Advertisement

ಹುಚ್ಚು ಮನಸ್ಸಿನ ಹನ್ನೊಂದನೇ ಮುಖ

10:10 AM Jul 14, 2019 | Vishnu Das |

ಪ್ರತಿ ಮನುಷ್ಯನಿಗೂ ತನ್ನೆಲ್ಲ ಮೂಲಭೂತ ಹಕ್ಕು- ಕರ್ತವ್ಯಗಳೊಂದಿಗೆ, ಸ್ವತಂತ್ರವಾಗಿ, ಘನತೆಯಿಂದ ಬದುಕುವ ಆಸೆಯಿರುತ್ತದೆ. ಸಮಾಜ ತನ್ನನ್ನು ತಾನು ನಾಗರೀಕ ಎಂದು ಕರೆದುಕೊಳ್ಳುವುದಕ್ಕಾಗಿ ಒಂದಿಷ್ಟು ರೀತಿ- ನೀತಿ- ವ್ಯವಸ್ಥೆಗಳನ್ನು ಮಾಡಿಟ್ಟುಕೊಂಡು ಅದರಾಚೆ ಮತ್ತು ಈಚೆ ಯಾವುದೂ ಘಟಿಸುವುದು ಸಾಧ್ಯವಿಲ್ಲ ಎಂದುಕೊಂಡು ಮನುಷ್ಯರನ್ನು ಚೌಕಗಳಲ್ಲಿ ಬಂಧಿಸಿಡಲು ಶುರುಮಾಡುತ್ತದೆ. ಅದರೊಳಗಡೆ ಸೇರದವರು, ಶಾಪಗ್ರಸ್ತರಂತೆ ಒಂದು ಸುಂದರ ಬದುಕನ್ನು ಕಟ್ಟಿಕೊಳ್ಳಲೂ ಸೋತುಬಿಡುತ್ತಾರೆ. ಮಾನಸಿಕ ಅಸ್ವಸ್ಥರದ್ದೂ ಅಂಥದ್ದೇ ಒಂದು ಸೋಲು.

Advertisement

“ಹೆಜ್ಜೆ’ ಥೀಯೇಟರ್‌, ಇತ್ತೀಚೆಗೆ ಮÇÉೇಶ್ವರಂನ ಸೇವಾ ಸದನದಲ್ಲಿ “ನಗ್ನ 99′ ಎಂಬ ನಾಟಕವನ್ನು ಪ್ರಸ್ತುತಪಡಿಸಿತು. ಹನಮಂತ ಹಾಲಿಗೇರಿ ರಚಿತ, ಹೇಮಂತ್‌ ಕುಮಾರ್‌ ನಿರ್ದೇಶನದ ಮೊದಲ ಪ್ರಯೋಗವಿದು. ಮಾನಸಿಕ ಅಸ್ವಸ್ಥರ ಸಹಜ ಲೈಂಗಿಕ ಮನೋಭಿಲಾಷೆಯು ಹೇಗೆ ಸೋ ಕಾಲ್ಡ… ನಾಗರಿಕ ಸಮಾಜದ ಹಾಸ್ಯದ ವಸ್ತುವಾಗುತ್ತದೆ? ನಾಟಕದಲ್ಲಿ ಬರುವ ಅರೆಹುಚ್ಚನ ಲೈಂಗಿಕ ಕಾಮನೆಗಳನ್ನು ಸಮಾಜ ಹೇಗೆ ಅಸಹಜವೆಂದು ಅಲ್ಲಗಳೆದುಬಿಡುತ್ತದೆ? ಅದಕ್ಕೆ ಹೇಗೆ ವಿಕೃತಿ ಮತ್ತು ಅತ್ಯಾಚಾರಗಳ ಆರೋಪಗಳ ಬಣ್ಣ ಹಚ್ಚಿಬಿಡುತ್ತದೆ?- ಇವೆಲ್ಲನ್ನೂ ಎಲ್ಲೂ ವಾಚ್ಯಗೊಳಿಸದೆ ನಾಟಕ ಹೇಳಿತು.
ನಾಟಕದಲ್ಲಿ ಬಾಗಲಕೋಟೆಯ ಪರಿಸರದ ಭಾಷೆ ಅತ್ಯಂತ ಸಶಕ್ತವಾಗಿ ತೆರೆಯ ಮೇಲೆ ಮೂಡಿಬಂದಿದೆ. ಮಿತವಾದ ರಂಗಪರಿಕರಗಳು, ಬೆಳಕು, ರಂಗವಿನ್ಯಾಸ, ವಸ್ತ್ರವಿನ್ಯಾಸ ಎಲ್ಲವೂ ಹದದಲ್ಲಿ ಬೆರೆತು ನಮ್ಮನ್ನೆಲ್ಲ ಆ ಪರಿಸರದ ಭಾಗವನ್ನಾಗಿ ಮಾಡುತ್ತವೆ.

ನಾಟಕದಲ್ಲಿ ಕಾಡುವ ಸನ್ನಿವೇಶಗಳು ಬಹಳಷ್ಟಿವೆ. “ರಾಮುವಿನ ಕಾಟ ಬಹಳ ಆಗಿದೆ’ ಎಂದು ಅವನ ತಾಯಿ, ಮನೆಯಲ್ಲಿ ಕೂಡಿಹಾಕಿರುವುದು ಮಾಧ್ಯಮಗಳ ಮೂಲಕ ಬೆಳಕಿಗೆ ಬರುತ್ತೆ. “ಹೊರಗೆ ಬರ್ತೀಯೇನಪ್ಪಾ?’ ಎಂದು ಒಬ್ಬ ವ್ಯಕ್ತಿ ಪ್ರಶ್ನಿಸಿದಾಗ, ನಾಯಕ “ನೀವು ಬಡಿಯೋದಿಲ್ಲಾಂದ್ರ ಮಾತ್ರ ಬತೇìನಿ’ ಎನ್ನುತ್ತಾನೆ. ಆ ಒಂದು ಮಾತು ಇಡೀ ನಾಟಕದ ಜೀವಾಳದಂತಿದೆ. ಮತ್ತೂಂದು ದೃಶ್ಯದಲ್ಲಿ ರಾಮುವಿನ ತಾಯಿ, “ಊರಿನ ಕುಟುಂಬಗಳು ಬಾಳಬಕು ಅಂತಾ ನಾ ಇವನ್ನ ಇಲ್ಲಿ ಕಟ್ಟಿ ಹಾಕಿನಿ’ ಎನ್ನುವ ಸಂಭಾಷಣೆಗಳು ಮನಸ್ಸಿಗೆ ನಾಟುತ್ತವೆ.

ಹೊಸಬರೇ ತುಂಬಿಕೊಂಡಿರುವ ತಂಡದಲ್ಲಿ ಎಲ್ಲ ಕಲಾವಿದರ ಅಭಿನಯವೂ ಸಮತೂಕದಲ್ಲಿದೆ. ಮುಖ್ಯವಾಗಿ, ನಾಟಕದ ಕೇಂದ್ರಬಿಂದುವಾದ ಮಾನಸಿಕ ಅಸ್ವಸ್ಥ ರಾಮು ಆಗಿ ಚಂದ್ರಶೇಖರರೆಡ್ಡಿ, ಬಾಲ ರಾಮು ಆಗಿ, ನವೀನ್‌ ಹಾಸನ್‌, ರತ್ನ ಆಗಿ ರಿಯಾ ನಾರಾಯಣ ಮತ್ತು ರಾಮುವಿನ ತಾಯಿಯಾಗಿ ರಮ್ಯಾ ವರ್ಷಿಣಿ ಪ್ರೇಕ್ಷಕರನ್ನು ತಮ್ಮ ಸಹಜ ಅಭಿನಯದಿಂದ ಆವರಿಸಿಕೊಂಡರು. ದೇವೇಂದ್ರನಾಗಿ ಶಿವಕುಮಾರ್‌ ವತ್ತುಮುರಣಿ, ಟಿವಿ ವರದಿಗಾರರಾಗಿ, ನೀರಜ್‌ ಹುಬ್ಬಳ್ಳಿ, ಸುಜಯ…, ಯಶವಂತ್‌ ಹಾಗೂ ದಿನೇಶ್‌, ತಹಶೀಲ್ದಾರನಾಗಿ ಅಕ್ಷಯ್‌ ಮೇಸ್ತ, ಹೊನ್ನಾವರ, ರಾಧಾಳಾಗಿ ಮಮತಾ ಮಂಡ್ಯ, ಪಾರಿಯಾಗಿ ಕವಿತಾ, ಪೊಲಿಸ್‌ ಇನ್ಸ್‌ಪೆಕ್ಟರ್‌ ಆಗಿ ಸಂದೀಪ್‌, ಕಾಲೇಜು ವಿದ್ಯಾರ್ಥಿನಿಯಾಗಿ ಗೌತಮಿ ಕೊಪ್ಪಳ ಮುಂತಾದವರು ಪಾತ್ರವೇ ತಾವಾಗಿ ಗಮನ ಸೆಳೆದರು.

ನಾಟಕದಲ್ಲಿ ಕೆಲವು ಕುಂದುಕೊರತೆಗಳೂ ಕಂಡುಬಂದವು. ನಾಟಕ ಬಹಳಷ್ಟು ಕಡೆ ಹಿನ್ನೆಲೆ ಧ್ವನಿಯ ಮೂಲಕವೇ ಕಥೆಯನ್ನು ಹೇಳಿಸಿಬಿಡುತ್ತದಾದ್ದರಿಂದ ರತ್ನಳ ಬದುಕು ನಮ್ಮನ್ನ ಆಳವಾಗಿ ತಟ್ಟುವುದಿಲ್ಲ. ನಾಟಕ ಅದರ ಪರಿಧಿಯಾಚೆ ಬಂದು ಕೇವಲ ಕಥೆ ಹೇಳುತ್ತಿದೆ ಅಂತನ್ನಿಸುವಾಗಲೇ ಮತ್ತೆ ನಾಟಕಕ್ಕೆ ಹೊರಳಿಕೊಳ್ಳುತ್ತದೆ. ಬೆಳಕು, ಹಿನ್ನೆಲೆ ಸಂಗೀತ, ಮತ್ತೂಂದಿಷ್ಟು ಸಶಕ್ತ ರೂಪಕಗಳನ್ನು ಬಳಸುವಲ್ಲಿ ಗಮನ ನೀಡಬಹುದಿತ್ತು.

Advertisement

– ದಾದಾಪೀರ್‌ ಜೈಮನ್‌

Advertisement

Udayavani is now on Telegram. Click here to join our channel and stay updated with the latest news.

Next