Advertisement

ನಿವೇಶನ ಖರೀದಿಸಿದರೂ ಮನೆ ನಿರ್ಮಾಣ ಮರೀಚಿಕೆ

12:15 PM Jul 27, 2018 | Team Udayavani |

ಚನ್ನಪಟ್ಟಣ: ಜೀತಾವಧಿಯಲ್ಲಿ ಸ್ವಂತ ಸೂರು ಕಟ್ಟಿಕೊಳ್ಳಬೇಕೆಂಬುದು ಬಹುತೇಕರ ಕನಸು. ಅದಕ್ಕಾಗಿ ಅರ್ಧ ಜೀವನವನ್ನೇ ಸವೆಸಿ, ಇದ್ದ ಬದ್ದ ಹಣ ಹಾಕಿ ನಿವೇಶನ ಖರೀದಿ ಮಾಡಿ, ಮನೆ ನಿರ್ಮಿಸಿಕೊಳ್ಳಲು ಪರಿತಪಿಸುತ್ತಾರೆ. ಆದರೆ ನಿವೇಶನ ನೀಡಿದವರು ಮನೆ ಕಟ್ಟಲು ಅಗತ್ಯವಿರುವ ಸೌಲಭ್ಯ ಕಲ್ಪಿಸದಿದ್ದರೆ, ಖರೀದಿಸದವರ ಸ್ಥಿತಿ ಹೇಗಾಗಬೇಡ?

Advertisement

ತ್ರಿಶಂಕು ಸ್ಥಿತಿ: ಅಂಥಹುದೇ ಸ್ಥಿತಿ ಇಲ್ಲಿನ ಸಾತನೂರು ರಸ್ತೆಯ ಕಣ್ವ ವಸತಿ ಬಡಾವಣೆಯಲ್ಲಿ ಎದುರಾಗಿದೆ. ಈ ಹಿಂದೆ ರಾಮನಗರ ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ಇಲ್ಲಿ ಬಡಾವಣೆ ನಿರ್ಮಿಸಿ ನೂರಾರು ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಹಂಚಿಕೆ ಮಾಡಿ ಹಣ ಕಿತ್ತುಕೊಂಡ ಪ್ರಾಧಿಕಾರ ಮನೆ ಕಟ್ಟಲು ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸದೆ ಕೈತೊಳೆದುಕೊಂಡ ಪರಿಣಾಮ, ನಿವೇಶನ ಕೊಂಡವರು ಅತ್ತ ಮನೆ ನಿರ್ಮಿಸಲು ಆಗದೆ, ಮಾರಲೂ ಆಗದೆ ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದಾರೆ.

ಅನೈತಿಕ ಚಟುವಟಿಕೆಗಳ ತಾಣ: ಹುಲ್ಲುಗಾವಲಾಗಿ ಪರಿವರ್ತನೆಯಾಗಿರುವ ಬಡಾವಣೆ, ಗಿಡಗಂಟಿಗಳಿಂದಾಗಿ ವಿಷಜಂತುಗಳ ಆವಾಸಸ್ಥಾನವಾಗಿ ರಾತ್ರಿವೇಳೆ ಕುಡುಕರ ಪಾಲಿಗೆ ಬಯಲು ರೆಸ್ಟೋರೆಂಟ್‌ ಆಗಿ ಬದಲಾಗಿದೆ. ಮುಚ್ಚಿಕೊಂಡಿರುವ ಚರಂಡಿಗಳು ಅಸ್ತಿತ್ವವನ್ನು ಪ್ರಶ್ನೆ ಮಾಡುತ್ತಿದ್ದರೆ, ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಈಜುಕೊಳ, ಕಟ್ಟಡ ಭೂತಬಂಗಲೆಯಾಗಿ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. 

ನಿವೇಶನ ಮಾಲೀಕರ ಅಳಲು: ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಪ್ರಾಧಿಕಾರ ಮಾತ್ರ ಇತ್ತ ತಿರುಗಿ ನೋಡುತ್ತಿಲ್ಲ. ಇತ್ತೀಚೆಗೆ ಪ್ರಾಧಿಕಾರ ವಿಭಜನೆಯಾಗಿ ರಾಮನಗರ, ಚನ್ನಪಟ್ಟಣ ಯೋಜನಾ ಪ್ರಾಧಿಕಾರಗಳಾಗಿ ಬದಲಾವಣೆಯಾಗಿದ್ದು, ಯಾರನ್ನು ಸಂಪರ್ಕಿಸಬೇಕೆಂಬುದೇ ನಿವೇಶನ ಕೊಂಡವರಿಗೆ ತಿಳಿಯುತ್ತಿಲ್ಲ. ಬಡಾವಣೆಯಲ್ಲಿ ನೀರು, ವಿದ್ಯುತ್‌ ಸಂಪರ್ಕ ಕಲ್ಪಿಸದ ಕಾರಣ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ನಿವೇಶನ ಮಾಲೀಕರ ಅಳಲಾಗಿದೆ. 

ಅವರದ್ದೇ ಜವಾಬ್ದಾರಿ: ಇನ್ನು ನಿವೇಶನ ಖರೀದಿ ಮಾಡಿರುವ ಹಲವರು ಅನಿವಾರ್ಯವಾಗಿ ಮನೆ ಕಟ್ಟಿಕೊಳ್ಳಲು ಮುಂದಾದರೆ ಸೌಲಭ್ಯಗಳನ್ನು ಅವರ ಸ್ವಂತ ಖರ್ಚಿನಲ್ಲೇ ಕಲ್ಪಿಸಿಕೊಳ್ಳಬೇಕಾಗಿದೆ. ಮನೆ ನಿುìಸಲು ಅಗತ್ಯವಾಗಿರುವ ನೀರು, ವಿದ್ಯುತ್‌ ಸಂಪರ್ಕವನ್ನು ಮನೆ ಕಟ್ಟಿಕೊಳ್ಳುವವರೇ ಪಡೆದುಕೊಂಡು ಮನೆ ನಿರ್ಮಿಸಿಕೊಳ್ಳಬೇಕಾಗಿದೆ. ಸುತ್ತಮುತ್ತಲ ಪ್ರದೇಶವನ್ನು ಸ್ವತ್ಛಗೊಳಿಸಿಕೊಳ್ಳುವ ಹೊಣೆಯೂ ಅವರದ್ದೇ. ಹಾಗಾಗಿ ಏನೇ ಅದರೂ ಮನೆ ಕಟ್ಟಿಕೊಳ್ಳುವವರೇ ಜವಾಬ್ದಾರಿ ಹೊರಬೇಕಾಗಿರುವುದು ಇಲ್ಲಿನ ದುರಂತವಾಗಿದೆ.

Advertisement

ಅಧಿಕಾರಿಗಳು-ಗುತ್ತಿಗೆದಾರರ ಗುದ್ದಾಟ: ಹೇಳಿ ಕೇಳಿ ಬಡಾವಣೆ ಪಟ್ಟಣದ ಹೊರಭಾಗದಲ್ಲಿರುವುದರಿಂದ ನಿರ್ಮಾಣ ಹಂತದಲ್ಲಿರುವ ಈಜುಕೊಳ ಕಟ್ಟಡ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ. ಕಟ್ಟಡ ಕಾಮಗಾರಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಡುವಿನ ಗುದ್ದಾಟದಿಂದ ಸ್ಥಗಿತಗೊಂಡಿದ್ದು, ಈ ಕಟ್ಟಡದೊಳಗೆ ರಾತ್ರಿ ವೇಳೆ ಮದ್ಯಪಾನ, ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ. 

ಇದರ ಜತೆಗೆ ಕಟ್ಟಡದ ಒಳಗೆ ಹಾಗೂ ಸುತ್ತಮುತ್ತಲಿನ ಪ್ರದೇಶ ಬಯಲು ಶೌಚಾಲಯವಾಗಿ ಪರಿವರ್ತನೆಯಾಗಿದ್ದು, ಒಳಗೆ ಕಾಲಿಡಲೂ ಸಾಧ್ಯವಾಗದ ಸ್ಥಿತಿಗೆ ಕಟ್ಟಡ ತಲುಪಿದೆ. ಜತೆಗೆ ಈಜುಕೊಳ ನಿರ್ಮಿಸಲು ತೆಗೆದಿರುವ ಗುಂಡಿಯೂ ಸಹ ಇದರಿಂದ ಹೊರತಾಗಿಲ್ಲ. ಪಕ್ಕದಲ್ಲೇ ಇರುವ ನೀರಿನ ಟ್ಯಾಂಕ್‌ ಹಾಗೂ ನಿರ್ವಹಣೆ ಕಟ್ಟಡವೂ ಕುಡುಕರ ಅಡ್ಡೆಯಾಗಿ ಪರಿಣಮಿಸಿದೆ. 

ಅದ್ವಾನವಾಗಿರುವ ವಾಕಿಂಗ್‌ ಪಾಥ್‌, ಉದ್ಯಾನ: ಬಡಾವಣೆಯಲ್ಲಿ ಅಲ್ಲಲ್ಲಿ ನಿರ್ಮಾಣವಾಗಿರುವ ವಾಕಿಂಗ್‌ ಪಾಥ್‌ ಹಾಗೂ ಉದ್ಯಾನವನಗಳು ಈಗಾಗಲೇ ತಮ್ಮ ಅಸ್ತಿತ್ವ ಕಳೆದುಕೊಂಡಿದ್ದು, ವಾಕಿಂಗ್‌ ಪಾಥ್‌ಗೆ ಹಾಕಿರುವ ನೆಲಹಾಸು ಮಣ್ಣಿನಲ್ಲಿ ಮುಚ್ಚಿಹೋಗಿವೆ. ಬಡಾವಣೆ ವ್ಯಾಪ್ತಿಯಲ್ಲಿ ಏಳೆಂಟು ಉದ್ಯಾನವನಗಳಿಗೆ ಜಾಗ ಮೀಸಲಿರಿಸಿ ಕಬ್ಬಿಣದ ಗ್ರಿಲ್‌ ಹಾಕಲಾಗಿತ್ತು. ಆದರೆ ಗ್ರಿಲ್‌ಗ‌ಳನ್ನೂ ಮುರಿದು ಮಾರಿಕೊಂಡಿರುವ ಕಳ್ಳರು ನಿಯಂತ್ರಿಸುವವರು ಇಲ್ಲದ ಪರಿಣಾಮ ತಮ್ಮ ಚಾಳಿ ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಈ ಎಲ್ಲ ಅವ್ಯವಸ್ಥೆಗಳಿಂದಾಗಿ ಪಟ್ಟಣಕ್ಕೆ ಸನಿಹವಾಗಿದ್ದರೂ ಬಡಾವಣೆ ಇಂದಿಗೂ ಅನಾಥವಾಗಿದ್ದು, ಯಾರೂ ಸಹ ಮನೆ ಕಟ್ಟಿಕೊಳ್ಳುವ ದುಸ್ಸಾಹಸಕ್ಕೆ ಕೈಹಾಕುತ್ತಿಲ್ಲ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಚನ್ನಪಟ್ಟಣ ಯೋಜನಾ ಪ್ರಾಧಿಕಾರ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿದರೆ ಈ ಸ್ಥಳ ಸುಂದರ ಬಡಾವಣೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಂಬಂಧಿಸಿದವರು ಈ ಬಗ್ಗೆ ಗಮನಹರಿಸಿ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಬೇಕೆಂಬುದು ನಿವೇಶನದಾರರ ಆಗ್ರಹವಾಗಿದೆ.

ಮೂಲಭೂತ ಸೌಲಭ್ಯಗಳಿಲ್ಲದೆ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ದಶಕ ಕಳೆದರೂ ಇಂದಿಗೂ ಸೌಲಭ್ಯ ನೀಡದ ಪ್ರಾಧಿಕಾರ ನಿವೇಶನದಾರರಿಗೆ ಮೋಸ ಮಾಡುತ್ತಿದೆ. ಸಾಧ್ಯವಾದಷ್ಟು ಬೇಗ ಸೌಲಭ್ಯ ಕಲ್ಪಿಸಿ ಮನೆ ಕಟ್ಟಿಕೊಳ್ಳಲು ಅನುಕೂಲ ಕಲ್ಪಿಸಿ ಕೊಡಬೇಕು.  
-ನಟರಾಜ, ನಿವೇಶನ ಕೊಂಡವರು

ಚನ್ನಪಟ್ಟಣ ಯೋಜನಾ ಪ್ರಾಧಿಕಾರ ಇದೀಗ ಅಸ್ತಿತ್ವಕ್ಕೆ ಬಂದಿದ್ದು, ಬಡಾವಣೆ ಸ್ಥಿತಿಗತಿ ಬಗ್ಗೆ ವರದಿ ಪಡೆದುಕೊಂಡಿದ್ದೇವೆ. ಅಗತ್ಯ ಅನುದಾನವನ್ನ ಪಡೆದುಕೊಂಡು ಶೀಘ್ರವೇ ಮೂಲಭೂತ ಸೌಲಭ್ಯ ಕಲ್ಪಿಸುತ್ತೇವೆ.
-ಎ.ಸಿ.ವೀರೇಗೌಡ, ಅಧ್ಯಕ್ಷ, ಚನ್ನಪಟ್ಟಣ ಯೋಜನಾ ಪ್ರಾಧಿಕಾರ 

Advertisement

Udayavani is now on Telegram. Click here to join our channel and stay updated with the latest news.

Next