Advertisement

ಹೋಗೋದೆಲ್ಲ ಹೋಗಲಿ, ಹೊಸತು ಬರುವುದಕ್ಕೆ ಅದೇ ದಾರಿ!

03:50 AM Apr 11, 2017 | |

ಕಳೆದು ಹೋದದ್ದರ ಬಗ್ಗೆ ಎಷ್ಟು ಚಿಂತಿಸಿದರೂ ಏನೂ ಪ್ರಯೋಜನವಿಲ್ಲ. ನಮ್ಮಲ್ಲಿ ಏನು ಇರಬೇಕೋ ಅದು ಇದ್ದೇ ಇರುತ್ತದೆ. ಏನು ಇರಬಾರದೋ ಅದು ಬಿಟ್ಟು ಹೋಗುತ್ತದೆ. ಇಷ್ಟನ್ನು ಆಲೋಚಿಸಿ ಅರ್ಥ ಮಾಡಿಕೊಂಡರೆ ಬದುಕು ಸುಂದರ ಕನಸಾಗುತ್ತದೆ.

Advertisement

ಮನುಷ್ಯನ ಸಹಜ ಗುಣವೇ ಎಲ್ಲವನ್ನೂ ಕೂಡಿಟ್ಟುಕೊಳ್ಳುವುದು. ಅವು ವಸ್ತುಗಳಾಗಿರಬಹುದು ಅಥವಾ ಸ್ನೇಹ -ಪ್ರೀತಿ ಸಂಬಂಧಗಳಾಗಿರಬಹುದು. ಯಾವುದನ್ನೇ ನಮ್ಮದಾಗಿಸಿಕೊಂಡರೂ ಮುಂದೊಂದು ದಿನ ಇದನ್ನು ಕಳೆದುಕೊಳ್ಳಬೇಕಾಗಿ ಬಂದರೆ ಎಂಬ ಆಲೋಚನೆ ನಮ್ಮ ಮನಸ್ಸಿನಲ್ಲಿ ಆಗಾಗ ಸುಳಿದಾಡುತ್ತಿರುತ್ತದೆ. ಅದರಿಂದಾಗಿ ಸಿಕ್ಕಿದ್ದೆಲ್ಲವನ್ನೂ ಸಂಗ್ರಹಿಸಿ, ಸದಾ ನಮ್ಮದನ್ನಾಗಿ ಇರಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತೇವೆ. ಯಾವುದೂ ಶಾಶ್ವತವಲ್ಲ, ಎಲ್ಲವೂ ಒಂದಲ್ಲ ಒಂದು ದಿನ ನಮ್ಮಿಂದ ದೂರವಾಗಬೇಕು ಎಂಬ ಫಿಲಾಸಫಿ ನಮಗೆ ಗೊತ್ತಿಲ್ಲ ಎಂದಲ್ಲ. ಆದರೂ ನಾವು ಕೂಡಿಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಬೇಕು ಅಂತ ಅನ್ನಿಸಿದ್ದನ್ನೆಲ್ಲ ಕಷ್ಟಪಟ್ಟು ಸಂಪಾದಿಸುತ್ತಲೇ ಇರುತ್ತೇವೆ. ಹಾಗೆ ಗಳಿಸಿದ್ದರಲ್ಲಿ ಕೆಲವನ್ನು ಯಾರಿಗೂ ಗೊತ್ತಾಗದೆ ಹಾಗೆ ಬಚ್ಚಿಟ್ಟುಕೊಳ್ಳುತ್ತೇವೆ. ಇನ್ನು ಕೆಲವನ್ನು “ಇದು ನಮ್ಮದು’ ಅಂತ ಎಲ್ಲರ ಮುಂದೆ ತೋರಿಸಿಕೊಂಡು ಹೆಮ್ಮೆ ಪಡುತ್ತೇವೆ. 

ನಮ್ಮದಾಗಿತ್ತಲ್ಲ ಎಂಬ ಖುಷಿ: ಹಿರಿಯರ ಈ ಮಾತನ್ನು ನೀವೂ ಕೇಳಿಸಿಕೊಂಡಿರಬಹುದು: ಕಷ್ಟಪಟ್ಟು ಪಡೆದುಕೊಂಡಿದ್ದು ಬಹಳ ದಿನ ನಮ್ಮೊಂದಿಗಿರುತ್ತದೆ, ಸುಲಭವಾಗಿ ಸಿಕ್ಕಿದ್ದೆಲ್ಲ ಅಷ್ಟೇ ಸುಲಭವಾಗಿ ನಮ್ಮ ಕೈ ತಪ್ಪಿ ಹೋಗುತ್ತದೆ. ಇದು ತಕ್ಕಮಟ್ಟಿಗೆ ನಿಜ. ಆದರೆ ಕೆಲವು ಸಲ ನಾವು ತುಂಬಾ ಕಷ್ಟಪಟ್ಟು ಪಡೆದುಕೊಂಡದ್ದು ಕೂಡ ಬೇಗನೆ ನಮ್ಮಿಂದ ದೂರವಾಗಬಹುದು! ಯಾವುದೇ ಆಗಲಿ, ಕಳೆದುಹೋದ ಮೇಲೆ ಚಿಂತಿಸುವುದಕ್ಕಿಂತ ಅಷ್ಟು ದಿನ ನಮ್ಮ ಜತೆ ಇದ್ದು-ನಮ್ಮದಾಗಿತ್ತಲ್ಲ ಅಂತ ಖುಷಿಪಡುವುದನ್ನು ಕಲಿಯಬೇಕು. ವಸ್ತುಗಳಾಗಿರಲಿ, ಸಂಬಂಧಗಳಾಗಿರಲಿ, ಪದವಿಯಾಗಿರಲಿ; ಯಾವುದಕ್ಕೆ ಎಷ್ಟು ದಿನ ನಮ್ಮ ಜತೆ ಇರುವ ಋಣವಿರುತ್ತದೋ ಅಷ್ಟು ದಿನ ಮಾತ್ರ ನಮ್ಮ ಜತೆಗಿರಲು ಸಾಧ್ಯ. ಯಾವುದು ಯಾವ ದಿನ, ಯಾವ ಸಮಯಕ್ಕೆ ದೂರವಾಗಬೇಕೋ ಆಗ ಅದು ತಾನಾಗಿಯೇ ದೂರವಾಗುತ್ತದೆ. ಸಿಗಬೇಕು ಅಂತ ಬರೆದಿದ್ದರೆ ಅದಾಗಿ ನಮ್ಮನ್ನು ಹುಡುಕಿ ಬರಬಹುದು. ಯಾವುದು ಬೇಕೆನಿಸಿದರೂ ಪ್ರಯತ್ನ ಪಡುವುದಷ್ಟೇ ನಮ್ಮ ಕರ್ತವ್ಯ, ದೂರವಾದದ್ದಕ್ಕೆ ಕೊರಗಿ ಹಠ ಮಾಡುವುದಲ್ಲ. 

ಹೋದರೆ ಹೋಗಲಿ ಬಿಡಿ: ಕೆಲವು ಸಂಬಂಧಗಳೂ ಹೀಗೆಯೇ. ತುಂಬಾ ಹೋರಾಟ ಮಾಡಿ ಬೇಕೇ ಬೇಕು, ಅವಳಿಲ್ಲದೆ/ ಅವನಿಲ್ಲದೆ ಬದುಕಿರಲು ಸಾಧ್ಯವೇ ಇಲ್ಲ ಅಂತ ಹಠ ಹಿಡಿದು ನಮ್ಮದಾಗಿಸಿಕೊಳ್ಳುತ್ತೇವೆ. ಆದರೆ ಕಾರಣಾಂತರದಿಂದ, ಪರಿಸ್ಥಿತಿಗಳ ಒತ್ತಡದಿಂದ ಆ ಸಂಬಂಧ ಮುರಿದು ಬೀಳುತ್ತದೆ. ಇದರಲ್ಲಿ ಯಾರದೂ ತಪ್ಪಿರುವುದಿಲ್ಲ. ಎಲ್ಲರೂ ಆ ಸಮಯದ ವಾಸ್ತವಕ್ಕೆ ತಕ್ಕಂತೆ ನಡೆದುಕೊಂಡಿರುತ್ತಾರೆ. ದೂರವಾಗುವ ಸಂಬಂಧಗಳನ್ನು ಯಾವತ್ತೂ ಬಂಧಿಸಿ ಇರಿಸಿಕೊಳ್ಳಲು ಸಾಧ್ಯವಿಲ್ಲ. ಈ ದಿನ ಇಂತಹವರ ಜತೆ ಸಂಬಂಧ ಮುಕ್ತಾಯವಾಗಬೇಕು ಅಂತ ಋಣದ ಲೆಕ್ಕಾಚಾರವಾಗಿದ್ದರೆ ಅದಕ್ಕಾಗಿ ನಾವು ಅತ್ತು, ಬೇಡಿಕೊಂಡು, ಗುದ್ದಾಡಿ, ಕಿತ್ತಾಡಿ ಏನೇ ಮಾಡಿದರೂ ಫ‌ಲವಿಲ್ಲ. ಆ ಕಾಲಘಟ್ಟದ ನಿರ್ಧಾರ ಏನು ಇರುತ್ತದೆಯೋ ಅದನ್ನು ಗೌರವಿಸಿ- ಒಪ್ಪಿಕೊಂಡು ಮುಂದೆ ಸಾಗಬೇಕು. 

“ಎಲ್ಲವೂ ನಿನ್ನಿಂದಲೇ ಆಗಿದ್ದು, ನೀನು ಸರಿಯಾಗಿರಬೇಕಿತ್ತು, ತುಂಬಾ ಆತುರಪಟ್ಟೆ’ ಎಂಬುದಾಗಿ ಕೆಲವೊಂದು ಸನ್ನಿವೇಶಗಳ ಬಗ್ಗೆ ನಮ್ಮ ಸುತ್ತಲಿರುವ ಕೆಲವರು ಹೇಳಬಹುದು. ಅವೆಲ್ಲ ಆ ಘಟನೆ ನಡೆದ ಅನಂತರದ ಹಳಹಳಿಕೆಗಳಷ್ಟೆ. ಅವುಗಳಿಂದ ಏನೂ ಪ್ರಯೋಜನವಿಲ್ಲ. ಸಂಬಂಧ ಒಮ್ಮೆ ಮುರಿದರೆ ಆ ಕ್ಷಣಕ್ಕೆ ಅದು ಮುರಿಯಿತು. ಅದರ ಬಗ್ಗೆ ಪೋಸ್ಟ್‌ಮಾರ್ಟಂ ಮಾಡಿಕೊಂಡು ಕೂರಬೇಕಿಲ್ಲ. ನಮ್ಮ ತಪ್ಪುಗಳಿಗೆ ನಾವೇ ಜವಾಬ್ದಾರರು, ಅವುಗಳ ಪರಿಣಾಮವನ್ನು ನಾವೇ ಅನುಭವಿಸಬೇಕು ಅಂದುಕೊಂಡು, ಸಾಧ್ಯವಾದರೆ ತಿದ್ದಿಕೊಂಡು ಮುನ್ನಡೆಯಬೇಕು. ನಿಜವಾಗಿಯೂ ನಾವು ತಪ್ಪು ಮಾಡಿ ಜೀವನದಲ್ಲಿ ಎಡವಿದ್ದರೆ “ಇದು ನನ್ನನ್ನು ನಾನು ತಿದ್ದಿಕೊಳ್ಳಲು ದೇವರು ಕೊಟ್ಟಿರುವ ಅವಕಾಶ’ ಅಂತ ಅದನ್ನು ಸದುಪಯೋಗ ಮಾಡಿಕೊಳ್ಳಬೇಕು. “ನನ್ನ ಸಂಬಂಧ ಪ್ರಾಮಾಣಿಕವಾಗಿತ್ತು, ಅವಳೇ/ ಅವನೇ ನನ್ನನ್ನು ತಿರಸ್ಕರಿಸಿ ಹೋದದ್ದು’ ಅಂತ ನಮ್ಮ ಅಂತರಂಗಕ್ಕೆ ಅನ್ನಿಸಿದರೆ, ಅದರ ಬಗ್ಗೆ ಕೊರಗದೆ ಮುಂದೆ ಹೋಗಬೇಕು.  ಕಣ್ಣಮುಂದೆ ಬೇಕಾದಷ್ಟು ಕನಸುಗಳಿರುತ್ತವೆ. ಕಳೆದು ಹೋದದ್ದರ ಬಗ್ಗೆ ಎಷ್ಟು ಚಿಂತಿಸಿದರೂ ಏನೂ ಪ್ರಯೋಜನವಿಲ್ಲ. ಅದು ನಮ್ಮದಾಗಿದ್ದರೆ ತಾನಾಗಿಯೇ ಮತ್ತೂಂದು ದಿನ ನಮ್ಮ ಹತ್ತಿರ ಬರುತ್ತದೆ. ನಮ್ಮದಲ್ಲದ್ದು ಯಾವತ್ತಿದ್ದರೂ ನಮ್ಮ ಬಳಿ ಉಳಿಯುವುದಿಲ್ಲ. ಈ ಫಿಲಾಸಫಿಯಲ್ಲಿ ನಂಬಿಕೆ ಇಲ್ಲದಿದ್ದರೂ ಇದನ್ನು ನಂಬುವುದು ಒಳ್ಳೆಯದು. ಏಕೆಂದರೆ ಇದರಿಂದ ನೆಮ್ಮದಿ ಸಿಗುತ್ತದೆ. 

Advertisement

ಅಟ್ಯಾಚ್‌ಮೆಂಟಿಲ್ಲದ ಬದುಕು: ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಆರಂಭದಿಂದ ಕೊನೆಯ ತನಕ ನಾವು ಏಕೆ ಯಾವುದರ ಬಗೆಗೂ ಅಟ್ಯಾಚ್‌ಮೆಂಟ್‌ ಇಟ್ಟುಕೊಳ್ಳಬಾರದು ಎಂಬುದನ್ನು ವಿವರಿಸುತ್ತ ಹೋಗುತ್ತಾನೆ. ಅಟ್ಯಾಚ್‌ಮೆಂಟುಗಳು ಕಡಿಮೆಯಿದ್ದಷ್ಟೂ ಬದುಕು ನಿರಾಳವಾಗುತ್ತದೆ. ಒಂದು ಕ್ಷಣ ಯೋಚಿಸಿ ನೋಡಿ, ಇವತ್ತು ನಮಗೆ ಯಾರು ಹತ್ತಿರವಾಗಿದ್ದಾರೋ ಅವರು ಯಾರು ಅನ್ನುವುದು ನಾವು ಹುಟ್ಟಿದ ಕ್ಷಣದಲ್ಲಿ ನಮಗೆ ಗೊತ್ತೇ ಇರಲಿಲ್ಲ! ನನ್ನ ಇಷ್ಟನೇ ವಯಸ್ಸಿಗೆ ಇಂಥವರು ಸಿಗಬೇಕು, ಇವೆಲ್ಲ ನನ್ನದಾಗಬೇಕು ಅಂತ ನಾವೇನೂ ಹುಟ್ಟಿದ ತತ್‌ಕ್ಷಣ ಕುಳಿತು ತಪಸ್ಸು ಮಾಡಿ ಬೇಡಿಕೊಂಡಿಲ್ಲ. ನಮ್ಮ ತಂದೆ ತಾಯಂದಿರನ್ನು ಒಳಗೊಂಡು ನಮಗೆ ಸಿಕ್ಕಿರುವುದೆಲ್ಲವೂ ತಾವಾಗಿಯೇ ನಮ್ಮ ಜೀವನಕ್ಕೆ ಸೇರ್ಪಡೆಯಾಗಿವೆ. 

ಅವುಗಳಲ್ಲಿ ಕೆಲವು ಈಗಾಗಲೇ ಬಿಟ್ಟುಹೋಗಿದ್ದರೆ ಅಥವಾ ಇನ್ನು ಮುಂದೆ ನಮ್ಮಿಂದ ದೂರವಾಗುವುದಿದ್ದರೆ ಅದು ಸ್ವಾಭಾವಿಕ. ಇಷ್ಟನ್ನು ಆಲೋಚಿಸಿ ಅರ್ಥ ಮಾಡಿಕೊಂಡರೆ ಯಾವುದೇ ಕೊರಗು ನಮ್ಮನ್ನು ಬಾಧಿಸುವುದಿಲ್ಲ. 

ಯಾವುದಕ್ಕೂ ಒಡೆಯರಲ್ಲ: ಕೆಲವರನ್ನು ನಾವು ಸಣ್ಣ ವಯಸ್ಸಿನಲ್ಲಿ ಭೇಟಿ ಮಾಡಿರುತ್ತೇವೆೆ. ಮುಂದೊಂದು ದಿನ ಅದೇ ವ್ಯಕ್ತಿ ನಮಗೆ ಬಹಳ ಹತ್ತಿರವಾಗುತ್ತಾರೆ ಅಂತ ನಮಗಾಗ ಗೊತ್ತೇ ಇರುವುದಿಲ್ಲ. ಅದೇ ವ್ಯಕ್ತಿ ನಂತರ ನಮಗೆ ಹತ್ತಿರವಾದಾಗ ನಾವು ಅವರನ್ನು ದೂರ ತಳ್ಳುವುದಿಲ್ಲ. ಯಾವುದೋ ಒಂದು ಸಂಬಂಧ ನಮ್ಮೊಡನೆ ಬೆಸೆಯುವಾಗ ಹೇಗೆ ನಾವು ಸಂತೋಷವಾಗಿ ಸ್ವೀಕರಿಸುತ್ತೇವೋ ಹಾಗೆಯೇ ನೂರು ಸಲ ಪ್ರಯತ್ನ ಪಟ್ಟ ಅನಂತರವೂ ಆ ಸಂಬಂಧ ಸದಾಕಾಲ ನಮ್ಮೊಂದಿಗೆ ಇರುವುದಿಲ್ಲ ಅಂತ ಗೊತ್ತಾದಾಗ ಎದುರಿರುವ ವ್ಯಕ್ತಿಯ  ನಿರ್ಧಾರವನ್ನು ಗೌರವಿಸಿ ಮುಕ್ತವಾಗಿ ಬೀಳ್ಕೊಡುವುದು ಸಾಧ್ಯವಾಗುತ್ತದೆ. ಒಬ್ಬ ವ್ಯಕ್ತಿಗೆ ನಿಮ್ಮ ಜತೆ ಇರಲು ಇಷ್ಟ ಇಲ್ಲ ಅಂದಮೇಲೆ ಒತ್ತಾಯ ಮಾಡಿ ಜತೆಗೆ ಇರಿಸಿಕೊಳ್ಳುವುದರಲ್ಲಿ ಏನೂ ಲಾಭವಿಲ್ಲ. ಅದರಿಂದ ನೆಮ್ಮದಿ ಸಿಗುವುದಿಲ್ಲ. ನಾವು ಕೆಲವರನ್ನು ನೋಡಿರುತ್ತೇವೆ. ಅವರು ತಮ್ಮ ವಸ್ತುಗಳಿಗೆ ಏನಾದರೂ ಆದರೆ ತುಂಬಾ ಅಪ್‌ಸೆಟ್‌ ಆಗುತ್ತಾರೆ. ತಂದೆ, ತಾಯಿ, ಮಕ್ಕಳನ್ನು ಜೋಪಾನ ಮಾಡುವುದಕ್ಕಿಂತ ಹೆಚ್ಚಾಗಿ ಮೊಬೈಲು, ಕಾರು, ಟೀವಿ ಅಥವಾ ಇನ್ನಿತರ ವಸ್ತುಗಳನ್ನು ಪ್ರೀತಿಸುತ್ತಾರೆ. ಸಂಬಂಧಗಳೇ ಮುರಿದುಹೋಗುವ ಈ ಕಾಲದಲ್ಲಿ ದುಡ್ಡು ಕೊಟ್ಟು ತಂದ ವಸ್ತುಗಳ ಮೇಲೇಕೆ ಇಂಥ‌ ವ್ಯಾಮೋಹ? ಒಂದು ಕಳೆದರೆ ಇನ್ನೊಂದು ತರಬಹುದು. ಅವು ನಮ್ಮಲ್ಲಿ ಇದ್ದಷ್ಟು ದಿನ ನಮ್ಮವಷ್ಟೆ. ನಾವು ಯಾವುದಕ್ಕೂ ಒಡೆಯರಲ್ಲ, ನಾವು ನಮಗೆ ಮಾತ್ರ ಒಡೆಯರು. ಅಪ್ಪ -ಅಮ್ಮ ಕೂಡ ತಮ್ಮ ಮಕ್ಕಳನ್ನು ತಮ್ಮ ಆಸ್ತಿಯೆಂಬಂತೆ ನೋಡಲು ಸಾಧ್ಯವಿಲ್ಲದ ಕಾಲಘಟ್ಟವಿದು. ಹೆಂಡತಿ ಕೂಡ ಗಂಡನ ಆಸ್ತಿಯಲ್ಲ. ಮನಸ್ಸಿನ ನಡುವೆ ಏರ್ಪಡುವ ಭಾವನಾತ್ಮಕ ಸಂಬಂಧ ಕೂಡ ಒಂದೊಂದು ಎಕ್ಸ್‌ ಪಯರಿ ದಿನಾಂಕದೊಂದಿಗೆ ಬಂದಿರುವಾಗ, ನಿರ್ಜೀವ ವಸ್ತುಗಳ ಬಗ್ಗೆ ಏಕೆ ಅನವಶ್ಯಕ ಕಕ್ಕುಲಾತಿ? 

ಇರಬೇಕಾದ್ದು ಇರುತ್ತದೆ, ಹೋಗಬೇಕಾದ್ದು ಹೋಗುತ್ತದೆ. “ನಾನು ಶುದ್ಧ ಮನಸ್ಸಿನಿಂದ ಎಲ್ಲರನ್ನೂ ಎಲ್ಲವನ್ನೂ ಪ್ರೀತಿಸುತ್ತೇನೆ, ಅಷ್ಟೇ ಹೊರತು ಯಾವುದನ್ನೂ ಬಲವಂತದಿಂದ ಕಟ್ಟಿ ಹಾಕುವುದಿಲ್ಲ, ಯಾರ ಮೇಲೂ ಒತ್ತಡ ಹೇರುವುದಿಲ್ಲ ಎಂದು ನಮ್ಮ ಮನಸ್ಸಿನಲ್ಲಿ ಆಗಾಗ ಹೇಳಿಕೊಳ್ಳುತ್ತ ಮುನ್ನಡೆಯುವುದನ್ನು ಅಭ್ಯಾಸ ಮಾಡಿಕೊಂಡರೆ ನಮಗೆ ಜೀವನ ಪರ್ಯಂತ ಸುಂದರ ವಾದ ಕನಸುಗಳು ಇರುತ್ತವೆಯೇ ಹೊರತು ಚಿಂತೆಗಳಲ್ಲ.

ರೂಪಾ ಅಯ್ಯರ್‌

Advertisement

Udayavani is now on Telegram. Click here to join our channel and stay updated with the latest news.

Next