Advertisement

ಮತ್ತೆ ಗೊಂದಲದ ಗೂಡಾದ ಮಹದಾಯಿ

01:43 PM Nov 21, 2019 | Naveen |

ಅಮರೇಗೌಡ ಗೋನವಾರ
ಹುಬ್ಬಳ್ಳಿ:
ಕಳಸಾ-ಬಂಡೂರಿ ಯೋಜನೆ ವಿಚಾರದಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾಣೆ ಇಲಾಖೆಯಿಂದ ಒಪ್ಪಿಗೆ ದೊರೆತಿದೆ ಎಂಬ ಸಂತಸ ಮೂಡಿದ ಬೆನ್ನಲ್ಲೇ, ಅದೇ ಇಲಾಖೆಯಿಂದ ಇದೀಗ ಪರಿಶೀಲನೆಗೆ ಸಮಿತಿ ರಚನೆ ಎಂಬ ಹೇಳಿಕೆ ಮತ್ತೊಂದು ಗೊಂದಲಕ್ಕೆ ಕಾರಣವಾಗಿದ್ದು, 2002ರಲ್ಲಾದ ಸ್ಥಿತಿಯನ್ನು ನೆನಪಿಸುತ್ತಿದೆ.

Advertisement

ಮಹದಾಯಿ ನ್ಯಾಯಾಧಿಕರಣದಿಂದ ತೀರ್ಪು ಹೊರಬಿದ್ದರೂ ಕೇಂದ್ರದಿಂದ ಅಧಿಸೂಚನೆ ಹೊರಬಿದ್ದಿಲ್ಲ. ಇನ್ನೊಂದು ಕಡೆ ಗೋವಾದ ಎಡಬಿಡಂಗಿತನ ನಿಂತಿಲ್ಲ. ನ್ಯಾಯಾಧಿಕರಣ ತೀರ್ಪಿನ್ವಯ ಕಳಸಾ-ಬಂಡೂರಿ ಯೋಜನೆ ಕಾಮಾರಿಗೆ ಕರ್ನಾಟಕದ ಮನವಿಗೆ ಸ್ಪಂದಿಸಿದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವರು ಅನುಮತಿ ನೀಡಿದ್ದರಾದರೂ, ಇದನ್ನು ವಿರೊಧಿಸುವ ಮೂಲಕ ಗೋವಾ, ಕೇಂದ್ರದ ಅನುಮತಿಗೆ ಮತ್ತೂಮ್ಮೆ ಕಲ್ಲು ಹಾಕುವ ಕೆಲಸಕ್ಕೆ ಮುಂದಾಗಿದೆ.

ಗೊಂದಲದ ಗೂಡು: ಮಹದಾಯಿ, ಕಳಸಾ-ಬಂಡೂರಿ ಯೋಜನೆ ಗೊಂದಲಗಳ ಗೂಡಾಗಿ ಪರಿಣಮಿಸಿದೆ. ಮಹದಾಯಿ ವಿಷಯವಾಗಿ ನ್ಯಾಯಾಧಿಕರಣಕ್ಕೆ ಗೋವಾ ಪಟ್ಟು ಹಿಡಿದಿತ್ತು. ಈ ಕಾರಣಕ್ಕೆ 2010ರಲ್ಲಿ ಕೇಂದ್ರ ಸರ್ಕಾರ ನ್ಯಾ| ಜೆ.ಎಂ. ಪಾಂಚಾಲ ನೇತೃತ್ವದಲ್ಲಿ ಮಹದಾಯಿ ನ್ಯಾಯಾಧಿಕರಣ ರಚಿಸಿತ್ತು.

ನ್ಯಾಯಾಧಿಕರಣ ತೀರ್ಪಿಗೆ ಒಪ್ಪುವುದಾಗಿಯೂ ಗೋವಾ ಹೇಳಿತ್ತು. ಇದೀಗ ಗೋವಾ ಮಹದಾಯಿ ನ್ಯಾಯಾಧಿಕರಣ ನೀಡಿದ ತೀರ್ಪನ್ನು ಒಪ್ಪುವುದಿಲ್ಲ ಎಂಬಂತೆ ವರ್ತಿಸತೊಡಗಿದೆ. ನ್ಯಾಯಾಧಿಕರಣ ಕರ್ನಾಟಕಕ್ಕೆ ಒಟ್ಟಾರೆ ಸುಮಾರು 13.5 ಟಿಎಂಸಿ ಅಡಿಯಷ್ಟು ನೀರು ಹಂಚಿಕೆ ಮಾಡಿದ್ದರೂ, ನ್ಯಾಯಾಧಿಕರಣ ತೀರ್ಪನ್ನೇ ಧಿಕ್ಕರಿಸುವ ರೀತಿಯಲ್ಲಿ ಮಹದಾಯಿಯಿಂದ ಒಂದು ಹನಿ ನೀರನ್ನು ನೀಡುವುದಿಲ್ಲ ಎಂದು ಗೋವಾ ಹೇಳತೊಡಗಿದೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವ ಪ್ರಕಾಶ ಜಾವಡೇಕರ್‌ ಅವರು, ಕಳಸಾ-ಬಂಡೂರಿ ಯೋಜನೆಯಡಿ ಕಳಸಾದಿಂದ 1.72 ಟಿಎಂಸಿ ಅಡಿ ಹಾಗೂ ಬಂಡೂರಿಯಿಂದ 2.18 ಟಿಎಂಸಿ ಅಡಿ ನೀರು ಬಳಕೆಯ ಕಾಮಗಾರಿಗೆ ಪರಿಸರ ಇಲಾಖೆ ಅನುಮತಿ ನೀಡಿದ್ದರು. ಇದರ ಹಿಂದೆ ರಾಜ್ಯದವರೇ ಆದ ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಪರಿಶ್ರಮ ಪ್ರಮುಖವಾಗಿತ್ತು. ಕೇಂದ್ರದ ಅನುಮತಿಗೆ ತೀವ್ರ ವಿರೋಧ ತೋರಿದ್ದ ಗೋವಾ ಸರ್ಕಾರ, ನ.4ರಂದು ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಿ ಆಕ್ಷೇಪ ಸಲ್ಲಿಸಿತ್ತು.

Advertisement

ಗೋವಾದ ಆಕ್ಷೇಪಕ್ಕೆ ಸ್ಪಂದನೆ ಎಂಬಂತೆ ಕೇಂದ್ರ ಸರ್ಕಾರ ಕಳಸಾ-ಬಂಡೂರಿ ಯೋಜನೆಗೆ ನೀಡಿದ್ದ ಅನುಮತಿ ಪರಿಶೀಲನೆಗೆ ಸಮಿತಿ ರಚಿಸುವುದಾಗಿ ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸಿದೆ.

2002ರಲ್ಲಾದ ಬರೆ ಬೀಳದಿರಲಿ: ಮಹದಾಯಿ ವಿವಾದ ಸುಮಾರು ನಾಲ್ಕು ದಶಕಗಳಿಂದ ಇದ್ದು, ಇತ್ಯರ್ಥ ಕಾಣದಾಗಿದ್ದರಿಂದ ರಾಜ್ಯ ಸರ್ಕಾರ 2000 ಇಸ್ವಿಯಲ್ಲಿ ಕಳಸಾ-ಬಂಡೂರಿ ನಾಲಾ ಯೋಜನೆ ರೂಪಿಸಿತ್ತು. ಈ ಯೋಜನೆಗೆ 2002ರಲ್ಲಿ ಅಂದಿನ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ ಡಿಎ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿತ್ತು. ಆಗಲೂ ಗೋವಾ ಸರ್ಕಾರ ಕೇಂದ್ರದ ಮೇಲೆ ತೀವ್ರ ಒತ್ತಡ ತಂದು ತಾತ್ವಿಕ ಒಪ್ಪಿಗೆ ತಡೆ ಹಿಡಿಯುವಂತೆ ಮಾಡಿ ಕರ್ನಾಟಕಕ್ಕೆ ಅನ್ಯಾಯ ಮಾಡಿತ್ತು.

ಇದಾದ ಸುಮಾರು 16 ವರ್ಷಗಳ ನಂತರ ಮಹದಾಯಿ ನ್ಯಾಯಾಧಿಕರಣ ಹಂಚಿಕೆ ಪ್ರಕಾರ ರಾಜ್ಯಕ್ಕೆ ಸಿಕ್ಕ ಸುಮಾರು 5.5 ಟಿಎಂಸಿ ಅಡಿ ಕುಡಿಯುವ ನೀರಿನ ಯೋಜನೆಯಡಿ ಕಳಸಾ-ಬಂಡೂರಿ ನಾಲಾ ಯೋಜನೆ ಕಾಮಗಾರಿಗೆ ಕೇಂದ್ರ ಪರಿಸರ ಇಲಾಖೆ ನೀಡಿದ ಅನುಮತಿಯನ್ನು ತಡೆಯುವ ಲಾಬಿಗೆ ಗೋವಾ ಮುಂದಾಗಿದೆ. ಕಳಸಾ-ಬಂಡೂರಿ ನಾಲಾ ಯೋಜನೆಗೆ ಈಗಾಗಲೇ ಸುಮಾರು 125 ಕೋಟಿ ವೆಚ್ಚ ಮಾಡಲಾಗಿದ್ದು, ಜತೆಗೆ ಅಂದಾಜು 1,600 ಕೋಟಿ ವೆಚ್ಚದ ಯೋಜನೆಯ ವಿಸ್ತೃತ ವರದಿ (ಡಿಪಿಆರ್‌) ಸಲ್ಲಿಸಲಾಗಿದೆ.

ಕಳಸಾ-ಬಂಡೂರಿಗೆ ತಾನೇ ನೀಡಿದ ಅನುಮತಿಯ ಪರಿಶೀಲನೆಗೆ ಸಮಿತಿರಚಿಸುವುದಾಗಿ ಕೇಂದ್ರ ಸರ್ಕಾರ ಹೇಳಿರುವುದು ನೋಡಿದರೆ, 2002ರಲ್ಲಾದ ರೀತಿ ರಾಜ್ಯಕ್ಕೆ ಮತ್ತೂಮ್ಮೆ ಬರೆ ಎಳೆಯುವ ಕೆಲಸ ಆಗಲಿದೆ ಎಂಬ ಆತಂಕ ಮೂಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next