Advertisement

ನಾಗರಿಕ ಸೇವಾ ಪರೀಕ್ಷೆ ಪೂರ್ವಸಿದ್ಧತೆ ಹೇಗೆ ?

12:23 AM Feb 12, 2020 | mahesh |

ಇತ್ತೀಚಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಇವರಲ್ಲಿ ಕೆಲವರು ಮಾತ್ರ ಯಶಸ್ಸು ಗಳಿಸುತ್ತಿದ್ದು, ಬಹುತೇಕರು ಪರೀಕ್ಷೆ ಎದುರಿಸುವಲ್ಲಿ ವಿಫ‌ಲರಾಗುತ್ತಿದ್ದಾರೆ. ಅವರ ವೈಫ‌ಲ್ಯಕ್ಕೆ ಕಾರಣಗಳೇನು ಎಂಬುದನ್ನು ಹುಡುಕುತ್ತಾ ಹೋದರೆ ಅನೇಕ ಕಾರಣಗಳು ಕಂಡುಬರುತ್ತವೆ. ಅಧಿಸೂಚನೆ ಹೊರಡಿಸಿದ ಅನಂತರ ಪೂರ್ವಸಿದ್ಧತೆ ನಡೆಸುವುದು, ಪರೀಕ್ಷಾ ಹಂತಗಳ ಕುರಿತು ಮಾಹಿತಿ ಇಲ್ಲದೆ ಇರುವುದು, ಅಧ್ಯಯನ ಸಾಮಗ್ರಿಗಳ ಆಯ್ಕೆ ಕುರಿತು ಗೊಂದಲ ಇತ್ಯಾದಿ ವಿಷಯಗಳು ಅವರನ್ನು ದಡ ಸೇರಿಸುವಲ್ಲಿ ಎಡವುವಂತೆ ಮಾಡುತ್ತಿವೆ…. ಈ ಎಲ್ಲ ಸಮಸ್ಯೆಗಳಿಗೆ ಸಲಹೆಗಳನ್ನು ಇಲ್ಲಿ ನೀಡಲಾಗಿದ್ದು, 2020ರ ಸಾಲಿನ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಪರೀಕ್ಷಾ ದಿನಾಂಕ, ಪರೀಕ್ಷೆ ತೆಗೆದುಕೊಳ್ಳಲು ಅಗತ್ಯವಿರುವ ವಿದ್ಯಾರ್ಹತೆ, ಪರೀಕ್ಷಾ ನಿಯಮ, ಅರ್ಜಿ ಸಲ್ಲಿಕೆ ಹೇಗೆ ಎಂಬ ಮಾಹಿತಿ ನೀಡಿದ್ದಾರೆ ಸುಶ್ಮಿತಾ ಜೈನ್‌.

Advertisement

ಮೂರು ಹಂತಗಳನ್ನು ಒಳಗೊಂಡಿದೆ
ಕೆಪಿಎಸ್‌ಸಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯುತ್ತದೆ.
1.ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ
2. ಮುಖ್ಯ ಪರೀಕ್ಷೆ
3. ಮೌಖೀಕ ಪರೀಕ್ಷೆ

ಪ್ರಿಲಿಮ್ಸ್‌ ಪರೀಕ್ಷೆ
ಪ್ರಿಲಿಮ್ಸ್‌ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟಂತೆ ಎರಡು ಪ್ರಶ್ನೆಪತ್ರಿಕೆಗಳಿರುತ್ತವೆ. ಪ್ರಶ್ನೆ ಪತ್ರಿಕೆಯು ವಸ್ತುನಿಷ್ಠ/ ಬಹುಆಯ್ಕೆ ಮಾದರಿಯಲ್ಲಿದ್ದು, ಪ್ರತಿಯೊಂದು ಪತ್ರಿಕೆಯೂ 200 ಅಂಕಗಳನ್ನು ಒಳಗೊಂಡಿರುತ್ತದೆ. ಇನ್ನು ಪ್ರತಿಯೊಂದು ಪತ್ರಿಕೆಗೂ ತಲಾ 2 ಗಂಟೆಗಳ ಕಾಲಾವಕಾಶ ನಿಗದಿ ಮಾಡಲಾಗಿದ್ದು, ಸಾಮಾನ್ಯವಾಗಿ ಎರಡೂ ಪತ್ರಿಕೆಗಳ ಪರೀಕ್ಷೆ ಒಂದೇ ದಿನ ನಡೆಸಲಾಗುತ್ತದೆ. ಜತೆಗೆ ಪೂರ್ವಭಾವಿ ಪರೀಕ್ಷೆಯಲ್ಲಿ ನಕಾರಾತ್ಮಕ ಅಂಕಗಳಿರುತ್ತವೆ.

ಪತ್ರಿಕೆ-1
 ಪ್ರಸ್ತುತ ವಿದ್ಯಮಾನ-ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಹತ್ವದ ಸಂಗತಿಗಳು
 ಮಾನವಿಕ ವಿಷಯಗಳು- ಭಾರತದ ಇತಿಹಾಸ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮ- ಸಾಮಾಜಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಜತೆ ಕರ್ನಾಟಕದ ಮಹತ್ವವನ್ನು ಒತ್ತಿ ಹೇಳುವಂತಹ ಸಮಗ್ರ ಅಧ್ಯಯನ.
 ಭಾರತದ ರಾಜಕೀಯ, ಆಡಳಿತ ಮತ್ತು ಆರ್ಥಿಕ ವ್ಯವಸ್ಥೆ – ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ- ಗ್ರಾಮೀಣ ಅಭಿವೃದ್ಧಿ- ಬಡತನ ನಿರ್ಮೂಲನೆ, ಜನಸಂಖ್ಯೆ, ಸಾಮಾಜಿಕ ಕ್ಷೇತ್ರದ ವಿವಿಧ ಯೋಜನೆಗಳು…

ಪತ್ರಿಕೆ -2
 ರಾಜ್ಯದ ಪ್ರಸ್ತುತ ವಿದ್ಯಮಾನ ಮತ್ತು ರಾಜ್ಯ ಸರಕಾರದ ಪ್ರಮುಖ ಕಾರ್ಯಕ್ರಮಗಳು
 ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನ ಕ್ಷೇತ್ರದಲ್ಲಿನ ಸಮಕಾಲೀನ ಬೆಳವಣಿಗೆಗಳು, ಆರೋಗ್ಯ, ಜೀವಿ ಪರಿಸರ, ಜೈವಿಕ ವೈವಿಧ್ಯ, ಹವಾಮಾನ ವೈಪರೀತ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಸಂಗತಿಗಳು, ಸಮಸ್ಯೆಗಳು ಇತ್ಯಾದಿ.

Advertisement

ಸಾಮಾನ್ಯ ಸುಶಿಕ್ಷಿತ ಪದವೀಧರ ಅಭ್ಯರ್ಥಿಯ ಸಾಮಾನ್ಯ ನಿರೀಕ್ಷಣೆಯ ಮಟ್ಟದಲ್ಲಿ ಕೇಳಲಾಗುವ ಈ ಪ್ರಶ್ನೆಗಳಿಗೆ ವಿಜ್ಞಾನ ವಿಷಯದ ಆಳವಾದ ಅಧ್ಯಯನ ಮಾಡಿರಲೇಬೇಕಾದ ಅಗತ್ಯವೇನಿಲ್ಲ.
 ಸಾಮಾನ್ಯ ಬೌದ್ಧಿಕ ಸಾಮರ್ಥ್ಯ, ತಾರ್ಕಿಕ ಆಲೋಚನೆ ಮತ್ತು ತುಲನಾತ್ಮಕ ಸಾಮರ್ಥ್ಯ, ತೀರ್ಮಾನ ಕೈಗೊಳ್ಳುವಿಕೆ / ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಸಮಸ್ಯೆ ನಿರ್ವಹಣ ಸಾಮರ್ಥ್ಯ, ಸಂಖ್ಯಾ ಮೂಲಾಂಶಗಳು (ಸಂಖ್ಯೆಗಳು ಮತ್ತು ಅವುಗಳಿಗಿರುವ ಸಂಬಂಧ, ಏರಿಕೆ ಮತ್ತು ಇಳಿಕೆ ಕ್ರಮ ಇತ್ಯಾದಿ), ದತ್ತಾಂಶ ವಿಶ್ಲೇಷಣೆ (ಚಾರ್ಟ್‌, ಗ್ರಾಫ್, ಟೇಬಲ್‌, ನಕ್ಷೆಗಳು, ರೇಖಾ ಚಿತ್ರಗಳು, ದತ್ತಾಂಶ ಇತ್ಯಾದಿ – 10ನೇ ತರಗತಿಯ ಮಟ್ಟದ ಕಠಿನತೆಗೆ ತಕ್ಕಂತೆ.)

ಮುಖ್ಯ ಪರೀಕ್ಷೆ
ಕೆಪಿಎಸ್‌ಸಿ ಮುಖ್ಯ ಪರೀಕ್ಷೆಯನ್ನು ನಿಯಮಾನುಸಾರ, ಪೂರ್ವಭಾವಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದಲ್ಲಿ 1:20 ಅನುಪಾತದಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅಲ್ಲದೇ ಮುಖ್ಯ ಪರೀಕ್ಷೆಯಲ್ಲಿ 100 ಅಂಕಗಳ ಕಡ್ಡಾಯ ಕನ್ನಡ ಮತ್ತು ಇಂಗ್ಲಿಷ್‌ ಪ್ರಶ್ನೆ ಪತ್ರಿಕೆಗಳಿರುತ್ತವೆ.

ಪತ್ರಿಕೆ 3, 4 ಮತ್ತು 5
ಈ ಪ್ರಶ್ನೆ ಪತ್ರಿಕೆಗಳು ಸಾಮಾನ್ಯ ಅಧ್ಯಯನಕ್ಕೆ ಸಂಬಂಧಪಟ್ಟದ್ದಾಗಿದ್ದು, ಪ್ರತಿ ಪತ್ರಿಕೆಗೂ 250 ಅಂಕಗಳನ್ನು ನಿಗದಿ ಮಾಡಲಾಗಿದೆ.

ಪತ್ರಿಕೆ 7 ಮತ್ತು 8
ಇದು ಐಚ್ಛಿಕ ವಿಷಯ ಪತ್ರಿಕೆಯಾಗಿದ್ದು, ಅಭ್ಯರ್ಥಿ ಆಸಕ್ತ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು, ಐಚ್ಛಿಕ ವಿಷಯದ 2 ಪತ್ರಿಕೆಗಳು 250 ಅಂಕಗಳನ್ನು ಒಳಗೊಂಡಿರುತ್ತದೆ.

ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ)
ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು ಒಟ್ಟು ಹುದ್ದೆಗಳು ಹಾಗೂ ಮೀಸಲಾತಿಗೆ ಅನುಗುಣವಾಗಿ 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಇಲ್ಲಿ ಅಭ್ಯರ್ಥಿಯ ನಾಯಕತ್ವ ಗುಣ, ಮಾನಸಿಕ ಸಮತೋಲನ, ನಿರ್ಧಾರ ತೆಗೆದು ಕೊಳ್ಳುವ ಸಾಮರ್ಥ್ಯ ಇತ್ಯಾದಿಗಳನ್ನು ಸಂದರ್ಶನದಲ್ಲಿ ಪರೀಕ್ಷಿಸಲಾಗುತ್ತದೆ.

ಶೈಕ್ಷಣಿಕ ಅರ್ಹತೆ
ಸರಕಾರದಿಂದ ಮಾನ್ಯತೆ ಪಡೆದ ಯಾವುದೇ ವಿದ್ಯಾಸಂಸ್ಥೆ ಯಿಂದ ಯಾವುದೇ ಪದವಿಯನ್ನು ಪಡೆದಿರಬೇಕು.
ಎಷ್ಟು ಬಾರಿ ಬರೆಯಬಹುದು?
 ಸಾಮಾನ್ಯ ವರ್ಗದ ಅಭ್ಯರ್ಥಿಗಳು 7 ಬಾರಿ
 ಹಿಂದುಳಿದ ವರ್ಗಗಳ ಅಭ್ಯರ್ಥಿಗಳು 9 ಬಾರಿ
 ಪ.ಜಾತಿ ಮತ್ತು ಪಂಗಡ ಸೇರಿದ ಅಭ್ಯರ್ಥಿಗಳಿಗೆ ಇಂತಿಷ್ಟು ಬಾರಿ ಅವಕಾಶಕ್ಕೆ ಮಿತಿ ಇಲ್ಲ.

ಕೋಚಿಂಗ್‌ ಅಗತ್ಯವೇ?
ಕೆಪಿಎಸ್‌ಸಿ ಸೇರ ಬಯಸುವ ಅಭ್ಯರ್ಥಿಯ ಜ್ಞಾನಕ್ಕೆ ಅನುಗುಣವಾಗಿ, ಕೋಚಿಂಗ್‌ ಬೇಕೇ ಅಥವಾ ಬೇಡವೇ ಎಂಬುದು ಆಧಾರಿತವಾಗಿರುತ್ತದೆ. ತರಬೇತಿ ಪಡೆಯಬಹುದು. ಜತೆಗೆ ಈಗಾಗಲೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರ ಮಾಗದರ್ಶನ ಪಡೆದರೆ ಒಳಿತು.

ಪರೀಕ್ಷಾ ಸಿದ್ಧತೆಗೆ ಬೇಕಾಗುವ ಪಠ್ಯ
1. ಸಮಗ್ರ ಭಾರತದ ಇತಿಹಾಸ – ಕೆ.ಎನ್‌.ಎ .
2. ಕರ್ನಾಟಕ ಇತಿಹಾಸ – ಕೆ.ಎನ್‌.ಎ .
3. ಭಾರತದ ಸಂವಿಧಾನ – ಪಿ.ಎಸ್‌.ಗಂಗಾಧರ/ಕೆ.ಎಂ. ಸುರೇಶ್‌
4. ಭಾರತದ ಆರ್ಥಿಕತೆ – ಗರಣಿ ಕೃಷ್ಣಮೂರ್ತಿ/ಎಚ್ಚಾರ್ಕೆ
5. ಕರ್ನಾಟಕ ಆರ್ಥಿಕತೆ – ಗರಣಿ ಕೃಷ್ಣಮೂರ್ತಿ/ಎಚ್ಚಾರ್ಕೆ
6. ಭಾರತದ ಭೂಗೋಳ – ಡಾ| ರಂಗನಾಥ
7. ಪ್ರಾಕೃತಿಕ ಭೂಗೋಳ – ಡಾ| ರಂಗನಾಥ
8. ಕರ್ನಾಟಕ ಭೂಗೋಳ – ಡಾ| ರಂಗನಾಥ
9. ಭಾರತ ಆರ್ಥಿಕ ಸಮೀಕ್ಷೆ
10. ಕರ್ನಾಟಕ ಆರ್ಥಿಕ ಸಮೀಕ್ಷೆ
11. ಕರ್ನಾಟಕ ಕೈಪಿಡಿ
12. ಇಂಡಿಯಾ ಇಯರ್‌ ಬುಕ್‌ : 2020
13. ಯೋಜನೆ ಮಾಸಪತ್ರಿಕೆ
14. ಜನಪದ ಮಾಸಪತ್ರಿಕೆ
15. 7ರಿಂದ 10ನೇ ತರಗತಿಯ ಸಮಾಜ ಮತ್ತು ವಿಜ್ಞಾನ ವಿಷಯಗಳ ಪಠ್ಯಪುಸ್ತಕಗಳ ಅಧ್ಯಯನ

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್‌.6
ಪ್ರಿಲಿಮ್ಸ್‌ ಪರೀಕ್ಷೆ ದಿನಾಂಕ: ಮೇ .17
ಮುಖ್ಯ ಪರೀಕ್ಷಾ ದಿನಾಂಕ: ಆಗಸ್ಟ್‌ ಮತ್ತು ಸೆಪ್ಟಂಬರ್‌ ತಿಂಗಳಿನಲ್ಲಿ ನಡೆಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲಾತಾಣ
//www.kpsc.kar.nic.in/

Advertisement

Udayavani is now on Telegram. Click here to join our channel and stay updated with the latest news.

Next