Advertisement

Hridayam: “ಕೇರಳದಲ್ಲಿ ಪ್ರಣವ್, ಕರ್ನಾಟಕದಲ್ಲಿ ಪ್ರತಾಪ್”

02:37 PM Aug 28, 2023 | Team Udayavani |

ಅದೃಷ್ಟ ಅನ್ನೋದು ಕೆಲವರಿಗೆ ಒಲಿಯುವುದಕ್ಕೆ ಹೆಚ್ಚು ಸಮಯ ಹಿಡಿಯುತ್ತದೆ, ಇನ್ನು ಕೆಲವರಿಗೆ ರಾತ್ರಿಯಾಗಿ ಬೆಳಗಾಗುವುದರೊಳಗೆ ಅದೃಷ್ಟವೇ ಬದಲಾಗುತ್ತದೆ. ಹೀಗೆ ಅಚಾನಕ್ಕಾಗಿ ಆ ಒಂದು ಹಾಡಿನಿಂದ ತನ್ನ ಅದೃಷ್ಟ ಬದಲಾಗಿ ಎಲ್ಲೆಡೆ ಈಗ ಪ್ರಚಲಿತದಲ್ಲಿರುವವರು ಪ್ರತಾಪ್ ಗೋಪಾಲ್.

Advertisement

ಈ ಪ್ರಪಂಚದಲ್ಲಿ ಒಬ್ಬರ ಮೈಕಟ್ಟನ್ನು ಹೋಲುವವರು ಇನ್ನೊಬ್ಬರು ಇರುತ್ತಾರೆ ಎಂದು ಕೇಳಿದ್ದೆವು. ಆದರೆ ಇಲ್ಲಿ ಅದು ನಿಜವೇನೋ ಅನಿಸುತ್ತಿದೆ. ಯಾಕೆಂದರೆ ಇತ್ತೀಚಿಗೆ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾದ “ಹೃದಯಂ” ಸಿನಿಮಾದಲ್ಲಿ ನಾಯಕ ನಟನಾಗಿ ಪ್ರಣವ್ ಮೋಹನ್ ಲಾಲ್ ಅದ್ಭುತ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಆ ಚಿತ್ರ ಬಿಡುಗಡೆಗಿಂತ ಮುಂಚಿತವಾಗಿ ಅದರದ್ದೇ ಚಿತ್ರದ ಒಂದು ಹಾಡು ಬಿಡುಗಡೆಗೊಂಡಿತ್ತು. ಎಲ್ಲೆಡೆ ಅದೇ ಹಾಡಿನ ಸದ್ದು. ಆ ಸಮಯದಲ್ಲಿ ಇತ್ತ ಕಡೆ ಅದರಲ್ಲಿ ನಟಿಸಿದ ನಾಯಕ ನಟನಂತೆ ಹೋಲುವ ಇನ್ನೊಬ್ಬ ವ್ಯಕ್ತಿ  ಪ್ರತಾಪ್ ಗೋಪಾಲ್ ಎಂಬವರು ಕೂಡ ಎಲ್ಲೆಡೆ ಎಲ್ಲರ ಮಾತಾಗುತ್ತಾ ಬಂದರು.

ಅವರ ಸ್ನೇಹಿತರು ಅವನಂತೆ ನೀನು ಕಾಣುತ್ತಿದ್ದೀಯಾ ಎಂದು ಹೇಳಲು ಶುರು ಮಾಡಿದರು. ಇದನ್ನಾವುದನ್ನು ತಲೆಕೆಡಿಸಿಕೊಳ್ಳದ ಪ್ರತಾಪ್ ಗೋಪಾಲ್ ಒಂದು ವರ್ಷದ ಬಳಿಕ ಒಮ್ಮೆ ಕಾಸರಗೋಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತನಗರಿವಿಲ್ಲದೆ ಜನ ಅವರನ್ನು ಕಂಡು ಈತ “ಹೃದಯಂ” ಸಿನಿಮಾದ ನಾಯಕ ಪ್ರಣವ್ ಮೋಹನ್ ಲಾಲ್ ತಾನೇ? ಎಂದು ಗುಸುಗುಟ್ಟುತ್ತಾ… ಸರ್ ಒಂದು ಸೆಲ್ಫಿ , ಒಂದು  ಫೋಟೋ ಎಂದು ಪೋಸ್ ಕೊಡಲು ಶುರು ಮಾಡಿದರು.

ಸುತ್ತುವರೆದ ಜನರನ್ನು ಪೊಲೀಸರು ಬಂದು ಸಡಿಲ ಮಾಡಬೇಕಾಯಿತು. ಅದೇ ಸಮಯದಲ್ಲಿ ಮಾಧ್ಯಮದವರು ಕೂಡ ಭೇಟಿ ನೀಡಿ ವಿಚಾರಿಸಿದ್ದರು. ಹೀಗೆ ಬೆಂಗಳೂರಿನ ಪ್ರತಾಪ್ ಗೋಪಾಲ್ ಕೇರಳದ ಖ್ಯಾತ ನಟ ಪ್ರಣವ್ ಮೋಹನ್ ಲಾಲ್ ಎಂದೇ ಗುರುತಿಸಿಕೊಳ್ಳುವುದಕ್ಕೆ ಪ್ರಾರಂಭವಾದರು.

Advertisement

ಯಾರು ಈ ಪ್ರತಾಪ್ ಗೋಪಾಲ್?

ಇವರು ಮೂಲತಃ ಬೆಂಗಳೂರಿನ ಲಾಲ್ ಭಾಗ್ ಸಮೀಪದಲ್ಲಿ ವಾಸವಿರುವ ಗೋಪಾಲ್ ಹಾಗೂ ವರಲಕ್ಷ್ಮಿ ದಂಪತಿಯ ಪುತ್ರ. ತನ್ನೆಲ್ಲ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಪೂರೈಸಿದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ಫ್ಯಾಷನ್ ಡಿಸೈನರ್ ಆಗಿ ವೃತ್ತಿಜೀವನವನ್ನು ಮುಂದುವರಿಸುತ್ತಿದ್ದಾರೆ. ಬಾಲ್ಯದಿಂದಲೇ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅತೀವ ಆಸಕ್ತಿಯನ್ನು ಹೊಂದಿದೆ ಇವರು ನೃತ್ಯ ,ನಟನೆ ಹೀಗೆ ಅನೇಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ರಂಗಭೂಮಿ ಕಲಾವಿದರು ಹೌದು!

ಫ್ಯಾಶನ್ ಡಿಸೈನ್ ಬಗ್ಗೆ ಒಲವನ್ನು ಹೊಂದಿದ ಇವರು ವಿದ್ಯಾಭ್ಯಾಸದ ನಂತರ  ಗೆಳತಿ ಭೂಮಿಕಾ ಅವರೊಡಗೂಡಿ ಇದರ ಬಗೆಗೆ ಮಾಹಿತಿ ಪಡೆದು, ಕಲಿತು ಈ ವೃತ್ತಿಯಲ್ಲಿ ಮುಂದುವರಿಯುತ್ತಿದ್ದಾರೆ. ಜೊತೆಗೆ ಐಟಿ ಕಂಪನಿಯಲ್ಲೂ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ಅದೃಷ್ಟ ಅಂದರೆ ಇದೇನಾ?

ಒಂದು ಸಿನಿಮಾದಿಂದ ಇಷ್ಟೆಲ್ಲಾ ಪ್ರಚಲಿತದಲ್ಲಿರುವ ಪ್ರತಾಪ್ ಗೋಪಾಲ್ ಗೆ ತದ ನಂತರ ಅನೇಕ ಸಿನಿಮಾದ ಬೇಡಿಕೆಯು ಬಂತು. ಜೊತೆಗೆ ಮಲಯಾಳಂ ಚಿತ್ರರಂಗದಲ್ಲಿನ ಖ್ಯಾತ ನಟ ಮೋಹನ್ ಲಾಲ್ ಅವರನ್ನು ಕೂಡ ಒಂದು ಕಾರ್ಯಕ್ರಮದಲ್ಲಿ ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಬೇರೆ ಬೇರೆ ಕಾರ್ಯಕ್ರಮಗಳಿಗೆ ಇವರನ್ನು ಆಹ್ವಾನಿಸುಲು ಪ್ರಾರಂಭಿಸಿದರು. ಹೃದಯಂ ಸಿನಿಮಾದ ಅನೇಕ ಪಾತ್ರಧಾರಿಗಳು ಪ್ರತಾಪ್ ಗೋಪಾಲ್ ಅವರನ್ನು ಮಾತನಾಡಿಸಿದರು.

ಪ್ರತಾಪ್ ಗೋಪಾಲ್ ಹೀಗನ್ನುತ್ತಾರೆ…

ಸಿನಿಮಾ ಮಾಡುವುದಾದರೆ ನಾಯಕ ನಟನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ನನ್ನ ಇಚ್ಛೆ. ಕನ್ನಡ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಕ್ಕರೆ ಖಂಡಿತವಾಗಿಯೂ ಅಭಿನಯಿಸುತ್ತೇನೆ. ಆದರೆ ಒಳ್ಳೆಯ ಕಥೆ ಹಾಗೂ ನಿರ್ದೇಶಕರು ಇರಬೇಕು. ಜೊತೆಗೆ ನನ್ನ ವೃತ್ತಿಯ ಬಗೆಗೂ ಗಮನ ಹರಿಸಬೇಕು. ಒಮ್ಮೆಲೇ ಎಲ್ಲವನ್ನೂ ನಿಭಾಯಿಸುವ ಬಗೆಗೂ ಆಲೋಚಿಸಬೇಕು. ಹೀಗೆ ಒಂದೇ ಬಾರಿ ಖ್ಯಾತಿ ಪಡೆದರೆ ಅದು ಹೆಚ್ಚಿನ ಕಾಲ ಉಳಿಯುವುದಿಲ್ಲ ಎಂಬ ವಿಚಾರವು ಎಲ್ಲರ ಮನದಲ್ಲಿ ಇರಬೇಕು. ನಾನು ಆ ವಿಚಾರದ ಸಲುವಾಗಿ ಸರಿಯಾದ ಆಲೋಚನೆ ಮಾಡಿ ಮುಂದಿನ ಹೆಜ್ಜೆ ಇಡುತ್ತೇನೆ  ಎನ್ನುತ್ತಾರೆ ಪ್ರತಾಪ್ ಗೋಪಾಲ್.

ಅನೇಕರಲ್ಲಿ ಪ್ರಣವ್ ಮೋಹನ್ ಲಾಲ್ ಹಾಗೂ ಪ್ರತಾಪ್ ಗೋಪಾಲ್ ರವರ ಸಂಯೋಜನೆಯಲ್ಲಿ ಹೊಸ ಸಿನೆಮಾ ಮಲಯಾಳಂ ಭಾಷೆಯಲ್ಲಿ ಮುಂದಿನ ದಿನಗಳಲ್ಲಿ ಬರುತ್ತದೆ ಎಂಬುದು ಕಲ್ಪನೆ. ಅದೇನೆ ಆಗಲಿ  ಕೆಲವರು ಅವಕಾಶವನ್ನು ಹುಡುಕಿಕೊಂಡು ಹೋಗುತ್ತಾರೆ.

ಇನ್ನೂ ಕೆಲವರನ್ನು ಅವಕಾಶವೇ ಆಹ್ವಾನಿಸುತ್ತದೆ. ಆಗ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು  ಗೊತ್ತಿದ್ದರೆ ಯಾವ ಸಂದರ್ಭದಲ್ಲಿ ಕೂಡ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎನ್ನುತ್ತಾ ಪ್ರತಾಪ್ ಗೋಪಾಲ್ ರ ಈ ಅಚಾನಕ್ ಖ್ಯಾತಿಯು ಒಳ್ಳೆಯ ರೀತಿಯಲ್ಲಿ ಮುಂದುವರೆಯಲಿ ಎನ್ನುತ್ತಾ ಮುಂದಿನ ಹೆಜ್ಜೆಗೆ ಶುಭ ಹಾರೈಸೋಣ.

-ದೀಪ್ತಿ ಅಡ್ಡಂತ್ತಡ್ಕ

ಪತ್ರಿಕೋದ್ಯಮ ವಿದ್ಯಾರ್ಥಿನಿ ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next