Advertisement

ಸುವರ್ಣ ಯುಗದ ಒಲಿಂಪಿಯನ್‌ ಹಾಕಿಪಟು ಕೇಶವ್‌ ದತ್‌ ಇನ್ನಿಲ್ಲ

12:20 AM Jul 08, 2021 | Team Udayavani |

ಕೋಲ್ಕತಾ: ಭಾರತೀಯ ಹಾಕಿಯ ಸುವರ್ಣ ಯುಗದ ಹರಿಕಾರ, ಎರಡು ಬಾರಿಯ ಒಲಿಂಪಿಕ್ಸ್‌ ಸ್ವರ್ಣ ವಿಜೇತ ಹಾಕಿ ತಂಡದ ಸದಸ್ಯ ಕೇಶವ್‌ ದತ್‌ ಬುಧವಾರ ಅಪರಾಹ್ನ ಕೋಲ್ಕತಾದ ಸಂತೋಷ್‌ಪುರ್‌ ನಿವಾಸದಲ್ಲಿ ಕೊನೆಯುಸಿರೆಳೆದರು. 95 ವರ್ಷದ ಅವರು ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದರು.

Advertisement

1925ರ ಡಿ. 29ರಂದು ಲಾಹೋರ್‌ನಲ್ಲಿ ಜನಿಸಿದ ಕೇಶವ್‌ ದತ್‌, ಹಾಫ್ಬ್ಯಾಕ್‌ ಆಟಗಾರನಾಗಿ ಜನಪ್ರಿಯರಾಗಿದ್ದರು. 1948ರ ಲಂಡನ್‌ ಒಲಿಂಪಿಕ್ಸ್‌ ಹಾಗೂ 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಸ್ವರ್ಣ ವಿಜೇತ ಭಾರತ ಭಾರತ ತಂಡದ ಸದಸ್ಯರಾಗಿದ್ದರು. ಲಂಡನ್‌ನಲ್ಲಿ ಭಾರತ ಆತಿಥೇಯ ಇಂಗ್ಲೆಂಡ್‌ ತಂಡವನ್ನು 4-0 ಅಂತರದಿಂದ ಬಗ್ಗುಬಡಿದಿತ್ತು. ಸ್ವಾತಂತ್ರ್ಯ ಲಭಿಸಿದ ಬಳಿಕ ಭಾರತಕ್ಕೆ ಒಲಿದ ಮೊದಲ ಒಲಿಂಪಿಕ್ಸ್‌ ಹಾಕಿ ಚಿನ್ನ ಇದಾಗಿತ್ತು. ಬಳಿಕ ಹೆಲ್ಸಿಂಕಿಯಲ್ಲಿ ನೆದರ್ಲೆಂಡ್ಸ್‌ಗೆ 6-1 ಅಂತರದ ಸೋಲುಣಿಸಿ ಸತತ 5ನೇ ಚಿನ್ನ ಜಯಿಸಿತ್ತು.

ದತ್‌ ಅವರ ನಿಧನದೊಂದಿಗೆ 1948 ಹಾಗೂ 1952ರ ಸ್ವರ್ಣ ಪದಕ ವಿಜೇತ ತಂಡದ ಕಟ್ಟಕಡೆಯ ಹಾಕಿಪಟುವನ್ನು ಭಾರತ ಕಳೆದುಕೊಂಡಂತಾಯಿತು.

ಇದನ್ನೂ ಓದಿ :ಟೋಕಿಯೊ ಒಲಿಂಪಿಕ್ಸ್‌ : ಟೋಕಿಯೊ ಬೀದಿಯಲ್ಲಿ ಟಾರ್ಚ್‌ ರಿಲೇ ರದ್ದು

“ಮೋಹನ್‌ ಬಗಾನ್‌ ರತ್ನ’
1948ರ ಒಲಿಂಪಿಕ್ಸ್‌ಗೂ ಮುನ್ನ ಹಾಕಿ ದಂತಕತೆ ಮೇಜರ್‌ ಧ್ಯಾನ್‌ಚಂದ್‌ ನಾಯಕತ್ವದಲ್ಲಿ ಪೂರ್ವ ಆಫ್ರಿಕಾ ಪ್ರವಾಸಗೈದ ಭಾರತ ತಂಡದಲ್ಲೂ ಕೇಶವ್‌ ದತ್‌ ಇದ್ದರು. 50ರ ದಶಕದಲ್ಲಿ, ಎರಡು ಅವಧಿಗಳಲ್ಲಿ ಅವರು ಮೋಹನ್‌ ಬಗಾನ್‌ ಹಾಕಿ ತಂಡದ ನಾಯಕತ್ವವನ್ನೂ ವಹಿಸಿದ್ದರು. ಈ ಕ್ಲಬ್‌ನೊಂದಿಗೆ ಒಂದು ದಶಕದ ಬಾಂಧವ್ಯ ಅವರದಾಗಿತ್ತು. 2019 ರಲ್ಲಿ “ಮೋಹನ್‌ ಬಗಾನ್‌ ರತ್ನ’ ಗೌರವಕ್ಕೆ ಭಾಜನರಾಗಿದ್ದರು. ಫ‌ುಟ್ಬಾಲಿಗರನ್ನು ಹೊರತುಪಡಿಸಿ ಈ ಗೌರವಕ್ಕೆ ಪಾತ್ರರಾದ ಮೊದಲ ಆಟಗಾರನೆಂಬುದು ದತ್‌ ಹೆಗ್ಗಳಿಕೆ.

Advertisement

ದತ್‌ ನಿಧನಕ್ಕೆ ಹಾಕಿ ಇಂಡಿಯಾ ಅಧ್ಯಕ್ಷ ಗ್ಯಾನೇಂದೊ ನಿಂಗೋಂಬಮ್‌, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next