ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೋಮವಾರ (ಸೆಪ್ಟೆಂಬರ್ 13) ವಿಧಾನಸಭೆಯಲ್ಲಿ ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್ 2021)ಗೆ ವಿನಾಯ್ತಿ ಕೋರುವ ಮಸೂದೆಯನ್ನು ಮಂಡಿಸಿದ್ದಾರೆ. ಕೇಂದ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ತಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ವಿನಾಯ್ತಿ ನೀಡಬೇಕು ಎಂದು ತಮಿಳುನಾಡು ಸರ್ಕಾರ ಮಂಡಿಸಿರುವ ಮಸೂದೆಯಲ್ಲಿ ಹೇಳಿದೆ. ವೈದ್ಯಕೀಯ ಆಕಾಂಕ್ಷಿಗಳಿಗೆ ಪರ್ಯಾಯ ಮಾರ್ಗ ಕಂಡುಹಿಡಿಯುವುದು ತಮಿಳುನಾಡು ಸರ್ಕಾರದ ಯೋಚನೆಯಾಗಿದೆ. ದ್ವಿತೀಯ ಪಿಯುಸಿ ಅಂಕದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಮೆಡಿಕಲ್ ಕಾಲೇಜು ಪ್ರವೇಶ ನೀಡಬಹುದಾಗಿದೆ ಎಂದು ತಮಿಳುನಾಡು ಸರ್ಕಾರ ಪ್ರಸ್ತಾಪವನ್ನಿಟ್ಟಿದೆ.
ವೈದ್ಯ ಕಾಲೇಜು ಸೇರಲು ನೀಟ್ ಮಾತ್ರ ಮಾರ್ಗ ಎಂಬುದು ಸಾಮಾಜಿಕ ನ್ಯಾಯವಲ್ಲ. ವೈದ್ಯಕೀಯ ವಿದ್ಯಾಭ್ಯಾಸದ ತಾರತಮ್ಯ ನೀತಿಯನ್ನು ತೊಡೆದುಹಾಕಲು ಎಲ್ಲಾ ವಿದ್ಯಾರ್ಥಿ ಸಮುದಾಯವನ್ನು ರಕ್ಷಿಸಲು ಪರ್ಯಾಯ ಮಾರ್ಗದ ಅಗತ್ಯವಿದೆ ಎಂದು ತಮಿಳುನಾಡು ಸರ್ಕಾರ ಪ್ರತಿಪಾದಿಸಿದೆ.
ಈ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆಗೂ ಮೊದಲೇ ಡಿಎಂಕೆ, ಅಧಿಕಾರಕ್ಕೆ ಬಂದರೆ ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿತ್ತು. ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ಮೀಸಲಾತಿ ನೀಡಬೇಕೆಂದು ತಮಿಳುನಾಡು ಸರ್ಕಾರ ಪ್ರಸ್ತಾಪವನ್ನಿಟ್ಟಿದೆ.
ಮುಂದೇನು?
ವೈದ್ಯಕೀಯ ಪ್ರವೇಶದ ಕುರಿತು ತಮಿಳುನಾಡು ಸರ್ಕಾರ ಇನ್ನಷ್ಟೇ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾಗಿದೆ. ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸುವ ಮೂಲಕ ಡಿಎಂಕೆ ನೇತೃತ್ವದ ಸರ್ಕಾರ ನೀಟ್ ಗೆ ವಿರೋಧ ವ್ಯಕ್ತಪಡಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಿದಂತಾಗಿದೆ. ವಿವಾದಾತ್ಮಕ ವೈದ್ಯಕೀಯ ಪರೀಕ್ಷೆಗೆ ರಾಜ್ಯ ಸರ್ಕಾರ ಹೇಗೆ ವಿನಾಯ್ತಿ ನೀಡಬಹುದು ಎಂಬುದರ ಕುರಿತು ರಾಜ್ಯ ಮತ್ತು ಕೇಂದ್ರ ಸಹಯೋಗದ ವಿನಿಮಯಕ್ಕೆ ವೇದಿಕೆಯನ್ನು ಹಾಕಿಕೊಟ್ಟಂತಾಗಿದೆ.
ಕೇಂದ್ರ ಸರ್ಕಾರ ಕೂಡಾ ವರ್ಷದಲ್ಲಿ ಎರಡು ಬಾರಿ ನೀಟ್ ಪರೀಕ್ಷೆಯನ್ನು ನಡೆಸುವ ಆಯ್ಕೆ ಬಗ್ಗೆ ಎದುರು ನೋಡುತ್ತಿದೆ. ಒಂದು ವರ್ಷದಲ್ಲಿ ಎರಡು ಬಾರಿ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸುವ ಕುರಿತು ಶಿಕ್ಷಣ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯ ಚರ್ಚೆ ನಡೆಸುತ್ತಿದೆ. ಈ ವರ್ಷ ಇದನ್ನು ಜಾರಿಗೊಳಿಸಲು ಪ್ರಸ್ತಾಪಸಿಸಲಾಗಿತ್ತು. ಆದರೆ ಒಮ್ಮತದ ಅಭಿಪ್ರಾಯದ ಕೊರತೆ ಹಿನ್ನೆಲೆಯಲ್ಲಿ ಜಾರಿಗೆ ತರಲು ಸಾಧ್ಯವಾಗಿಲ್ಲ.
ನೀಟ್ ಪರೀಕ್ಷೆ ಬಗ್ಗೆ ಇನ್ನಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ನೀಟ್ ಪರೀಕ್ಷೆಗೆ ಪರ್ಯಾಯ ವಿಧಾನವನ್ನು ಸೇರ್ಪಡೆಗೊಳಿಸಬೇಕೇ ಅಥವಾ ಎರಡು ಬಾರಿ ಪರೀಕ್ಷೆ ನಡೆಸಬೇಕೋ ಅಥವಾ ಬೇರೆ ಯಾವುದಾದರು ವಿಧಾನ ಅನುಸರಿಸಬೇಕೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಚರ್ಚೆ ನಡೆಸಿದ ನಂತರ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಇದೀಗ ಕೇಂದ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕದ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಸೀಟು ಲಭ್ಯವಾಗಲಿದೆ.
NEET ಯಾಕೆ ರದ್ದುಗೊಳಿಸಬೇಕು, JEE ರದ್ದಾಗಬಾರದ?
ತಮಿಳುನಾಡು ಸರ್ಕಾರ ನೀಟ್ ಪರೀಕ್ಷೆಯನ್ನು ಮಾತ್ರ ರದ್ದುಗೊಳಿಸಲು ಯಾಕೆ ಮುಂದಾಗಿದೆ ಎಂಬುದಾಗಿ ಹಲವು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. ಜೆಇಇ (ಜಂಟಿ ಪ್ರವೇಶ ಪರೀಕ್ಷೆ) ಪರೀಕ್ಷೆ ಯಾಕೆ ರದ್ದುಗೊಳಿಸಬಾರದು. ಇದು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ. ನೀಟ್ ವಿದ್ಯಾರ್ಥಿಗಳಿಗೆ ಒಂದು ದಿನದ ಪರೀಕ್ಷೆ ಒತ್ತಡವನ್ನು ಹೇರಲಿದೆ ಎಂಬುದಾಗಿ ರಾಜ್ಯ ಸರ್ಕಾರ ಪ್ರತಿಪಾದಿಸುತ್ತಿದೆ. ಇಂಜಿನಿಯರಿಂಗ್ ಅಪೇಕ್ಷೆ ಪಡುವ ವಿದ್ಯಾರ್ಥಿಗಳು ರಾಜ್ಯ ಮತ್ತು ಕೇಂದ್ರ ಮಟ್ಟದ ಪರೀಕ್ಷೆಯನ್ನು ಎದುರಿಸಬೇಕಾಗಿದೆ. ಮೆಡಿಕಲ್ ಆಕಾಂಕ್ಷಿಗಳಿಗೆ ಕೇವಲ ಒಂದು ಪರೀಕ್ಷೆ ಮಾತ್ರ ಇದೆ ಎಂದು ಹಲವು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.