Advertisement

ಜಗಕ್ಕೆ ಬೆಳಕು ನೀಡಿದ್ದು 12ನೇ ಶತಮಾನ: ತರಳಬಾಳು ಶ್ರೀ

11:09 AM Feb 11, 2019 | |

ಹುಬ್ಬಳ್ಳಿ: ಹನ್ನೆರಡನೇ ಶತಮಾನ ಜಗತ್ತಿಗೆ ಬೆಳಕು ನೀಡಿದ ಶತಮಾನ. ಬಸವಾದಿ ಶರಣರು ಸಮಾಜದಲ್ಲಿರುವ ಅಜ್ಞಾನ, ಕಂದಾಚಾರ, ಅಸಮಾನತೆ, ಜಾತಿಯತೆ ಕೊಳೆ ತೊಳೆದು ಸ್ವಚ್ಛತೆ ಮೂಡಿಸುವ ಕಾರ್ಯ ಮಾಡಿದರು ಎಂದು ಸಾಣೆಹಳ್ಳಿ ಶ್ರೀ ತರಳಬಾಳು ಜಗದ್ಗುರು ಡಾ| ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

Advertisement

ನ್ಯೂ ಕಾಟನ್‌ ಮಾರ್ಕೆಟ್‌ನ ಸಾಂಸ್ಕೃತಿಕ ಭವನದಲ್ಲಿ ಸಾಣೆಹಳ್ಳಿ ಶಿವಸಂಚಾರ ಕಲಾಸಂಘದಿಂದ ರವಿವಾರ 100 ಮಕ್ಕಳಿಂದ ನಡೆದ ಜಾನಪದ ಶೈಲಿಯ ನೃತ್ಯ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜದಲ್ಲಿರುವ ಜನರ ಬದುಕನ್ನುಉನ್ನತೀಕರಿಸಬೇಕೆಂದು 12ನೇ ಶತಮಾನದ ಬಸವಾದಿ ಶರಣರ ಬದುಕನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡಿದ್ದಾರೆ. ಅಂದಿನ ಜಗದ್ಗುರುಗಳ ಪ್ರೇರಣೆಯಿಂದ ಸಾಣೆಹಳ್ಳಿಯಲ್ಲಿ ಶಿವಕುಮಾರ ಕಲಾ ಸಂಘ, ಶಿವಸಂಚಾರ ಆರಂಭವಾಯಿತು. ಕಳೆದ 21 ವರ್ಷದಲ್ಲಿ ಶಿವಸಂಚಾರದಿಂದ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ 63 ನಾಟಕಗಳ 3 ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಲಾಗಿದೆ ಎಂದರು.

ಇಂದು ಸಮಾಜದಲ್ಲಿ ಶುದ್ಧ ರಾಜಕಾರಣ ಉಳಿದಿಲ್ಲ, ಶುದ್ಧವಾದ ರಾಜಕೀಯ ಬೇಕು. ಕೊಳಕು ರಾಜಕೀಯ ಬೇಡವಾಗಿದೆ. ನಾವು ಯೋಗ್ಯರನ್ನು ಆಯ್ಕೆ ಮಾಡಬೇಕಿದೆ. ಮತ ಮಾರಿಕೊಳ್ಳುವವರು ಇರುವವರೆಗೂ ಪ್ರಜಾಪ್ರಭುತ್ವ ಹಾಳಾಗಿ ಹೋಗುತ್ತದೆ ಎಂದರು. ಮೂರುಸಾವಿರ ಮಠದ ಶ್ರೀ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಪಂಡಿತಾರಾಧ್ಯರು ಪ್ರಯೋಗಶೀಲರು, ಸದಾ ಒಂದಿಲ್ಲೊಂದು ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರ ಮೂಲಕವೇ ವಚನಗಳು ಇಂದು ಎಲ್ಲೆಡೆ ಪ್ರಚಾರ ಪಡೆಯುತ್ತಿವೆ ಎಂದರು. ಡಾ| ಎಸ್‌.ಪಿ.ಬಳಿಗಾರ ಮಾತನಾಡಿ, ಶಿವಸಂಚಾರ ಕಲಾಸಂಘದ 100 ಮಕ್ಕಳು 40ಕ್ಕೂ ಹೆಚ್ಚು ವಚನಗಳನ್ನು ನೃತ್ಯರೂಪದಲ್ಲಿ ತೋರಿಸುವುದು ಸಾಮಾನ್ಯ ಕೆಲಸವಲ್ಲ. ಔಷಧಿ ಇಲ್ಲದೇ ರೋಗ ಗುಣವಾಗಬೇಕೆಂದರೆ ಇಂತಹ ಕಾರ್ಯಕ್ರಮದ ಮೂಲಕವೇ ಸಾಧ್ಯ ಎಂದು ಹೇಳಿದರು.

ಶಾಂತ ಗಂಗಾಧರ ಮಾತನಾಡಿ, ಶತಮಾನದಿಂದ ದೀಪ ಬೆಳಗುತ್ತಿದೆ. ಆದರೆ ಬೆಂಕಿ ಹಚ್ಚುವವರು ಕೆಲವರು, ದೀಪ ಹಚ್ಚುವವರು ಕೆಲವರು. ಮಾತು ಬೆಲೆಬಾಳುವ ಸಮಾಜ ಕಟ್ಟುತ್ತದೆ. ನಾವೆಲ್ಲರೂ ಒಂದು ಎಂದು ತೋರಿಸಿರುವುದು ವಚನ. ವಚನ ಹೇಳಬಹುದು, ಹಾಡಬಹುದು, ನೃತ್ಯ ಮಾಡಬಹುದು ಎಂಬುದನ್ನು ತರಳಬಾಳು ಶ್ರೀಗಳು ತೋರಿಸಿ ಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು. ಪ್ರಾಚಾರ್ಯ ಐ.ಜಿ. ಚಂದ್ರಶೇಖರ ಮಾತನಾಡಿದರು. ನಂತರ ಮಕ್ಕಳು ವಿವಿಧ ವಚನಗಳ ನೃತ್ಯ ಪ್ರದರ್ಶನ ನೀಡಿದರು. ಪಿ.ಎಸ್‌. ಧರಣೆಪ್ಪನವರ, ಕಾಡಯ್ಯ ಹಿರೇಮಠ, ಡಾ| ಕೆ.ಎಚ್. ಜಿತೂರಿ, ಡಾ| ಸುರೇಶ ಹಿರೇಗೌಡರ, ಡಾ| ಅಭಯಕುಮಾರ ಮಂಟಗಾಣಿಕರ, ವಿ.ಸಿ. ಶಿಗ್ಲಿ, ಎಸ್‌.ಕೆ. ಆದಪ್ಪನವರ, ಡಾ| ಸವಿತಾ ರಾಯಚೂರ ಇನ್ನಿತರರು ಇದ್ದರು. ಆರ್‌.ಟಿ. ಮಜ್ಜಗಿ ನಿರೂಪಿಸಿದರು.

Advertisement

12ನೇ ಶತಮಾನದಲ್ಲಿ ವಚನಗಳು ಸೃಷ್ಟಿ ಆಗಿದ್ದರೂ ಇಂದಿಗೂ ಅವು ಪ್ರಸ್ತುತವಾಗಿವೆ. ನಮ್ಮ ಬದುಕಿಗೆ ದಾರಿ ದೀಪವಾಗಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಹಿರಿಯ ತರಳುಬಾಳು ಶ್ರೀಗಳು ಮೊಟ್ಟ ಮೊದಲಿಗೆ ವಚನಗಳನ್ನು ಹಾಡಿಸಿದರು. ನಂತರ ನಾಟಕಗಳನ್ನು ಮಾಡಿಸಿದರು. ಪುಸ್ತಕಗಳನ್ನು ಪ್ರಕಟಿಸಿದರು. ನೃತ್ಯದ ಮೂಲಕ ವಚನಗಳನ್ನು ಜನರಿಗೆ ತಲುಪಿಸಿದರು. ಇಂದಿನ ದೃಶ್ಯ ಮಾಧ್ಯಮ ಹಿಂದೆ ಇದ್ದಿದ್ದರೆ ದೊಡ್ಡ ಕ್ರಾಂತಿಯೇ ಆಗುತ್ತಿತ್ತು.
•ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ,ಸಾಣೇಹಳ್ಳಿ, ಶ್ರೀ ತರಳಬಾಳು ಮಠ

Advertisement

Udayavani is now on Telegram. Click here to join our channel and stay updated with the latest news.

Next