Advertisement

ಜೇನು ಸವಿ ಮತ್ತು ಕಡಿತದ ನೋವು

06:00 AM Sep 21, 2018 | |

ನನ್ನ ಮನೆಗೆ ನೀವು ಬಂದರೆ ಜೇನುಹುಳುಗಳು ನಿಮ್ಮನ್ನು ಸ್ವಾಗತಿಸುತ್ತವೆ. ಅಬ್ಟಾ ! ಜೇನುಹುಳುಗಳಿಂದ ಸ್ವಾಗತವೇ ಎಂದು ಹೌಹಾರಬೇಡಿ. ಅವು ತಾವಾಗೇ ಆಕ್ರಮಣ ಮಾಡುವುದಿಲ್ಲ. ನಾವು ಅವುಗಳಿಗೆ ತೊಂದರೆ ಕೊಟ್ಟರೆ ಮಾತ್ರ ಕಡಿಯುತ್ತವೆ. ನಮ್ಮ ಮನೆಯ ಗೇಟು ಪಕ್ಕ, ಅಂಗಳದಲ್ಲಿ, ಅಡುಗೆ ಮನೆಯ ಸನಿಹ, ತೋಟದಲ್ಲಿ ಹೀಗೆ ಎಲ್ಲಾ ಕಡೆ ಜೇನುಗೂಡುಗಳಿವೆ. 
    
ಜೇನುಸಾಕಣೆದಾರರಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಸಾಮಾನ್ಯವಾಗಿ ಜೇನುಹುಳು ಎಂದರೆ ಹೆದರುವ ಹೆಂಗಸರೇ ಹೆಚ್ಚು. ಮನೆಯಲ್ಲೇ ಇರುವ ಮಹಿಳೆಯರಿಗೆ ಹೇಳಿ ಮಾಡಿಸಿದ ಉದ್ಯೋಗ ಜೇನು ಕೃಷಿ. ಜೇನುಸಾಕಣೆ ಲಾಭದಾಯಕ ಉಪಕಸುಬು. ಇದಕ್ಕೆ ಕಾಲೇಜು ಡಿಗ್ರಿ ಬೇಡ. ಮುಖ್ಯವಾಗಿ ಬೇಕಾಗಿರುವುದು ಮನಸ್ಸು ಮತ್ತು ಜೇನುಹುಳುಗಳ ಮೇಲೆ ಪ್ರೀತಿ ಅಷ್ಟೆ. ಅಂಗೈಅಗಲ ಜಾಗ ಇದ್ದರೂ ಸಾಕು, ಜೇನು ಬೇಸಾಯ ಮಾಡಬಹುದು. ಒಂದೆರಡು ಜೇನುಪೆಟ್ಟಿಗೆಗಳನ್ನು ಇಟ್ಟರೆ ಮನೆಗೆ ಬೇಕಾದಷ್ಟು ಜೇನುತುಪ್ಪ ಉತ್ಪಾದಿಸಬಹುದು. ಹತ್ತು ಅಥವಾ ಅದಕ್ಕಿಂತ ಹೆಚ್ಚು ಪೆಟ್ಟಿಗೆ ಇಟ್ಟರೆ ದುಡ್ಡು ಸಂಪಾದಿಸಬಹುದು. ರೈತಮಹಿಳೆಯರು ದುಡ್ಡಿನ ಜೊತೆಗೆ ಜಮೀನಿನಲ್ಲಿ ಗುಣಮಟ್ಟದ ಬೆಳೆ ಪಡೆಯಬಹುದು. ಮಹಿಳೆಯರು ಹವ್ಯಾಸವಾಗಿಯೂ ಈ ವೃತ್ತಿಯನ್ನು ಕೈಗೊಳ್ಳಬಹುದು. ಜೇನುತುಪ್ಪ ತಿನ್ನಲು ಸವಿ, ಆರೋಗ್ಯಕ್ಕೂ ಉತ್ತಮ. ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಮಧುಮೇಹಿಗಳೂ ಜೇನು ತಿನ್ನಬಹುದು ಎನ್ನುತ್ತಾರೆ ಕಲ್ಲುಗುಂಡಿಯ ಪ್ರಸಿದ್ಧ ಆಯುರ್ವೇದ ವೈದ್ಯ ಡಾ. ಶ್ಯಾಮ್‌ಪ್ರಸಾದ್‌. 

Advertisement

ನಮ್ಮ ಮನೆಯಲ್ಲಿ ಜೇನೆಂದರೆ ನನಗೆ ಮಾತ್ರವಲ್ಲ ಗಂಡನಿಗೆ, ಮಕ್ಕಳಿಗೂ ತುಂಬ ಇಷ್ಟ. ದೋಸೆ ತಿನ್ನಬೇಕಾದರೆ ಮಕ್ಕಳಿಗೆ ಜೇನು ಇರಲೇಬೇಕು. ಅದರಲ್ಲೂ ಮಲೆನಾಡಿನ ಹವ್ಯಕರ ಪ್ರಸಿದ್ಧ ತಿಂಡಿ ಹಲಸಿನಕಾಯಿ ದೋಸೆಯನ್ನು ಜೇನಿನೊಂದಿಗೆ ಅದ್ದಿ ತಿಂದರೆ ಆಹಾ! ಅದರ ರುಚಿ ಬಲ್ಲವರೇ ಬಲ್ಲರು. ಆರಂಭದಲ್ಲಿ ನಾನು ಹೊರಗಿನಿಂದ ದುಡ್ಡು ತೆತ್ತು ಜೇನು ಖರೀದಿಸುತ್ತಿ¨ªೆ. ಇದಕ್ಕಾಗಿ ತುಂಬ ಹಣ ಕೈ ಬಿಡುತ್ತಿತ್ತು. ನಾನು ರೈತಳಾಗಿದ್ದುಕೊಂಡು ಮಾರುಕಟ್ಟೆಯಿಂದ ಜೇನು ಖರೀದಿಸುವುದು ಸರಿಯಲ್ಲ. ಅದರ ಬದಲು ನಾನೇ ಜೇನುಸಾಕಣೆ ಮಾಡಿದರೆ ಹೇಗೆ ಎಂಬ ಯೋಚನೆ ಮನದಲ್ಲಿ ಮೂಡಿತು. ಇದು ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ನನಗೆ ಹಸು ಸಾಕಿ ಗೊತ್ತಿತ್ತು. ಜೇನುಸಾಕಣೆ ಗೊತ್ತಿರಲಿಲ್ಲ. ಸಾಕಿ ಗೊತ್ತಿರದಿದ್ದರೂ ಹಲವಾರು ಜೇನು ಕೃಷಿಕರ ಸಂದರ್ಶನ ಲೇಖನವನ್ನು ಪತ್ರಿಕೆಗಳಿಗೆ ಬರೆದಿ¨ªೆ. ಇದೇ ಸಮಯಕ್ಕೆ ಸರಿಯಾಗಿ ಮಡಿಕೇರಿ ತೋಟಗಾರಿಕಾ ಇಲಾಖೆ ಮನೆ ಸಮೀಪ ಮೂರು ದಿನದ ಜೇನು ತರಬೇತಿ ಶಿಬಿರ ಆಯೋಜಿಸಿತು. ಅದರಲ್ಲಿ ನಾನು ಭಾಗವಹಿಸಿದೆ. ಜೇನು ಸಾಕಾಣಿಕೆ ಬಗ್ಗೆ ಪೂರಕ ಮಾಹಿತಿಗಳನ್ನು ಪಡೆದೆ.

ನಾನು ಜೇನು ತರಬೇತಿ ಪಡೆದ ವಿಷಯ ನಮ್ಮೂರಿನ ರೈತ ಮಿತ್ರರೊಬ್ಬರಿಗೆ ಗೊತ್ತಾಯ್ತು. ಅವರ ಮನೆ ನಮ್ಮ ಮನೆಯಿಂದ ಮೂರು ಮೈಲು ದೂರ. ಅವರು ಒಂದು ದಿನ ಜೀಪು ತೆಗೆದುಕೊಂಡು ನಮ್ಮ ಮನೆಗೆ ಬಂದರು. ಉಭಯಕುಶಲೋಪರಿಗಳಾದ ಬಳಿಕ ಬಂದ ಉದ್ದೇಶವನ್ನು ಹೇಳಿದರು. “ನನ್ನ ಮನೆಯಲ್ಲಿ ಭಾವ ಕೊಟ್ಟ ಒಂದು ಜೇನುಪೆಟ್ಟಿಗೆಯಿದೆ. ಜೇನುಹುಳವನ್ನೂ ಅವರೇ ತುಂಬಿಸಿದ್ದು. ಈಗ ಪೆಟ್ಟಿಗೆಯಲ್ಲಿ ಜೇನು ಆಗಿದೆ. ಹೇಗೆ ತೆಗೆಯುವುದೆಂದು ನನಗೆ ಗೊತ್ತಿಲ್ಲ. ಇದು ಅಡಿಕೆ ಕೊçಲಿನ ಸಮಯವಾದ್ದರಿಂದ ಭಾವನಿಗೆ ಬರಲು ಬಿಡುವು ಇಲ್ಲವಂತೆ. ನೀವು ಹೇಗೂ ತರಬೇತಿ ಪಡೆದಿದ್ದೀರಿ. ನಿಮಗಾಗಿಯೇ ಜೀಪು ತಂದಿದ್ದೇನೆ. ಬಂದು ತೆಗೆದು ಕೊಡುತ್ತೀರಾ?’ 

ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಏಕೆಂದರೆ ನಾನು ಥಿಯರಿ ಮಾತ್ರ ಕಲಿತದ್ದು. ಪ್ರಾಕ್ಟಿಕಲ್‌ ಇನ್ನು ಆರಂಭ ಆಗಬೇಕಷ್ಟೆ. ನನಗೆ ಪುಕುಪುಕು. ಗಂಡನನ್ನು ಕರೆದು ಹೇಳಿದೆ, “”ನೀವು ಹೋಗಿ. ನಿಮಗಾದರೆ ನಿಮ್ಮ ಅಕ್ಕನ ಮನೆಯಲ್ಲಿ ಜೇನು ತೆಗೆದು ಅನುಭವ ಇದೆ”. “”ನೀನಲ್ವಾ ಅಧಿಕೃತವಾಗಿ ತರಬೇತಿ ಪಡೆದದ್ದು? ಅದೂ ಅಲ್ಲದೆ ಜೇನು ತೆಗೆಯುವುದು ಹೇಗೆ ಎಂದು ಪತ್ರಿಕೆಗಳಿಗೆ ಲೇಖನಗಳನ್ನೂ ಬರೆದಿದ್ದಿ! ಹೋಗು, ಹೋಗು ಜೇನು ತೆಗೆದು ಬಾ. ಅಭ್ಯಾಸ ಆದ ಹಾಗೆ ಆಗುತ್ತೆ” ಎಂದರು. ಸೋಲೊಪ್ಪಿಕೊಳ್ಳಲು ನಾನೂ ತಯಾರಿರಲಿಲ್ಲ. “ಸರಿ’ ಎಂದು ಅವರ ಜೊತೆ ಹೋದೆ. ಪೆಟ್ಟಿಗೆ ಇರುವ ಜಾಗ ತೋರಿಸಿದರು. ಎದೆ ಹೆದರಿಕೆಯಿಂದ ಹೊಡೆದುಕೊಳ್ಳುತ್ತಿದ್ದರೂ ತೋರ್ಪಡಿಸಿಕೊಳ್ಳದೆ ಮುಚ್ಚಳ ತೆಗೆದೆ. ಕೈ ಹಾಕಲೂ ಜಾಗ ಇಲ್ಲದಷ್ಟು ಹುಳ ತುಂಬಿತ್ತು. ಮೆಲ್ಲನೆ ಹುಳ ಬೇರ್ಪಡಿಸಿ ಒಂದು ಫ್ರೆàಮು ತೆಗೆದೆ. ಆಗಲೇ ಬೆರಳಿಗೆ ಒಂದು ಹುಳ ಕಡಿಯಿತು. ನೋವಿನಿಂದ ಜೀವ ಹೋದ ಹಾಗೆ ಆಯಿತು. ಆದರೂ ಏನೂ ಆಗದವರಂತೆ ನಟಿಸುತ್ತ ಬಾಯಿಂದ ಗಾಳಿ ಹಾಕಿ ಫ್ರೆàಮಿನಲ್ಲಿರುವ ಹುಳ ಪೂರ್ತಿ ಹಾರುವಂತೆ ಮಾಡಿ ಅದನ್ನು ಜೇನು ತೆಗೆಯುವ ಯಂತ್ರದಲ್ಲಿಟ್ಟೆ. ಇನ್ನೊಂದು ಫ್ರೆàಮನ್ನು ತೆಗೆಯಲು ಕೈ ಹಾಕುವಷ್ಟರಲ್ಲಿ ಹುಳಗಳು ಪೆಟ್ಟಿಗೆಯಿಂದ ಸಿಟ್ಟಿಗೆದ್ದವರಂತೆ ಹಾರಾಡತೊಡಗಿದವು. ಈಗ ನನ್ನ ಕೆಳ ತುಟಿಗೆ ಒಂದು, ಮೇಲಿನ ತುಟಿಗೆ ಇನ್ನೊಂದು ಹುಳ ಕಡಿಯಿತು. ಮತ್ತೂಂದು ಹಣೆಗೆ. ಅÇÉೇ ನಿಂತು ನೋಡುತ್ತಿದ್ದ ನನ್ನ ಮಿತ್ರರು ಹೆದರಿ ದೂರ ಓಡಿದರು. “”ಕಡಿಯುವುದಿದ್ದರೆ ಬೇಡ. ತೆಗೆಯಬೇಡಿ. ಯಾವಾಗಾದರೂ ಭಾವ ಬರುವಾಗ ಹೇಳುತ್ತೇನೆ” ಎಂದರು. ತೆಗೆಯದೆ ಅರ್ಧದಲ್ಲಿಯೇ ಬಿಟ್ಟು ಬಂದರೆ ಗಂಡನ ಎದುರು ನನಗೆ ಅವಮಾನ ಎಂದುಕೊಂಡು ಹುಳ ಕಡಿತವನ್ನೂ ಲೆಕ್ಕಿಸದೆ ಅವರಿಗೆ ಜೇನು ತೆಗೆದುಕೊಟ್ಟೆ. ಮನೆಗೆ ಬರುವಾಗ ನನ್ನ ತುಟಿ ಊದಿ ಹನುಮಂತನ ಮುಖದಂತೆ ಆಗಿತ್ತು. ಗಂಡ ನನ್ನ ಅವತಾರ ನೋಡಿ ಮುಸಿಮುಸಿ ನಕ್ಕರು- ಹಾಗೇ ಆಗಬೇಕು ಎನ್ನುವಂತೆ. ಮರುದಿನ ನನ್ನ ತವರು ಮನೆಯಲ್ಲಿ ಪೂಜಾಕಾರ್ಯಕ್ರಮವಿತ್ತು. ಊದಿದ ಮುಖದಿಂದಾಗಿ ನನಗೆ ಹೋಗಲಾಗಲಿಲ್ಲವೆಂದು ಬೇರೆ ಹೇಳಬೇಕಾಗಿಲ್ಲವಷ್ಟೆ. ಈ ಘಟನೆಯ ನಂತರ ನಾನು ಜೇನುಕೃಷಿಯಲ್ಲಿ ಪಾರಂಗತಳಾದೆ. ಆ ಮಿತ್ರರ ಹನ್ನೊಂದು ವರ್ಷದ ಮಗಳಿಗೂ ಜೇನು ತೆಗೆಯುವುದನ್ನು ಕಲಿಸಿಕೊಟ್ಟೆ.

     ಅಂದಿನಿಂದ ಆರಂಭವಾದ ನನ್ನ ಜೇನುಕೃಷಿ ಈವೊತ್ತಿನವರೆಗೆ ಮುಂದುವರಿದಿದೆ. ಇಂದು ನನ್ನ ಹತ್ತಿರ 10 ಪೆಟ್ಟಿಗೆಗಳಿವೆ. ಆದರೆ, ನಾನು ಆರ್ಥಿಕ ದೃಷ್ಟಿ ಇಟ್ಟುಕೊಂಡು ಜೇನು ಬೇಸಾಯ ಮಾಡುತ್ತಿಲ್ಲ. ಜೇನು ಮಾರಾಟವನ್ನೂ ಮಾಡುವುದಿಲ್ಲ. ನಾವು ತಿನ್ನುತ್ತೇವೆ. ಮನೆಗೆ ಬಂದ ಅತಿಥಿಗಳಿಗೆ ತಿಂಡಿ ಜೊತೆ ಬಡಿಸುತ್ತೇನೆ. ಹೆಚ್ಚಾದರೆ ಆತ್ಮೀಯ ಮಿತ್ರರಿಗೆ ಹಂಚುತ್ತೇನೆ. ನಮ್ಮ ಬಾಂಧವ್ಯವನ್ನು ಇನ್ನಷ್ಟು ಮಧುರಗೊಳಿಸುತ್ತೇನೆ.

Advertisement

ವ್ಯವಹಾರ ಬಯಸದ ವ್ಯವಸಾಯ
    ಜೇನುಸಾಕಣೆಗೆ ಅಧಿಕ ಬಂಡವಾಳ ಬೇಡ. ಹೆಚ್ಚಿನ ಶ್ರಮದ ಅಗತ್ಯವಿಲ್ಲ. ತಿಂಗಳಿಗೆ ಎರಡು ಸಾರಿ ಪೆಟ್ಟಿಗೆ ಪರಿಶೀಲನೆ ನಡೆಸಬೇಕು. ನವೆಂಬರ್‌ನಿಂದ ಡಿಸೆಂಬರ್‌ ತಿಂಗಳು ಪೆಟ್ಟಿಗೆಗೆ ನೊಣ ಕೂರಿಸುವ  ಕಾಲ. ಸಾಮಾನ್ಯವಾಗಿ ಮರದ ಪೊಟರೆ, ಬಿಲ, ಗುಡ್ಡದ ಬದಿ, ಕಲ್ಲಿನ ಕಟ್ಟ ಇತ್ಯಾದಿಗಳ‌ಲ್ಲಿ ಜೇನುನೊಣಗಳು ವಾಸವಾಗಿರುತ್ತವೆ. ಕೆಲವೊಮ್ಮೆ ಮರದ ಕೊಂಬೆಗಳ ಅಡಿಭಾಗದಲ್ಲಿ ಆಯಾಸ ಪರಿಹರಿಸಲೆಂದು ಬಂದು ಕುಳಿತಿರುತ್ತವೆ. ಅವುಗಳನ್ನು ಜಾಗರೂಕತೆಯಿಂದ ಹಿಡಿದು ಪೆಟ್ಟಿಗೆಗೆ ಸೆೇರಿಸಬೇಕು. ಹೊಸ ಕುಟುಂಬಕ್ಕೆ ಸಕ್ಕರೆ ಪಾಕವನ್ನು ಆಹಾರವಾಗಿ ಕೊಟ್ಟರೆ ಅದೇ ವರ್ಷದಲ್ಲಿ ಆದಾಯ ಗಳಿಸಬಹುದು. ಮಾರ್ಚ್‌ನಿಂದ ಮೇ ತಿಂಗಳು ಜೇನು ಸಿಗುವ ಸಮಯ. ಒಂದು ಜೇನುಪೆಟ್ಟಿಗೆಯಿಂದ 5 ರಿಂದ 10 ಕೆ. ಜಿ.ವರೆಗೆ ಜೇನುತುಪ್ಪ ಪಡೆಯಬಹುದು. ಮಾರುಕಟ್ಟೆಯಲ್ಲಿ ಒಂದು ಕಿಲೊ ಜೇನಿಗೆ 350ರಿಂದ 400 ರೂ. ಬೆಲೆ ಇದೆ. 

    ಸ್ಥಳಾಂತರ ಜೇನು ಕೃಷಿಯಿಂದ ಅಧಿಕ ಆದಾಯ ಪಡೆಯಬಹುದು. ಜೇನುಹುಳುಗಳಿಗೆ ವರ್ಷದ ಎಲ್ಲ ಋತುಗಳಲ್ಲಿ ಒಂದೇ ಕಡೆ ಪುಷ್ಪರಸ ಮತ್ತು ಪರಾಗ ಸಿಗುವುದಿಲ್ಲ. ಹವಾಮಾನಕ್ಕೆ ಹೊಂದಿಕೊಂಡು ಹೂ ಬಿಡುವ ಸಸ್ಯಗಳ ನಡುವೆ ಜೇನುಪೆಟ್ಟಿಗೆಗಳನ್ನು ಸಾಗಿಸಿ ಇಟ್ಟರೆ ಅವುಗಳಿಗೆ ಆಹಾರದ ಅಭಾವ ತಪ್ಪಿ ಹೆಚ್ಚು ಜೇನು ಉತ್ಪಾದನೆ ಆಗುತ್ತದೆ. ಜೇನುಕೃಷಿಯ ಉಪ ಉತ್ಪನ್ನವಾದ ಜೇನುಮಯಣ ಮಾರಾಟದಿಂದಲೂ ಲಾಭ ಇದೆ. ಇರುವೆ, ಹಲ್ಲಿ, ಕಣಜದ ಹುಳು, ಕೆಂಜಿಗ, ಓತಿ, ಗೆದ್ದಲು ಜೇನ್ನೊಣದ ವೈರಿಗಳು. ಇವುಗಳು ಪೆಟ್ಟಿಗೆಗೆ ಬಾರದ ಹಾಗೆ ನೋಡುವುದು ಅವಶ್ಯ. ಪೆಟ್ಟಿಗೆಯನ್ನಿಟ್ಟ ಕಂಬದ ಸುತ್ತಲೂ ನೀರು ನಿಲ್ಲಿಸಬೇಕು. ಆಗ ಪೆಟ್ಟಿಗೆಗೆ ಇರುವೆ ಬರುವುದಿಲ್ಲ. 

    ಕೀಟ ಜಗತ್ತಿನಲ್ಲಿ ಜೇನುಹುಳು ವಿಶೇಷವಾದದ್ದು. ಇವುಗಳ ಸಂತಾನಾಭಿವೃದ್ಧಿ ಆಸಕ್ತಿ ಹುಟ್ಟುವ ವಿಷಯ. ರಾಣಿನೊಣ ಮತ್ತು ಗಂಡುನೊಣದ ಸಮಾಗಮ ಪೆಟ್ಟಿಗೆಯಲ್ಲಿ ಆಗುವುದಿಲ್ಲ. ರಾಣಿನೊಣವು ಗರ್ಭವತಿಯಾಗುವ ಸಮಯದಲ್ಲಿ ಗೂಡಿನಿಂದ ಹೊರಬಂದು ವರನನ್ನಾರಿಸಲು ಹಾರಾಡತೊಡಗುತ್ತದೆ. ರಾಣಿನೊಣ ಹಾರಿದೊಡನೆ ನೂರಾರು ಗಂಡುನೊಣಗಳು ಅದನ್ನು ಹಿಂಬಾಲಿಸುತ್ತವೆ. ಯಾವ ಗಂಡುನೊಣವು ಹಾರಾಟದಲ್ಲಿ ರಾಣಿನೊಣವನ್ನು ಸೋಲಿಸಿ ಹಿಡಿಯುವುದೋ ಅದರೊಡನೆ ರಾಣಿನೊಣವು ಜೋಡಿಯಾಗುತ್ತದೆ. ಆ ಜೋಡಿಯಾದ ಗಂಡುನೊಣ ಕೂಡಲೇ ಸಾಯುತ್ತದೆ. ಇದಕ್ಕೆ “ರಾಣಿಯ ದಿಬ್ಬಣ; ಗಂಡಿನ ಸ್ಮಶಾನಯಾತ್ರೆ’ ಎಂದು ಕರೆಯುತ್ತಾರೆ. ರಾಣಿನೊಣವು ಗಂಡುನೊಣದೊಡನೆ ಒಮ್ಮೆ ಮಾತ್ರ ಜೋಡಿಯಾಗುತ್ತದೆ. ಆಶ್ಚರ್ಯವೆಂದರೆ, ಈ ಒಂದು ಸಾರಿಯ ಕೂಡುವಿಕೆಯಿಂದ ಅದು ಜೀವಮಾನವಿಡೀ ಮೊಟ್ಟೆಯಿಡುತ್ತದೆ ! 

    ನಾವು ಆದಷ್ಟು ಜೇನುನೊಣ ನಮಗೆ ಕಡಿಯದಂತೆ ನೋಡಿಕೊಳ್ಳಬೇಕು. ನಮಗೆ ನೋವಾಗುತ್ತದೆಂದು ಅಲ್ಲ. ಒಮ್ಮೆ ಅದು ನಮಗೆ ಚುಚ್ಚಿದರೆ ಮತ್ತೆ ಬದುಕುವುದಿಲ್ಲ. ಆಗಲೇ ಪ್ರಾಣಬಿಡುತ್ತದೆ ! 

ತೋಟದಲ್ಲಿ ಅಡ್ಡಾಡುವಾಗ ಹೂವಿಂದ ಹೂವಿಗೆ ಹಾರುವ ಜೇನುನೊಣಗಳನ್ನು ನೋಡುವುದೇ ಸೊಗಸು. ಮನಸ್ಸಿಗೆ ಆನಂದ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಬಿಡುವಿಲ್ಲದೆ ದುಡಿಯುವ ಅವುಗಳ ಕಾರ್ಯಕ್ಷಮತೆ ನಮಗೆ ಪಾಠ.

ಸಹನಾ ಕಾಂತಬೈಲು

Advertisement

Udayavani is now on Telegram. Click here to join our channel and stay updated with the latest news.

Next