒಂದು ರೀತಿಯಲ್ಲಿ ಸಾಮಂತ ರಾಜ ತನ್ನ ದೊರೆಯನ್ನೇ ಸೋಲಿಸಿದ  ಕತೆಯಿದು. 

ಹಾಗೆಂದು ಬ್ರಿಟನ್‌ ಸುಲಭವಾಗಿ ಸೋಲೊ ಪ್ಪಿಕೊಂಡಿಲ್ಲ. 11 ಸುತ್ತಿನ ಮತದಾನದ ಬಳಿಕ ಆ ದೇಶ ಅಪರೂಪಕ್ಕೊಮ್ಮೆ ಬಳಸುವ ಜನರಲ್‌ ಅಸೆಂಬ್ಲಿ ಮತ್ತು ಭದ್ರತಾ ಮಂಡಳಿಯ ತಲಾ ಮೂವರು ಸದಸ್ಯರನ್ನು ಕರೆಯುವ ವಿಧಾನವನ್ನು ಅಳವಡಿಸಲು ಪ್ರಯತ್ನಿಸಿದರೂ ಇದು ತಿರುಗುಬಾಣವಾಗುವ ಸಾಧ್ಯತೆಯನ್ನು ಮನಗಂಡು ಈ ಪ್ರಯತ್ನವನ್ನು ಕೈಬಿಟ್ಟಿತು. ಹೀಗಾಗಿ ಭಂಡಾರಿ ಗೆಲುವು ಸುಲಭವಾಯಿತು. ಅಂತಾರಾಷ್ಟ್ರೀಯ ನ್ಯಾಯಾಲಯದ ಗೆಲುವಿಗಿಂತ ಭಾರತದ ಜತೆಗಿನ ದ್ವಿಪಕ್ಷೀಯ ವಾಣಿಜ್ಯ ಸಂಬಂಧ ಹೆಚ್ಚು ಮುಖ್ಯ ಎಂದು ಹೇಳಿಕೊಂಡು ಬ್ರಿಟನ್‌ ಈ ಸೋಲಿನ ಕಹಿಯನ್ನು ಮರೆಯಲು ಯತ್ನಿಸಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತ್ರ ಬ್ರಿಟನ್‌ಗೆ ಸಾಕಷ್ಟು ಮಂಗಳಾರತಿಯಾಗಿದೆ. ಬ್ರಿಟನ್‌ನ ಪ್ರಮುಖ ಪತ್ರಿಕೆಗಳೆಲ್ಲ ಒಂದೆಡೆ ಭಾರತದ ಜಾಗತಿಕ ಬೆಂಬಲವನ್ನು ಶ್ಲಾ ಸಿದ್ದರೆ ಇನ್ನೊಂದೆಡೆಯಿಂದ ಬ್ರಿಟನ್‌ನ ದುರ್ಬಲ ರಾಜಕೀಯ ನಾಯಕತ್ವವನ್ನು ಹಿಗ್ಗಾಮುಗ್ಗಾ ಟೀಕಿಸಿವೆ. ಜಾಗತಿಕ ರಂಗಮಂಚದಲ್ಲಿ ಬ್ರಿಟನ್‌ನ ಸ್ಥಾನಮಾನ ಕುಗ್ಗಿದೆ ಎಂದು ಅಲ್ಲಿನ ಮಾಧ್ಯಮಗಳು ಈ ಸೋಲನ್ನು ವಿಶ್ಲೇಷಿಸಿವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಪಡೆಯಲು ನಡೆಸುತ್ತಿರುವ ಭಾರತದ ಪ್ರಯತ್ನಕ್ಕೆ ಭಂಡಾರಿ ಗೆಲುವಿನಿಂದ ಇನ್ನಷ್ಟು ಹುರುಪು ಸಿಗಲಿದೆ. ಆದರೆ ಇದೇ ವೇಳೆ ಪಾಕಿಸ್ಥಾನದ ಜೈಲಿನಲ್ಲಿರುವ ಕುಲಭೂಷಣ್‌ ಯಾದವ್‌ ಪ್ರಕರಣದಲ್ಲಿ ಭಾರತಕ್ಕೆ ಹೆಚ್ಚಿನ ಪ್ರಯೋಜನವಾದೀತು ಎಂದು ನಿರೀಕ್ಷಿಸುವುದು ತಪ್ಪು. ಏಕೆಂದರೆ ಅಂತಾ ರಾಷ್ಟ್ರೀಯ ನ್ಯಾಯಾಧಿಶರಾಗಿ ಭಂಡಾರಿ ತನ್ನ ದೇಶದ ಪರವಾಗಿ ತೀರ್ಪು ನೀಡಿ ಪಕ್ಷಪಾತದ ಆರೋಪಕ್ಕೆ ಗುರಿಯಾಗುವುದನ್ನು ಅಪೇಕ್ಷಿಸುವುದಿಲ್ಲ. ಅಲ್ಲಿ ಕುಳಿತ ಬಳಿಕ ಅವರು ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರವೇ ತೀರ್ಪು ನೀಡಬೇಕಾಗುತ್ತದೆ. 

ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿರುವ ನಾಲ್ಕನೇ ಭಾರತೀಯ ಭಂಡಾರಿ. ಈ ಹಿಂದೆ ಬಿ. ಎನ್‌. ರಾವ್‌, ನಾಗೇಂದ್ರ ಸಿಂಗ್‌ ಮತ್ತು ಆರ್‌. ಎಸ್‌. ಪಾಠಕ್‌ ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಅಂತೆಯೇ ಈ ವರ್ಷ ಭಾರತದ ಮೂವರು ವಿಶ್ವಸಂಸ್ಥೆಯ ಪ್ರಮುಖ ಹುದ್ದೆಗಳಿಗೇರಿದ್ದಾರೆ ಎನ್ನುವುದು ಕೂಡ ಗಮನಾರ್ಹ ಅಂಶ. ಕಾನೂನು ತಜ್ಞೆ ನೀರೂ ಛಡ್ಡಾ, ಸೌಮ್ಯಾ ಸ್ವಾಮಿನಾಥನ್‌ ಮತ್ತು ಲಕ್ಷ್ಮೀ ಪುರಿ ವಿಶ್ವಸಂಸ್ಥೆಯ ಪ್ರಮುಖ ಹುದ್ದೆಗಳಿಗೇರಿದ ಭಾರತೀಯರು. ಭಂಡಾರಿ ಆಯ್ಕೆಯಿಂದ ಭದ್ರತಾ ಮಂಡಳಿಯ ಇತರ ನಾಲ್ಕು ಖಾಯಂ ಸದಸ್ಯರಾದ  ಅಮೆರಿಕ, ಫ್ರಾನ್ಸ್‌, ರಶ್ಯಾ ಮತ್ತು ಚೀನ ದೇಶಗಳಲ್ಲಿ ಸಣ್ಣದೊಂದು ನಡುಕ ಉಂಟಾಗಿರುವುದು ಸುಳ್ಳಲ್ಲ. ಇಂದು ಬ್ರಿಟನ್‌ ನಾಳೆ ನಮ್ಮ ಪರಿಸ್ಥಿತಿಯೂ ಹೀಗೆ ಆಗುವ ಸಾಧ್ಯತೆಯಿದೆ ಎಂಬ ಚಿಂತೆ ಆ ದೇಶಗಳನ್ನು ಕಾಡುತ್ತಿದೆ. ನಿಜವಾಗಿಯೂ ಈಗ ಭಾರತ ಸೂಪರ್‌ಪವರ್‌ ಆಗಿದೆ ಎಂದೆನಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next