Advertisement

ಎಚ್‌.ಎನ್‌.ವ್ಯಾಲಿ: ನೀರಿನ ಸಮಸ್ಯೆ ಶಾಶ್ವತ ಪರಿಹಾರ

09:04 PM Jun 26, 2019 | Lakshmi GovindaRaj |

ಗೌರಿಬಿದನೂರು: ಎಚ್‌.ಎನ್‌.ವ್ಯಾಲಿ ನೀರಿನಿಂದ ಅಂತರ್ಜಲ ಹೆಚ್ಚುವುದರ ಜೊತೆಗೆ ನಗರದ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ ಎಂದು ಕೃಷಿಸಚಿವ ಶಿವಶಂಕರರೆಡ್ಡಿ ಭರವಸೆ ನೀಡಿದರು. ನಗರಸಭೆ ವತಿಯಿಂದ ತಾಪಂ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರು ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿಗಳನ್ನು ನೀಡಿ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದರು.

Advertisement

ಮನವಿಗಳನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಶಂಕರರೆಡ್ಡಿ, ಗೌರಿಬಿದನೂರು ನಗರಸಭೆಯ ಅಧಿಕಾರಾವಧಿ ಮುಗಿದಿದ್ದು, ಆಡಳಿತಾಧಿಕಾರಿಗಳು ಅಧಿಕಾರ ನಡೆಸುತ್ತಿದ್ದಾರೆ ಆದ್ದರಿಂದ ಸಮಸ್ಯೆ ಸ್ಪಂದಿಸುವಲ್ಲಿ ಸ್ವಲ್ಪಮಟ್ಟಿಗೆ ತೊಂದರೆಯಾಗಿದೆ. ಸರ್ಕಾರ ಜನರ ಸಮಸ್ಯೆಗೆ ಎಲ್ಲಾ ರೀತಿಯಲ್ಲಿಯೂ ಸ್ಪಂದಿಸಲಿದ್ದು ಆದ್ಯತೆಯ ಮೇಲೆ ಪರಿಹರಿಸಲಾಗುವುದು ಎಂದರು. ಗೌರಿಬಿದನೂರು ನಗರದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.

ಪ್ರಮುಖವಾಗಿ ಹೊಸ ಚರಂಡಿಗಳ ನಿರ್ಮಾಣ ಹಾಗೂ ಮೋರಿಗಳ ನಿರ್ಮಾಣಕ್ಕಾಗಿ 7.5 ಕೋಟಿ ವೆಚ್ಚಮಾಡಲಾಗುತ್ತಿದ್ದು, ರಸ್ತೆಗಳ ಅಭಿವೃದ್ಧಿಗೆ ನಗರೋತ್ತಾನ-3ರಲ್ಲಿ 17 ಕೋಟಿ ಮಂಜೂರಾಗಿದ್ದು ಟೆಂಡರ್‌ ಹಂತದಲ್ಲಿದೆ ಜೊತೆಗೆ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕಷ್ಟಕರವಾಗಿದ್ದು, ಈಗಾಗಲೇ12 ಬೋರ್ವೆಲ್‌ ಗಳಿಗೆ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊರೆದಿರುವ 8 ಕೊಳವೆ ಭಾವಿಗಳಿಗೆ ಪಂಪ್‌ ಮತ್ತು ಮೋಟಾರ್‌ ಅಳವಡಿಸಲು ಮಂಜೂರಾತಿ ಪಡೆಯಲಾಗಿದೆ ಎಂದರು.

ಹಣ ಮಂಜೂರು: ಗೌರಿಬಿದನೂರು ನಗರದ ಆಚಾರ್ಯ ಕಾಲೇಜು ಮೈದಾನದ ಪಕ್ಕದಲ್ಲಿ ಮನೆಗಳನ್ನು ಕಟ್ಟಿಕೊಂಡಿರುವ ಜನರಿಗೆ ಸ್ಲಂಬೋರ್ಡ್‌ ನಿಂದ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಲಾಗಿದೆ. ಬರ್ಜಾನುಕುಂಟೆ ಬಳಿ ನಿರ್ಮಾಣ ಮಾಡಿರುವ 600 ನಿವೇಶನಗಳಲ್ಲಿ 210 ನಿವೇಶನಗಳು ಮಂಜೂರಾಗಿದ್ದು ಹಣ ಕಟ್ಟಿರುವವರಿಗೆ ಅದರ ಹಕ್ಕು ಪತ್ರಗಳನ್ನು ವಿತರಿಸಲಾಗುವುದು ಉಳಿದ ನಿವೇಶನಗಳನ್ನು ಹಂತಹಂತವಾಗಿ ಮಂಜೂರು ಮಾಡಿಸಲಾಗುವುದು ಎಂದರು.

ನಗರ ವ್ಯಾಪ್ತಿಯ ಉಪ್ಪಾರಕಾಲೋನಿಯ ಬಳಿ ಕೆರೆಯಲ್ಲಿ ಮನೆ ಕಟ್ಟಿರುವ ಹಾಗೂ ಕರೇಕಲ್ಲಹಳ್ಳಿ ಕೆರೆಯಲ್ಲಿ ನಿರ್ಮಿಸಿರುವ ಅನಧಿಕೃತ ಮನೆಗಳನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ ಅವರಿಗೆ ಮಂಜೂರಾತಿ ಮಾಡಿಸಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಸರ್ಕಾರದ ಮಟ್ಟದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುವುದು. ರೈಲ್ವೆ ನಿಲ್ದಾಣದ ಬಳಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿ 2ರಿಂದ 3ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು ಗುಂಡಾಪುರ ಕಾದಲವೇಣಿ ಕಡೆ ಸಂಚರಿಸುವ ಜನರಿಗೆ ಅನುಕೂಲವಾಗಲಿದೆ ಎಂದರು.

Advertisement

ಚಿಕ್ಕಬಳ್ಳಾಪುರ-ಮಧುಗಿರಿಗೆ ರಸ್ತೆ: ಕಂದಾಯ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿ ಕೊಂಡಿರುವವರಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ 94 ಸಿಸಿ ಕಾನೂನಿನ ಪ್ರಕಾರ ಮಂಜೂರಾತಿ ಪತ್ರವನ್ನು ನೀಡಲು ತಹಶೀಲ್ದಾರ್‌ ಎಲ್ಲ ರೀತಿಯ ತಯಾರಿಸಿ ನಡೆಸಿದ್ದು, ಹಕ್ಕು ಪತ್ರ ನೀಡಲು ತಯಾರಿಸಿ ನಡೆಸಿದ್ದಾರೆ. ಮಾದವ ನಗರದ ಬಳಿಯಿಂದ ಎಪಿಎಂಸಿ ಬಳಿ ವರೆಗೆ ರಸ್ತೆ ಕಾಮಗಾರಿ ನಡೆಯುತಿದ್ದು ಬೈಪಾಸ್‌ ರಸ್ತೆಗೆ ಮೇಲ್ಸೇತುವೆ ನಿರ್ಮಾಣವಾಗುತ್ತಿದ್ದು ಚಿಕ್ಕಬಳ್ಳಾಪುರ ರಸ್ತೆಯಿಂದ ಮಧುಗಿರಿ ರಸ್ತೆಗೆ ನೇರವಾಗಿ ತೆರಳಬಹುದು ಎಂದರು.

ನಗರದಲ್ಲಿ ಕೇಂದ್ರೀಯ ವಿದ್ಯಾಲಯವನ್ನು ಕಳೆದ ವರ್ಷ ಪ್ರಾರಂಭಿಸಲಾಗಿದ್ದು ಈ ಶಾಲೆಯ ಕಟ್ಟಡ ಹಾಗೂ ಮೈದಾನಕ್ಕಾಗಿ ಮಂಚನಹಳ್ಳಿ ರಸ್ತೆಯಲ್ಲಿ ಹತ್ತು ಎಕರೆ ಭೂಮಿಯನ್ನು ಪಡೆಯಲಾಗಿದ್ದು ಕಟ್ಟಡ ಕಾಮಗಾರಿ ಪ್ರಾರಂಭವಾಗಲಿದೆ.ಮರಳೂರು ಬಳಿ ಸರ್ಕಾರಿ ಪಾಲಿಟೆಕ್ನಿಕ್‌ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಕಂದಾಯ ಇಲಾಖೆ ಸಂಬಂಧ ಹೆಚ್ಚು ಅರ್ಜಿ: ತಹಶೀಲ್ದಾರ್‌ ಶ್ರೀನಿವಾಸ್‌ ಮಾತನಾಡಿ, ನಗರವ್ಯಾಪ್ತಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಲು ಇಂದು ಕುಂದುಕೊರತೆ ಸಭೆಯನ್ನು ನಡೆಸಲಾಗುತ್ತಿದ್ದು ಮನವಿ ಸಲ್ಲಿಸುವ ನಾಗರೀಕರಿಗೆ ಸ್ಥಳದಲ್ಲಿಯೇ ಆಯಾ ಇಲಾಖೆಯ ಸಂಬಂಧ ಪಟ್ಟ ಅಧಿಕಾರಿಗಳಿಗೆ ನೀಡಿ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಬಾಂಡ್‌, ಮನೆಮಂಜೂರಾತಿ ಪತ್ರ, ಉದ್ದಿಮೆ ಪರವಾನಿಗೆ ಪತ್ರ, ಮನಸ್ವಿನಿ ಪತ್ರ, ಹಕ್ಕು ಪತ್ರ ಸೇರಿದಂತೆ ವಿವಿಧ ಸವಲತ್ತುಗಳನ್ನು ಸಚಿವರು ವಿತರಿಸಿದರು. ಒಟ್ಟು 233 ಅರ್ಜಿಗಳು ಬಂದಿದ್ದವು. ಶೇ. 90 ರಷ್ಟು ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿದ್ದು ಬಂದಿದೆ ಎಂದು ತಹಸೀಲ್ದಾರ್‌ ಮತ್ತು ಪೌರಾಯುಕ್ತರು ತಿಳಿಸಿದರು.

ಸಭೆಯಲ್ಲಿ ನಗರಸಭೆ ಆಯುಕ್ತ ಉಮಾಕಾಂತ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮೇಶ್‌, ನಗರಸಭೆ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಕಲೀಂಉಲ್ಲಾ, ಮುಖಂಡರಾದ ಪ್ರಕಾಶ್‌ರೆಡ್ಡಿ, ಶಫೀಕ್‌ಖಾನ್‌, ಗೋಪಿನಾಥ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೇಶವರೆಡ್ಡಿ, ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಗೀತಾಜಯಂಧರ್‌, ಮರಳೂರು ಹನುಮಂತರೆಡ್ಡಿ, ವಿ.ರಮೇಶ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೆಪ್ಟೆಂಬರ್‌ ವೇಳೆಗೆ ನೀರು: ಗೌರಿಬಿದನೂರು ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹೆಬ್ಟಾಳದ ಎಚ್‌.ಎನ್‌.ವ್ಯಾಲಿ ನೀರನ್ನು 3ನೇ ಹಂತದಲ್ಲಿ ಶುದ್ಧೀಕರಿಸಿ ನಗರ ಸಮೀಪದ ಕಿಂಡಿಬಳಿಗೆ ತಂದು ಅಲ್ಲಿಂದ 8 ಕೆರೆಗಳಿಗೆ ನೀರು ತುಂಬಿಸಲಾಗುವುದು ಕೆರೆಗಳಲ್ಲಿ ನೀರು ತುಂಬಿದಲ್ಲಿ ಕೊಳವೇ ಭಾವಿಗಳಲ್ಲಿ ಅಂತರ್ಜಲ ಹೆಚ್ಚಿ ನೀರು ಮರುಪೂರಣವಾಗಲಿದು ಗೌರಿಬಿದನೂರು ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಸೆಪ್ಟೆಂಬರ್‌ ವೇಳೆಗೆ ನೀರು ಹರಿಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next